1931 ಮಾರ್ಚ 22 ರಂದು ಎರಡನೆಯ ಲಾಹೋರ್ ಪಿತೂರಿ ಪ್ರಕರಣದ ಅಪರಾಧಿಗಳನ್ನು ಜೈಲಿನ ಗುಜರಿ ಕೋಣೆಯ ಪಕ್ಕದ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಅವರು ಅವತ್ತು ತಮ್ಮ ಸೆಲ್ನಿಂದ ಭಗತ್ಸಿಂಗ್ ಬಳಿಗೆ ಒಂದು ಚೀಟಿ ಕಳಿಸಿ ನಿನಗೆ ಬದುಕುವ ಆಸೆಯಿಲ್ಲವೇ? ಎಂದು ಕೇಳಿದರು ಅದಕ್ಕೆ ಭಗತ್ ಸಿಂಗ್ ಉತ್ತರಿಸಿದ್ದು ಹೀಗೆ. ಗಲ್ಲಿ
ಕಾಮ್ರೇಡ್ಸ್, ಬದುಕುವ ಆಸೆ ಸಹಜವಾದದ್ದು. ಅದು ನನ್ನಲ್ಲೂ ಇದೆ. ನಾನದನ್ನು ಮುಚ್ಚಿಟ್ಟುಕೊಳ್ಳಬಯಸುವುದಿಲ್ಲ. ಆದರೆ ಆ ಹಂಬಲ ಷರತ್ತುಬದ್ಧ. ನಾನು ಬಂಧಿಯಾಗಿ ನಿರ್ಬಂಧಗಳ ನಡುವೆ ಬದುಕಲು ಇಚ್ಛಿಸುವುದಿಲ್ಲ. ನನ್ನ ಹೆಸರು ಈಗ ಭಾರತದ ಕ್ರಾಂತಿಯ ಸಂಕೇತವಾಗಿದೆ. ಕ್ರಾಂತಿಯ ಪಕ್ಷದ ಆದರ್ಶ ಮತ್ತು ತ್ಯಾಗಗಳು ನನ್ನನ್ನು ಯಾವ ಎತ್ತರಕ್ಕೆ ಏರಿಸಿವೆಯೆಂದರೆ ಬದುಕಿದರೆ ನಾನು ಅದಕ್ಕಿಂತ ಎತ್ತರಕ್ಕೆ ಏರಲು ಸಾಧ್ಯವಾಗದೇ ಹೋಗಬಹುದು.
ಇವತ್ತು ಜನರಿಗೆ ನನ್ನ ದೌರ್ಬಲ್ಯಗಳ ಅರಿವಿಲ್ಲ. ನಾನು ರಣದಂಡನೆ ತಪ್ಪಿಸಿಕೊಂಡು ಬದುಕಿದರೆ ಆ ದೌರ್ಬಲ್ಯಗಳು ಅವರೆದುರು ಕಾಣಬಹುದು. ಆಗ ಕ್ರಾಂತಿಯ ಸಂಕೇತ ಮಸುಕಾಗುತ್ತದೆ. ಅಥವಾ ಖಾಯಮ್ಮಾಗಿ ಮರೆಯಾಗುತ್ತದೆ. ಅದರ ಬದಲು ನಾನೇನಾದರೂ ನಗುನಗುತ್ತ ಗಲ್ಲಿಗೇರಿದರೆ ಭಾರತದ ಅಮ್ಮಂದಿರಿಗೆ ಅದು ಸ್ಪೂರ್ತಿಯಾಗಿ ತಮ್ಮ ಮಗನೂ ಭಗತನಂತಾಗಲಿ ಎಂದು ಅವರು ಹಾರೈಸುತ್ತಾರೆ.
ಇದನ್ನೂ ಓದಿ: ಭಗತ್ ಸಿಂಗ್: ಕಾಲದ ಹಣೆಯ ಮೇಲೆ ಹೊಳೆಯುವ ಸಿಂಧೂರ
ಆಗ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಕ್ಕೂ ಸಿದ್ಧರಾಗಿರುವವರ ದೊಡ್ಡ ಪಡೆ ಬೆಳೆಯುತ್ತದೆ. ಆಗ ಸಾಮ್ರಾಜ್ಯಶಾಹಿಗಳಿಗೆ ಕ್ರಾಂತಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅವರ ಎಲ್ಲ ಶಕ್ತಿ ಮತ್ತು ಸೈತಾನೀ ಪ್ರಯತ್ನಗಳ ಹೊರತಾಗಿಯೂ ಕ್ರಾಂತಿಯನ್ನು ನಿಲ್ಲಿಸಲು ಆಗುವುದಿಲ್ಲ.
ಹೌದು, ಒಂದು ವಿಷಯ ಇವತ್ತಿಗೂ ನನ್ನನ್ನು ಕೊರೆಯುತ್ತಿದೆ. ನನ್ನ ದೇಶಕ್ಕೆ, ಮನು ಕುಲಕ್ಕೆ ಏನಾದರೂ ಉಪಯೋಗವಾಗುವಂಥದನ್ನು ಮಾಡಬೇಕೆಂಬ ಮಹತ್ವಾಕಾಂಕ್ಷೆ ನನ್ನೆದೆಯಲ್ಲಿತ್ತು. ಆದರೆ ನನ್ನ ಹಂಬಲದ ಸಾವಿರದ ಒಂದು ಪಾಲನ್ನೂ ಸಾಧಿಸಲಾಗಲಿಲ್ಲ. ಬದುಕಿದರೆ ಬಹುಶಃ ಅವನ್ನು ಪೂರೈಸಲು ಅವಕಾಶ ಸಿಗಬಹುದು. ಅಕಾಸ್ಮಾತ್ ನನ್ನ ಮನಸಿನಲ್ಲಿ ಬದುಕುಳಿಯುವ ಹಂಬಲ ಬಂದರೂ ಅದು ಕೇವಲ ಈ ಕಾರಣಕ್ಕಾಗಿಯೇ ಆಗಿರುತ್ತದೆ.
ಇತ್ತಿಚೀನ ದಿನಗಳಲ್ಲಿ ನನ್ನ ಬಗ್ಗೆ ಹೆಮ್ಮೆಯಾಗುತ್ತಿದೆ. ಅಂತಿಮ ಪರೀಕ್ಷೆಯ ಕ್ಷಣಗಳಿಗಾಗಿ ಉದ್ವೇಗದಿಂದ ಎದುರು ನೋಡುತ್ತಿದ್ದೇನೆ. ಆ ದಿನ ಬೇಗ ಬರಲಿ ಎಂದು ಹಾರೈಸುತ್ತೇನೆ ಎಂದು ಭಗತ್ ಸಿಂಗ್ ಉತ್ತರಿಸಿದ್ದರು..
ಹೀಗೆ ಸಾಯುವ ಹೊತ್ತಿಗೂ ಶಿಕ್ಷೆ ಮಾಫಿಯಾಗಲೂ, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಾಗಲಿ ಯೋಚಿಸದೆ ಭಗತ್ ಸಾವಿನ ಕ್ಷಣಗಳನ್ನು ಎದುರುಗೊಳ್ಳಲು ಧೈರ್ಯದಿಂದ ಸಿದ್ಧತೆ ನಡೆಸಿದ್ದಾಗ ಮಾರ್ಚ 24, 1931 ರಂದು ಬೆಳಗಿನ ಜಾವ ಗಲ್ಲಿಗೇರಿಸುವುದೆಂದು ತೀರ್ಮಾನವಾಯಿತು. ಅಂದು ನೌಜವಾನ್ ಸಭಾ ಲಾಹೋರಿನಲ್ಲಿ ದೊಡ್ಡ ಮೆರವಣಿಗೆ ಏರ್ಪಡಿಸಿತ್ತು. ಆದರೆ ಮೆರವಣಿಗೆ ಜೈಲಿನೆಡೆಗೆ ಬಂದರೆ ನಿಯಂತ್ರಣ ಕಷ್ಟ ಎಂದು ಹೆದರಿದ ಬ್ರಿಟಿಷ್ ಸರ್ಕಾರ 23 ಮಾರ್ಚ 1931 ರಾತ್ರಿ 7:30ಕ್ಕೆ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಗಲ್ಲಿಗೇರಿಸಿತು.
(ಭಗತ್ಸಿಂಗ್ ಜೈಲ್ ಡೈರಿ ಪುಸ್ತಕದಿಂದ, ಸಂ:ಚಮನ್ಲಾಲ್)
ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media