ಬೆಳಗಾವಿ: ತಮ್ಮ ಮನೆಯ ಕಿಟಕಿಯನ್ನೇ ಸ್ವಚ್ಛವಾಗಿಟ್ಟುಕೊಳ್ಳದ ಬಿಜೆಪಿಗರು ಕಾಂಗ್ರೆಸ್ ನ ಗೋಡೆ ಕೊಳಕಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೊಳಕಾಗಿರುವುದು ಅವರ ಕಿಟಕಿಯೇ ಹೊರತು ನಮ್ಮ ಗೋಡೆಯಲ್ಲ ಎಂಬುದು ಇನ್ನೂ ಅವರಿಗೆ ತಿಳಿದಿಲ್ಲ ಎಂದು ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಕಹ್ಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಗವಹಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಾಗ್ದಳಿ ನಡೆಸಿದ್ದಾರೆ.
ಈಗ ಜನಾಕ್ರೋಶ ಎಂಬ ಹೋರಾಟದ ಮೂಲಕ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ಎಲ್ಲಾ ಬಿಜೆಪಿ ನಾಯಕರು ತಮ್ಮ ಕಿಟಕಿಯ ಕೊಳೆಯನ್ನು ತೆಗೆಯಲು ಯತ್ನಿಸಿದ್ದರೆ ಇಂತಹ ಹೋರಾಟದ ಅಗತ್ಯವೇ ಇರಲಿಲ್ಲ ಎಂದರು.
ಜನಾಕ್ರೋಶದ ಹೋರಾಟದಲ್ಲಿ ಪ್ರಮುಖವಾಗಿ ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿಪರ್ಯಾಸವೆಂದರೆ ಈ ಹೋರಾಟ ಆರಂಭವಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಡುಗೆ ಅನಿಲದ ಸಿಲಿಂಡರ್ಗೆ 50 ರೂ. ಏರಿಕೆ ಮಾಡಿದೆ. ಇದನ್ನು ಕೂಡ ಬಿಜೆಪಿಯವರು ಹೋರಾಟದಲ್ಲಿ ಸೇರಿಸಿಕೊಳ್ಳಬಹುದಿತ್ತು! ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 55 ಸಾವಿರ ರೂ. ನೀಡುತ್ತಿದೆ.
ಇದನ್ನೂ ಓದಿ: ಅಮೆರಿಕ ಸರ್ಕಾರ: 41 ದೇಶಗಳಿಗೆ ವೀಸಾ ರಹಿತ ಎಂಟ್ರಿಗೆ ಅವಕಾಶ, ಭಾರತಕ್ಕೆ ಮಾತ್ರ ಇಲ್ಲ
ಇವು ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇಂತಹ ಒಂದೇ ಒಂದು ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ನೀಡಿಯೇ ಇಲ್ಲ. ಈ ಯೋಜನೆಗಳ ಜೊತೆಗೆ, ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜನರಿಗೆ ಸ್ವಲ್ಪವೂ ಹೊರೆಯಾಗದಂತೆ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಉದಾಹರಣೆಗೆ ಹಾಲಿನ ದರವನ್ನೇ ನೋಡಿ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಈಗಲೂ ಅತಿ ಕಡಿಮೆಯೇ ಇದೆ. ಹೀಗೆ ಅಲ್ಪ ದರ ಏರಿಸಿದ್ದರೂ, ಅದರ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ ಎಂದರು.
ಇದೇ ವಿಷಯವನ್ನು ಇಟ್ಟುಕೊಂಡು ಜನರ ಮೇಲೆ ತೆರಿಗೆ ಹೊರೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ನಿಜವಾದ ಬೆಲೆ ಏರಿಕೆ ಏನು ಎಂಬುದನ್ನು ಅವರದ್ದೇ ಕೇಂದ್ರ ಸರ್ಕಾರದಲ್ಲಿ ನೋಡಬಹುದು. ಬೆಲೆ ಏರಿಕೆಯ ಬರೆ ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆ ಹಾಗೂ ತೆರಿಗೆ ಹಂಚಿಕೆಯಲ್ಲಿನ ಮೋಸದ ಬಗ್ಗೆಯೂ ಜನಾಕ್ರೋಶದ ಹೋರಾಟ ಮಾಡಬಹುದು. ಅಡುಗೆ ಅನಿಲದ ಬೆಲೆ ಏರಿಕೆಯನ್ನೂ ಈಗ ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹೋಗಿ ಅಲ್ಲಿನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಬೆಳೆಸಿದರೂ, ಅವರೇನೂ ತೆರಿಗೆ ಬರೆಯನ್ನು ಹಾಕುವುದರಿಂದ ಹಿಂದಡಿ ಇಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ತೆರಿಗೆ ಸಮರದಿಂದಾಗಿ ಕಚ್ಚಾ ತೈಲದ ದರ ಒಂದು ಬ್ಯಾರೆಲ್ಗೆ (159 ಲೀಟರ್) ಸುಮಾರು 10 ಡಾಲರ್ (ಅಂದಾಜು 850 ರೂ.) ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್ಗೆ 72.94 ಡಾಲರ್ ಇದ್ದು, ಈಗ 62.91 ಡಾಲರ್ಗೆ ಇಳಿದಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ದರ ಬ್ಯಾರೆಲ್ಗೆ 59.34 ಡಾಲರ್ಗೆ ಬಂದಿದೆ. ಇಷ್ಟು ದರ ಇಳಿಕೆಯಾಗಿದ್ದರೂ ಅಡುಗೆ ಅನಿಲ ದರವನ್ನು 50 ರೂ. ನಷ್ಟು ಏರಿಸಿ ಹೊರೆ ಹಾಕಿರುವುದು ಬಿಜೆಪಿಯ ಜನ ವಿರೋಧಿತನವನ್ನು ಎತ್ತಿ ತೋರಿಸುತ್ತದೆ.
ಇದು ಕೇವಲ ಬೆಲೆ ಏರಿಕೆ ಬರೆಯಲ್ಲ, ಇದು ಬಾಸುಂಡೆ ಬರೆ. ಜೊತೆಗೆ ಪೆಟ್ರೋಲ್-ಡೀಸೆಲ್ ಮೂಲಕ 36.58 ಲಕ್ಷ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಇದು ಗ್ಯಾರಂಟಿಗಳಂತಹ ಯೋಜನೆಗಳ ಮೂಲಕ ಜನರನ್ನೇನೂ ಮರಳಿ ತಲುಪುತ್ತಿಲ್ಲ. ಹಾಗಾದರೆ ಈ ಹಣ ಎಲ್ಲಿ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆ. ಕಳೆದ ಒಂದು ವರ್ಷದಲ್ಲಿ ಸಸ್ಯಾಹಾರಿ ಊಟದ ಬೆಲೆ 57% ನಷ್ಟು ಏರಿಕೆಯಾಗಿದೆ.
ಅಡುಗೆ ಎಣ್ಣೆ, ಬೇಳೆ, ತರಕಾರಿ ಮೊದಲಾದ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಆರೋಗ್ಯ ಕ್ಷೇತ್ರದಲ್ಲಿ 14% ನಷ್ಟು ಹಣದುಬ್ಬರ ಕಂಡುಬಂದಿದೆ. ಈ ನಡುವೆ ಸುಧಾರಣೆಯ ಹೆಸರಲ್ಲಿ ತಂದ ಜಿಎಸ್ಟಿಯಿಂದಾಗಿ ಎಲ್ಲಾ ಕಡೆ ತೆರಿಗೆ ಕಂಡುಬಂದಿದೆ. ಸಿನಿಮಾ ನೋಡುವಾಗ ತಿನ್ನುವ ಪಾಪ್ಕಾರ್ನ್ಗೂ ಜಿಎಸ್ಟಿ ತಪ್ಪಿಲ್ಲ. ಜೀವ ವಿಮೆ, ಅರೋಗ್ಯ ವಿಮೆಗಳ ಮೇಲೂ 18% ಜಿಎಸ್ಟಿ ಹೇರಲಾಗಿದೆ, ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿಯ ಬರೆ ಬಿದ್ದಿದೆ. ಎಟಿಎಂ ಶುಲ್ಕವನ್ನೂ ಏರಿಸಲಾಗಿದೆ.
2018 ರಿಂದ 2024 ರವರೆಗೆ ಕನಿಷ್ಠ ಠೇವಣಿ ನಿರ್ವಹಿಸದ ಜನರಿಂದ ದಂಡದ ರೂಪದಲ್ಲಿ 43,500 ಕೋಟಿ ರೂ. ವಸೂಲಿ ಮಾಡಲಾಗಿದೆ. ಇತ್ತೀಚೆಗೆ ಹೆದ್ದಾರಿ ಟೋಲ್ಗಳ ದರ ಏರಿಕೆಯಾಗಿದೆ ಎಂದರು.
ಕರ್ನಾಟಕದಿಂದ ಕೇಂದ್ರಕ್ಕೆ ವರ್ಷಕ್ಕೆ 4.50 ಲಕ್ಷ ಕೋಟಿ ರೂ. ನಷ್ಟು ತೆರಿಗೆ ಹೋಗುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಾಗಿ 45,000 ಕೋಟಿ ರೂ. ಮತ್ತು ಅನುದಾನದ ರೂಪದಲ್ಲಿ 15,000 ಕೋಟಿ ರೂ. ಮಾತ್ರ ನೀಡುತ್ತಿದೆ. ಅಂದರೆ 1 ರೂಪಾಯಿಗೆ ಪ್ರತಿಯಾಗಿ 13 ಪೈಸೆ ಮಾತ್ರ ಸಿಗುತ್ತಿದೆ. ರಾಜಧಾನಿ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿ ಎಂದು ನಮ್ಮ ಮುಖ್ಯಮಂತ್ರಿಗಳು ಬಜೆಟ್ ವೇಳೆ ಮನವಿ ಮಾಡಿದ್ದರೂ ಅದಕ್ಕೆ ಕೇಂದ್ರದ ಆರ್ಥಿಕ ಸಚಿವರು ಸ್ಪಂದಿಸಲಿಲ್ಲ. ತೆರಿಗೆ ಮರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಒಂದೇ ಒಂದು ಪ್ರಶ್ನೆ ಎತ್ತಿಲ್ಲ. ಜನಾಕ್ರೋಶ ಹೋರಾಟ ಜನರ ಪರವಾಗಿ ಇರಬೇಕೆ ಹೊರತು ರಾಜಕೀಯ ಲಾಭಗಳ ಪರವಾಗಿರಬಾರದು. ಎಷ್ಟೇ ಹೋರಾಟ ಮಾಡಿದರೂ ಅದನ್ನು ಜನರು ನಂಬದೆ ಕಾಂಗ್ರೆಸ್ನ ಜೊತೆಗೆ ಯಾವಾಗಲೂ ಇರುತ್ತಾರೆ ಎಂಬ ಜಾಗೃತಿ ಬಿಜೆಪಿಗೆ ಬರಲಿ ಎಂದರು.
ಪೆಟ್ರೋಲ್, ಡಿಸೇಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವೈಜ್ಞಾನಿಕ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ, ಸಾಮಾನ್ಯ ಜನರಿಂದ ಹಣವಸೂಲಿ ಮಾಡುತ್ತಿರುವ ಬಿಜೆಪಿ ಸರ್ಕಾರವು ಜನ ಸಾಮಾನ್ಯರ ಮೇಲೆ ಭಾರೀ ಹೊರೆ ಹಾಕಿದೆ. ಕಳೆದ 10 ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ನಿಮ್ಮ ಸರ್ಕಾರವು ರೂ.34 ಲಕ್ಷ ಕೋಟಿ ರೂಪಾಯಿಗೆ ಅಧಿಕ ಆದಾಯವನ್ನು ಗಳಿಸಿದೆ.
ಕೇವಲ 2023-24ನೇ ಆರ್ಥಿಕ ವರ್ಷದಲ್ಲಿಯೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಆಯಿಲ್ ಇಂಡಿಯಾ, ಗೆಲ್ ಇಂಡಿಯಾ ಮತ್ತು ONGC ಸೇರಿದಂತೆ ಎಂಟು ದೊಡ್ಡ ತೈಲ ಕಂಪನಿಗಳು ಒಟ್ಟಿನಲ್ಲಿ ರೂ.2.29 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿವೆ. ಈ ಲಾಭವು ಜನ ಸಾಮಾನ್ಯರ ಜೇಬಿನಿಂದ ಪಡೆಯಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವು ಮೇ 2014ರಲ್ಲಿ ಕೇಂದ್ರದ ಅಧಿಕಾರದಿಂದ ಹೊರ ನಡೆದಾಗ, ಪೆಟ್ರೋಲ್ ಮೇಲೆ ಅಬಕಾರಿ ಸುಂಕ ರೂ.9.20 ಪ್ರತಿ ಲೀಟರ್ ಮತ್ತು ಡೀಸೆಲ್ ಮೇಲೆ ರೂ.3.46 ಪ್ರತಿ ಲೀಟರ್ ಇತ್ತು. ಇಂದಿನ ಸ್ಥಿತಿಯಲ್ಲಿ, ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ ರೂ.19.90 ಪ್ರತಿ ಲೀಟರ್ ಆಗಿದ್ದು, ಡೀಸೆಲ್ ಮೇಲಿನ ಅಬಕಾರಿ ತೆರಿಗೆ ರೂ.15.80 ಪ್ರತಿ ಲೀಟರ್ ಆಗಿದೆ. ಇದು ಪೆಟ್ರೋಲ್ ಮೇಲೆ 216% ಹಾಗೂ ಡೀಸೆಲ್ ಮೇಲೆ 457%ರಷ್ಟು ಅಬಕಾರಿ ತೆರಿಗೆ ಹೊರೆ ಜನಸಾಮಾನ್ಯರ ಮೇಲೆ ಬಿದ್ದಿದೆ.
ಜನತೆಗೆ ಮೋಸಮಾಡಿರುವ ಸ್ಪಷ್ಟ ನಿದರ್ಶನವೆಂದರೆ, 2013-14ರ ಕಾಲಘಟ್ಟದೊಂದಿಗೆ ಹೋಲಿಸಿದರೆ ಕಚ್ಚಾ ತೈಲ ಬೆಲೆ 30% ರಿಂದ 40%ರಷ್ಟು ಕುಸಿತವನ್ನೇ ಕಂಡಿದೆ. ಆದರೆ ಈ ತಗ್ಗಿದ ಬೆಲೆಯ ಪ್ರಯೋಜನವನ್ನು ಸರ್ಕಾರವು ಗ್ರಾಹಕರಿಗೆ ನೀಡದೆ ತನ್ನದೇ ಲಾಭಕ್ಕಾಗಿ ಉಪಯೋಗಿಸಿಕೊಂಡಿದೆ. ಏಪ್ರಿಲ್-ಮೇ 2014ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಹೊರ ಬಂದಾಗ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 108 ಯು ಎಸ್ ಡಾಲರ್ ಇತ್ತು. ಇಂದಿನ ಬೆಲೆ 62 ಯು ಎಸ್ ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಕಳೆದ ದಶಕವಿಡೀ ಕಚ್ಚಾ ತೈಲ ಸರಾಸರಿ ಬೆಲೆ 70 ಯು ಎಸ್ ಡಾಲರ್ ನಿಂದ 80 ಯು ಎಸ್ ಡಾಲರ್ ನಡುವೆ ಇತ್ತು. ಸರ್ಕಾರ ಈ ಲಾಭವನ್ನು ಗ್ರಾಹಕರಿಗೆ ನೀಡಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ ರೂ.10 ರಿಂದ ರೂ.15 ರಷ್ಟು ಕಡಿಮೆಯಾಗುತ್ತಿತ್ತು. ಇದು ಗ್ರಾಹಕರಿಗೆ ನೆರವಾಗುತ್ತಿತ್ತು ಮತ್ತು ಆರ್ಥಿಕ ಹೊರೆ ಇಳಿಸಬಹುದಿತ್ತು.
ಕೇಂದ್ರದ ಬಿಜೆಪಿ ಸರ್ಕಾರವು ಏಪ್ರಿಲ್ 7, 2025ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಪ್ರತಿ ಲೀಟರ್ ರೂ.2ರಷ್ಟು ಹೆಚ್ಚಿಸಿದೆ. ಈ ತೆರಿಗೆ ಏರಿಕೆಯಾಗದೆ ಇದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕನಿಷ್ಠ ರೂ.2 ರಷ್ಟು ಕಡಿಮೆಯಾಗುತ್ತಿತ್ತು. ಈ ಸಣ್ಣ ಪ್ರಯೋಜನವನ್ನೂ ತೆಗೆದುಹಾಕುವ ಮೂಲಕ, ಕೇಂದ್ರ ಬಿಜೆಪಿ ನೇತೃತ್ವದ ಏನ್ ಡಿ ಎ ಸರ್ಕಾರವು ಜನರ ಮೇಲೆ ರೂ.40,000 ಕೋಟಿ ರೂಪಾಯಿಗೂ ಅಧಿಕ ಹೆಚ್ಚುವರಿ ಭಾರವನ್ನು ಹಾಕಿದೆ. ಇದರ ಪೈಕಿ ಕೇವಲ ಕರ್ನಾಟಕದ ಜನರ ಮೇಲೆಯೇ ರೂ.4,500 ಕೋಟಿ ರೂಪಾಯಿಗೂ ಹೆಚ್ಚು ಹೊರೆ ಹಾಕಲಾಗಿದೆ.
ಕರ್ನಾಟಕದಲ್ಲಿ ವಾರ್ಷಿಕವಾಗಿ ಪೆಟ್ರೋಲ್ ಮಾರಾಟವು 692.43 ಕೋಟಿ ಲೀಟರ್ ಆಗಿದ್ದು, ಡೀಸೆಲ್ ಮಾರಾಟವು 1613.66 ಕೋಟಿ ಲೀಟರ್ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರೂ.2 ಕಡಿಮೆ ಮಾಡಿದ್ದರೆ ಗ್ರಾಹಕರಿಗೆ ರೂ.4,504 ಕೋಟಿ ರೂಪಾಯಿ ಪ್ರಯೋಜನವಾಗುತ್ತಿತ್ತು. ಆದರೆ ಈ ಪ್ರಯೋಜನವನ್ನೂ ಕೇಂದ್ರ ಸರ್ಕಾರ ತೆಗೆದುಕೊಂಡು, ಜನರ ಮೇಲೆ ರೂ.4,504 ಕೋಟಿ ಹೆಚ್ಚುವರಿ ಭಾರವನ್ನು ಹಾಕಿದೆ. ಇತ್ತಿಚೆಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಮೂಲಕ ಕನ್ನಡಿಗರ ಮೇಲಿನ ಹೆಚ್ಚುವರಿ ಭಾರ ರೂ.515.49 ಕೋಟಿ ಆಗಿದೆ. ಇದರಿಂದ ರೂ.4,504 ಕೋಟಿ + ರೂ.515.49 ಕೋಟಿ, ಒಟ್ಟಾರೆಯಾಗಿ ರೂ.5,019.49 ಕೋಟಿ ಆರ್ಥಿಕ ಹೊರೆಯನ್ನು ಕನ್ನಡಿಗರ ಮೇಲೆ ಹೇರಿದ್ದು, ಇದು ಕನ್ನಡಿಗರ ಮೇಲಿನ ಆರ್ಥಿಕ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಪಹಲ್ಗಾಂಮ್ ಹತ್ಯಾಕಾಂಡ|ಭರತ್ ಭೂಷಣ್ ಅಂತಿಮ ದರ್ಶನ ಪಡೆದ ಸಿಎಂ Janashakthi Media