ಇಂದೋರ್: ಏಪ್ರಿಲ್ 14 ಸೋಮವಾರ ದೇಶಾದ್ಯಂತ ಸಂವಿಧಾನ ಶಿಲ್ಪಿ ಮತ್ತು ಸಮಾಜ ಸುಧಾರಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದ ದಿನ, ಆದರೆ ಅಂದಿನ ದಿನವೇ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದೂ, ನಂತರ ದಲಿತ ಸಮುದಾಯದ ವರನೊಬ್ಬ ಪೊಲೀಸರ ಸಮ್ಮುಖದಲ್ಲಿ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಬೇಕಾಗಿ ಬಂದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಡಾ. ಅಂಬೇಡ್ಕರ್ ಜನಿಸಿದ್ದ ಇಂದೋರ್ ಜಿಲ್ಲೆಯ ಮ್ಹೋವ್ನಲ್ಲಿ ಈ ಘಟನೆ ನಡೆದಿದ್ದು ವಿಷಾದನೀಯ.
ಪ್ರತ್ಯಕ್ಷದರ್ಶಿಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊ ಪ್ರಕಾರ, ಬಲಾಯಿ ಸಮುದಾಯಕ್ಕೆ ಸೇರಿದ ವರನು ತನ್ನ ಮದುವೆ ಮೆರವಣಿಗೆ ಮತ್ತು ಅತಿಥಿಗಳೊಂದಿಗೆ ಮ್ಹೋವ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಾಂಘ್ವಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದನು, ಆತ ದಲಿತ ಸಮುದಾಯದವನೆಂದು ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.
ಸುಮಾರು ಎರಡು ಗಂಟೆಗಳ ಕಾಲ ನಡೆದ ವಾಗ್ವಾದದ ನಂತರ, ವರನು ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಪೊಲೀಸರ ಸಮ್ಮುಖದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದನು.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ಬಲೈ ಮಹಾಸಂಘದ ಅಧ್ಯಕ್ಷ ಮನೋಜ್ ಪರ್ಮಾರ್, ನಮ್ಮ ಸಮುದಾಯವು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಬೇಕಾಗಿದೆ ಎಂದರು. ದಲಿತ ಸಮುದಾಯದ ವ್ಯಕ್ತಿಯನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಹೇಳಿಕೆಯನ್ನು ಪೊಲೀಸರು ನಿರಾಕರಿಸಿದ್ದಾರೆ. ಸ್ಥಳೀಯ ಸಂಪ್ರದಾಯಗಳ ಪ್ರಕಾರ ಅರ್ಚಕರಿಗೆ ಮಾತ್ರ ಅವಕಾಶವಿರುವ ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ಬಗ್ಗೆ ಎರಡು ಗುಂಪುಗಳ ನಡುವೆ ವಾದವಾಗಿತ್ತು.
ಈ ಘಟನೆಯ ಕೆಲವು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಒಂದು ವೀಡಿಯೊದಲ್ಲಿ, ವರನು ತನ್ನ ಮದುವೆ ಮೆರವಣಿಗೆಯೊಂದಿಗೆ ದೇವಾಲಯದ ಹೊರಗೆ ನಿಂತಿರುವುದು ಮತ್ತು ‘ಬರಾತಿ’ಗಳು ಅಂದರೆ ಮದುವೆಗೆ ಬಂದ ಅತಿಥಿಗಳು ಇನ್ನೊಂದು ಕಡೆಯವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ, ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ಬಗ್ಗೆ ಎರಡೂ ಕಡೆಯ ಜನರನ್ನು ಮನವೊಲಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದರು ಎಂದು ವರದಿಯಾಗಿದೆ.
ಇದನ್ನೂ ನೋಡಿ: ಅಂಬೇಡ್ಕರ್ ಸ್ಥಾಪಿಸಿದ “ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ” AISCF ಪಕ್ಷದ ಪ್ರಣಾಳಿಕೆಯಲ್ಲಿ ಏನಿದೆ?