ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಿಸಲು ಕಾಂಪೌಂಡ್ ಹಾಕಿಕೊಂಡಿರುವ ಆವರಣದಲ್ಲಿ ಬಸಾಪುರ ಕೆರೆಯಿದ್ದು, ಅಲ್ಲಿ ಕುರಿಗಳನ್ನು ಕರೆದುಕೊಂಡು ನೀರು ಕುಡಿಸಲು ಹೋದ ಕುರಿಗಾಹಿ ಮೇಲೆ ಕಂಪನಿಯ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಜುಲೈ 25ರಂದು ನಡೆದಿದೆ.
ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಜಾನುವಾರುಗಳು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಕೊಪ್ಪಳ ಬಚಾವೊ ಜನಾಂದೋಲನ ಸಮಿತಿ ವತಿಯಿಂದ ಎರಡು ದಿನಗಳ ಹಿಂದೆ ಪ್ರತಿಭಟನೆ ನಡೆದಿತ್ತು. ಆಗ ಕುರಿಗಳನ್ನು ಕಾರ್ಖಾನೆಯ ಆವರಣದೊಳಗೆ ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಇದಕ್ಕೆ ಒಂಬತ್ತು ಜನ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭಾರತೀಯರಿಗೆ ಕೆಲಸ ಕೊಡಬೇಡಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಹೋರಾಟದ ಭಾಗವಾಗಿ ಶುಕ್ರವಾರ ಬೆಳಿಗ್ಗೆ ಬಸಾಪುರ ಗ್ರಾಮದ ಕುರಿಗಾಯಿ ದೇವಪ್ಪ ಹಾಲಹಳ್ಳಿ ಕುರಿಗಳಿಗೆ ನೀರು ಕುಡಿಸಲು ಕೆರೆಯ ಬಳಿ ಹೋದಾಗ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಮನಬಂದಂತೆ ಹಲ್ಲೆ ಮಾಡಿದ ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಚಿಕಿತ್ಸೆಗಾಗಿ ದೇವಪ್ಪನನ್ನು ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ.
ಹಲ್ಲೆ ವಿಷಯ ತಿಳಿದು ಹೋರಾಟಗಾರರು ಕಾರ್ಖಾನೆ ಬಳಿ ಹೋದಾಗ ಭದ್ರತಾ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದರು.
ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media
