ನವದೆಹಲಿ: ಇಸ್ರೇಲ್-ಯುಎಸ್ ದಾಳಿಗೆ ಇರಾನ್ ಸರ್ವೊಚ್ಚ ನಾಯಕ ಆಯತೊಲ್ಲಾ ಆಲಿ ಖಮೇನಿ ಸೇರಿದಂತೆ ಹಲವಾರು ಸಾವು-ನೋವುಗಳು ಸಂಭವಿಸಿದೆ. ಈ ಪರಿಣಾಮ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಸೇರಿ, ಹಲವಾರು ವಹಿವಾಟುಗಳಿಗೆ ಅಡ್ಡಿ ಉಂಟಾಗಿದೆ. ಅಷ್ಟೇ ಅಲ್ಲದೇ ವ್ಯಾಪಾರ, ಉದ್ಯೋಗಕ್ಕಾಗಿ ಅದೆಷ್ಟೋ ಭಾರತೀಯ ಪ್ರಜೆಗಳು ಮಧ್ಯಪ್ರಾಚ್ಯದ ದೇಶಗಳಲ್ಲಿ ನೆಲೆಸಿದ್ದಾರೆ.
ಇದೀಗ ಭೌಗೋಳಿಕ ಉದ್ವಿಗ್ನತೆಯಿಂದಾಗಿ, ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಯಲ್ಲಿ ಅಡ್ಡಿಯಾಗಿದ್ದು, ಆ ಕಾರಣ ಕನ್ನಡಿಗರು ಮತ್ತು ಇತರ ಭಾರತೀಯ ಪ್ರಜೆಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 2ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ತರುವ ಉದ್ದೇಶದಿಂದ ರಾಷ್ಟ್ರ ಮಟ್ಟದಲ್ಲಿ ಸಮನ್ವಯ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 2ರಂದು ಬರೆದ ಈ ಪತ್ರದಲ್ಲಿ, ಮಧ್ಯಪ್ರಾಚ್ಯ ಭಾಗಗಳಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಲವು ದೇಶಗಳ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಭಾರತೀಯರು, ವಿಶೇಷವಾಗಿ ಕನ್ನಡಿಗರು ದುಬೈ ಸೇರಿದಂತೆ ಪ್ರಮುಖ ಟ್ರಾನ್ಸಿಟ್ ಹಬ್ಗಳಲ್ಲಿ ಸಿಲುಕಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಮಧ್ಯಸ್ಥಿಕೆ ಸಂಸ್ಥೆಗಳ ಮೇಲೆ ವಿಶ್ವಾಸ ಕೊರತೆ: ಸಿಜೆಐ ಸೂರ್ಯ ಕಾಂತ್
ಕರ್ನಾಟಕದಲ್ಲಿ ಕುಟುಂಬಗಳಲ್ಲಿ ಹೆಚ್ಚುತ್ತಿರುವ ಸಂಕಷ್ಟವನ್ನು ಎತ್ತಿ ತೋರಿಸಿದ ಸಿದ್ದರಾಮಯ್ಯ, ಕನ್ನಡಿಗರ ಸುರಕ್ಷತೆಗಾಗಿ ಮತ್ತು ಅವರನ್ನು ಮರಳಿ ಕರೆತರಲು ಸಾಧ್ಯವಿರುವ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ, ವಿದೇಶಾಂಗ ಸಚಿವಾಲಯದಿಂದ (MEA) ತುರ್ತು ಸಮನ್ವಯವನ್ನು ನಡೆಸುವಂತೆ ಮನವಿ ಮಾಡಿದ್ದಾರೆ.
ಅಮೆರಿಕನ್ನರಿಗೆ ಎಚ್ಚರಿಕೆ!
ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಮಧ್ಯಪ್ರಾಚ್ಯದ ದೇಶಗಳಲ್ಲಿ ನೆಲೆಸಿರುವ ಅಮೆರಿಕನ್ನರಿಗೆ ಕೂಡಲೇ ಅಲ್ಲಿಂದ ನಿರ್ಗಮಿಸುವಂತೆ ಕರೆ ಕೊಟ್ಟಿದ್ದಾರೆ. ಇರಾನ್, ಯುಎಇ, ದುಬೈ ಸೇರಿದಂತೆ ಪರ್ಷಿಯನ್ ಗಲ್ಫ್ನಲ್ಲಿರುವ ಇತರೆ ನಗರಗಳ ಮೇಲೆ ಇಸ್ರೇಲ್-ಅಮೆರಿಕಾ ದಾಳಿಗೆ ಪ್ರತಿಕಾರವಾಗಿ ದಾಳಿ ನಡೆಸಿದ್ದು, ಈ ಯುದ್ಧ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಯುಎಸ್ ವಿದೇಶಾಂಗ ಸಚಿವಾಲಯ ಅಮೆರಿಕನ್ನರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ.
ಈಗಾಗಲೇ ಸೌದಿ ಅರೇಬಿಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೂ ಇರಾನ್ ದಾಳಿ ನಡೆಸಿದ್ದು, ಅಮೆರಿಕವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇರಾನ್ ಕಡೆಯಿಂದ ಎರಡು ಡ್ರೋನ್ಗಳು ಸೌದಿ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ, ಅಮೆರಿಕ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ನೋಡಿ: ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ಉತ್ತರ ಗಲಭೆಯೇ? Azim Premji Universityನಲ್ಲಿ ನಿಜವಾಗಿ ಏನಾಯಿತು?
