10 ದಿನಕ್ಕೆ 5 ಲಕ್ಷ ರೂಪಾಯಿ ಬಿಲ್: ಕೊರೊನಾ ಸೋಂಕಿತರ ಸುಲಿಗೆ ಮಾಡುತ್ತಿರುವ ಮಂಗಳೂರು ಖಾಸಗಿ ಆಸ್ಪತ್ರೆ

ಮಂಗಳೂರು: ಕೊರೊನ ಮೊದಲ ಅಲೆಯ ಸಂದರ್ಭಖಾಸಗಿ ಆಸ್ಪತ್ರೆಗಳು ದುಬಾರಿ ಮೊತ್ತದ ಹಣ ಸೋಂಕಿತರನ್ನು ಸುಲಿಗೆ ಮಾಡುತ್ತಿವೆಎಂದು ಪ್ರತಿ ದಿನ ದೂರುಗಳು ಬರುತ್ತಿದ್ದವು. ಕೊನೆಗೆ ಸರಕಾರ ಚಿಕಿತ್ಸೆಯ ದರಪಟ್ಟಿ ಪ್ರಕಟಿಸಿದರೂ ಸುಲಿಗೆ ತಪ್ಪಲಿಲ್ಲ. ಆದರೆ ಬಾರಿ ಅಂತಹ ದೂರು ಸಾರ್ವಜನಿಕವಾಗಿ ದೊಡ್ಡ ರೀತಿಯಲ್ಲಿ ಕೇಳಿ ಬರುತ್ತಿಲ್ಲ. ಅದಕ್ಕೆ ಕಾರಣ, ಬಾರಿ ಎರಡನೆ ಅಲೆ ವ್ಯಾಪಕವಾಗಿ ಬೀಸಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹಾಸಿಗೆ ದೊರಕಿಸಿಕೊಳ್ಳುವುದೇ ದೊಡ್ಡ ಸಾಧನೆ ಮಾಡಬೇಕಾಗಿದೆ. ಜನರೂ ದುಬಾರಿ ಶುಲ್ಕ ಬಗ್ಗೆ ತುಟಿ ಬಿಚ್ಚದೆ ಖಾಸಗಿ ಆಸ್ಪತ್ರೆಗಳ ಖಜಾನೆ ತುಂಬುತ್ತಿದ್ದಾರೆ. ಇದು ಯಾವ ಮಟ್ಟಿಗಿನ ದಂಧೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದುಕ್ಕೆ ಕೆಳಗಿನ ಸುದ್ದಿ ನೋಡಿ…..

ಸೋಮವಾರ ಪೇಟೆಯ ಅಹಮದ್ ಎಂಬ 65 ರ ಹರೆಯದ ಹಿರಿಯ ವ್ಯಕ್ತಿಗೆ ಕೋವಿಡ್ ತಗುಲಿದೆ. ಒಂದಿಷ್ಟು ದಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದ ಹಿನ್ನಲೆಯಲ್ಲಿ ಮಂಗಳೂರಿನ “ಅಥೆನಾ ಆಸ್ಪತ್ರೆ”ಗೆ ದಾಖಲಿಸಿದ್ದಾರೆ. “ಅಥೆನಾ ಆಸ್ಪತ್ರೆ” ಜಿಲ್ಲಾಡಳಿತ ಘೋಷಿಸಿದ ಕೊರೊನಾ ಆಸ್ಪತ್ರೆಗಳಲ್ಲಿ ಒಂದಾಗಿದ್ದರೂ, “ಆಯುಷ್ಮಾನ್ ಸಹಿತ ಯಾವುದೇ ಸರಕಾರಿ ರಿಯಾಯಿತಿಗಳು ದೊರಕುವುದಿಲ್ಲ, ಪೂರ್ತಿ ಮೊತ್ತ ರೋಗಿಯ ಕಡೆಯವರೇ ಪಾವತಿಸಬೇಕು” ಎಂಬ ಶರತ್ತು ವಿಧಿಸಿ  ರೋಗಿಯನ್ನು‌ ಐಸಿಯುನ ಆಕ್ಸಿಜನ್ ವ್ಯವಸ್ಥೆಯಿರುವ ಹಾಸಿಗೆಯಲ್ಲಿ ದಾಖಲು ಮಾಡಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ನೇಮಿಸಿದ್ದ “ಆರೋಗ್ಯ ಮಿತ್ರ” ಸಿಬ್ಬಂದಿ ರೋಗಿಯ ಕಡೆಯವರಿಗೆ ಮಾಹಿತಿ ಒದಗಿಸದಂತೆ ಪಳಗಿಸಿಟ್ಟುಕೊಂಡಿದ್ದಾರೆ.

ಇದನ್ನು ಓದಿ: ಜಿಂದಾಲ್ ಕೋವಿಡ್ ರೋಗಿಗಳ ಬೆಡ್‌ಗಳ ವಿಚಾರದಲ್ಲಿ ಜನರು ಮತ್ತು ಸಚಿವ ಆನಂದ್‌ಸಿಂಗ್ ಕಿತ್ತಾಟ

ಹೀಗೆ ಐಸಿಯವಿನ ಆಕ್ಸಿಜನ್ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಹತ್ತು ದಿನಗಳಲ್ಲಿ ಸರಿ ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ಔಷಧಿಯನ್ನು ರೋಗಿಯ ಕಡೆಯವರಿಂದ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮದೇ ಮೆಡಿಕಲ್ ನಿಂದ ತರಿಸಿಕೊಂಡಿದ್ದಾರೆ. ಒಂದೂವರೆ ಲಕ್ಷ ರೂಪಾಯಿಗಳ ಔಷಧಿ, ಐಸಿಯು ಚಿಕಿತ್ಸೆಯಿಂದಲೂ ಅಹಮ್ಮದರ ಆರೋಗ್ಯ ಸುಧಾರಣೆಯಾಗುವುದರ ಬದಲು ಮತ್ತಷ್ಟು ಹದಗೆಟ್ಟಿದೆ. ಇದರಿಂದ ಬದುಕುವ ಆಸೆ ಕೈಬಿಟ್ಟ ವೃದ್ದರಾದ ಅಹಮದರು ತನ್ನನ್ನು ಮನೆಗೆ ಕರೆದೊಯ್ಯುವಂತೆ ಹಠ ತೊಟ್ಟಿದ್ದಾರೆ. ಕೊನೆಗೆ ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ರೋಗಿಯ ಕುಟುಂಬಸ್ಥರು ಬಂದಿದ್ದಾರೆ.

ಹೀಗೆ ಆಸ್ಪತ್ರೆಯಿಂದ ಹೊರಬರುವ ನಿರ್ಧಾರಕ್ಕೆ ಬಂದಾಗ ಅಥೆನಾ ಆಸ್ಪತ್ರೆಯವರು ಔಷಧಿಯ ಒಂದೂವರೆ ಲಕ್ಷ ರೂಪಾಯಿ ಹೊರತುಪಡಿಸಿ ಬರೋಬ್ವರಿ ನಾಲ್ಕು ಲಕ್ಷ ರೂಪಾಯಿ ಮೊತ್ತದ ಚೀಟಿ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಮಂಗಳೂರಿನ ಪರಿಚಿತರ ಬಳಿ ನೋವು ತೋಡಿಕೊಂಡಿದ್ದಾರೆ. (ನಿಮಗೆ ತಿಳಿದಿರಲಿ. ಸರಕಾರ ನಿಗದಿ ಪಡಿಸಿದ ಪ್ರಕಾರ ಐಸಿಯು ಅಕ್ಸಿಜನ್ ವ್ಯವಸ್ಥೆಯ ಹಾಸಿಗೆ ದರ ಒಂದು ದಿನಕ್ಕೆ 15 ಸಾವಿರ ರೂಪಾಯಿ. ಇದರಲ್ಲಿ ಆಕ್ಸಿಜನ್, ವೈದ್ಯರ ವೆಚ್ಚವೂ ಒಳಗೊಂಡಿದೆ, ಅ ಪ್ರಕಾರ ಹೆಚ್ಚೆಂದರೆ ಒಂದೂವರೆ ಲಕ್ಷ ಮೊತ್ತ ಆಗಬಹುದು.) ವಕೀಲರಾದ ಪರಿಚಿತರು ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಿದ್ದಾರೆ. ಆಗ ಒಂದಿಷ್ಟು ಚಿಲ್ಲರೆ ರೂಪಾಯಿ ರಿಯಾಯಿತಿಯನ್ನು ರೋಗಿಯ ಕಡೆಯವರಿಗೆ ಆಸ್ಪತ್ರೆಯ ಆಡಳಿತ ನೀಡಿದೆ.

ಇದನ್ನು ಓದಿ: ಆಕ್ಸಿಜನ್‌ ಬೇಡಿಕೆ ತಗ್ಗಿಸಲು ವೆಂಟಿಲೇಟರ್‌ ಅಳವಡಿಕೆ: ಸುಧಾಕರ್

ಅದನ್ನು ಒಪ್ಪದ ವಕೀಲರು ಕೊನೆಗೆ ಈ “ಸುಲಿಗೆಯ ಕತೆ” ಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಸಂಘಟನೆಯ ಗಮನಕ್ಕೆ ತಂದಿದ್ದಾರೆ. ಅದರಂತೆ ಸಂಘಟನೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನಡೆಯುತ್ತಿರುವ ಸುಲಿಗೆಯ ಕುರಿತು ವಿವರವಾದ ಮಾಹಿತಿ ನೀಡಲಾಯಿತು.‌ ಕೋವಿಡ್, ಆಯುಷ್ಮಾನ್ ಕುರಿತು ತನಿಖೆಯ ಜವಾಬ್ದಾರಿ ಹೊಂದಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ರತ್ಮಾಕರ್ ಅವರಲ್ಲಿಯೂ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಲಾಯಿತು.‌ “ಆಯುಷ್ಮಾನ್ ಬಗ್ಗೆ ರೋಗಿಯ ಕಡೆಯವರು‌ ದಾಖಲಾತಿ ಸಂದರ್ಭದಲ್ಲಿ ಮನವಿ ಮಾಡದೇ ಇದ್ದ ಕಾರಣ ಈ ಕುರಿತು ಸಹಾಯ ಕಷ್ಟ, ದುಬಾರಿ ಮೊತ್ತದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ” ರತ್ನಾಕರ್ ತಿಳಿಸಿದರು. ಜಿಲ್ಲಾಧಿಕಾರಿಗಳೂ ರತ್ಮಾಕರ್ ಅವರಲ್ಲಿ ಸರಿಯಾದ ಕ್ರಮಕ್ಕೆ ಸೂಚಿಸಿದರು.

ಕೊನೆಗೆ ರತ್ನಾಕರ್ ನೇತೃತ್ವದ ಅಧಿಕಾರಿಗಳ ತಂಡ ಅಥೆನಾ ಆಸ್ಪತ್ರೆಗೆ ತೆರಳಿ ವಿವರವಾದ ಮಾತುಕತೆ ನಡೆಸಿ  ನಾಲ್ಕು ಲಕ್ಷ ಮೊತ್ತವನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಇಳಿಸಿದರು. ನಿಟ್ಟುಸಿರು ಬಿಟ್ಟ ರೋಗಿಯ ಕುಟುಂಬಸ್ಥರು ಒಂದು ಲಕ್ಷ ಇಪ್ಪತ್ತು ಸಾವಿರ ಮೊತ್ತ ಪಾವತಿಸಿ ರೋಗಿಯನ್ನು ಬಿಡುಗಡೆ ಮಾಡಿಸಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ ಸೋಂಕಿತ ವೃದ್ದರನ್ನು ಆಂಬುಲೆನ್ಸ್ ಗೆ ಸಾಗಿಸುವಾಗ ಆಗಲೇ ಆರೋಗ್ಯ ಕ್ಷೀಣಗೊಂಡಿದ್ದ ವೃದ್ದ ಆಸ್ಪತ್ರೆಯ ಆವರಣದಲ್ಲೆ ಮೃತಪಟ್ಟರು.

ಇದನ್ನು ಓದಿ: ಲಸಿಕೆ ಲಸಿಕೆ ಲಸಿಕೆಗಾಗಿ ಶುರುವಾಗಿದೆ ಹಾಹಾಕಾರ, ಎರಡನೇ ಡೋಸ್‌ ಪಡೆಯಲು ಪರದಾಟ

ಈಗ ಇರುವ ಪ್ರಧಾನ ಪ್ರಶ್ನೆ. ಕೋವಿಡ್ ಆಸ್ಪತ್ರೆಯಾಗಿ ಆಯ್ಕೆಗೊಂಡಿದ್ದ ಅಥೆನಾ ಸರಕಾರದಿಂದ ಸಿಗುವ ಸೌಲಭ್ಯ ರಿಯಾಯಿತಿಗಳನ್ನು ಮರೆಮಾಚಿದ್ದು ಯಾಕೆ ? ಆಸ್ಪತ್ರೆಯಲ್ಲೇ ಇದ್ದು ಎಲ್ಲವನ್ಜೂ ನಿಭಾಯಿಸಬೇಕಾದ ಆರೋಗ್ಯ ಮಿತ್ರ, ನೋಡಲ್ ಅಧಿಕಾರಿ ಆಸ್ಪತ್ರೆ ಪರವಾಗಿ ಬಾಯಿ ಮುಚ್ಚಿ ಕೂರಲು ಕಾರಣ ಏನು ?

ಐಸಿಯು ಆಕ್ಸಿಜನ್ ಹಾಸಿಗೆಗಳಲ್ಲಿ ದಾಖಲಾದ ಕೋವಿಡ್ ರೋಗಿಗೆ ಒಂಬತ್ತು ದಿನಕ್ಕೆ ಒಂದೂವರೆ ಲಕ್ಷ ರೂಪಾಯಿ ಔಷಧಿ ಯಾತಕ್ಕಾಗಿ ಬಳಕೆಯಾಗುತ್ತದೆ ? ಇದರಲ್ಲಿ ಏನಾದರು ಅವ್ಯವಹಾರ ನಡೆಯುತ್ತಿದೆಯೆ ?

ದಿನಕ್ಕೆ ಹದಿನೈದು ಸಾವಿರ ರೂಪಾಯಿಯಂತೆ (ಸರಕಾರವೇ ನಿಗದಿ ಪಡಿಸಿದ), ಹೆಚ್ಚೆಂದರೆ ಒಂದೂವರೆ ಲಕ್ಷ ರೂಪಾಯಿ ಆಗಬೇಕಾದ ಚಿಕಿತ್ಸಾ ವೆಚ್ಚ ನಾಲ್ಕು ಲಕ್ಷ ಚಿಲ್ಲರೆ ಆಗುವುದು ಹೇಗೆ? ಇದು ದಂಧೆಯಲ್ಲವೆ ?

ಕೊನೆಗೆ ಎರಡು ಮಕ್ಕಾಲು ಲಕ್ಷ ರೂಪಾಯಿಗಳ ರಿಯಾಯಿತಿ ರೋಗಿಗೆ ದೊರಕಿದರೂ, ಅದನ್ನು ಅಯುಷ್ಮಾನ್ ಯೋಜನೆ ಮೂಲಕ ಜಿಲ್ಲಾಡಳಿತ ಅಥೆನಾ ಆಸ್ಪತ್ರೆಗೆ ಪಾವತಿ ಮಾಡಲಿದೆ. ಇದು ಸಾರ್ವಜನಿಕರ ತೆರಿಗೆಯ ಹಣದ ಸುಲಿಗೆಯಲ್ಲವೆ ? ಈ ರೀತಿ ದಂಧೆಯನ್ನು ನಿಲ್ಲಿಸಲು ಜಿಲ್ಲಾಡಳಿತಕ್ಕೆ ಯಾರು ಅಡ್ಡಿ?

ಇದನ್ನು ಓದಿ: ಭಾರತೀಯರು ಕೊರೊನಾದಿಂದಷ್ಟೆ ಸಾಯುತ್ತಿಲ್ಲ – WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

ಇದು ಒಂದು ಪ್ರಕರಣ ಅಲ್ಲ. ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಕುಟುಂಬಸ್ಥರ ರಕ್ತ ಹೀರಲಾಗುತ್ತಿದೆ. ಕೆಲವು ಕುಟುಂಬಗಳು‌ ಬರ್ಬಾದ್ ಅಗಿ ಹೋಗಿವೆ.

ಕಳೆದ ವರ್ಷ ಪ್ರಥಮ ಅಲೆಯ ಸಂದರ್ಭದಲ್ಲೂ ಇದೆ ರೀತಿಯ ದಂಧೆ ನಡೆದಿತ್ತು. ಆಗ ಡಿವೈಎಫ್ಐ ದೊಡ್ಡ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿತ್ತು. ಈ ಬಾರಿ ಆಸ್ಪತ್ರೆಯಲ್ಲಿ ರೋಗಿಗಗಳಿಂದ “ಭರ್ತಿ” ಎಂಬ ಕೃತಕ ಸೃಷ್ಟಿಯ ಹಿಂದೆ ಸುಲಿಗೆಯ ಪ್ರಮಾಣ ಮತ್ತಷ್ಟು ಏರಿದೆ.‌  ಕೋವಿಡ್ ಸಂತ್ರಸ್ತರ ಧ್ವನಿ ಉಡುಗಿ ಹೋಗಿದೆ. ಇಂತಹ ದಂಧೆಯ ವಿರುದ್ದ ರಾಜಕೀಯ ಪಕ್ಷಗಳು, ಸಂಘಟನೆಗಳೂ ಧ್ವನಿ‌ ಎತ್ತಲು ಹಿಂಜರಿಯುತ್ತವೆ. ಸರಕಾರದ, ಜಿಲ್ಲಾಡಳಿತದ ಮಾರ್ಗ ಸೂಚಿಗಳು ಖಾಸಗಿ ಆಸ್ಪತ್ರೆಯ ಧಣಿಗಳ ಚೇಂಬರ್ ನ ಕಸದ ಬುಟ್ಟಿ ಸೇರಿವೆ.

ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಅಧ್ಯಕ್ಷರು

Donate Janashakthi Media

Leave a Reply

Your email address will not be published. Required fields are marked *