ಬೆಂಗಳೂರು: ತಂತ್ರಜ್ಞಾನದಲ್ಲಿ ಇದೀಗ ಯಾವುದೇ ಭಾಷೆಯಿಂದ, ಯಾವುದೇ ಭಾಷೆಗೆ ತಕ್ಷಣವೇ ಬದಲಾಯಿಸಬಲ್ಲ ಟೂಲ್ಗಳೂ ಲಭ್ಯ ಇವೆ. ಆದರೆ ಸ್ವಯಂಚಾಲಿತ ಕನ್ನಡ ಅನುವಾದ ವ್ಯವಸ್ಥೆ (ಆಟೋ ಟ್ರಾನ್ಸ್ಲೇಷನ್) ವೇಳೆ ಪ್ರಮಾದಗಳು ನಡೆಯೋದೂ ಇವೆ. ಸಿಎಂ ಸಿದ್ದರಾಮಯ್ಯ ರ ಅಧಿಕೃತ ಕಚೇರಿ ಸಂದೇಶಕ್ಕೆ ತಪ್ಪು ಭಾಷಾಂತರ ಕೊಟ್ಟು ಎಡವಟ್ಟು ಮಾಡಿದ್ದೂ, ಬಳಿಕ ಮೆಟಾ ಸಂಸ್ಥೆ ಕ್ಷಮೆಯಾಚಿಸಿ, ಸಮಸ್ಯೆ ಸರಿಪಡಿಸುವುದಾಗಿ ಹೇಳಿದೆ.
ಆದ ಎಡವಟ್ಟೇನು?
ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸಿಎಂ ಕಚೇರಿಯಿಂದ ಕನ್ನಡದಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನು ನಿರ್ವಹಿಸುತ್ತಿರುವ ಮೆಟಾ (META) ಸಂಸ್ಥೆಯು ಇಂಗ್ಲಿಷ್ಗೆ ಆಟೋ ತರ್ಜುಮೆ ಮಾಡಿದಾಗ,”Chief Minister Siddaramaiah passed away yesterday multilingual star, Senior Actress B Took darshanof sarojadev’s earthly body and paid his last respects.” ಆಟೋ
ಇದರ ಅರ್ಥ “ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು” ಎಂದು ಇಂಗ್ಲೀಷ್ನಲ್ಲಿ ತಪ್ಪು ಸಂದೇಶ ಪ್ರಸಾರವಾಗಿತ್ತು. ಈ ರೀತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತೀರಿಕೊಂಡಿದ್ದಾರೆ ಎಂದು ತಪ್ಪು ಸಂದೇಶ ರವಾನಿಸಿದೆ. ಸಿಎಂ ಕಚೇರಿಯ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಸಂತಾಪ ಸೂಚಕ ಸಂದೇಶವನ್ನು ತರ್ಜುಮೆ ಮಾಡುವಾಗ ಈ ಪ್ರಮಾದ ನಡೆದಿದೆ.
ಇದನ್ನೂ ಓದಿ: ಪೊಲೀಸ್ ಠಾಣೆ ಬಳಿಯೇ ಓರ್ವನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಸತ್ಯಾಂಶಗಳನ್ನು ತಿರುಚುವ, ಜನರಿಗೆ ತಪ್ಪು ಸಂದೇಶ ರವಾನಿಸುವ ಕನ್ನಡದ ಸ್ವಯಂ-ಭಾಷಾಂತರ ವೈಶಿಷ್ಟ್ಯವನ್ನು ಸ್ಥಗಿತಗೊಳಿಸುವಂತೆ ಮೆಟಾಗೆ ಸೂಚಿಸಿದ್ದಾರೆ. ಅಧಿಕೃತ ಕಚೇರಿ ಸಂವಹನದ ವಿಷಯಕ್ಕೆ ಬಂದಾಗ ಇದು ಅಪಾಯಕಾರಿ. ತಕ್ಷಣವೇ ಸರಿಪಡಿಸುವಂತೆ ನನ್ನ ಮಾಧ್ಯಮ ಸಲಹೆಗಾರರು Metaಗೆ ಪತ್ರ ಬರೆದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಅನುವಾದಗಳು ಸಾಮಾನ್ಯವಾಗಿ ತಪ್ಪಾಗಿರುತ್ತವೆ ಎಂದು ನಾಗರಿಕರಿಗೆ ನಾನು ಎಚ್ಚರಿಸುತ್ತೇನೆ. ತಂತ್ರಜ್ಞಾನ ದೈತ್ಯರ ಇಂತಹ ನಿರ್ಲಕ್ಷ್ಯವು ಸಾರ್ವಜನಿಕ ತಿಳುವಳಿಕೆ ಮತ್ತು ನಂಬಿಕೆಗೆ ಹಾನಿ ಮಾಡುತ್ತದೆ.” ಎಂದು ಪೋಸ್ಟ್ ಮಾಡಿದ್ದಾರೆ.
ಅಲ್ಲದೆ ಸಿಎಂ ಕಚೇರಿಯು ಮೆಟಾ ಸಂಸ್ಥೆಗೆ ಇಮೇಲ್ ಕಳುಹಿಸಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ಕೇಳಿದೆ. ಅಲ್ಲದೆ, ಕನ್ನಡದ ಸ್ವಯಂ-ಭಾಷಾಂತರ ವೈಶಿಷ್ಟ್ಯವನ್ನು ಮತ್ತಷ್ಟು ಉತ್ತಮಪಡಿಸುವವರೆಗೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದೆ. ಕನ್ನಡದಿಂದ ಇಂಗ್ಲಿಷ್ಗೆ ಅನುವಾದಗಳ “ಸಂದರ್ಭೋಚಿತ ನಿಖರತೆಯನ್ನು ಹೆಚ್ಚಿಸಲು” ಕನ್ನಡ ಭಾಷಾ ತಜ್ಞರು ಮತ್ತು ವೃತ್ತಿಪರರೊಂದಿಗೆ ಸಹಕರಿಸುವಂತೆ ಟೆಕ್ ಕಂಪನಿಗೆ ಸೂಚಿಸಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಅವರು , “ಕನ್ನಡದಿಂದ ಇಂಗ್ಲಿಷ್ಗೆ ಸ್ವಯಂ-ಭಾಷಾಂತರವು ತಪ್ಪಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ತೀವ್ರವಾಗಿ ದಾರಿ ತಪ್ಪಿಸುತ್ತದೆ ಎಂದು ನಾವು ಗಮನಿಸಿದ್ದೇವೆ.” ಇಂತಹ ತಪ್ಪುಗಳು ಗೊಂದಲವನ್ನು ಉಂಟುಮಾಡಬಹುದು. ವಿಶೇಷವಾಗಿ ಸಾರ್ವಜನಿಕ ಸಂವಹನ, ಅಧಿಕೃತ ಹೇಳಿಕೆಗಳು ಅಥವಾ ಸಿಎಂ ಅಥವಾ ಸರ್ಕಾರದ ಪ್ರಮುಖ ಸಂದೇಶಗಳು ಇದರಲ್ಲಿ ಸೇರಿರುವಾಗ ಎಚ್ಚರಿಕೆ ವಹಿಸಬೇಕು. “ಅವರು ಓದುತ್ತಿರುವುದು ಮೂಲ ಸಂದೇಶವಲ್ಲ, ಸ್ವಯಂಚಾಲಿತ ಅನುವಾದ ಎಂದು ಅನೇಕರಿಗೆ ತಿಳಿದಿರುವುದಿಲ್ಲ” ಎಂದು ಅವರು ಹೇಳಿದರು.
ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media
