ಕೇಂದ್ರ ಸರಕಾರದ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಕಲ್ಲಿದ್ದಲು ಆಮದಿಗೆ ರಾಜ್ಯ ಸರಕಾರಗಳಿಗೆ ನಿರ್ದೇಶನ?

ನವದೆಹಲಿ : ತಾಪ ವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲು ಪೂರೈಸುವಲ್ಲಿ ತನ್ನ ಸ್ವಂತ ಅದಕ್ಷತೆಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯಗಳ ಅಧಿಕಾರವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಖರೀದಿಸುವಂತೆ ಒತ್ತಡ ಹಾಕುತ್ತಿದೆ ಎಂದು ಅಖಿಲ ಭಾರತ ವಿದ್ಯುತ್‍ ಇಂಜಿನಿಯರುಗಳ ಒಕ್ಕೂಟ(ಎಐಪಿಇಎಫ್) ಆರೋಪಿಸಿದೆ.

ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಈ ತಿಂಗಳ ಆರಂಭದಲ್ಲಿ ವಿದ್ಯುತ್ ಸಚಿವಾಲಯದ ನಿರ್ದೇಶನಗಳು ಕೋಲ್ ಇಂಡಿಯಾ ಲಿಮಿಟೆಡ್‌(ಸಿಐಎಲ್ )ನಿಂದ ಒಣ ಇಂಧನದ ಕೊರತೆಯನ್ನು ಸರಿದೂಗಿಸಲು ಮಿಶ್ರಣವನ್ನು ಹೆಚ್ಚಿಸಲು ದೇಶೀಯ ಕಲ್ಲಿದ್ದಲಿಗೆ ಪೂರಕವಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕೆಂದು ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಎಐಪಿಇಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಚಿವಾಲಯವು ಎಲ್ಲಾ ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಹೇಳಿದೆ ಮತ್ತು ದರ ಹೆಚ್ಚಳದ ಪರಿಷ್ಕರಣೆಯನ್ನು ಒಂದು ಸಮಿತಿಯು ಪ್ರಕಟಿಸಲಿದೆ ಎಂದೂ ಹೇಳಿದೆ.

“ಕೇಂದ್ರ ಸರ್ಕಾರವು ರಾಜ್ಯದ ಅಧಿಕಾರವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಮತ್ತು ತಾಪ ವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲು ಪೂರೈಸುವಲ್ಲಿ ತನ್ನ ಸ್ವಂತ ಅದಕ್ಷತೆಗಳನ್ನು ಮುಚ್ಚಿಕೊಳ್ಳಲು ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಖರೀದಿಸಲು ಒತ್ತಾಯಿಸುತ್ತಿದೆ” ಎಂದು ಎಐಪಿಇಎಫ್ ವಕ್ತಾರ ವಿ ಕೆ ಗುಪ್ತಾ ಆರೋಪಿಸಿದ್ದಾರೆ.

2003ರ ವಿದ್ಯುತ್ ಕಾಯಿದೆಯ ಸೆಕ್ಷನ್ 11 ಕೇಂದ್ರ ಸರ್ಕಾರದ ಸಂಪೂರ್ಣ ಅಥವಾ ಭಾಗಶಃ ಮಾಲೀಕತ್ವದ ವಿದ್ಯುತ್‍ ಉತ್ಪಾದನಾ ಕಂಪನಿ ಮತ್ತು ಅಂತರ-ರಾಜ್ಯ ಉತ್ಪಾದನಾ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದೆ, ರಾಜ್ಯ ಸರ್ಕಾರಿ ಸ್ವಾಮ್ಯದ ಉತ್ಪಾದನಾ ಕೇಂದ್ರಗಳಿಗೆ ಸೆಕ್ಷನ್ 11 ರ ಅನ್ವಯದ ವಿಷಯ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಗುಪ್ತಾ ವಿವರಿಸಿದರು.

ದೇಶಾದ್ಯಂತ ತಾಪ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಸಿಗದಿರುವುದು ಕಲ್ಲಿದ್ದಲು, ರೈಲ್ವೆ ಮತ್ತು ವಿದ್ಯುತ್ ಈ ಮೂರು ಸಚಿವಾಲಯಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ. ಸರ್ಕಾರಗಳ ಮಟ್ಟದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲು ಚಾಲ್ತಿಯಲ್ಲಿರುವ ಸಿಐಎಲ್ ದರದಲ್ಲಿ ರಾಜ್ಯದ ಉತ್ಪಾದನಾ ಕಂಪನಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಎಐಪಿಇಎಫ್‍ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಅವರಿಗೆ ಪತ್ರ ಬರೆದಿದೆ.

ಕೇಂದ್ರ ಸರ್ಕಾರದ ನೀತಿ ಲೋಪಗಳಿಂದಾಗಿ ಉಂಟಾಗಿರುವ ಕಲ್ಲಿದ್ದಲು ಕೊರತೆಯನ್ನು ನೀಗಿಸುವ ಹೆಚ್ಚುವರಿ ವೆಚ್ಚ ರಾಜ್ಯಗಳಿಗೆ ಹೊರೆಯಾಗಬಾರದು ಎಂದು ಅದು ಹೇಳಿದೆ. ಎನ್‌ಟಿಪಿಸಿ ನಡೆಸುತ್ತಿರುವ ಕೇಂದ್ರ ಸರ್ಕಾರದ ತಾಪ ವಿದ್ಯುತ್‍ ಸ್ಥಾವರಗಳ ದರಪಟ್ಟಿಯಲ್ಲಿ 50-70 ಪೈಸೆಗಳಷ್ಟು ಏರಿಕೆಯಾಗುತ್ತದೆ ಮತ್ತು ಅದನ್ನು ವಿದ್ಯುತ್ ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ.

ಕೇಂದ್ರದ ನಿರ್ದೇಶನದ ಹೊರತಾಗಿಯೂ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳದಿರಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಂಗಾರಿಗೆ ಮೊದಲು ತಾಪ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಹೆಚ್ಚಿಸದಿದ್ದರೆ ಮತ್ತೊಂದು ವಿದ್ಯುತ್ ಬಿಕ್ಕಟ್ಟು ಶೀಘ್ರದಲ್ಲೇ ಬರಬಹುದು ಎಂದು ಗುಪ್ತಾ ಎಚ್ಚರಿಸಿದ್ದಾರೆ.

ಜೂನ್‌ನಲ್ಲಿ ಕಲ್ಲಿದ್ದಲು ಪೂರೈಕೆಯನ್ನು ಸಚಿವಾಲಯವು ಈಗಾಗಲೇ 10-12% ರಷ್ಟು ಕಡಿಮೆ ಮಾಡಿದೆ ಎಂದು ಅದು ಹೇಳಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ, ಜೂನ್ ಮಧ್ಯದಿಂದ ಭತ್ತದ ನಾಟಿಯೊಂದಿಗೆ ನೀರಾವರಿ ಹೊರೆ ಹೆಚ್ಚಾಗುವಾಗವಿದ್ಯುತ್ ಬೇಡಿಕೆ ತೀವ್ರವಾಗಿ ಏರುತ್ತದೆ. ಬಿಸಿ ಮತ್ತು ಆರ್ದ್ರ ವಾತಾವರಣದಿಂದಾಗಿ ಗೃಹ ಬಳಕೆ ಮತ್ತು ಕೈಗಾರಿಕಾ ಬೇಡಿಕೆಯೂ ಹೆಚ್ಚಾಗುತ್ತದೆ. ಇದಲ್ಲದೆ, ಮುಂಗಾರು ಹಂಗಾಮಿನಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ಸಂಗತಿಯತ್ತವೂ ಅವರು ಗಮನ ಸೆಳೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *