ನೂತನ ಶಿಕ್ಷಣ ನೀತಿ ಎಂಬುದು ಮೇಕ್ ಇನ್ ಅಮೇರಿಕ ಆಗಿದೆ: ಪ್ರೋ ರಾಧಾಕೃಷ್ಣ

ಬೆಂಗಳೂರು: ‘ಕೇಂದ್ರದ ಬಿಜೆಪಿ ಸರಕಾರದ ನೂತನ ಶಿಕ್ಷಣ ನೀತಿಯು ದೇಶದ ಶೈಕ್ಷಣಿಕ ಕ್ಷೇತ್ರವನ್ನೇ ಹಳ್ಳ ಹಿಡಿಸಲಿದ್ದು, ಇದರ ಉದ್ದೇಶ ಮೇಕ್ ಇನ್ ಇಂಡಿಯಾ ಅಲ್ಲ, ಬದಲಿಗೆ ಮೇಕ್ ಇನ್ ಅಮೇರಿಕ ಎಂಬಂತಾಗಿದೆ. ಈ ನೀತಿಯೂ ಡಿಜಿಟಲ್ ವಿಭಜನೆಯಿಂದ ಶ್ರೀಮಂತರು ಹಾಗೂ ಬಡವರ ನಡುವಣ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಇದು ವಿಭಜಕ ಶಿಕ್ಷಣ ನೀತಿಯಾಗಿದೆ’ ಎಂದು ಕೆಪಿಸಿಸಿ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಈ ರಾಧಾಕೃಷ್ಣ ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಿ. ಕೆ.ಈ.ರಾಧಾಕೃಷ್ಣ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ.ಮಹೇಶಪ್ಪ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಧಕೃಷ್ಣ ‘ನೂತನ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಅಪಾಯಕಾರಿ ಅಂಶಗಳಿದ್ದು ಇದು ಒಂದು ಮೋಸ ಎಂದು ಕರೆಯಬಹುದು. ಕಾರಣ, ದೇಶದಲ್ಲಿ ಶೇಕಡಾ 47ರಷ್ಟು ಮಂದಿ ಆಂತರಿಕ ವಲಸಿಗರಾಗಿದ್ದು, ಕೋವಿಡ್ ಸಮಯದಲ್ಲಿ 23 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಈ ಕುಟುಂಬದ ಮಕ್ಕಳನ್ನು ಈ ನೂತನ ಶಿಕ್ಷಣ ನೀತಿಯಲ್ಲಿ ನಿರ್ಲಕ್ಷಿಸಲಾಗಿದೆ. ಆನ್‌ಲೈನ್ ಶಿಕ್ಷಣ ಎನ್ನುವ ಬಿಜೆಪಿ ಸರಕಾರ ಅದಕ್ಕೆ ಪೂರಕವಾಗಿ ಆಫ್‌ಲೈನ್ ಶಿಕ್ಷಣ ವ್ಯವಸ್ಥೆ ನೀಡಲು ಗಮನಹರಿಸಿಲ್ಲ. ಇನ್ನು ಡಿಜಿಟಲ್ ವಿಭಜನೆ ಹೆಚ್ಚಾಗಿದ್ದು, ಇದೊಂದು ವಿಭಜಕ ಶಿಕ್ಷಣ ನೀತಿಯಾಗಿದೆ’ ಎಂದು ಟೀಕಿಸಿದರು.

ಇದನ್ನು ಓದಿ: ನೂತನ ಶಿಕ್ಷಣ ನೀತಿ 2020: ಸದಾಶಯಗಳು ಮತ್ತು ಹುನ್ನಾರಗಳು

‘ದೇಶದಲ್ಲಿ ಅಧ್ಯಾಪಕರ ಕೊರತೆ ಹೆಚ್ಚಾಗಿದೆ. 2015ರ ವೇಳೆಗೆ ಸಾಕ್ಷರತೆ ಮತ್ತು ಗಣಿತ ಜ್ಞಾನ ಹೆಚ್ಚುಸುತ್ತೇವೆ ಎನ್ನುವ ಪ್ರಧಾನಿಗಳು ತಮ್ಮ 7 ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಎಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬುದನ್ನು ಅರಿತಿಲ್ಲ. ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ. ಆದರೆ ಈ ವಿಚಾರವಾಗಿ ಯಾವುದೇ ಪ್ರಾಥಮಿಕ ಪ್ರಯತ್ನವನ್ನು ಮಾಡಿಲ್ಲ. ದೇಶದಲ್ಲಿನ ಐಐಟಿ ಸಂಸ್ಥೆಗಳ ದುಸ್ಥಿತಿ ಬಗ್ಗೆ ಪ್ರಧಾನಮಂತ್ರಿಗಳು ಮನ್ ಕಿ ಬಾತ್ ನಲ್ಲಿ ಮಾತನಾಡುವುದಿಲ್ಲ. ಇನ್ನು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉತ್ತನ ಶಿಕ್ಷಣದವರೆಗೆ ಶೇಕಡಾ 60ರಷ್ಟು ಅಧ್ಯಾಪಕರು ಅತಿಥಿ ಉಪನ್ಯಾಸಕರಾಗಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರ ತರಬೇತಿಗೆ ಯಾವ ಸಮಗ್ರ ಯೋಜನೆ ಹಾಕಿಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ವಿಶ್ವವಿದ್ಯಾಲಯಗಳನ್ನು ಸಂಶೋಧನಾ, ಸ್ವಾಯತ್ತಾ ಹಾಗೂ ಕಲಿಕಾ ವಿಶ್ವವಿದ್ಯಾಲಯ ಎಂದು ವಿಂಗಡನೆ ಮಾಡುವ ಕ್ರಮ ಹಾಸ್ಯಾಸ್ಪದ. ವಿಶ್ವವಿದ್ಯಾಲಯ ಎಂದರೆ ಸಂಶೋಧನೆ ಹಾಗೂ ಕಲಿಕೆಯ ಕೇಂದ್ರ. ಸಂಶೋಧನೆಯನ್ನು ವಿಶ್ವವಿದ್ಯಾಲಯಗಳಿಂದ ಪ್ರತ್ಯೇಕ ಮಾಡಿದರೆ ಅದು ವಿಶ್ವವಿದ್ಯಾಲಯವಾಗುವುದಿಲ್ಲ ಕೇವಲ ಕಲಿಕಾ ಕಾಲೇಜು ಕೇಂದ್ರವಾಗುತ್ತದೆ. ಇನ್ನು ದೇಶದ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಶಂಸಾರ್ಹ ಸಂಶೋಧನೆಗಳನ್ನು ಮಾಡಿರುವ ಉಲ್ಲೇಖವೂ ಇಲ್ಲವಾಗಿದೆ. ಇನ್ನು 2035ರ ವೇಳೆಗೆ ಶೇಕಡಾ 50ರಷ್ಟು ಉನ್ನತ ಶಿಕ್ಷಣ ಪ್ರವೇಶಾತಿ ಹೆಚ್ಚಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ ಉನ್ನತ ಶಿಕ್ಷಣ ಮಾಡಿರುವ ಸ್ನಾತಕೋತ್ತರ ಪದವೀಧರರು ಉತ್ತರ ಪ್ರದೇಶದಲ್ಲಿ ಸ್ವಚ್ಛತಾ ಕೆಲಸಕ್ಕೆ ಅರ್ಜಿ ಹಾಕಿರುವುದನ್ನು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇವೆ’ ಎಂದು ಹರಿಹಾಯ್ದರು.

‘ಅಲ್ಲದೆ, ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲೆಗಳ ಜೊತೆ ಸಂಯೋಜಿಸಲು ಮುಂದಾಗಿರುವ ಪ್ರಧಾನಿ ಮೋದಿ ಅವರು ಅಂಗನವಾಡಿ ಶಿಕ್ಷಕಿಯರ ಆರ್ತನಾದವನ್ನು ಕೇಳಿಸಿಕೊಳ್ಳುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ದೇಶದಲ್ಲಿ ಶ್ರೀಮಂತರು ಹಾಗೂ ಬಡವರ ನಡುವೆ ಇರುವ ಅಂತರವನ್ನು ಡಿಜಿಟಲ್ ವಿಭಜನೆ ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಖಾಸಗಿಯವರು ಶುಲ್ಕ ವಿಧಿಸುವ ಸ್ವಾತಂತ್ರ್ಯವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇಲ್ಲದವರ ಮನಸ್ಸಿನಲ್ಲಿ ತಲ್ಲಣ ಸೃಷ್ಟಿಸಲಿದೆ. ಹೀಗಾಗಿ ಈ ಶಿಕ್ಷಣ ನೀತಿಯನ್ನು ವಿಭಜಕ ಶಿಕ್ಷಣ ನೀತಿಯಾಗಿದೆ’ ಎಂದರು.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

‘ಘೋಷಣೆಗಳ ಮೂಲಕ ಪ್ರಚಾರ ಪಡೆಯುವ ಮೋದಿ ಅವರು ಸ್ಲೋಗನ್ ಸೇನಾಪತಿಯಾಗಿದ್ದಾರೆ. ಆಲ್ ಫಾರ್ ಆಲ್ ಎಂಬ ಪರಿಕಲ್ಪನೆಯಲ್ಲಿ ಎಲ್ಲ ವಯಸ್ಸಿನವರಿಗೆ ಕೃತಕ ಬುದ್ದಿಮತ್ತೆ ಮೂಲಕ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ. ಆದರೆ ದೇಶದಲ್ಲಿ ಈಗಾಗಲೇ ಸಾವಿರಾರು ಮಂದಿ ಅಥಿತಿ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಜತೆಗೆ ಶಿಕ್ಷಕರು ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್ ಕಾರ್ಯಕ್ರಮ ಎನ್ನುತ್ತಾರೆ. ದೇಶದ ಬೇರೆ ಬೇರೆ ಭಾಷೆಗಳಲ್ಲಿ ಶಿಕ್ಷಣ ನೀಡುವ ಬಿಜೆಪಿ ಸರಕಾರ ಕನ್ನಡದಲ್ಲಿ ಶಿಕ್ಷಣ ನೀಡುತ್ತಿಲ್ಲ ಯಾಕೆ? ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುತ್ತಿಲ್ಲ. ಉಳಿದಂತೆ 1ನೇ ತರಗತಿಗೆ ಸೇರುವ ವಿದ್ಯಾರ್ಥಿಗೆ ಶಾಲೆ ಸೇರುವ ಮುನ್ನ ವಿದ್ಯಾ ಪ್ರಕಾಶ್ ಎಂಬ 3 ತಿಂಗಳ ತರಬೇತಿ ನೀಡುವುದು ಮತ್ತೊಂದು ಹಾಸ್ಯಾಸ್ಪದ ವಿಚಾರ. ಉಳಿದಂತೆ ನಿಷ್ಠ, ಸಫಲ್ ಎಂಬ ಹೆಸರನ್ನು ಇಡುವ  ಮೂಲಕ ಮೋದಿ ಅವರು ತಾನು ನೋಮಕರಣ ಪ್ರವೀಣ ಎಂದು ಸಾಬೀತುಪಡಿಸಿದ್ದಾರೆ. ಉನ್ನತ ಶಿಕ್ಷಣ ಅಂತಾರಾಷ್ಟ್ರೀಕರಣ ಎನ್ನುವ ಬಿಜೆಪಿ ನೂತನ ಶಿಕ್ಷಣ ನೀತಿ ಹೆಸರಲ್ಲಿ ಅಮೇರಿಕದ ಶೈಕ್ಷಣಿಕ ವ್ಯವಸ್ಥೆಯನ್ನು ತರಲು ಹೊರಟಿದ್ದಾರೆ. ಇದು ದೇಶಕ್ಕೆ ಮಾರಕ. ಕಾರಣ, ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾದರೆ, ಅಮೆರಿಕದಲ್ಲಿ ಉದ್ಯೋಗ ಪ್ರಧಾನ ರಾಷ್ಟ್ರ. ಹೀಗಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆ ನಮ್ಮ ದೇಶಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಮನಮೋಹನ್ ಸಿಂಗ್ ಅವರ ಸರಕಾರದಲ್ಲಿ ಕೂಡ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತು. ಆಗ ಈ ನೀತಿಯನ್ನು 2 ವರ್ಷಗಳ ಕಾಲ ಸಾರ್ವಜನಿಕವಾಗಿ ಹಾಗೂ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೊಟ್ಟು ನಂತರ ಅದನ್ನು ಜಾರಿಗೊಳಿಸಲಾಗಿತ್ತು. ಅಶಕ್ತರನ್ನು ಶಕ್ತರನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ. ಆದರೆ ಈ ನೂತನ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಕೇವಲ ಶಕ್ತರಿಗೆ ಮಾತ್ರ ಸಿಗುವಂತಾಗಿದೆ. ಇನ್ನು ದೇಶದ ವಿದ್ಯಾರ್ಥಿಗಳನ್ನು ಯಾಕೆ ಆಲೋಚಿಸಬೇಕು ಎಂಬುದರಿಂದ ಹೇಗೆ ಆಲೋಚಿಸಬೇಕು ಎಂದು ಪರಿವರ್ತಿಸುತ್ತೇವೆ ಎನ್ನುವ ಮೋದಿ ಅವರು ಪರೋಕ್ಷವಾಗಿ ವಿದ್ಯಾರ್ಥಿಗಳು ಹೀಗೆಯೇ ಆಲೋಚಿಸಬೇಕು ಎಂದು ನಿರ್ಬಂಧ ಹಾಕುವ ಪ್ರಯತ್ನವಾಗಿದೆ. ಯಾಕೆ ಎಂದು ಆಲೋಚಿಸಲು ಮುಂದಾದಾಗ ವಿದ್ಯಾರ್ಥಿಗಳ ಆಲೋಚನೆ ವಿಸ್ತೃತವಾಗಿ ಬೆಳೆಯುತ್ತದೆ. ಹೇಗೆ ಆಲೋಚಿಸಬೇಕು ಎಂದು ಹೇಳುವ ಮೂಲಕ ಸರಕಾರ ವಿದ್ಯಾರ್ಥಿಗಳು ಹೀಗೆಯೇ ಆಲೋಚಿಸುವಂತೆ ನಿಯಂತ್ರಣಕ್ಕೆ ಮುಂದಾಗಿದೆ. ಇದು ಭಾರತ ಸಂಸ್ಕೃತಿಗೆ ವಿರುದ್ಧವಾದುದು’ ಎಂದು ತಿಳಿಸಿದರು.

ಮೂಲಸೌಕರ್ಯವಿಲ್ಲದೇ ಶಿಕ್ಷಣ ನೀತಿ ಆತುರದ ಜಾರಿ ಯಾಕೆ: ಡಾ.ಮಹೇಶಪ್ಪ

ಡಾ.ಮಹೇಶಪ್ಪ ಮಾತನಾಡಿ ‘ಯಾವುದೇ ರಾಷ್ಟ್ರ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಆ ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ನೀಡಬೇಕು. ಅದೇ ರೀತಿ ಯಾವುದೇ ರಾಷ್ಟ್ರವನ್ನು ಹಾಳು ಮಾಡಬೇಕಾದರೆ, ಆ ದೇಶದ ಜನರಿಗೆ ಸರಿಯಾದ ಶಿಕ್ಷಣ ನೀಡದಂತೆ ಮಾಡಬೇಕು. ಬಹುಶಃ ಕೇಂದ್ರ ಬಿಜೆಪಿ ಸರಕಾರ ಈ ಉದ್ದೇಶದಿಂದಲೇ ಈ ನೂತನ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆಯೇ ಎಂದು ಭಾಸವಾಗುತ್ತಿದೆ. ಈ ಶಿಕ್ಷಣ ನೀತಿ ದೇಶಕ್ಕೆ ಹೇಗೆ ಮಾರಕ ಎಂದರೆ, ಇದರಲ್ಲಿ 5+3+3+4 ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ಹಿಂದೆ ಮಕ್ಕಳ ವಯಸ್ಸು ಹಾಗೂ ಅವರ ಬುದ್ದಿಮಟ್ಟದ ಅನುಗುಣವಾಗಿ ಪ್ರಾಥವಿಕ, ಮಧ್ಯಮ ಹಾಗೂ ಪ್ರೌಢ ಶಿಕ್ಷಣ ಎಂದು ವಿಭಾಗಿಸಲಾಗಿತ್ತು. ಆದರೆ ಈಗ ನರ್ಸರಿ ಹಾಗೂ ಪ್ರೀನರ್ಸರಿಯನ್ನು ಪ್ರಾಥಮಿಕ ಶಿಕ್ಷಣದ ಭಾಗವನ್ನಾಗಿ ಮಾಡಲಾಗಿದೆ. ಅದೇ ರೀತಿ ಪಿಯುಸಿಯನ್ನು ಪ್ರೌಢ ಶಿಕ್ಷಣದ ಭಾಗವನ್ನಾಗಿ ಮಾಡಲಾಗಿದೆ. ಇನ್ನು ಪದವಿಯಲ್ಲಿ 3 ವರ್ಷದ ಬದಲು 4 ವರ್ಷ ಮಾಡಿರುವುದು ಯಾಕೆ?’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಈಗಿರುವ ಸರ್ಕಾರಿ ಶಾಲೆಗಳಲ್ಲೇ ಮೂಲ ಸೌಕರ್ಯಗಳು ಹಾಗೂ ಶಿಕ್ಷಕರು ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇನ್ನು ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ನಮ್ಮ ಶಿಕ್ಷಣ ಸಚಿವರು ತರಾತುರಿಯಲ್ಲಿದ್ದಾರೆ. ಹಾಗಾದರೆ ನಮ್ಮ ಸರಕಾರಿ ಶಾಲೆಗಳಲ್ಲಿ ನರ್ಸರಿ ಹಾಗೂ ಪ್ರೀನರ್ಸರಿ ಮಕ್ಕಳ ತರಬೇತಿಗೆ ತರಗತಿಗಳಾಗಲಿ, ಶಿಕ್ಷಕರಾಗಲಿ ಇದ್ದಾರಾ? ಇಲ್ಲದಿದ್ದರೆ ಈ ಶಿಕ್ಷಣ ನೀತಿಯನ್ನು ಹೇಗೆ ಜಾರಿಗೊಳಿಸುತ್ತಾರೆ? ಇನ್ನು ಪಿಯುಸಿ ಮಾಡಲಾಗದವರು 10ನೇ ತರಗತಿ ಮಾಡಿದ ಮೇಲೆ ಐಟಿಐ, ಡಿಪ್ಲೊಮೋ ಮಾಡುತ್ತಿದ್ದಾರೆ. ಈಗ ಇವುಗಳನ್ನು ಮುಚ್ಚುತ್ತಾರಾ? ಈ ವೃತ್ತಿಪರ ಶಿಕ್ಷಣದ ಅಗತ್ಯ ಏನಿದೆ. ಒಂದಕ್ಕೊಂದು ಸಂಬಂಧವೇ ಇಲ್ಲದ ಈ ಶಿಕ್ಷಣ ನೀತಿ ನಮ್ಮನ್ನು ಇನ್ನು 20  ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಇನ್ನು 10-20 ಕೋಟಿ ಜನರನ್ನು ಬಡವರನ್ನಾಗಿ ಮಾಡುತ್ತದೆ’ ಎಂದರು.

ಇದನ್ನು ಓದಿ: ಪದವಿಯಲ್ಲಿ ನಾಲ್ಕು ವರ್ಷವೂ ಕನ್ನಡ ಇರಲಿ : ಅಧ್ಯಾಪಕರ ಸಂಘದ ಒತ್ತಾಯ

‘ದೇಶದ ಶಿಕ್ಷಣ ನೀತಿ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಬೇಕು. ಆದರೆ ಈ ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗೆ ಯಾವ ರೀತಿ ನೆರವಾಗಲಿದೆ?. ಇನ್ನು ಮಲ್ಟಿಪಲ್ ಎಂಟ್ರಿ, ಎಕ್ಸಿಟ್ ವ್ಯವಸ್ಥೆ ಜಾರಿಗೆ ತಂದಿದೆ. ಈಗ ಸರಿಯಾಗಿ ಮೂರು ವರ್ಷ ಪದವಿ ಮಾಡಿದವರಿಗೆ ಕೆಲಸ ಸಿಗುತ್ತಿಲ್ಲ. ಇನ್ನು ಮೊದಲ ವರ್ಷ ಪದವಿಯನ್ನು ಒಂದು ಬಾರಿ, ಕೆಲ ವರ್ಷಗಳ ನಂತರ ದ್ವಿತೀಯ ವರ್ಷ ಹಾಗೂ ಮತ್ತೆ ಕೆಲವು ವರ್ಷಗಳ ನಂತರ ತೃತೀಯ ವರ್ಷ ಪದವಿ ಮಾಡಿದವರಿಗೆ ಕೆಲಸ ಸಿಗುತ್ತಾ? ಇದು ಯಾವ ರೀತಿ ವ್ಯವಸ್ಥೆ. ಇದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಂಡಿದ್ದಾರಾ? ಓದಲು ಸಾಧ್ಯವಾಗದೇ ಇರುವವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಮುಕ್ತ ವಿಶ್ವವಿದ್ಯಾಲಯಗಳು ಇವೆ. ಆದರೆ, ನೂತನ ಶಿಕ್ಷಣ ನೀತಿಯ ವ್ಯವಸ್ಥೆಗೆ ಅನುಕೂಲವಾಗುವ ಯಾವ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಹೀಗಾಗಿ ತರಾತುರಿಯಲ್ಲಿ ಶಿಕ್ಷಣ ನೀತಿ ಜಾರಿಗೆ ತರುವ ಮುನ್ನ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಳ್ಳಲಿ’ ಎಂದರು.

Donate Janashakthi Media

Leave a Reply

Your email address will not be published. Required fields are marked *