ಅವಳು ಹೆಚ್ಹು ವಯಸ್ಸಾದ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಫಿಸಿಯೊಥೆರಪಿಸ್ಟ್…ಭುಗಿಲೇಳುವಷ್ಟು ಕೋಪದ ಅಣಲನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡವಳು, ಅದನ್ನು ವಿನಿಯೋಗಿಸಲು, ತಣಿಸಲು ಹಗಲು ರಾತ್ರಿ ಇನ್ನೊಬ್ಬರ ನೆಮ್ಮದಿಗಾಗಿ ದುಡಿಯುತ್ತಿರುವವಳು, ಯಾವ ಆಡಂಬರವಿಲ್ಲದೆ, ಸದ್ದಿಲ್ಲದೆ ಅಬಲೆಯರಿಗೆ ಆಶ್ರಯದಾತೆಯಾಗಿರುವವಳು. ವೃದ್ದರ ಮಕ್ಕಳು ದೂರ ಸರಿದರೂ ಇವಳು ಅವರ ಲಾಲನೆ ಪಾಲನೆಯನ್ನೂ ಮಾಡುತ್ತ ಸಮಾಜದ ಸುಂದರವಾದ, ಬಲಿಷ್ಟವಾದ ಕೊಂಡಿಯಾಗಿ ತನ್ನ ಜೀವನ ಸಾಗಿಸುತ್ತಿರುವವಳು. ಅವಳ ಕಾರ್ಯನಿರ್ವಹಣೆ, ಅವಳ ತನ್ಮಯತೆ, ಅವಳು ತೋರುವ ಪ್ರೀತಿ ಎಲ್ಲವೂ ವಿಸ್ಮಯಕಾರಿ. ಸಹಾನುಭೂತಿ
-ಚಂಪಾ ಜೈಪ್ರಕಾಶ್
ನನ್ನ ಆತ್ಮೀಯ ಗೆಳತಿ ಬ್ಯುಲ ಬೇನೆ,ಅವಳುಫಿಸಿಯೊ ತೆರಪಿಸ್ಟ್, ಅವಳ ಕೆಲಸದ ರೀತಿ ನೀತಿ ನೋಡಿದರೆ ದಿಗ್ಭ್ರಮೆಯಾಗುತ್ತದೆ. ಬೆಳಗ್ಗೆ ಐದು ಗಂಟೆಗೆಲ್ಲ ಅವಳ ದಿನಚರಿ ಆರಂಭಗೊಳ್ಳುತ್ತದೆ, ಅದು ಯಾವ ಸಮಯಕ್ಕೆ ಮುಗಿಯುತ್ತದೆಂದು ಅವಳಿಗೂ ಗೊತ್ತಿರುವುದಿಲ್ಲ. ಇದು ಸಾಧಾರಣದಿನಗಳ ಸಂಗತಿ. ಬೆಳಿಗ್ಗೆ ಆರುವರೆಗೆ ಮನೆಯಿಂದ ಹೊರಟರೆ,ಮನೆಗೆ ವಾಪಸಾಗುವ ಸಮಯ ನಿಗದಿತವಾಗಿ ಇರುವುದಿಲ್ಲ. ಅವಳು ಹೆಚ್ಹಾಗಿ ನೋಡುವುದು ಜೀಡಿಯಾಟ್ರಿಕ್ ಕೇಸುಗಳು, ಅಂದರೆ ಹೆಚ್ಹು ವಯಸ್ಸಾದ ರೋಗಿಗಳು, ಪಾರ್ಶ್ವವಾಯು ರೋಗಿಗಳು, ಶಸ್ತ್ರಚಿಕಿತ್ಸೆ ಆದವರು, ಹಾಸಿಗೆ ಹಿಡಿದ ರೋಗಿಗಳು.ಅವರುಗಳು ಯಾವಾಗ ಯಾರುಬೇಕಾದರೂ ಅವಳನ್ನು ತುರ್ತು ಚಿಕಿತ್ಸೆಗಾಗಿ ಕರೆಯಬಹುದು.
ಆದರೆ ಅವಳಿಗೆ ವಿಶೇಷ ದಿನಗಳೇ ಹೆಚ್ಚು. ಇದ್ದಕ್ಕಿದ್ದಂತೆ ಅವಳ ಯಾವ ರೋಗಿ ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಕರೆಯಬಹುದು. ಒಡನೆ ಅವಳು ಅವರಲ್ಲಿಗೆ ಹೋಗಿ ಅವರ ಪರಿಸ್ಥಿತಿಯನ್ನು ಗಮನಿಸಿ, ಅವರಿಗೆ ಅವಶ್ಯಕವಾದ ಚಿಕಿತ್ಸೆಯನ್ನು ಕೊಡುವುದೋ, ಕೊಡಿಸುವುದೋ ಮಾಡುತ್ತಾಳೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕಿದ್ದರೆ ಅದನ್ನೂ ಮಾಡುತ್ತಾಳೆ, ಅವರ ಮನೆಯವರು ಬರುವವರೆಗೂ ಅವಳು ರೋಗಿಯೊಂದಿಗೆ ಪೋಷಕಿಯಾಗಿ ಅಲ್ಲೇ ಇರುತ್ತಾಳೆ. ನಾನು ಹೇಳಿದ ಜೀಡಿಯಾಟ್ರಿಕ್ ಪೇಶಂಟುಗಳು ಒಂಟೊಂಟಿಯಾಗಿ ಅಥವ ವಯಸ್ಸಾದ ಗಂಡ ಹೆಂಡತಿಯಾಗಿ ಮನೆಯಲ್ಲಿ ಇರುತ್ತಾರೆ. ಅವರ ಮಕ್ಕಳು ಬಹುಪಾಲು ಹೊರದೇಶಗಳಲ್ಲಿ ನೆಲೆಸಿರುತ್ತಾರೆ. ಒಂದೋ ಎರಡೋ ವರ್ಷಕ್ಕೊಮ್ಮೆ ಬಂದು ಹೋಗುತ್ತಾರೆ, ಅವರ ಜವಾಬ್ದಾರಿಯನ್ನು ಬ್ಯುಲ ತೆಗೆದುಕೊಳ್ಳುತ್ತಾಳೆ. ಆಸ್ಪತ್ರೆಯಲ್ಲಿ ಭರ್ತಿಯಾಗಿದ್ದರೆ, ಅವರ ಮಗನೋ ಮಗಳೋ ಬರುವವರೆಗೂ ಅವಳು ರೋಗಿಯೊಂದಿಗೆ ಹಗಲು, ರಾತ್ರಿ ಎನ್ನದೆ ಇರುತ್ತಾಳೆ. ಸಹಾನುಭೂತಿ
ಕೆಲವೊಮ್ಮೆ ರೋಗಿ ತೀರಿಕೊಂಡರೆ, ಅವರ ಮನೆಯವರು ಬಂದು ಮೃತವ್ಯಕ್ತಿಯ ಜವಾಬ್ದಾರಿ ತೆಗೆದುಕೊಳ್ಳುವವರೆಗೂ ಆ ದೇಹದ ಜವಾಬ್ದಾರಿ ಇವಳದಾಗಿರುತ್ತದೆ. ಸಾಧಾರಣವಾಗಿ ಹೊರದೇಶದಿಂದ ಬರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಮೇರಿಕ ಖಂಡದಿಂದ ಬರಬೇಕಾದರೆ, ತೀರಿಕೊಂಡವರ ದೇಹವನ್ನು ಐಸ್ ಪೆಟ್ಟಿಗೆಯಲ್ಲಿಟ್ಟು ಕಾಪಾಡುವುದೂ ಇವಳ ಜವಾಬ್ದಾರಿ. ಮನೆಯವರಿಗೆ ನಿಮ್ಮ ತಂದೆಯನ್ನೋ ತಾಯಿಯನ್ನೋ ಆಸ್ಪತ್ರೆಗೆ ಸೇರಿಸುತ್ತಿದ್ದೇನೆ ಆದಷ್ಟು ಬೇಗ ಬನ್ನಿ ಎಂದರೆ ಅವರು ಅಲ್ಲಿಂದ ಒಬ್ಬ ಅಟೆಂಡೆಂಟನ್ನು ಇಟ್ಟು ನೋಡ್ಕೊಳ್ಳಿ ಎಕ್ಸ್ಟ್ರ ಹಣ ಈಗಲೆ ಟ್ರಾಂಸ್ಫರ್ ಮಾಡುತ್ತೇನೆ ಅನ್ನುತ್ತಾರೆ. ರೋಗಿ ತೀರಿಕೊಂಡ ನಂತರ ಬರಲು ಮತ್ತೆ ತಡಮಾಡುತ್ತಾರೆ. ಸಹಾನುಭೂತಿ
ಇದನ್ನೂ ಓದಿ: ‘ಹೆಬ್ಬುಲಿ ಕಟ್’ ಸಿನೆಮಾ ಕತೆ ನನಗೆ ತುಂಬಾ ಕನೆಕ್ಟ್ ಆಗುತ್ತದೆ: ಸತೀಶ್ ನೀನಾಸಂ
ವಯಸ್ಸಾದವರು ಜಾರಿ ಬೀಳುವುದು ಬಹಳ ಸಾಮಾನ್ಯ ಸಂಗತಿ. ಅವರ ಮೂಳೆಗಳು ಒಡೆಯುವ ಅವಕಾಶ ಹೆಚ್ಹಾಗಿರುತ್ತದೆ. ಬಿದ್ದು ಕೈ, ಕಾಲು,ಸೊಂಟವನ್ನು ಮುರಿದುಕೊಂಡಿರುತ್ತಾರೆ. ಅವರಿಗೆ ಪ್ರತಿದಿನ ಇಪ್ಪತ್ತುನಾಲ್ಕು ಗಂಟೆ ಸೇವೆ ಬೇಕಾಗುತ್ತದೆ. ಬ್ಯೂಲ ಒಂದು ಸಂಘವನ್ನು ಕಟ್ಟಿದ್ದಾಳೆ, ಸಹಕಾರದ ಅವಶ್ಯಕತೆ ಇರುವ ಹೆಣ್ಣುಮಕ್ಕಳೇ ಈ ಸಂಘದ ಸದಸ್ಯರು. ಆ ಹೆಣ್ಣು, ಮನೆಯಿಂದ ಹೊರಗಟ್ಟಿದವಳಿರಬಹುದು, ಗಂಡ ಅವಳನ್ನು ಬಿಟ್ಟಿರಬಹುದು, ಕಿರುಕುಳ ಕೊಡುವ ಗಂಡನೋ ಅತ್ತೆಮಾವಂದಿರೋ ಇರಬಹುದು, ವಿಧವೆ ಇರಬಹುದು, ಹೀಗೆ ಯಾರ ಸಹಕಾರವೂ ಇಲ್ಲದೆ ಅತಂತ್ರವಾಗಿರುವವರಿಗೆ ಅವಳ ಸಂಘದಲ್ಲಿ ಸದಸ್ಯತ್ವ ಸಿಗುತ್ತದೆ. ಅವರಿಗೆ ರೋಗಿಗಳನ್ನು ನೋಡಿಕೊಳ್ಳುವುದರ ಬಗ್ಗೆ, ಮನೆ ನೋಡಿಕೊಳ್ಳುವುದರ ಬಗ್ಗೆ, ಅಡಿಗೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಮಕ್ಕಳ ಆಸರೆ ಇಲ್ಲದ ವಯಸ್ಸಾದ ತಂದೆತಾಯಿಯರನ್ನು ನೋಡಿಕೊಳ್ಳಲು ಈ ಮಹಿಳೆಯರನ್ನು ಬ್ಯೂಲ ನೇಮಿಸಿ ಅವರ ಮೇಲ್ವಿಚಾರಣೆಯನ್ನೂ ಮಾಡುತ್ತಾಳೆ. ಇದರಲ್ಲಿ ತನ್ನ ಸಿಬ್ಬಂದಿಗೂ ಮೋಸವಾಗದಂತೆ, ತನ್ನ ಸಿಬ್ಬಂದಿಯಿಂದ ಆ ಹಿರಿಯರಿಗೂ ತೊಂದರೆಯಾಗದಂತೆ ಅವರುಗಳನ್ನು ಸಂಬಾಳಿಸುತ್ತಾಳೆ. ಸಹಾನುಭೂತಿ
ಅವಳಿಗೆ ಆಗಾಗ ಫೋನ್ ಬರುತ್ತದೆ, ಅವಳ ಸಿಬ್ಬಂದಿ ಕರೆ ಮಾಡಿದ್ದರೆ, “ಮೇಡಮ್, ಇಲ್ಲಿ ನೋಡಿ, ಸುಂದರಮ್ ತಾತ ನನ್ನನ್ನು ಸಿಕ್ಕಾಪಟ್ಟೆ ಬೈದು, ನಾನು ಕೊಟ್ಟಿದ್ದು ತಿನ್ನಲ್ಲ, ಕುಡಿಯಲ್ಲ ಅಂತ ಹಠ ಮಾಡ್ತಿದಾರೆ, ಬೆಳಿಗ್ಗೆಯಿಂದ ಒಂದು ತೊಟ್ಟು ನೀರನ್ನೂ ಕುಡಿದಿಲ್ಲ, ನಾನು ಹತ್ತಿರ ಹೋದರೆ ಸಾಕು, ಅವರ ವಾಕಿಂಗ್ ಕೋಲು ತೊಗೊಂಡು ಹೊಡೆಯೋಕೆ ಬರ್ತಿದಾರೆ. ನೀವು ಆದಷ್ಟು ಬೇಗ ಬನ್ನಿ ಮೇಡಮ್, ಪ್ಲೀಸ್.” ಎಂದು ಗೋಗರೆಯುತ್ತಾಳೆ. ಸಹಾನುಭೂತಿ
ಫೋನು ಅದೇ ತಾತನಿಂದ ಬಂದರೆ ಅವರಿಗೂ ಸಿಬ್ಬಂದಿಯ ಮೇಲೆ ಇಷ್ಟುದ್ದ ದೂರು ಇರುತ್ತದೆ. “ಏನಮ್ಮ ಬ್ಯೂಲ, ಎಂಥವಳನ್ನು ತಂದು ಇಟ್ಟಿದ್ದೀಯ ನನಗೆ, ಬೆಳಿಗ್ಗೆ ನನ್ನ ಕೈಯಲ್ಲಿ ಎದ್ದೇಳಕಾಗಲ್ಲ ಅಂದ್ರೂ ನನ್ನನ್ನ ಬಲವಂತವಾಗಿ ಕರ್ಕೊಂಡು ಹೋಗಿ ಹಲ್ಲು ಉಜ್ಜಿಸಿ, ಸ್ನಾನ ಮಾಡಿಸೇ ಬಿಟ್ಟಳು, ನಂಗೆ ನಡೆಯಕಾಗಲ್ಲ ಅಂದ್ರೂ ನನ್ನನ್ನ ಎತ್ತಿಕೊಂಡು ಹೋಗಿ ಮಂಚದ ಮೇಲೆ ಹಾಕೇಬಿಟ್ಟಳು, ನನಗೆ ಇಷ್ಟವಿಲ್ಲದ ಬಟ್ಟೆ ತೊಡಿಸಿದ್ದಾಳೆ, ಇವತ್ತು ಯಾವ ದಿನ? ಇವತ್ತು ಯಾವ ದಿನನಮ್ಮ? ನನ್ನ ಹುಟ್ಟಿದ ದಿನ. ನಾನು ಹೊಸಬಟ್ಟೆ ಹಾಕ್ಕೊಬೇಕುತಾನೆ? ಯಾವುದೋ ಹಳೇ ಕೋರಿ ಹಾಕಿದಾಳೆ, ಅವಳಿಗೆ ಬುದ್ದಿ ಇದೆಯ? ಅದಕ್ಕೇ ಕೋಪಬಂತು, ನನ್ನ ವಾಕಿಂಗ್ ಸ್ಟಿಕ್ ತೊಗೊಂಡು ನಾಲಕ್ಕು ಬಾರಿಸಿದೆ. ಅವಳು ನನ್ನ ಮನೆಯಲ್ಲಿ ಇನ್ನು ಒಂದು ಕ್ಷಣನೂ ಇರೋದು ಬೇಡ. ಇವಳು ನೋಡೋಕೂ ಲಕ್ಷಣವಾಗಿಲ್ಲ.” ಸಹಾನುಭೂತಿ
ಆ ಕರೆಬಂದಾಗ ಬ್ಯೂಲ ನನ್ನ ಬಳಿ ಇದ್ದಳು, ಅವಳು ಆ ತಾತನ ಫೋಟೊ ತೋರಿಸಿ ಹೇಳಿದಳು, “ನೋಡು ಇವರಿಗೆ ತೊಂಬತ್ತೆರಡು ವಯಸ್ಸು, ಅವರ ಹುಟ್ಟುಹಬ್ಬ ಮುಂದಿನ ತಿಂಗಳು, ಇವತ್ತು ಅಂತ ಅಂದುಕೊಂಡು ಇಷ್ಟು ರಾದ್ದಾಂತ ಮಾಡ್ತಿದಾರೆ, ಇಷ್ಟು ವಯಸ್ಸಾದರೂ ಲಕ್ಷಣವಾದ ಹುಡುಗಿ ಸಹಾಯಕ್ಕೆ ಬೇಕಂತೆ! ಈಗ ಹೋಗಿ ಆಯಪ್ಪನಿಗೆ ಏನಾರ ಮಾಡಿ ತಿನ್ನಿಸಿ ಸಮಾದಾನ ಮಾಡ ಬೇಕು.” ಎಂದು ಕೂಡಲೆ ಹೊರಟಳು. ಸಹಾನುಭೂತಿ
ಆ ತಾತನ ಮಕ್ಕಳು ಮೊಮ್ಮಕ್ಕಳು ಯಾರಿಗೂ ಇಲ್ಲದ ಅಕ್ಕರೆಯನ್ನು ಇವಳು ತೋರಿಸುತ್ತಾಳೆ. ಅಲ್ಲಿಹೋಗಿ ನನಗೆ ವೀಡಿಯೊ ಕಾಲ್ ಮಾಡಿದ್ದಳು,
“ಸುಂದರಮ್ ಸಾರ್, ಗುಡ್ಮಾರ್ನಿಂಗ್, ಹೇಗಿದ್ದೀರಿ? ಕಾಲು ನೋವು ಕಮ್ಮಿ ಆಗಿದೆಯ?”
“ನಿನ್ನ ಗುಡ್ಮಾರ್ನಿಂಗ್ ಅಲ್ಲಿರಲಿ, ನನ್ನ ಬರ್ತಡೆ ಅಂತ ನಿನಗೂ ಮರೆತು ಹೋಯ್ತ? ಆ ಜಯಗೆ ಸ್ವಲ್ಪ ಬುದ್ದಿಹೇಳು. ನನ್ನ ಕಣ್ಣ ಮುಂದೆ ಬರಬೇಡ ಅಂತ ಹೇಳು.”
“ಸುಂದರಮ್ ಸಾರ್, ಇದು ಯಾವತಿಂಗಳು? ಮೇ ಅಲ್ವ? ಮೇ ಎರಡನೆ ತಾರೀಕು. ಸರಿನಾ?”
“ಏಯ್ ಇಲ್ಲಮ್ಮ, ಮೇ ಅಲ್ಲ ಜೂನ್ಎರಡು.” ಕೋಪದಲ್ಲೇ ಹೇಳಿದರು.
“ನೆನ್ನೆ ಮನೆಮುಂದೆ ಮೆರವಣಿಗೆ ಹೋಯ್ತಲ್ಲ ಏನು ಅಂತ ಕೇಳಿದ್ರಲ್ಲ ನೆನಪಿದೆಯ? ಮೇ ಡೇ ಅಂತ ನಾನು ಹೇಳಿದ್ದಿಕ್ಕೆ ನೀವು ಏನು ಹೇಳಿದಿರಿ?”
“ಏನ್ ಹೇಳ್ದೆ? ಏನೂ ಹೇಳಲಿಲ್ಲ.”
“ನೀವು ಏನು ಹೇಳಿದ್ರಿ ಅಂದರೆ, ‘ಹೌದು, ಮೇ ಡೇ ಅಂದರೆ ಕಾರ್ಮಿಕರ ದಿನಾಚರಣೆ.’ ಅಲ್ವ ಅಂತ ಕೇಳಿದ್ರಿ. ನಾನು ಹೌದು ಅಂದೆ, ಆಗ ನೀವು ನಿಮ್ಮ ತಂದೆ ಕಾರ್ಮಿಕರಾಗಿದ್ದಾಗ ಈರೀತಿ ಮೆರವಣಿಗೆ ಹೋಗ್ತಾ ಇದ್ದಿದ್ದರ ಬಗ್ಗೆ ಹೇಳಿದ್ರಲ್ಲ?”
“ಅದು ನೆನ್ನೆನಾ?”
“ಹೌದು. ಮುಂದಿನ ತಿಂಗಳು ನಿಮ್ಮ ಬರ್ತಡೆನ ಗ್ರಾಂಡಾಗಿ ಮಾಡೋಣ. ಯಾರು ಯಾರನ್ನು ಕರೆಯೋಣ?”ಅವರು ಯೋಚಿಸ್ತಾ ಇದ್ದರು. ಬ್ಯೂಲ ಮೆಲ್ಲಗೆ ಜಯಳನ್ನು ಕರೆದು,‘ಅವರ ಕಾಫಿ, ತಿಂಡಿ ತೊಗೊಂಡು ಬಾಎನ್ನುವಂತೆ ಸನ್ನೆ ಮಾಡಿದಳು. ಅವಳು ತಂದು ಕೊಟ್ಟ ನಂತರ. ಸಹಾನುಭೂತಿ
“ಸುಂದರಮ್ ಸಾರ್, ಯೋಚಿಸಿದಿರಾ ಯಾರ್ ಯಾರು ಬರ್ತಾರೆ ಹೇಳಿ, ಈ ತಿಂಡಿ ತಿಂದುಕೊಂಡೇ ಯೋಚನೆ ಮಾಡಿ ಹೇಳಿ, ನಾನು ಎಲ್ಲ ಈ ಚೀಟಿನಲ್ಲಿ ಬರೆದಿಡ್ತೀನಿ, ನಾನೇ ಅವರನ್ನೆಲ್ಲ ಇನ್ವೈಟ್ ಮಾಡ್ತೀನಿ ಒಕೆನಾ?” ಸಹಾನುಭೂತಿ
ಅವರು ಅರಿವಿಲ್ಲದೆಯೋ, ಹಸಿವಿಗೋ, ತಮ್ಮ ತಪ್ಪು ಲೆಕ್ಕಾಚಾರಕ್ಕೋ, ಒಟ್ಟಾರೆ ತಿಂಡಿ ತಿಂದು ಕಾಫಿಯನ್ನೂ ಕುಡಿದರು. ಅಷ್ಟರಲ್ಲಿ ಜಯಳ ಮೇಲಿನ ಕೋಪವೂ ಮಾಯವಾಗಿತ್ತು. ಅವರೆಂದರು, ”ಜಯ, ನನ್ನ ಮಾತ್ರೆ ನೀರು ತೊಗೊಂಡು ಬಾ, ನನ್ನ ಪಂಚೆ ಸರಿಮಾಡಮ್ಮ ಇಲ್ಲಿ ಸೊಂಟದ ಹತ್ತಿರ ಒತ್ತುತ್ತಾಇದೆ” ಸಹಾನುಭೂತಿ
ಬ್ಯೂಲ ಮತ್ತೆ ನನ್ನನ್ನು ವೀಡಿಯೊ ಕಾಲಲ್ಲಿ ಮಾತಾಡಿಸುತ್ತ “ನೋಡಿದ್ಯಾ? ತುಂಬ ಪಾಪ ಅನ್ನಿಸುತ್ತೆ, ಈ ಇಳಿವಯಸ್ಸಲ್ಲಿ ಸರಿಯಾಗಿ ನೆನಪಿರೋದಿಲ್ಲ, ಎಷ್ಟು ಕನ್ಫ್ಯೂಸ್ ಆಗ್ತಾರೆ, ಆ ಎಮೋಶನ್ಸನ್ನ ತಡೆಯೋಕೂ ಆಗಲ್ಲ.ಹೋದ ತಿಂಗಳಷ್ಟೇ ಅವರ ಹೆಂಡತಿ ತೀರಿಕೊಂಡರು, ಅದೂ ಅವರು ಮರೆತು ಹೋಗಿದ್ದಾರೆ, ಆಗಾಗ,‘ಜಯ, ಅವಳು ಏನು ಮಾಡ್ತಾ ಇದ್ದಾಳೆ?ಕರಿ ಅವಳನ್ನ, ನನ್ನ ಕಾಲು ನೋಯ್ತಾ ಇದೆ, ತೈಲ ತಿಕ್ಕಿ ಕಾಲು ಒತ್ತೋಕೆ ಹೇಳು.’ ಅಂತ ಹೇಳ್ತಿರ್ತಾರೆ. ಏನು ಮಾಡೋಕಾಗಲ್ಲ ಇರೋತನಕ ಹೀಗೇ ಸಂಬಾಳಿಸ ಬೇಕು.”
ನನಗೆ ಅವಳ ಕಾರ್ಯ ವೈಖರಿಯ ಬಗ್ಗೆ ಕುತೂಹಲ, ಆಸಕ್ತಿ ಇರುವುದರಿಂದ ಹಲವಾರು ಜೀಡಿಯಾಟ್ರಿಕ್ ಪೇಶೆಂಟಗಳನ್ನು ನನಗೆ ತೋರಿಸಿ ಅವರ ಬಗ್ಗೆ ವಿವರಿಸುತ್ತಿರುತ್ತಾಳೆ. ನನಗದು ಒಳ್ಳೆಯ ಪಾಠ. ಬ್ಯೂಲಳ ತಾಳ್ಮೆ, ಒಬ್ಬೊಬ್ಬರ ಬಗೆಗಿನ ಅವಳ ಕಾಳಜಿ, ಎಲ್ಲವೂ ವಿಸ್ಮಯಕಾರಿ ಎನಿಸುತ್ತದೆ. ಸಹಾನುಭೂತಿ
ಇದನ್ನೂ ನೋಡಿ: ಜಾತಿ ಗಣತಿ ವಿರೋಧಿಸಿದ ಮೋದಿಯವರ ಯು ಟರ್ನ್… ಸಮರ್ಥಿಸಿದ ಸಿದ್ದರಾಮಯ್ಯನವರು ಕವಲು ದಾರಿಯಲ್ಲಿ….
ಹೊರದೇಶಕ್ಕೆ ಕೆಲಸಕ್ಕೆಂದು ಇವಳ ತಂದೆ ತಾಯಿಯ ಬಳಿ ಹಣ ಪಡೆದು ಹೋದ ಇವಳ ಗಂಡ ಮತ್ತೆ ಬರಲೇ ಇಲ್ಲ, ಫೋನು ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ, ಅವನ ತಂದೆ ತಾಯಿಯನ್ನೂ ಇವಳೇ ನೋಡಿಕೊಳ್ಳುತ್ತಾಳೆ. ಅವಳ ಮಾವ ತೀರಿಕೊಂಡಾಗ ಅವನಿಗೆ ಅವನ ತಾಯಿ ವಿಷಯ ತಿಳಿಸಿದರೂ ಅವನು ಬರಲೇ ಇಲ್ಲ. ಮಾವನ ಎಲ್ಲ ಕಾರ್ಯವನ್ನು ಬ್ಯುಲ ಮುಂದೆ ನಿಂತು ಮಾಡಿದ್ದಳು. ಈಗ ಅವಳ ಅತ್ತೆಯ ಪೂರ್ಣ ಜವಾಬ್ದಾರಿ ಇವಳದೇ.
ಅವಳ ಅತ್ತೆಗೆ ಒಂದು ರೀತಿಯ ದ್ವಂದ್ವ. ಸೊಸೆ ತನ್ನನ್ನುಸಾಕುತ್ತಿದ್ದಾಳೆ, ಅವಳ ಪರ ಇರ್ಬೇಕೋ ಇಲ್ಲ ಅಂಧ ಮಮತೆಯಿಂದ ಮಗನ ಪರ ಇರಬೇಕೋ ತಿಳಿಯುವುದಿಲ್ಲ. ಯಾವಾಗಾದರೂ ಬೇಸರ ವಾದಾಗ ಮಗ ದೂರ ಹೋಗಿದ್ದಕ್ಕೆ ನೀನೇ ಕಾರಣ ಅಂತ ದೂರುತ್ತಾರೆ. ಆಗೆಲ್ಲ ಬ್ಯೂಲ ಮನಸ್ಸಿಗೆ ತುಂಬ ಘಾಸಿ ಯಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಅವಳೇ ಹೇಳುತ್ತಾಳೆ, “ಪಾಪ ಅತ್ತೆ ತಾನೆ ಏನು ಮಾಡ್ತಾರೆ? ಅವರಿಗೂ ನನ್ನ ಬಿಟ್ಟರೆ ಯಾರಿದ್ದಾರೆ? ಕೋಪ ಬಂದರೆ ಒಂದು ಮಾತು ಅಂತಾರೆ. ಮಗನ್ನ ಬೈಯ್ಯೋಕೆ ಆ ರಾಸ್ಕಲ್ ಸಿಗಲ್ಲ ನಾನೇ ತಾನೆ ಸಿಗೋದು.” ಎಂದು ಒಂದೇ ನಿಮಿಷಕ್ಕೆ ಸಮಾಧಾನ ಮಾಡಿಕೊಳ್ಳುತ್ತಾಳೆ. ಅವಳ ಗಂಡನ ಬಗ್ಗೆ ಮಾತ್ರ ಕೆಂಡದಷ್ಟು ಕೋಪ. ಅವಳು ಅದನ್ನು ಬೇರೆ ಯಾರ ಮೇಲೂ ತೋರಿಸುವುದಿಲ್ಲ.
ಅಂಥ ಭುಗಿಲೇಳುವಷ್ಟು ಕೋಪದ ಅಣಲನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದಾಳೆ.ಅದನ್ನು ವಿನಿಯೋಗಿಸಲು, ತಣಿಸಲು ಅವಳು ಹೀಗೆ ಹಗಲು ರಾತ್ರಿ ಇನ್ನೊಬ್ಬರ ನೆಮ್ಮದಿಗಾಗಿ ದುಡಿಯುತ್ತಾಳೆ.ಹಳೆಯ ಕಹಿ ಘಟನೆಗಳನ್ನು ಮನದಾಳದಿಂದ ಕಿತ್ತೆಸೆದು,ಅವಳು, ಒಂದು ಅದ್ಬುತವಾದ ಆಶ್ರಯ ನೀಡುವ ಹೆಮ್ಮರವಾಗಿ ಬೆಳೆದು, ಅವಳ ಮನೋ ಬಲವನ್ನು ಗಟ್ಟಿಗೊಳಿಸಿಕೊಂಡಿದ್ದಾಳೆ. ಯಾವ ಆಡಂಬರವಿಲ್ಲದೆ, ಸದ್ದಿಲ್ಲದೆ ಅಬಲೆಯರಿಗೆ ಆಶ್ರಯ ದಾತೆಯಾಗಿದ್ದಾಳೆ. ವೃದ್ದರ ಮಕ್ಕಳು ದೂರ ಸರಿದರೂ ಇವಳು ಅವರ ಲಾಲನೆ ಪಾಲನೆಯನ್ನೂ ಮಾಡುತ್ತ ಸಮಾಜದ ಸುಂದರವಾದ, ಬಲಿಷ್ಟವಾದ ಕೊಂಡಿಯಾಗಿ ಅವಳ ಜೀವನ ಸಾಗಿಸುತ್ತಿದ್ದಾಳೆ. ಅವಳ ಕಾರ್ಯನಿರ್ವಹಣೆ, ಅವಳ ತನ್ಮಯತೆ, ಅವಳು ತೋರುವ ಪ್ರೀತಿ ಎಲ್ಲವೂ ವಿಸ್ಮಯಕಾರಿ. ಬ್ಯೂಲ ಒಬ್ಬ ಅಪರೂಪದ ವ್ಯಕ್ತಿ. ಅಂಥವಳ ಗೆಳೆತನ ನನ್ನ ಪಾಲಿಗೆ ದೊಡ್ಡ ನಿಧಿ.
(ಲೇಖಕಿ, ವಿಶೇಷ ಮಕ್ಕಳ ಶಿಕ್ಷಣದ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದಕೆಲಸ ಮಾಡುತ್ತಿರುವವರು)