ಕಲ್ಲಿದ್ದಲು ಕೊರತೆ : ಪವರ್ ಕಟ್, ರೈಲ್ ಬಂದ್

ನವದೆಹಲಿ :ದೇಶಾದ್ಯಂತ ಬೇಸಿಗೆಯಿಂದ ತಾಪಮಾನ ಹೆಚ್ಚಳವಾಗಿದ್ದು, ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಕಲ್ಲಿದ್ದಲು ಪೂರೈಕೆಯಲ್ಲಿತೀವ್ರ ಕೊರತೆಯಾಗಿದ್ದು,ದೇಶದ ಹಲವು ರಾಜ್ಯಗಳಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.

ದೇಶಲ್ಲಿ 66.32 ದಶಲಕ್ಷ ಟನ್ ಕಲ್ಲಿದ್ದಲು ದಾಸ್ತಾನಿರಬೇಕು ಎಂದು ಕೇಂದ್ರೀಯ ವಿದ್ಯುಚ್ಚಕ್ತಿ ಪ್ರಾಧಿಕಾರ ಅಂಕಿ ಅಂಶ ತಿಳಿಸಿದ್ದು, ಆದರೆ ಈಗ ದೇಶದಲ್ಲಿ 21.44 ದಶಲಕ್ಷ ಟನ್ ಮಾತ್ರವೇ ಇದೆ. ಈ ಪ್ರಮಾಣದಲ್ಲಿ ಆಂಧ್ರಪ್ರದೇಶದಲ್ಲಿ ಶೇ.11, ರಾಜಸ್ಥಾನ, ಪಂಜಾಬ್ ಮಹಾರಾಷ್ಟ್ರದಲ್ಲಿ ಶೇ. 14ರಷ್ಟು ಕರ್ನಾಟಕದಲ್ಲಿಶೇ. 16 ರಷ್ಟು ತಮಿಳುನಾಡಿನಲ್ಲಿ ಶೇ. 7 ರಷ್ಟು,ಗುಜರಾತ್ ನಲ್ಲಿ ಶೇ.23ರಷ್ಟಿದೆ ಎಂದು ವರದಿಯಾಗಿದ್ದು, ಈ ಮೂಲಕ ದೇಶದ ಹಲವು ರಾಜ್ಯಗಳಲ್ಲಿ ಪವರ್ ಕಟ್ ಆರಂಭಿಸಲಾಗಿದೆ.

106 ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ : ದೇಶದ 173 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ, 106 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಉತ್ತರ ಭಾರತದಲ್ಲಿ ಬಿಸಿಗಾಳಿಯಿಂದಾಗಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದೆ, ವಿದ್ಯುತ್ ಕೊರತೆ ಉಂಟಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳು ಲೋಡ್‌ಶೆಡ್ಡಿಂಗ್‌ ಮೊರೆ ಹೋಗಿವೆ.

ಕೇಂದ್ರೀಯ ವಿದ್ಯುತ್ ಪ್ರಾಧಿಕಾರವು ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಒಟ್ಟು 106 ಸ್ಥಾವರಗಳಲ್ಲಿ ಸಂಗ್ರಹ ಶೇ 25ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. 150 ಸ್ಥಾವರಗಳಲ್ಲಿ ದೇಶೀಯ ಕಲ್ಲಿದ್ದಲನ್ನು ಬಳಸಲಾಗುತ್ತಿದೆ. ಇವುಗಳಲ್ಲಿ 86 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ಶೋಚನೀಯ ಮಟ್ಟಕ್ಕೆ ಕುಸಿದಿದೆ. ಕೆಲವು ಸ್ಥಾವರಗಳಲ್ಲಿ ಕೇವಲ ಒಂದೂವರೆ-ಎರಡು ದಿನಗಳಿಗೆ ಆಗುವಷ್ಟು ಸಂಗ್ರಹ ಮಾತ್ರ ಉಳಿದಿದೆ. ಆಮದು ಕಲ್ಲಿದ್ದಲು ಉಪಯೋಗಿಸುವ 12 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಖಾಸಗಿ ವಲಯದ ಎಂಟು ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಇದೆ.

ಉತ್ತರ ಭಾರತದಲ್ಲಿ ಲೋಡ್‌ಶೆಡ್ಡಿಂಗ್‌ :
ಉತ್ತರ ಭಾರತದಲ್ಲಿ ವಿದ್ಯುತ್ ಕೊರತೆ ಬಿಗಡಾಯಿಸಿದೆ. ಉತ್ತರ ವಲಯದಲ್ಲಿ ಒಟ್ಟು 1,346 ಲಕ್ಷ ಯೂನಿಟ್‌ಗಳಷ್ಟು ವಿದ್ಯುತ್ ಕೊರತೆಯಾಗಿದೆ. ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಪ್ರತಿದಿನ ಮೂರರಿಂದ ಎಂಟು ತಾಸು ಲೋಡ್‌ಶೆಡ್ಡಿಂಗ್‌ ಜಾರಿಗೆ ತರಲಾಗಿದೆ. ರಾಜಸ್ಥಾನದ ಸರ್ಕಾರಿ ಸ್ವಾಮ್ಯದ ಸ್ಥಾವರಗಳ ಪೈಕಿ, ಆರರಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಉತ್ತರ ಪ್ರದೇಶ ನಾಲ್ಕು ಸ್ಥಾವರಗಳ ಪೈಕಿ, ಮೂರರಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ.

ಮಹಾರಾಷ್ಟ್ರದ ಏಳು ಸ್ಥಾವರಗಳ ಪೈಕಿ ಆರರಲ್ಲಿ, ಮಧ್ಯಪ್ರದೇಶದ ನಾಲ್ಕರಲ್ಲಿ ಮೂರು ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯಮಟ್ಟಕ್ಕೆ ಕುಸಿದಿದೆ. ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲಾ ಸರ್ಕಾರಿ ಸ್ವಾಮ್ಯದ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ ಎಂದು ಅಖಿಲ ಭಾರತ ವಿದ್ಯುಚ್ಛಕ್ತಿ ಎಂಜಿನಿಯರ್‌ಗಳ ಒಕ್ಕೂಟವು ಮಾಹಿತಿ ನೀಡಿದೆ.

ರೈಲು ಓಡಾಟ ನಿಲ್ಲಿಸಿದ ಸರಕಾರ : ದೇಶಾದ್ಯಂತ ಕಲ್ಲಿದ್ದಲು ಕೊರತೆಯಿಂದ ಉಂಟಾಗಿರುವ ವಿದ್ಯುತ್ ಬಿಕ್ಕಟ್ಟನ್ನು ತಪ್ಪಿಸುವ ಪ್ರಯತ್ನದಲ್ಲಿ ದೇಶಾದ್ಯಂತ ಕಲ್ಲಿದ್ದಲು ಪೂರೈಕೆಗೆ ಭಾರತವು ಕೆಲವು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಿದೆ. ವಿದ್ಯುತ್ ಸ್ಥಾವರಗಳಲ್ಲಿ ಖಾಲಿಯಾಗುತ್ತಿರುವ ದಾಸ್ತಾನುಗಳನ್ನು ಮರು ಪೂರ್ಣಗೊಳಿಸಲು ರಾಷ್ಟ್ರವು ಪರದಾಡುತ್ತಿದ್ದು ಕಲ್ಲಿದ್ದಲು ರೈಲು ಗಾಡಿಗಳ ವೇಗದ ಚಲನೆಗೆ ಅನುಕೂಲವಾಗಲು 753 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಕಲ್ಲಿದ್ದಲು ಪೂರೈಕೆಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ 1000 ಬೋಗಿಗಳನ್ನು ವ್ಯವಸ್ಥೆ ಮಾಡಿದೆ. ಅಲ್ಲದೇ ಇದು ಅತ್ಯಂತ ವೇಗವಾಗಿ ನಿಗದಿತ ಸ್ಥಳ ತಲುಪಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ.

ಸಮನ್ವಯ ಕೊರತೆ ನೀಗಲಿ : ‘ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯ, ರೈಲ್ವೆ ಇಲಾಖೆ ಮತ್ತು ಇಂಧನ ಸಚಿವಾಲಯಗಳ ನಡುವಣ ಸಮನ್ವಯದ ಕೊರತೆಯ ಕಾರಣದಿಂದ ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ‘ಈ ಸಚಿವಾಲಯಗಳ ನಡುವಣ ಸಮನ್ವಯದ ಕೊರತೆಯಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಪೂರೈಕೆಯಾಗದೇ ಇರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಇನ್ನಾದರೂ ಸಮನ್ವಯದ ಮೂಲಕ ಕಾರ್ಯನಿರ್ವಹಿಸಲಿ, ದೇಶವನ್ನು ಕತ್ತಲಲ್ಲಿ ಇಡದಂತೆ ಜಾಗ್ರತೆ ವಹಿಸಲಿ.

Donate Janashakthi Media

Leave a Reply

Your email address will not be published. Required fields are marked *