ಬಜೆಟ್ ನಲ್ಲಿ ನಿರ್ಲಕ್ಷ್ಯ : ರಾಜ್ಯವ್ಯಾಪಿ ಅಂಗನವಾಡಿ ನೌಕರರಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು : ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ CITU ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯವ್ಯಾಪಿ ತಾಲ್ಲೂಕು ಕೇಂದ್ರಗಳಲ್ಲಿ ಇಂದು (ಸೋಮವಾರ) ಉಪವಾಸ ಸತ್ಯಾಗ್ರಹ ನಡೆಸಿದರು.

‘ಸೇವಾ ಜೇಷ್ಠತೆಯ ಆಧಾರದಲ್ಲಿ ಗೌರವಧನ ಹೆಚ್ಚಳಕ್ಕಾಗಿ ₹  153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ನೇಮಕಾತಿಗಾಗಿ ₹  6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ₹  131.42 ಕೋಟಿ ಹಾಗೂ ನಿವೃತ್ತಿ ಸೌಲಭ್ಯಕ್ಕಾಗಿ ₹  47.82 ಕೋಟಿ ಸೇರಿದಂತೆ ಒಟ್ಟು ₹ 339.38 ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಇದನ್ನು ಪರಿಗಣಿಸಿಲ್ಲ. ಈ ಹಣ ಬಿಡುಗಡೆ ಮಾಡಿದ್ದರೆ, 1.30 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು’ ಎಂದು ನಿರಶನ ನಿರತರು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘಟನೆಯ ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ ಮಾತನಾಡಿ, ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕೊರೋನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೇ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸ ಒತ್ತಡದಿಂದ 35 ಜನ, ಕೊರೋನಾ ಕೆಲಸ ಮಾಡುವ 28 ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ. 173 ಜನರಿಗೆ ಕೊರೋನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಹೈಕೋರ್ಟ್ ಕೊರೋನಾ ಸಂದರ್ಭದಲ್ಲಿ ಮಕ್ಕಳಿಗೆ – ಮಹಿಳೆಯರ ಅಪೌಷ್ಠಿಕೆಯನ್ನು ತಡೆಯಲು ಎಚ್ಚರಿಕೆಯನ್ನು ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನೆತೆಯನ್ನು ಕಾಪಾಡಿದ್ದು ಇದೇ ಅಂಗನವಾಡಿ ನೌಕರರು. 2016 ರಿಂದ 7304 ಜನ ನಿವೃತ್ತಿಯಾಗಿದ್ದಾರೆ. ಅವರಿಗೆ ಇಡಗಂಟನ್ನು ಕೂಡಾ ಸರ್ಕಾರ ಪರಿಗಣನೆ ಮಾಡಿಲ್ಲ. ಮಾರ್ಚ್ 4 ರಂದು ಅಂಗನವಾಡಿ ನೌಕರರು ಬಜೆಟ್ ಅಧಿವೇಶನ ಚಲೋ ನಡೆಸಿದಾಗ ಸಚಿವೆಬ ಶಶಿಕಲಾ ಜೊಲ್ಲೆಯವರು ಸ್ಥಳಕ್ಕೆ ಆಗಮಿಸಿ ಈ ಬಜೆಟ್‍ನಲ್ಲಿ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಆ ಭರವಸೆಯನ್ನು ಹುಸಿ ಮಾಡಲಾಗಿದೆ ಎಂದು ಆರೋಪಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಮಾತನಾಡಿ, ‘ಕೋವಿಡ್‌ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಪೌಷ್ಟಿಕ ಆಹಾರ ತಲುಪಿಸುವುದನ್ನು ಖಾತ್ರಿ ಪಡಿಸಬೇಕೆಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಘನತೆ ಕಾಪಾಡಿದ್ದು ಅಂಗನವಾಡಿ ನೌಕರರು. ಕೋವಿಡ್‌ ಸಂದರ್ಭದಲ್ಲೂ ಮಲೆನಾಡು, ಗುಡ್ಡಗಾಡು, ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಗ್ರಿಗಳುನ್ನು ಮನೆ ಮನೆಗೆ ಹಂಚಿದ್ದು, ಕ್ವಾರಂಟೈನ್‌ ಆದವರಿಗೆ ಮಾಸ್ಕ್‌, ಸ್ಯಾನಿಟೈಸರ್‌, ಮಾತ್ರೆಗಳನ್ನು ತಮ್ಮ ಸ್ವಂತ ಖರ್ಚಿನಿಂದ ಪೂರೈಸಿದ್ದಾರೆ. ಸಾರ್ವಜನಿಕರಿಂದ ಹಲ್ಲೆಗಳೊಗಾದರೂ ಎದೆಗುಂದದೆ ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಸರ್ಕಾರ ಅಂಗನವಾಡಿ ನೌಕರರಿಗೆ ಬಜೆಟ್‌ನಲ್ಲಿ ಅನುಕೂಲ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.

ವಿವಿಧ ಕೆಲಸಗಳ ಬಹಿಷ್ಕಾರ: ‘ಸೇವಾ ಜ್ಯೇಷ್ಠತೆ ಆಧಾರದಲ್ಲಿ ಗೌರವ ಧನ ಹೆಚ್ಚಳ, ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ನೇಮಕ, ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ಹಾಗೂ ನಿವೃತ್ತಿ ಸೌಲಭ್ಯ ನೀಡುವವರೆಗೆ ಹೆಚ್ಚುವರಿ ಕೆಲಸಗಳಾದ ಇ–ಸರ್ವೆ, ಆರ್‌ಡಿಪಿಆರ್‌ ನಿಂದ ಕೊಟ್ಟಿರುವ ಸರ್ವೆ, ಬಿಪಿಎಲ್‌ ಕಾರ್ಡ್‌ ಆರ್‌ಸಿಎಚ್‌ ಸರ್ವೆ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಕೆಲಸಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ ಎಂದು ಕೊಪ್ಪದ ಶಿಕ್ಷಕಿ ಆಶಾ ಸಾಲಿಯಾನ್ ತಿಳಿಸಿದ್ದಾರೆ.

ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯನರನ್ನು ನೀಡುವವರೆಗೆ ಅಡುಗೆ ಮಾಡುವುದಿಲ್ಲ’ ಎಂದು ಗಂಗಾತಿಯ ಅಂಗನವಾಡಿ ಶಿಕ್ಷಕಿ ದುರ್ಗಾ ರವರು ತಿಳಿಸಿದ್ದಾರೆ.

100 ಕ್ಕೂ ಹೆಚ್ಚು ತಾಲ್ಲೂಕ ಕೇಂದ್ರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಅಂಗನವಾಡಿ ಶಿಕ್ಷಕರು ಮತ್ತು ಕಾರ್ಯಕರ್ತೆಯವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ ಎಂದು ರಾಜ್ಯ ಮುಖಂಡರಾದ ಟಿ.ಲೀಲಾವತಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *