ಸಿಎಂ ಜೊತೆಗೆ ವಿಸ್ತೃತ ಸಮಾಲೋಚನೆ ನಂತರ ಶಾಲಾರಂಭದ ಬಗ್ಗೆ ನಿರ್ಧಾರ; ಸುರೇಶ್ ಕುಮಾರ್

 – ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ: ಸುರೇಶ್ ಕುಮಾರ್ 

ಬೆಂಗಳೂರು:  ಬಹು ಚರ್ಚಿತ ವಿಷಯವಾಗಿರುವ ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತಂತೆ ಶಿಕ್ಷಣ ಇಲಾಖೆ ವಿವಿಧ ಸ್ತರಗಳಲ್ಲಿ ಸಮಾಲೋಚನೆಸಂವಾದಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ರಾಜ್ಯದ ಸ್ಥಿತಿಗತಿಗಳನ್ನು ಮನದಟ್ಟು ಮಾಡಿದ ನಂತರವೇ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾಶಿಇ ಆಯುಕ್ತರು, ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದಾರೆ.

ಮಕ್ಕಳ ಹಿತ ಹಾಗೂ ಮಕ್ಕಳ ಆರೋಗ್ಯವೇ ಪ್ರಧಾನವಾಗಿರುವುದರಿಂದ ಶಾಲೆಗಳನ್ನು ತಕ್ಷಣದಲ್ಲೇ ಆರಂಭಿಸುವ ಉದ್ದೇಶವಿಲ್ಲವಾದರೂ, ಮಕ್ಕಳು ಶಾಲೆಯಿಂದ ಬಹುಕಾಲ ಹೊರಗುಳಿಯುವುದರಿಂದಾಗುವ ಸಮಸ್ಯೆಗಳ ಕುರಿತೂ ಚಿಂತಿಸಬೇಕಾದ ಅಗತ್ಯವಿದೆ ಎಂದರು. ಮಕ್ಕಳ ಹಿತ, ಮಕ್ಕಳ ಯೋಗಕ್ಷೇಮ, ಪೋಷಕರ ಆತಂಕ, ಶಿಕ್ಷಕರ ಹಿತಗಳೇ ನಮಗೆ ಅತ್ಯಂತ ಪ್ರಮುಖ ವಿಷಯಗಳಾದ್ದರಿಂದ ಯಾವ ಕಾರಣಕ್ಕೂ ಶಾಲೆಗಳನ್ನು ತಕ್ಷಣವೇ ತೆರೆಯುವ ಉದ್ದೇಶ ಸರ್ಕಾರಕ್ಕಿಲ್ಲ.

-ಎಸ್. ಸುರೇಶ್ ಕುಮಾರ್

 ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಸೂಕ್ತ ಕ್ರಮಗಳೊಂದಿಗೆ ಆರಂಭಿಸಬಹುದೆಂಬ ಕುರಿತು ಸಮಾಜದ ವಿವಿಧ ಸ್ತರಗಳೊಂದಿಗೆ ಸಮಾಲೋಚನೆಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿನ ಕಲಿಕಾ ಪ್ರಕ್ರಿಯೆಗಳು, ಅದರಿಂದಾದ ಉಪಯೋಗಗಳು ಮತ್ತು ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು, ಇದರ ಪರಿಣಾಮಗಳ ಬೆಳಕಿನಲ್ಲಿ ನಾವು ಹೇಗೆ ಕಲಿಕಾ ಪ್ರಕ್ರಿಯೆಗೆ ನಾಂದಿ ಹಾಡಬಹುದೆಂದು ವಿಷದವಾಗಿ ಚರ್ಚಿಸಲಾಯಿತು. ಆ ರಾಜ್ಯದ ಸ್ಥಿತಿಗತಿಗಳೊಂದಿಗೆ ನಮ್ಮ ರಾಜ್ಯದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು ಎಂದು ಅವರು ಹೇಳಿದರು.

ಮುಂದಿನ ಎರಡು ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಎಸ್‍ಡಿಎಂಸಿ ಪ್ರತಿನಿಧಿಗಳು ಸೇರಿದಂತೆ ಹಲವು ಶೈಕ್ಷಣಿಕ ಪಾಲುದಾರರೊಂದಿಗೆ ಚರ್ಚೆ ನಡೆಸಿ ಸಮಗ್ರವಾದ ಕ್ರೋಢೀಕೃತ ವರದಿ ಸಿದ್ಧಪಡಿಸಲಿದ್ದಾರೆ. ಹಾಗೆಯೇ ಈಗಾಗಲೇ ಆಯುಕ್ತರು ರಾಜ್ಯದ ಡಿಡಿಪಿಐಗಳು, ಬಿಇಒಗಳೊಂದಿಗೆ ಚರ್ಚೆ ಮಾಡಿ ವಿವರಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಸಭೆ: ಶಾಲೆಗಳ ಆರಂಭಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್​?

ಈ ಎಲ್ಲ ವರದಿಗಳ ಹಿನ್ನೆಲೆಯಲ್ಲಿ ವರದಿ ಸಿದ್ಧಪಡಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ರಾಜ್ಯದ ಸ್ಥಿತಿಗತಿಗಳನ್ನು ಗಮನಕ್ಕೆ ತರಲಾಗುವುದು. ಆ ನಂತರವೇ ಶಾಲೆಗಳ ಆರಂಭ ಕುರಿತು ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಈಗಾಗಲೇ ಶಿಕ್ಷಕರ ವರ್ಗಾವಣೆಗೆ ಎಲ್ಲ ಪೂರ್ವಭಾವಿ ಕ್ರಮಗಳು ಸಿದ್ಧಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ನೀತಿ ಸಂಹಿತೆ ಮುಕ್ತಾಯಗೊಂಡ ನಂತರವೇ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಹಾಗೆಯೇ ಪದವಿ ಪೂರ್ವ ಉಪನ್ಯಾಸಕರ ವರ್ಗಾವಣಾ ಕೌನ್ಸೆಲಿಂಗ್‍ನ್ನು ನೀತಿ ಸಂಹಿತೆ ಮುಗಿದ ತಕ್ಷಣವೇ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂತ ಮೊದಲು ಪ್ರಾಂಶುಪಾಲರ ಬಡ್ತಿ ಮತ್ತು ಅವರ ವರ್ಗಾವಣೆ ಮಾಡಲಾಗುವುದು. ಪ್ರಾಂಶುಪಾಲರ ವರ್ಗಾವಣೆಯಿಂದ ತೆರವಾಗುವ ಉಪನ್ಯಾಸಕ ಹುದ್ದೆಗಳನ್ನು ಒಳಗೊಂಡಂತೆ ಖಾಲಿಯಾಗುವ ಉಪನ್ಯಾಸಕರ ಹುದ್ದೆಗಳನ್ನು ಸೇರಿಸಿ ಉಪನ್ಯಾಸಕರ ವರ್ಗಾವಣಾ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ನರಸಿಂಹ ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಸುರಪುರ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಪ್ರತಿಧಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *