ಕಿವಿ ಕೇಳಿಸದ ಬಾಲಕಿ ಹತ್ಯೆ: ಇನ್ಸ್‌ ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ದೂರು ಸಲ್ಲಿಕೆ

ಬೆಂಗಳೂರು: 14 ವರ್ಷದ ಮಾತು ಬಾರದ, ಕಿವಿ ಕೇಳಿಸದ ಬಾಲಕಿಯ ಹತ್ಯೆ ರಾಮನಗರ ಜಿಲ್ಲೆಯ ಬಿಡದಿ ವ್ಯಾಪ್ತಿಯ ಭದ್ರಾಪುರದಲ್ಲಿ ನಡೆದಿದ್ದೂ, ಪ್ರಕರಣ ಸಂಬಂಧ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯವೆಸಗಿರುವ ಆರೋಪದಡಿ ಬಿಡದಿ ಠಾಣೆಯ ಇನ್ಸ್‌ ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ದಾಖಲೆ ಸಮೇತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.

ಶನಿವಾರ ನಗರದ ಮಾನವ ಹಕ್ಕುಗಳ ಆಯೋಗಗಕ್ಕೆ ಭೇಟಿ ನೀಡಿದ ನ್ಯಾಯವಾದಿ ಎಸ್.ಭೀಮನಗೌಡ ನೇತೃತ್ವದ ನಿಯೋಗ, ಸಾರ್ವಜನಿಕ ಸಮ್ಮುಖದಲ್ಲಿ ಸಂಘಟನೆಯ ಮುಖಂಡರ ಮೇಲೆ ಹಲ್ಲೆ ಹಾಗೂ ಅವಮಾನ ಮಾಡಿ ದೌರ್ಜನ್ಯವೆಸಗಿರುವ ಠಾಣಾ ಅಧಿಕಾರಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದೂರು ಸಲ್ಲಿಸಿತು.

ದೂರಿನಲ್ಲಿ ಏನಿದೆ?

ಭದ್ರಾಪುರ ಗ್ರಾಮದ ಬಾಕಿಯ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ಬಗ್ಗೆ ದೂರುದಾಖಲಾಗಿ ಐದು ದಿನಗಳು ಕಳೆದರೂ ಎಫ್‍ಐಆರ್ ದಾಖಲು ಮಾಡಿರಲಿಲ್ಲ. ಇದಕ್ಕೆ ಸಂಬಂದಪಟ್ಟಂತೆ ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಸಿಐಟಿಯು ಸಂಘಟನೆಯ ಮುಖಂಡರು ಹಾಗೂ ಸದಸ್ಯರು ಪೊಲೀಸರನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ಕೋರ್ಟ್‌ ಆಡಳಿತಾಧಿಕಾರಿಗಳ ಕಾರ್ಯ: ನಿಯಮ ರೂಪಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಆದರೆ, ಇದನ್ನು ಸಹಿಸದ ರಾಮನಗರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಮೃತ ಬಾಲಕಿಯ ಕುಟುಂಬದ ಸದಸ್ಯರ ಹೇಳಿಕೆ ಪಡೆಯುವುದಾಗಿ ತಿಳಿಸಿ, ಪ್ರಕರಣದ ದಿಕ್ಕು ತಪ್ಪಿಸಲು ಮೃತಳ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಸರಕು ಸಾಗಾಣಿಕೆ ವಾಹನದಲ್ಲಿ ಕರೆದುಕೊಂಡು ಹೋಗುವುದಕ್ಕೆ ಮುಂದಾಗಿದ್ದರು. ಈ ವೇಳೆ ಸರಕು ಸಾಗಾಣಿಕೆ ವಾಹನದ ಬದಲಾಗಿ ಪ್ರಯಾಣಿಕರು ಸಂಚರಿಸಬಹುದಾದ ವಾಹನದಲ್ಲಿ ಕರೆದುಕೊಂಡು ಹೋಗಬೇಕೆಂದು ಹೋರಾಟಗಾರರು ಆಗ್ರಹಿಸಿದ್ದರು.

ಸ್ಥಳದಲ್ಲಿದ್ದ ಬಿಡದಿಯ ಪೊಲೀಸ್ ಇನ್ಸ್‌ ಪೆಕ್ಟರ್ ಶಂಕರ್ ನಾಯ್ಕ್, ಮಹಿಳಾ ಮುಖಂಡರ ಜೊತೆ ವಾಗ್ವಾದಕ್ಕಿಳಿದು ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ಬೈದು ನೀವೇ ವಾಹನವನ್ನು ಏರ್ಪಾಡು ಮಾಡಿಕೊಂಡು ಅವರನ್ನು ಕರೆದುಕೊಂಡು ಬನ್ನಿ ಎಂದು ಏಕವಚನದಲ್ಲಿ ಮಾತನಾಡಿದ್ದರು. ಈ ಘಟನೆಯನ್ನು ಸ್ಥಳದಲ್ಲಿದ್ದ ಸಿಐಟಿಯು ಕಾರ್ಮಿಕ ಮುಖಂಡರಾದ ರಾಘವೇಂದ್ರ ತಮ್ಮ ಮೊಬೈಲ್‍ನಿಂದ ವಿಡಿಯೊ ಚಿತ್ರೀಕರಣ ಮಾಡಲು ಮುಂದಾದಾಗ ಇನ್ಸ್‌ ಪೆಕ್ಟರ್ ರಾಘವೇಂದ್ರ ಅವರ ಕಪಾಳಕ್ಕೆ ಹೊಡೆಯಲು ಮುಂದಾಗಿ, ಅವರನ್ನು ತಳ್ಳಿ ಮೊಬೈಲ್ ಕಿತ್ತು ಬಿಸಾಡಿ, ಕೊರಳಪಟ್ಟಿ ಹಿಡಿದು ವಿಡಿಯೊ ಯಾಕೆ ಮಾಡುತ್ತೀಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು.

ಹೀಗೆ, ಸಾರ್ವಜನಿಕ ಸ್ಥಳದಲ್ಲಿ ಅವರ ಮೇಲೆ ಹಲ್ಲೆ ಹಾಗೂ ಅವಮಾನ ಮಾಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಕ್ರಮ ಕೈಗೊಳ್ಳಲು ಆಗ್ರಹ

‘ಬಿಡದಿಯ ಬಾಲಕಿಯ ಹತ್ಯೆ ಪ್ರಕರಣವೂ ಗಂಭೀರವಾಗಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಜತೆಗೆ, ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ನ್ಯಾಯವಾದಿ ಎಸ್.ಭೀಮನಗೌಡ ಹೇಳಿದ್ದಾರೆ.

ಇದನ್ನೂ ನೋಡಿ: ಬಿಜೆಪಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ – ಕೆ.ಎನ್ ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *