ಬೇಯರ್‌ನೊಂದಿಗೆ ಐಸಿಎಆರ್‌ನ ಎಂ.ಒ.ಯು. ರದ್ದು ಮಾಡಲು ಎಐಕೆಎಸ್‍ ಆಗ್ರಹ

ದೈತ್ಯ ಕೃಷಿ ಕಾರ್ಪೊರೇಟ್‍ಗಳೊಂದಿಗೆ ‘ಸಹಯೋಗ’ ಒಪ್ಪಂದಗಳು ಹಿಂಬಾಗಿಲಿನಿಂದ ಕರಾಳ ಕೃಷಿ ಕಾಯ್ದೆಗಳನ್ನು ತರುವ ಹುನ್ನಾರ
ಪ್ರಧಾನಿ ಮೋದಿ ಒಂದೆಡೆಯಲ್ಲಿ ತಮ್ಮ ‘ದಷ್ಟ-ಪುಷ್ಟ’ ರಾಷ್ಟ್ರೀಯವಾದಕ್ಕೆ  ಪುರಾವೆಯಾಗಿ “ಆತ್ಮ ನಿರ್ಭರ ಭಾರತ್” ಅನ್ನು ಮೆರೆಸಬಯಸುತ್ತಿದ್ದರೆ, ಮತ್ತೊಂದೆಡೆಯಲ್ಲಿ ಅವರು ಸಾರ್ವಜನಿಕ ಕೃಷಿ ಸಂಶೋಧನೆಗೆ ಹಣವನ್ನು ತೀವ್ರವಾಗಿ ಕಡಿತ ಮಾಡುವ ಮೂಲಕ ಐಸಿಎಆರ್ ಮತ್ತು ರೈತರ  ಆತ್ಮನಿರ್ಭರತೆ’( ಸ್ವಾವಲಂಬನೆ)ಯನ್ನು ನಾಶಪಡಿಸುತ್ತಿದ್ದಾರೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಬಹುರಾಷ್ಟ್ರೀಯ ಕೃಷಿ ವ್ಯಾಪಾರ ಕಂಪನಿ ಬೇಯರ್ ನಡುವೆ ಇತ್ತೀಚೆಗೆ ತಿಳುವಳಿಕೆ ಪತ್ರ (ಎಂಒಯು)ಕ್ಕೆ  ಸಹಿ ಹಾಕಿರುವುದನ್ನು ಖಂಡಿಸುತ್ತ ಅಖಿಲ ಭಾರತ ಕಿಸಾನ್‍ ಸಭಾ (ಎಐಕೆಎಸ್‍) ಹೇಳಿದೆ. 

ಈ ಎಂಒಯುಗಳ ಪಥವನ್ನು ಮತ್ತು ಲಭ್ಯವಿರುವ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವನ್ನು ಐಸಿಎಆರ್‌ ಬಗ್ಗೆ ಸಂಚಿತಗೊಂಡಿರುವ   ಸಾರ್ವಜನಿಕ ವಿಶ್ವಾಸಾರ್ಹತೆ, ಅದರ ವಿಶಾಲ ಜಾಲ ಮತ್ತು ಸಂಪನ್ಮೂಲಗಳನ್ನು ಕುಶಲತೆಯಿಂದ ಬಳಸಿಕೊಂಡು ಕೃಷಿ ಅರ್ಥವ್ಯವಸ್ಥೆಯಲ್ಲಿ ಆಳವಾದ ನುಗ್ಗಲಿಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು ಬರುತ್ತದೆ.ಇದು ಕಾರ್ಪೊರೇಟ್-ಪರವಾದ ಕರಾಳ ಕೃಷಿ ಕಾನೂನುಗಳ ಮೂಲಕ ಉಂಟು ಮಾಡಬೇಕೆಂದಿದ್ದ  ಪರಿಣಾಮಗಳನ್ನು  ಹಿಂಬಾಗಿಲ ಮೂಲಕ ತಂದು ಕಾರ್ಪೊರೇಟ್ ಲಾಭಗಳನ್ನು ಗರಿಷ್ಟಗೊಳಿಸುವ  ಒಂದು ಚಾಣಾಕ್ಷ ಪ್ರಯತ್ನವಾಗಿರುವುದೂ ಕಾಣಬರುತ್ತದೆ ಎಂದು ಎಐಕೆಎಸ್‍ ಹೇಳಿದೆ.

ಈ ಕುರಿತ ಅದರ ಹೇಳಿಕೆಯ ಪೂರ್ಣ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ:

ದೊಡ್ಡ ಉದ್ಯಮಿಗಳ ಲಾಭದ ದುರಾಸೆಗೆ ಅನುಕೂಲ ಕಲ್ಪಿಸಿಕೊಡುವ, ಅದಕ್ಕಾಗಿ  ರೈತರ ಲೂಟಿ ಮತ್ತು ಶೋಷಣೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮೋದಿ ಆಡಳಿತದ ಚಾಳಿ ಮತ್ತೊಮ್ಮೆ  ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಬೇಯರ್ ನಡುವೆ ಇತ್ತೀಚೆಗೆ ಸಹಿ ಹಾಕಲಾದ ತಿಳುವಳಿಕೆ ಪತ್ರದಲ್ಲಿ (ಎಂಒಯು) ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಅಖಿಲ ಭಾರತ ಕಿಸಾನ್‍‍ ಸಭಾ(ಎಐಕೆಎಸ್) ಹೇಳಿದೆ.

ಬೇಯರ್ ಒಂದು ದೊಡ್ಡ   ಬಹುರಾಷ್ಟ್ರೀಯ ಕೃಷಿ ವ್ಯಾಪಾರದ ಕಂಪನಿ. ಕೃಷಿಯಲ್ಲಿನ ದೇಶದ ಅತ್ಯುನ್ನತ ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಯಾದ ಐಸಿಎಆರ್ ಈ ಎಂಒಯು ಮತ್ತು ಅದರಿಂದಾಗಿ ಏರ್ಪಡುವ ಸಾಂಸ್ಥಿಕ ಪಾಲುದಾರಿಕೆಯು “ಸಣ್ಣ ಹಿಡುವಳಿದಾರ ರೈತರನ್ನು ಸಬಲೀಕರಣಗೊಳಿಸುವ” ಶ್ರದ್ಧಾಪೂರ್ವಕ ಪ್ರಯತ್ನ ಎಂಬ ಹುಸಿ  ಕಥನವನ್ನು  ರಚಿಸುತ್ತಿದೆ. ಕುತೂಹಲದ ಸಂಗತಿಯೇಂದರೆ ,ಈ ಮೂಲಕ ಐಸಿಎಆರ್  ಕಾರ್ಪೊರೇಟ್ ದೈತ್ಯರೊಂದಿಗೆ ಸಹಯೋಗ ಮಾಡುವ ಮೂಲಕ ಸಣ್ಣ ರೈತರನ್ನು ಸಬಲೀಕರಣಗೊಳಿಸಲಾಗುತ್ತದೆ ಎಂದು ಜೂನ್ 2023 ರಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್  ಕಿಸಾನ್‌ನೊಂದಿಗೆ  ಎಂಒಯು ಮಾಡಿಕೊಂಡಾಗ ತಾನೇ ಹೇಳಿದ್ದನ್ನು ತಾನೇ ನಕಲು ಮಾಡಿದಂತಾಗಿದೆ ಎಂದು  ಎಐಕೆಎಸ್‍ ಹೇಳಿದೆ. ಆ ಎಂಒಯು “ಅತ್ಯುತ್ತಮ ಇಳುವರಿ ಮತ್ತು ಆದಾಯಕ್ಕಾಗಿ ವಿವಿಧ ಬೆಳೆಗಳ ವೈಜ್ಞಾನಿಕ ಕೃಷಿಯ ಕುರಿತು ರೈತರಿಗೆ ಮಾರ್ಗದರ್ಶನ ನೀಡಲು” ಎಂದು ಹೇಳಲಾಗಿತ್ತು.

ಬೇಯರ್‌ನೊಂದಿಗಿನ ಸಹಯೋಗದ ಒಪ್ಪಂದವು “ಬೆಳೆಗಳು, ಪ್ರಭೇದಗಳು, ಬೆಳೆ ರಕ್ಷಣೆ, ಕಳೆ ಮತ್ತು ಯಾಂತ್ರೀಕರಣಕ್ಕಾಗಿ ಸಂಪನ್ಮೂಲ ಸಮರ್ಥ, ಹವಾಮಾನ-ಸ್ಥಿತಿಸ್ಥಾಪಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು. ಈ ಸಹಯೋಗವು ವ್ಯವಸ್ಥೆಯ ವಿಧಾನದಲ್ಲಿ ರೈತರಿಗೆ ಗುಣಮಟ್ಟದ ಕೃಷಿ ಲಾಗುವಾಡುಗಳು  ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಮೂಲಕ ಕೃಷಿ ಸುಸ್ಥಿರತೆ ಕಾರ್ಯಕ್ರಮದ ಪ್ರಯತ್ನಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಗಮನ ಕೇಂದ್ರೀಕರಿಸುತ್ತದೆ” ಎನ್ನಲಾಗಿದೆ.

ದಾಳಿಂಬೆ ಕೃಷಿ ಮತ್ತು “ಡ್ರೋನ್ ಆಧಾರಿತ ಆಲೂಗಡ್ಡೆ ಬೆಳೆ ನಿರ್ವಹಣೆ ತಂತ್ರಜ್ಞಾನಗಳ ಅಭಿವೃದ್ಧಿ” ಕುರಿತು ಐಸಿಎಆರ್ ಮತ್ತು ಬೇಯರ್ ನಡುವೆ ಇದೇ ರೀತಿಯ ಸಂಶೋಧನಾ ಸಹಯೋಗದ ಎಂಒಯುಗಳು ಇದಕ್ಕೂ ಮುನ್ನ ನಡೆದವು.

ಈ ಎಂಒಯುಗಳ ಪಥವನ್ನು ಮತ್ತು ಲಭ್ಯವಿರುವ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವನ್ನು ಐಸಿಎಆರ್ ಬಗ್ಗೆ ಸಂಚಿತಗೊಂಡಿರುವ   ಸಾರ್ವಜನಿಕ ವಿಶ್ವಾಸಾರ್ಹತೆ, ಅದರ ವಿಶಾಲ ಜಾಲ ಮತ್ತು ಸಂಪನ್ಮೂಲಗಳನ್ನು ಕುಶಲತೆಯಿಂದ ಬಳಸಿಕೊಂಡು ಕೃಷಿ ಅರ್ಥವ್ಯವಸ್ಥೆಯಲ್ಲಿ ಆಳವಾದ ನುಗ್ಗಲಿಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು ಬರುತ್ತದೆ. ಇದು ಕಾರ್ಪೊರೇಟ್-ಪರವಾದ ಕರಾಳ ಕೃಷಿ ಕಾನೂನುಗಳ ಮೂಲಕ ಉಂಟು ಮಾಡಬೇಕೆದಿದ್ದ  ಪರಿಣಾಮಗಳನ್ನು  ಹಿಂಬಾಗಿಲ ಮೂಲಕ ತಂದು ಕಾರ್ಪೊರೇಟ್ ಲಾಭಗಳನ್ನು ಗರಿಷ್ಟಗೊಳಿಸುವ  ಒಂದು ಚಾಣಾಕ್ಷ ಪ್ರಯತ್ನವಾಗಿರುವುದೂ ಕಾಣಬರುತ್ತದೆ ಎಂದು ಎಐಕೆಎಸ್‍ ಹೇಳಿದೆ.

ಪ್ರಧಾನಿ ಮೋದಿ ಒಂದೆಡೆಯಲ್ಲಿ ತಮ್ಮ ‘ದಷ್ಟ-ಪುಷ್ಟ’ ರಾಷ್ಟ್ರೀಯವಾದಕ್ಕೆ  ಪುರಾವೆಯಾಗಿ “ಆತ್ಮ ನಿರ್ಭರ ಭಾರತ್” ಅನ್ನು ಮೆರೆಸಬಯಸುತ್ತಿದ್ದರೆ, ಮತ್ತೊಂದೆಡೆಯಲ್ಲಿ ಅವರು ಸಾರ್ವಜನಿಕ ಕೃಷಿ ಸಂಶೋಧನೆಗೆ ಹಣವನ್ನು ತೀವ್ರವಾಗಿ ಕಡಿತ ಮಾಡುವ ಮೂಲಕ ಐಸಿಎಆರ್ ಮತ್ತು ರೈತರ ‘ಆತ್ಮನಿರ್ಭರತೆ’ ( ಸ್ವಾವಲಂಬನೆ)ಯನ್ನು ನಾಶಪಡಿಸುತ್ತಿದ್ದಾರೆ ಎಂದು ಎಐಕೆಎಸ್‍ ಅಭಿಪ್ರಾಯ ಪಟ್ಟಿದೆ.

ಉದಾಹರಣೆಗೆ, 2020-21 ರ ಹಣಕಾಸು ವರ್ಷದಲ್ಲಿ, ಕೇಂದ್ರ ಸರ್ಕಾರವು ಐಸಿಎಆರ್ ಗೆ ಕೇವಲ 7,762 ಕೋಟಿ ರೂ. ನೀಡಿದೆ.ಈ ಮೋದಿ ವರ್ಷಗಳಲ್ಲಿ “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” ಎಂಬ ನವ ಉದಾರವಾದಿ ಮಂತ್ರಕ್ಕೆ ಅನುಗುಣವಾಗಿ ಸಾಮಾನ್ಯ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಕೃಷಿ ವಲಯಕ್ಕೆ ನಿಧಿ ಹಂಚಿಕೆ ಕಡಿಮೆಯಾಗುತ್ತ ಬಂದಿರುವುದು ಕಾಣಬರುತ್ತದೆ. ಸರಕಾರದಿಂದ ಹಣ ನೀಡಿಕೆಯು ಅಸಮರ್ಪಕ ವಾಗಿರುವುದರಿಂದಾಗಿ ಐಸಿಎಆರ್  ಕಾರ್ಯನಿರ್ವಹಣೆಯ ಕತ್ತು ಹಿಸುಕಲಾಗುತ್ತಿದೆ  ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಯುವಕರು 70 ಗಂಟೆ ಕೆಲಸ ಮಾಡಬೇಕೆಂದ ಇನ್ಫೋಸಿಸ್ ನಾರಾಯಣ ಮೂರ್ತಿ!

ಈ ಗಂಭೀರ ಕೊರತೆಯನ್ನು ಪರಿಹರಿಸುವ ಬದಲು, ಮೋದಿ ಸರ್ಕಾರವು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಉತ್ತೇಜಿಸುವಲ್ಲಿ ಕುಖ್ಯಾತವಾಗಿರುವ ಮತ್ತು ಹಲವಾರು ಕಾನೂನು ದಾವೆಗಳನ್ನು ಎದುರಿಸುತ್ತಿರುವ  ಬೇಯರ್‌ನೊಂದಿಗೆ ಸಹಕರಿಸಲು ನಿರ್ಧರಿಸಿದೆ. ಬೇಯರ್‌ನ ವ್ಯವಹಾರಗಳು  ಪ್ರಮುಖವಾಗಿ ವಿಷಕಾರಿ, ರೋಗಕಾರಕ ಕೃಷಿರಾಸಾಯನಿಕಗಳ ಮಾರಾಟಕ್ಕೆ ಸಂಬಂಧಪಟ್ಟವುಗಳು. ಮೊನ್ಸಾಂಟೊವನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಇದು ಜಾಗತಿಕ ಬೀಜ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಐಸಿಎಆರ್  ಜೊತೆಗಿನ ಸಹಯೋಗವು ಅದಕ್ಕೆ ಮಾನ್ಯತೆಯನ್ನು ಪಡೆಯಲು ಮತ್ತು ಲಾಭ ಗಳಿಸಲು ದೊಡ್ಡ ಮಾರುಕಟ್ಟೆಯನ್ನು ತೆರೆಯಲು ಪ್ರಚಂಡ ಅವಕಾಶಗಳನ್ನು ನೀಡುತ್ತದೆ ಎಂದು ಎಐಕೆಎಸ್‍ ವಿಶ್ಲೇಷಿಸಿದೆ.

ಎಲ್ಲಾ ಕಾರ್ಪೊರೇಟ್ ದೈತ್ಯರೊಂದಿಗೆ ಐಸಿಎಆರ್ ಸಹಿ ಮಾಡಿದ ಎಂಒಯುಗಳನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾರ್ಪೊರೇಟ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾರ್ವಜನಿಕ ಸಂಸ್ಥೆಗಳನ್ನು ಬಳಸುವುದನ್ನು ತಡೆಯಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಆಗ್ರಹಪಡಿಸಿದೆ. ಇದಕ್ಕೆ ಬದಲಾಗಿ, ಇಂದು ಭಾರತೀಯ ಕೃಷಿ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಎದುರಿಸಲು ಕೃಷಿ ಸಂಶೋಧನೆಗೆ ಸಾರ್ವಜನಿಕ ಹಣ ನೀಡಿಕೆಯನ್ನು ಹೆಚ್ಚಿಸಬೇಕು. ರೈತರು, ವಿಜ್ಞಾನಿಗಳ ಸಮುದಾಯ ಮತ್ತು ಸಾರ್ವಜನಿಕ ಬುದ್ಧಿಜೀವಿಗಳು ಎತ್ತಿರುವ ಎಲ್ಲಾ ಕಾಳಜಿಗಳನ್ನು ಕೇಂದ್ರ ಸರ್ಕಾರವು ಪರಿಹರಿಸಬೇಕು ಎಂದಿರುವ  ಎಐಕೆಎಸ್  ಕೃಷಿಯ ಕಾರ್ಪೊರೇಟೀಕರಣದ  ಎಲ್ಲಾ ಪ್ರಯತ್ನಗಳನ್ನು ಪಟ್ಟು ಹಿಡಿದು   ವಿರೋಧಿಸಲಾಗುವುದು ಎಂದು ಎಚ್ಚರಿಸಿದೆ.

ವಿಡಿಯೋ  ನೋಡಿ: ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಎಂಎಸ್ ಸ್ವಾಮಿನಾಥನ್Janashakthi Media

Donate Janashakthi Media

Leave a Reply

Your email address will not be published. Required fields are marked *