ಚಿಕ್ಕೋಡಿ ಲೋಕಸಭಾ ಕ್ಷೇತ್ರ-2024; ಜೊಲ್ಲೆ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ಫೈಟ್

– ಸಂಧ್ಯಾ ಸೊರಬ

ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಇದು ರಾಜ್ಯದ ಗಡಿಭಾಗದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಎಂಟು ವಿಧಾಸಭಾ ಕ್ಷೇತ್ರಗಳ್ನೊಳಗೊಂಡಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರವೂ ಈ ಮೊದಲು ಕಾಂಗ್ರೆಸ್‌ ವಶದಲ್ಲಿತ್ತು. ಇದು 2009 ರ ಚುನಾವಣೆ ವರೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿರಿಸಿರುವ ಕ್ಷೇತ್ರವಾಗಿತ್ತು. ಬಳಿಕ ಚಿಕ್ಕೋಡಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತವಾಯಿತು.

ದಶಕಗಳಿಂದ ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಉತ್ಸುಕವಾಗಿದ್ದು, ತನ್ನ ಭದ್ರಕೋಟೆಯನ್ನು ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ.ಈ ಬಾರಿಯ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಚಿಕ್ಕೋಡಿ ಕೂಡ ಒಂದಾಗಿದ್ದು, ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ, ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಕಾಗಡವಾಡ, ಅಥಣಿ, ರಾಯಭಾಗ, ಕುಡಚಿ, ಯನಕನಮರಡಿ ಸೇರಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಕೈ ವಶಪಡಿಸಿಕೊಂಡಿದ್ದು, ಇನ್ನು ಮೂರರಲ್ಲಿ ಕಮಲ ಅರಳಿದೆ.

ಬಿಜೆಪಿಯು ಎರಡು ದಶಕಗಳಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ತನ್ನ ಭದ್ರಕೋಟೆ ಮಾಡಿಕೊಂಡಿದ್ದು, 2004 ರಲ್ಲಿ ರಮೇಶ ಜಿಗಜಿಣಗಿ, 2009 ರಲ್ಲಿ ರಮೇಶ ಕತ್ತಿ ಆಯ್ಕೆಯಾಗಿದ್ದರು. 2014 ರಲ್ಲಿ ಮೋದಿ ಹವಾ ನಡುವೆಯೂ ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ ರಮೇಶ ಕತ್ತಿ ವಿರುದ್ಧ ಗೆಲುವು ಸಾಧಿಸಿದರು. ಬಳಿಕ 2019 ರಲ್ಲಿ ರಮೇಶ ಕತ್ತಿ ಟಿಕೆಟ್ ನೀಡದೇ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಪ್ರಕಾಶ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಗೆಲುವು ಸಾಧಿಸಿ ಹಾಲಿ ಸಂಸದರಾಗಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17.3 ಲಕ್ಷ. ಜಾತಿವಾರು ಲೆಕ್ಕಾಚಾರ ನೋಡುವುದಾದರೆ ಲಿಂಗಾಯತರದ್ದೆ ಮೇಲುಗೈ. ಲಿಂಗಾಯತರು 4.10 ಲಕ್ಷ ಜನರಿದ್ದಾರೆ. ನಂತರ ಸ್ಥಾನದಲ್ಲಿ ಮುಸ್ಲಿಂ 1.8 ಲಕ್ಷ, ಮರಾಠಿ 1.7 ಲಕ್ಷ, ಕುರುಬ 1.7 ಲಕ್ಷ, ಎಸ್‌ಸಿ 1.65 ಲಕ್ಷ, ಜೈನ್‌ 1.3 ಲಕ್ಷ, ಎಸ್‌ಟಿ 90,000,ಮತಗಳಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ದ್ವಿಕೋನ ಫೈಟ್‌ ಇದ್ದು, ಜಾರಕಿಹೊಳಿ ಮತ್ತು ಜೊಲ್ಲೆ ನಡುವಿನ ಹೋರಾಟಕ್ಕೆ ಈ ಲೋಕಸಭಾ ಕದನವಾಗಿದೆ. ಸಹಕಾರ ಕ್ಷೇತ್ರ ಹಾಗೂ ಬ್ಯಾಂಕ್ ಉದ್ಯಮದಲ್ಲಿ ಹೆಸರು ಮಾಡಿರುವ ಅನುಭವಿ ಅಣ್ಣಾಸಾಹೇಬ ಜೊಲ್ಲೆ. ಚುನಾವಣಾ ನೀತಿಯಲ್ಲಿ ‘ಮಾಸ್ಟರ್ ಮೈಂಡ್’ ಎಂದೇ ಹೆಸರಾದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಳನ್ನು ಕಣಕ್ಕಿಳಿಸಿದ್ದರೂ, ಇದರ ನಿಜವಾದ ಹೋರಾಟ ಅಣ್ಣಾಸಾಹೇಬ್ ಜೊಲ್ಲೆ‌ಹಾಗೂ ಸತೀಶ ಜಾರಕಿಹೊಳು ಇವರ ಮಧ್ಯೆಯೇ ಈ ಚುನಾವಣೆ ನಡೆದಿದೆ ಎನ್ನುವ ರೀತಿ ಪ್ರಚಾರ ಕಾರ್ಯಕ್ರಮಗಳು ಸ್ವರೂಪ ಬದಲಾಯಿಸಿಕೊಂಡಿವೆ.

ಇದನ್ನು ಓದಿ : ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣೆ ಬಂದಾಗ ಮಾತ್ರ: ಸಿ.ಎಂ.ಸಿದ್ದರಾಮಯ್ಯ ಆಕ್ರೋಶ

ಬಿಜೆಪಿಯಿಂದ ಎರಡನೇ ಬಾರಿ ಕಣಕ್ಕಿಳಿದಿರುವ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ರಾಮ ಮಂದಿರ ವಿಷಯವನ್ನು ನೆಚ್ಚಿಕೊಂಡಿದ್ದಾರೆ. 6 ತಿಂಗಳು ಮುಂಚೆಯೇ ಪ್ರಚಾರ ಶುರು ಮಾಡಿದ ಅವರು, ಮತ ಬ್ಯಾಂಕ್ ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಇದೇ ಕ್ಷೇತ್ರದಿಂದ ಒಂದು ಬಾರಿ ಸಂಸದರೂ ಆಗಿದ್ದ ರಮೇಶ ಕತ್ತಿ ಪ್ರಭಾವಿ ರಾಜಕಾರಣಿ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರದ್ದೂ ಈ ಕ್ಷೇತ್ರದಲ್ಲಿ ಪ್ರಭಾವವಿದೆ. ಆದರೆ, ಇವರಿಬ್ಬರೂ ಜೊಲ್ಲೆ ಪರ ಪ್ರಚಾರಕ್ಕೆ ಬಂದಿಲ್ಲ. ಬಿಜೆಪಿಯವರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.ಪ್ರಖರ ಮಾತುಗಳ ಮೂಲಕ ಜಾರಕಿಹೊಳಿ ಕುಟುಂಬ ರಾಜಕಾರಣ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊಲ್ಲೆ ಅವರ ಬೆನ್ನಿಗೆ ನಿಂತಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿಗೂ ಒಳಪೆಟ್ಟಿನ ಆತಂಕ ಇಲ್ಲ ಎಂದೇನಿಲ್ಲ. ಎಲ್ಲವೂ ಬೂದಿಮುಚ್ಚಿದ ಕೆಂಡದಂತಿವೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ.ಪ್ರಿಯಾಂಕಾ ಜಾರಕಿಹೊಳಿಗೂ ಒಳಪೆಟ್ಟಿನ ಆತಂಕ ಇಲ್ಲದಿಲ್ಲ. ಎಲ್ಲವೂ ಬೂದಿಮುಚ್ಚಿದ ಕೆಂಡದಂತಿವೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರೂ ಒಗ್ಗಟ್ಟು ಪ್ರದರ್ಶಿಸಿದರು.

‘ಶಕ್ತಿ ಪ್ರದರ್ಶನಕ್ಕಿಂತ ಒಗ್ಗಟ್ಟು ಪ್ರದರ್ಶನ ಮುಖ್ಯ’ ಎಂಬ ಸತೀಶ ಜಾರಕಿಹೊಳಿ ಮಾತು ಒಳಪೆಟ್ಟಿನ ಸಂಶಯವಿದೆ ಎಂಬುದಕ್ಕೆ ಸಾಕ್ಷ್ಯದಂತಿದೆ.ಎಲ್ಲ ನಾಯಕರೂ ಪ್ರಿಯಾಂಕಾ ಪರ ಅಲ್ಲಲ್ಲಿ ಪ್ರಚಾರ ನಡೆಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಟುವಾಗಿ ಟೀಕಿಸುತ್ತ ಸಾಗಿದ್ದಾರೆ. ‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದರೆ ಸಚಿವ ಸ್ಥಾನ ನಿಕ್ಕಿ’ ಎಂದು ಡಿ.ಕೆ.ಶಿವಕುಮಾ‌ರ್ ಅವರ ಮಾತೂ ಇಲ್ಲಿ ಮುಖ್ಯವಾಗಿದೆ.

ಪಕ್ಷೇತರರಾಗಿ ಕಣಕ್ಕಿಳಿದ ಶಂಭು ಕಲ್ಲೋಳಿಕರ ಕಾಂಗ್ರೆಸ್‌ನ ‘ಅಹಿಂದ’ ಮತಗಳನ್ನು ಕಿತ್ತುಕೊಳ್ಳಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರೇ ತಮಗೆ ಟಿಕೆಟ್‌ ತಪ್ಪಿಸಿದರು ಎಂಬ ಕೋಪ ಕಲ್ಲೋಳಿಕರ ಅವರಿಗಿದೆ. ‘ದಲಿತರು ಗೆಲ್ಲಿಸಿ ತೋರಿಸಿದ್ದೇವೆ. ಈಗ ಸೋಲಿಸಿ ತೋರಿಸುತ್ತೇವೆ’ ಎಂಬ ಕಲ್ಲೋಳಿಕರ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ದೊಡ್ಡ ಬೆಂಬಲಿಗರ ಪಡೆ ಹೊಂದಿರುವ ಕಲ್ಲೋಳಿಕರ ಈಗಲೂ ಇಷ್ಟೇ ಮತಗಳನ್ನು ಪಡೆದರೆ ಕಾಂಗ್ರೆಸ್‌ಗೆ ‘ಹೊರೆ’ ಆಗುವುದರಲ್ಲಿ ಸಂದೇಹವಿಲ್ಲ.

ಇದನ್ನು ನೋಡಿ : ರಾಯಚೂರು ಲೋಕಸಭೆ : ಬಿಜೆಪಿಯೊಳಗೆ ಬಂಡಾಯ, ಕಾಂಗ್ರೆಸ್‌ನೊಳಗೆ ಬೇಗುದಿ Janashakthi Media

Donate Janashakthi Media

Leave a Reply

Your email address will not be published. Required fields are marked *