ಕುಮಾರಸ್ವಾಮಿ ವಿರುದ್ದ ಸಿಎಂ ಸಿದ್ದರಾಮಯ್ಯ ಪುತ್ರ ವಾಗ್ದಾಳಿ

ಮೈಸೂರು: ಮೈಸೂರಿನಲ್ಲಿ ತಮ್ಮ ಆಡಿಯೋ ವೈರಲ್ ಬಳಿಕ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಪ್ರತಿಕ್ರಿಯಿಸಿದ್ದಾರೆ.  “ತಂದೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಏನು ಆರೋಪ ಮಾಡಲು ಆಗುತ್ತಿಲ್ಲ.ಹೀಗಾಗಿ ಕುಟುಂಬವನ್ನು ಬಳಸಿಕೊಂಡು ತಂದೆಯನ್ನು ಹಣಿಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡುವುದು ನೀಚ ರಾಜಕಾರಣ” ಎಂದು  ಮಾಜಿ ಶಾಸಕ ಯತೀಂದ್ರ ಹೇಳಿದರು.

ಮೈಸೂರಿನಲ್ಲಿ ತಮ್ಮ ಆಡಿಯೋ ವೈರಲ್ ಬಳಿಕ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, “ಸಿಎಂ ಕುಟುಂಬವನ್ನು ಯಾವುದರಲ್ಲಾದರೂ ಸಿಲುಕಿಸುವ ಯತ್ನ ನಡೆಯುತ್ತಿದೆ” ಎಂದರು. “ಆಡಿಯೋ ವೈರಲ್ ಬಗ್ಗೆ ನಾನು ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಆಗ ನಾನು ದುಡ್ಡಿನ ವಿಚಾರ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು, ಆದರೂ ಸ್ಪಷ್ಟನೆ ನೀಡುತ್ತೇನೆ. ಅವತ್ತು ನಾನು ಮಾತನಾಡಿರುವುದು ಸಿಎಸ್​ಆರ್​ ಫಂಡ್​ನ ವಿಚಾರದ ಬಗ್ಗೆ, ಲಿಸ್ಟ್ ಎಂದ ಕೂಡಲೇ ವರ್ಗಾವಣೆ ದಂಧೆ ಎಂದು ಹೇಳಿದರೆ ಹೇಗೆ?” ಎಂದು ವೈರಲ್ ಆಡಿಯೋದ ಬಗ್ಗೆ ಸ್ಪಷ್ಟನೆ ನೀಡಿದರು.

“ಹೆಚ್​ ಡಿ ಕುಮಾರಸ್ವಾಮಿ ಅವರ ಇಡೀ ಕುಟುಂಬ ರಾಜಕಾರಣದಲ್ಲಿದೆ. ಅದರ ಬಗ್ಗೆ ನಾವು ಮಾತನಾಡಲು ಆಗುತ್ತದಯೇ. ಅವರ ಅವಧಿಯಲ್ಲಿ ಮಾಡಿರುವ ವರ್ಗಾವಣೆಗಳನ್ನ ದಂಧೆಯ ರೂಪದಲ್ಲಿ ಹಣ ಪಡೆದು ವರ್ಗಾವಣೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದರೆ ಏನು ತಪ್ಪು, ಎಲ್ಲ ವರ್ಗಾವಣೆಯನ್ನು ಹಣದ ದೃಷ್ಟಿಯಿಂದಲೇ ನೋಡಿದರೆ ಹೇಗೆ. ಆರೋಪ ಮಾಡುವಾಗ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ. ಸುಖಾಸುಮ್ಮನೆ ಆರೋಪ ಮಾಡಬೇಡಿ. ನನ್ನ ಪಾಡಿಗೆ ನಾನು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರಕ್ಕೂ ನನ್ನ ಹೆಸರನ್ನು ಎಳೆದು ತರಬೇಡಿ” ಎಂದು ಹೇಳಿದರು.

ವಿವೇಕಾನಂದ ಯಾರು, ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸ್​ಫರ್ ಎಲ್ಲಿಗೆ ಆಗಿದೆ. ಅದು ಯಾವ ಕ್ಷೇತ್ರದ ಬಗ್ಗೆ ಎಂಬುದನ್ನು ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಅವತ್ತು ಮಾತನಾಡಿರುವುದು ಬಿಇಒ. ವಿವೇಕಾನಂದನ ಬಗ್ಗೆ, ಪೊಲೀಸ್​ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಶುಕ್ರವಾರ ಹಾಸನದಲ್ಲಿ ಶಾಸಕ ಹೆಚ್​.ಡಿ ರೇವಣ್ಣ, ಯತೀಂದ್ರ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿ, “ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾ ಹೇಳುತ್ತಾರೆ ಅದು ತಪ್ಪಾ?. ಯತೀಂದ್ರ ಅವರು ತಂದೆ ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಫೋನ್​ ​ಮಾಡುತ್ತಾರೆ. ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರವನ್ನು ನಾನು ನೋಡಿಕೊಳ್ಳುತ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತನಾಡಿರುತ್ತಾರೆ. ಅದಕ್ಕೆಲ್ಲ ನಾನು ಕೆಳಮಟ್ಟಕ್ಕಿಳಿದು ಮಾತನಾಡುವುದಿಲ್ಲ” ಎಂದಿದ್ದರು.

Donate Janashakthi Media

Leave a Reply

Your email address will not be published. Required fields are marked *