ನವದೆಹಲಿ: ಸತತ 14 ವರ್ಷಗಳ ಹೋರಾಟ ನಡೆಸುತ್ತಿದ್ದ ಗುತ್ತಿಗೆ ಶಿಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಫಲವಾಗಿ ನೇಮಕಾತಿ ವೇಳೆ ಕೃಪಾಂಕ ನೀಡಲು ಸುಪ್ರೀಂ ಕೋರ್ಟ್ ಆಗಸ್ಟ್ 23ರಂದು ಒಪ್ಪಿಗೆ ಸೂಚಿಸಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಏಕಲವ್ಯ ವಸತಿ ಶಾಲೆಗಳಲ್ಲಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ಶಿಕ್ಷಕರಿಗೆ, ನೇಮಕಾತಿ ವೇಳೆ ‘ಕೃಪಾಂಕ’ ನೀಡಲು ಸಮ್ಮತಿಸಿದೆ.
ಕಳೆದ 14 ವರ್ಷದಿಂದ ನಡೆಯುತ್ತಿದ್ದ, ಗುತ್ತಿಗೆ ಶಿಕ್ಷಕರ ಕಾನೂನು ಹೋರಾಟ ತಾರ್ಕಿಕ ಅಂತ್ಯವಾಗಿದೆ. ಜಾತಕ ಪಕ್ಷಿಗಳಂತೆ ಕಾಯುತ್ತಿದ್ದವರಿಗೆ ಕೊನೆಗೂ ನ್ಯಾಯ ದೊರೆತಿದೆ. ಕೃಪಾಂಕ ಆಧರಿಸಿ ಅರ್ಹರಿಗೆ ನೇಮಕ ಪತ್ರವನ್ನು ನೀಡಲೇಬೇಕಾದ ಅನಿವಾರ್ಯತೆಗೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಂಘ ಸಿಲುಕಿದೆ.
ಇದನ್ನೂ ಓದಿ: ರಾಯಚೂರು | ಮೀಸಲಾತಿ ಜಾರಿ ಸ್ವಾಗತಿಸಿ ದಲಿತಪರ ಸಂಘಟನೆಗಳು ರ್ಯಾಲಿ
ಹೈಕೋರ್ಟ್ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠಗಳು, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ, ಶೇಕಡ 5ರಷ್ಟು ಕೃಪಾಂಕ ನೀಡಲೇಬೇಕೆಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ, ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ್ದ, ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ, ಮಹತ್ವದ ತೀರ್ಪು ನೀಡಿದೆ. ಜೊತೆಗೆ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು 2 ತಿಂಗಳಲ್ಲಿ ಜಾರಿಗೊಳಿಸಬೇಕೆಂದು ಸೂಚಿಸಿದೆ.
ಹೀಗಾಗಿ ಕೃಪಾಂಕ ನೀಡದ ಹೊರತು, ಸರ್ಕಾರಕ್ಕೆ ಅನ್ಯ ಮಾರ್ಗವಿಲ್ಲದಂತಾಗಿದೆ. 2011ರಲ್ಲಿ ವೃಂದ ಮತ್ತು ನೇಮಕ ನಿಯಮ ಜಾರಿಗೆ ಬಂದಾಗ ಕಾರ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಶಿಕ್ಷಕರಿಗೆ ಇದು ಅನ್ವಯವಾಗಲಿದೆ.
2004ಕ್ಕೂ ಮುನ್ನ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ, ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ 3,400 ಶಿಕ್ಷಕರನ್ನು, ನೇರವಾಗಿ ನೇಮಿಸಿಕೊಂಡು ಸೇವೆ ಕಾಯಂಗೊಳಿಸಲಾಗಿತ್ತು. 2004ರ ನಂತರವೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನೂ ಖಾಯಂ ಮಾಡುವಂತೆ, ಶಿಕ್ಷಕರೆಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ನೋಡಿ: ಸಮುದಾಯ 50| ಉದ್ಘಾಟನಾ ಕಾರ್ಯಕ್ರಮ ; ಸದ್ಭಾವನಾ ಗೀತೆ | ರಂಗ ಗೌರವ
