ಹಾಸನ: ಜಿಲ್ಲೆಯ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇದು ಕನ್ನಡ, ಕರ್ನಾಟಕ ಮತ್ತು ಇಡೀ ಭಾರತಕ್ಕೇ ಹೆಮ್ಮೆ ತರುವ ಸಂಗತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಪಿ. ಮೋಹನ್ ಹೇಳಿದ್ದಾರೆ.
ಸಮೃದ್ಧ ಹಾಗೂ ಶಾಸ್ತ್ರೀಯ ಭಾಷೆಯಾದ ನಮ್ಮ ಕನ್ನಡ ಭಾಷೆ ಇಂದು ಹಲವು ಸಮಸ್ಯೆಗಳು ಮತ್ತು ದಾಳಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಸತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದ್ದಾರೆ.
ಇದನ್ನು ಸಾಧ್ಯವಾಗಿಸಿದ ಜಿಲ್ಲೆಯ ಹಿರಿಯ ಸಾಹಿತಿ, ನ್ಯಾಯವಾದಿ ಹಾಗೂ ಜನಪರ ಚಳುವಳಿಗಳ ಒಡನಾಡಿ ಬಾನು ಮುಷ್ತಾಕ್ ಮತ್ತು ಕನ್ನಡ ಕೃತಿಯನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಜಾಗತಿಕ ಮನ್ನಡೆ ಗಳಿಸಲು ಕಾರಣರಾದ ನಮ್ಮ ಪಕ್ಕದ ಜಿಲ್ಲೆಯವರಾದ ದೀಪಾ ಭಾಸ್ತಿಯವರನ್ನು ಹೃದಯ ಪೂರ್ವಕವಾಗಿ ಅಭಿನಂಧಿಸಬೇಕಾಗಿರುವುದು ಎಲ್ಲ ಕನ್ನಡಿಗರ ಕರ್ತವ್ಯವಾಗಿದೆ.
ಇದನ್ನೂ ಓದಿ: ಕಾಮಗಾರಿ ನಡೆಸುತ್ತಿದ್ದವರ ಮೇಲೆ ಹರಿದ ಲಾರಿ; 3 ಕಾರ್ಮಿಕರು ಸಾವು
ಕನ್ನಡ, ಕರ್ನಾಟಕ ನಮ್ಮ ಹಾಸನ, ಜಿಲ್ಲೆ, ರಾಜ್ಯ ಮತ್ತು ಇಡೀ ದೇಶಕ್ಕೇ ಹೆಸರು ತಂದ ಭಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ‘ಒಂದು ನಾಗರಿಕ ಸನ್ಮಾನ’ ಮಾಡಿ ಗೌರವಿಸುವುದು ನಮ್ಮೆಲ್ಲರ ಆಧ್ಯತೆಯ ಕೆಲಸವಾಗಿದೆ.
ಈ ಹಿನ್ನೆಲೆಯಲ್ಲಿ ಜೂನ್ 9 ರ ಸೋಮವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ‘ನಾಗರಿಕ ಸನ್ಮಾನ’ ಮಾಡಲು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜನಪರ ಚಳುವಳಿಗಳು, ಕನ್ನಡಪರ ಸಂಘಟನೆಗಳು, ಸಂಘಸಂಸ್ಥೆಗಳು ಹಾಗೂ ನಾಗರಿಕ ಸಮಿತಿ ನಿರ್ಧರಿಸಿವೆ.
ಜೂನ್ 9 ರ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಕನ್ನಡ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಲಿದ್ದಾರೆ ಹಾಗೂ ಡಾ. ಎಚ್.ಎಸ್. ಅನುಪಮಾ ಅವರು ಅಬಿಂಧನಾ ನುಡಿಗಳನ್ನು ಆಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಶ್ರೀಯುತ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಪಾಲಿಕೆ ಅಧ್ಯಕ್ಷ ಎಂ. ಚಂದ್ರೇಗೌಡ, ಮಾನ್ಯ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಬಿ.ಆರ್. ಪೂರ್ಣಿಮ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಮೊಹಮದ್ ಸುಜೀತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜೂನ್ 9 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಜನಪದ ಕಲಾತಂಡಗಳ ಮೆರವಣಿಗೆಯು ಆರಂಭವಾಗಲಿದೆ ನಂತರ ಹಾಸನಾಂಭ ಕಲಾಕ್ಷೇತ್ರದಲ್ಲಿ ‘ನಾಗರಿಕ ಸನ್ಮಾನ’ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಸಾಹಿತಿಗಳು, ಎಲ್ಲಾ ಜನಪರ, ಕನ್ನಡಪರ ಸಂಘಟನೆಗಳ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ವಿಧ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media