ಹಾಸನ: ಜಾಗತಿಕ ತಾಪಮಾನ ಏರಿಕೆ ಅದರಿಂದ ಉಂಟಾದ ಹವಾಮಾನ ಬದಲಾವಣೆಯೆ ಈ ಸಂದರ್ಭದ ಜಾಗತಿಕ ಪರಿಸರ ತುರ್ತುಪರಿಸ್ಥಿತಿ, ಈ ಹವಾಮಾನ ಬದಲಾವಣೆಯ ಮೊದಲ ತಲದಂಡವೇ ರೈತ ಸಮುದಾಯ, ಅವರ ಬದುಕು ಮತ್ತು ಕೃಷಿ ಎಂದು ದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಜೇಗೌಡ ತಿಳಿಸಿದರು.
ಅವರು ಇತ್ತೀಚೆಗೆ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿಯು ಎರೆಡು ದಿನಗಳ ಕಾಲ ಆಯೋಜಿಸಿದ್ದ ‘ವೈಜ್ಞಾನಿಕ ನಾಯಕತ್ವ ವ್ಯಕ್ತಿತ್ವ ವಿಕಸನ’ ಸನಿವಾಸ ಶಿಬಿರದ ಉದ್ಘಾಟನೆ ಮಾಡಿ ಪರಿಸರ ಮತ್ತು ಬದುಕು ಕುರಿತು ಮಾತನಾಡುತ್ತಿದ್ದರು.
ಕಾಫಿ ಏಲಕ್ಕಿಗಳಿಗೆ ಉಷ್ಣತೆ 29ಡಿಗ್ರಿಗಿಂತ ಹೆಚ್ಚಾದರೆ ಅವು ಹಾಳಾಗುತ್ತದೆ, ಹಾಸನ ಜಿಲ್ಲೆಯ ಪ್ರಮುಖ ಬೆಳೆ ತೆಂಗು ಇದರ ಉಷ್ಣತೆ 45ಡಿಗ್ರಿಗಿಂತ ಹೆಚ್ಚಾದರೆ ಹೂವೇ ನಿಲ್ಲುವುದಿಲ್ಲ ಹಾಗಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ತೆಂಗು ಬೆಳೆಯಲಾಗುವುದಿಲ್ಲ, ರಾಗಿ, ತರಕಾರಿಗಳೂ ಕೂಡ 40ಡಿಗ್ರಿ ಉಷ್ಣಾಂಶ ದಾಟಿದರೆ ಕುಡಿಯೊಡೆಯುವುದೇ ಇಲ್ಲ. ಈಗಿನ ಭೂತಾಪಮಾನ ಮಲೆನಾಡಿನಲ್ಲೂ 40ಡಿಗ್ರಿ ದಾಟಿಮುಂದೆ ಹೋಗುತ್ತಿದೆ. ಇನ್ನು ಆಹಾರಬೆಳೆಗಳು ಬೆಳೆಯಲು ಹೇಗೆ ಸಾಧ್ಯ? ಕೃಷಿ ಸಮುದಾಯ ಬದುಕಲು ಹೇಗೆ ಸಾಧ್ಯ? ಮಾನವ ಕುಲದ ಆಹಾರ ಉತ್ಪತ್ತಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿ ಜಾಗತಿಕವಾಗಿ ಆಹಾರದ ಬಿಕ್ಕಟ್ಟು, ಕುಡಿವ ನೀರಿನ ಹಾಹಾಕಾರ ಈಗಾಗಲೇ ಭುಗಿಲೇಳುತಿದೆ, ದುಡಿವ ಜನರ ಬದುಕು ಈ ತಾಪಮಾನ ಏರಿಕೆಯ ಪರಿಣಾಮದಿಂದ ತತ್ತರಿಸಿಹೋಗುತ್ತಿದೆ ಎಂದು ಅಂಕಿ-ಅಂಶ ಸಮೇತ ವಿವರಿಸಿದರು.
ಇದನ್ನೆಲ್ಲಾ ನಿಯಂತ್ರಿಸಿ ಭೂಮಿಯನ್ನು ದುಡಿವ ಜನರ ಯೋಗ್ಯಕ್ಕೆ ಅವಕಾಶ ಕಲ್ಪಿಸಿಕೊಡಬೇಕಾದದ್ದು ರಾಜಕೀಯ ವ್ಯವಸ್ಥೆಯದ್ದು, ನೀತಿ ನಿರೂಪಣೆ ಮಾಡುವವರು ಸಂಸದರು, ಶಾಸಕರು ಆಗಿರುವುದರಿಂದ ಅವರಿಗೆ ಜ್ಞಾನವಿರಬೇಕು ಹಾಗೂ ಮುಂದಿನ ನೂರುವರ್ಷಗಳ ಕಣ್ಣೋಟವಿರಬೇಕು. ದುರದೃಷ್ಠವಶಾತ್ ನಮ್ಮ ಸಂಸತ್ತಿನಲ್ಲಿ ಕನಸುಗಳೇ ಇಲ್ಲದ, ಭವಿಷ್ಯದ ಕಣ್ಣೋಟವೇ ಇಲ್ಲದ ಜನರು ತುಂಬಿಹೋಗಿರುವುದರಿಂದ ಇದನ್ನೆಲ್ಲ ನಿರೀಕ್ಷಿಸುವುದು ಕಷ್ಠವಾಗಿದೆ ಎಂದು ವಿಷಾದಿಸಿದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಅಭಿವೃದ್ದಿ ಜೊತೆ ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಮಾಡಿ – ಮಲ್ಲಿಕಾರ್ಜುನ ಖರ್ಗೆ
ಜನತೆಯೇ ಈ ಅರಿವನ್ನು ಅವರಿಗೆ ನೀಡಬೇಕು ಹಾಗಾಗಿ ಬಿಜಿವಿಎಸ್ ನಂತಹ ಸಂಸ್ಥೆಗಳು ಜನತೆಗೆ ಪರಿಸರ ಪಾಠವನ್ನು ಸರಳವಾಗಿ ವಿವರಿಸಬೇಕು. ಎಂದು ತಿಳಿಸಿ ಮೊದಲಿಗೆ ಎಲ್ಲೆಂದರಲ್ಲಿ ಬೆಂಕಿ ಹಾಕುವ, ಕಸತಂದು ನೈರ್ಮಲ್ಯ ಹಾಳುಮಾಡಿ ಖಾಯಿಲೆಗೆ ತಾವೇ ತುತ್ತಾಗುವ ಅರಿವು ಮೂಡಿಸಬೇಕು, ಆಮೂಲಕ ದೊಡ್ಡಪ್ರಮಾಣದ ಬದಲಾವಣೆಗೆ ನಮ್ಮ ಆಳರಸರನ್ನ ಎಚ್ಚರಿಸುವ ಆಂದೋಲನ ನಡೆಸುವ ನೈತಿಕ ಸ್ಥರ್ಯನೀಡಬೇಕು ಎಂದು ಆಶಿಸಿದರು.
ಭಾರತದ ವೈವಿಧ್ಯತೆ, ಭಾರತದ ಸಾಂಸ್ಕೃತಿಕತೆ, ಭಾರತದ ಪರಿಸರ ಸಂಪತ್ತನ್ನು ಜನರಿಗೆ ಅರ್ಥಮಾಡಿಸಿ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜಿವಿಎಸ್ ತನ್ನ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ ಜನರ ನಡುವೆ ಬಹಳ ವರ್ಷಗಳಿಂದ ಕೆಲಸಮಾಡುತ್ತಿರುವುದು ಸ್ಮರಣಿಯ ಎಂದು ಸಮಿತಿಯ ಕೆಲಸವನ್ನು ಅಭಿನಂದಿಸಿದರು.
ಶಿಬಿರದ ನಿರ್ದೇಶಕರಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜಿವಿಎಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ, ಭಾರತದ ಸಂವಿಧಾನ ವೈಜ್ಞಾನಿಕ ಮನೋಭಾವ ಮೂಡಿಸಿಕೊಳ್ಳುವುದು ಮತ್ತು ಮೂಡಿಸುವುದು ನಾಗರೀಕರ ಕರ್ತವ್ಯ ಎಂದಿದೆ ಆ ಕರ್ತವ್ಯವನ್ನು ಜನರಲ್ಲಿ ಜಾಗೃತಗೊಳಿಸಲು ಸೂಕ್ತ ಕಾರ್ಯಕ್ರಮ, ಸಂವಾದ ತಂತ್ರ, ಹಾಗೂ ಪರಿಕರಗಳನ್ನು ರೂಪಿಸಿಕೊಳ್ಳುವುದು ಅಗತ್ಯವಿದೆ.
ಈ ನಿಟ್ಟಿನಲ್ಲಿ ತಮ್ಮೆಲ್ಲಾ ವೈಯುಕ್ತಿಕ ಕೆಲಸದ ಜೊತೆ ಸಾಮಾಜಿಕ ಬದ್ಧತೆ ಮೂಡಿಸಿಕೊಂಡು ಯಾವುದೇ ಆರ್ಥಿಕ ಪ್ರತಿಫಲಾಪೇಕ್ಷೆ ಇಲ್ಲದೆ ನೂರಾರು ಜನ ಬಿಜಿವಿಎಸ್ ನೊಂದಿಗೆ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ ಅವರಲ್ಲಿ ವೈಜ್ಞಾನಿಕ ನಾಯಕತ್ವದ ವೈಕ್ತಿತ್ವ ವಿಕಸನ ನಡೆಸುವುದು ಭಾರತದ ಭವಿಷ್ಯದ ದೃಷ್ಠಿಯಿಂದ ಅತ್ಯವಶ್ಯಕ ಎಂದು ತಿಳಿದು ಈ ಶಿಬಿರ ಆಯೋಜಿಸಲಾಗಿದೆ, ಈ ಶಿಬಿರಲ್ಲಿ ಪರಿಸರ ವಿಪ್ಲವಗಳು, ಶೈಕ್ಷಣಿಕ ಸ್ಥಿಗತಿಗಳು, ಜನರ ಸಾಂಸಕೃತಿಕ ಮಾಲ್ಯಗಳ ಅರಿವು ಇವುಗಳನ್ನು ಅರ್ಥಮಾಡಿಕೊಂಡು ತಿಳಿಸುವುದು ಹೇಗೆ ಎಂಬ ತರಬೇತಿ ನೀಡಲಾಗುವುದು ಎಂದು ನುಡಿದರು.
ಶಿಬಿರಕ್ಕೆ ಸರ್ವರನ್ನು ಸ್ವಾಗತಿಸಿ ಶಿಬಿರದ ನಿಯಮಗಳನ್ನು ಶಿಬಿರ ಸಂಚಾಲಕ ಎಚ್.ಆರ್.ರವೀಶ್ ನಿರ್ವಹಿಸಿದರು.
ನಂತರದ ಅವಧಿಯಲ್ಲಿ ಜನವಿಜ್ಞಾನ ಚಳುವಳಿಯ ಇತಿಹಾಸ ಹಾಗೂ ಅದರ ಅವಶ್ಯಕತೆ ಕುರಿತು ಪಿಪಿಟಿ ಸಂವಾದ ನಡೆಸಿದ ಬಿಜಿವಿಎಸ್ ಮಾಜಿ ಕಾರ್ಯದರ್ಶಿ ಹಾಗೂ ಕಾರ್ಮಿಕ ಮುಖಂಡ ಧರ್ಮೇಶ್ ವಿಜ್ಞಾನ ಎಂದರೆ ನಮ್ಮ ಸುತ್ತಲಿನ ಪ್ರಪಂಚದ ಕುರಿತು ಜ್ಞಾನವನ್ನು ಪಡೆಯಲು ಮತ್ತು ಅದನ್ನು ಸುಸಂಘಟಿಸಲು ಬಳಸುವ ಒಂದು ವ್ಯವಸ್ಥಿತ ವಿಧಾನ. ಇದು ಅವಲೋಕನ, ಪ್ರಯೋಗ ಮತ್ತು ತರ್ಕಬದ್ಧ ಚಿಂತನೆಯ ಆಧಾರದ ಮೇಲೆ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ ಎಂದರು.
ವಿಜ್ಞಾನ ಎನ್ನುವುದು ಈ ಭೂಮಿ ಹೇಗೆ ಹುಟ್ಟಿತು ಎಂಬ ವಾದಗಳ ನಡುವೆ ನಿರಂತರವಾಗಿ ನಡೆಯುತ್ತಾ ಬಂದ ಸಂಘರ್ಷ ಸತ್ಯದ ಹುಡುಕಾಟದಲ್ಲಿ ಕಂಡುಕೊಂಡ ಸತ್ಯ ಎಂದರು. ವಿಜ್ಞಾನದ ವಿಕಾಸ ಮಾನವನ ವಿಕಾಸದೊಂದಿಗೇ ನಡೆಯಿತು ಎಂದು ವಿವರಿಸಿ. ವಿಜ್ಞಾನದ ವಿಕಾಸ ಹಾಗೂ ಬೆಳವಣಿಗೆಯನ್ನು ಮಾನವ ಸಮಾಜ ಬೆಳೆದು ಬಂದ ನಾಲ್ಕು ಪ್ರಮುಖ ಸ್ಥರಗಳ ಬೆಳವಣಿಗೆಯ ಜೊತೆ ನೋಡಬೇಕು. ಇತಿಹಾಸ ಪೂರ್ವದಲ್ಲಿ, ಗುಲಾಮಿ ವ್ಯವಸ್ಥೆಯಲ್ಲಿ, ಊಳಿಗಮಾನ ವ್ಯವಸ್ಥೆಯಲ್ಲಿ, ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಜ್ಞಾನ ಹೇಗೆ ವಿಕಾಸವಾಗಿ ಬಂದಿದೆ ಎಂದು ವ್ಯವಸ್ಥಿತವಾಗಿ ವಿವರಿಸಿದರು.
ವಿಜ್ಞಾನದ ವಿಕಾಸ ಪ್ರಜಾಫ್ರಭುತ್ವ ಎಂಬ ಜನತಂತ್ರವನ್ನು ಕಡೆದು ನಿಲ್ಲಿಸಿದೆ ಆ ಪರಿಣಾಮವಾಗಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷ ತತ್ವಗಳು ನಮ್ಮನಡುವೆ ಗಟ್ಟಿ ಸಾಮಾಜಿಕ ಪ್ರಗತಿಯ ದನಿಗಳಾಗಿವೆ ಎಂದ ಅವರು ಜನರ ನಡುವೆ ವೈಜ್ಞಾನಿಕ ಚಿಂತನೆಯನ್ನು ಬಿತ್ತಿ ವಿಜ್ಞಾನ ಮತ್ತು ತಂತ್ರಜ್ಞಾನದ ಫಲಶೃತಿಯನ್ನು ಮಾನವಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಬಳಸುವ ಜಾಗೃತಿ ಮೂಡಿಸಲು ಭಾರತದಲ್ಲಿ ಹಲವಾರು ವಿಜ್ಞಾನ ಸಂಘಟನೆಗಳು, ವಿಜ್ಞಾನಿಗಳು ಹಾಗೂ ಸಾಮಾಜಿಕ ಚಿಂತಕರು ನಡೆಸುತ್ತಿದ್ದರು. ಆದರೆ ವಿಜ್ಞಾನವನ್ನು ಒಂದು ಜನಚಳುವಳಿಯಾಗಿ ರೂಪಿಸಿದ್ದು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು ಎಂದು ವಿವರಿಸಿ ಅದು ದೇಶದ ಎಲ್ಲ ವಿಜ್ಞಾನ ಸಂಘಟನೆಗಳನ್ನು, ವಿಜ್ಞಾನಾಸಕ್ತರನ್ನು ಒಂದು ವೇದಿಕೆಯಡಿ ಆಣಿನೆರಸಿ ಜನವಿಜ್ಞಾನ ಚಳುವಳಿಗೆಳ ಜಾಲಾ ನಿರ್ಮಿಸಿ ರಾಷ್ಟೀಯ ಸಾಕ್ಷರತಾ ಆಂದೋಲನಕ್ಕೆ ನಾಂದಿ ಹಾಡಿತು. ಆ ಸಾಕ್ಷರತಾ ಆಂದೋಲನದ ಕೂಸೆ ಭಾರತ ಜ್ಞಾನ ವಿಜ್ಞಾನ ಸಮಿತಿ ಎಂದರು.
ಬಿಜಿವಿಎಸ್ ಧ್ಯೇಯ ಹಾಗೂ ಗುರಿಗಳ ಕುರಿತು ವಿವರಿಸಿದ ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಟಿ.ಎ.ಪ್ರಶಾಂತಬಾಬು 1989-93ರವರೆಗೆ ಬಿಜಿವಿಎಸ್ ಮೊದಲಹಂತದಲ್ಲಿ “ರಾಷ್ಟಿçÃಯ ಭಾವೈಕ್ಯತೆ ಹಾಗೂ ಸ್ವಾವಲಂಬನೆಗಾಗಿ ಸಾಕ್ಷರತೆ ಮತ್ತು ವಿಜ್ಞಾನ” ಘೋಷಣೆಯೋದಿಗೆ, 333ಜಿಲ್ಲೆ, 4ಲಕ್ಷ ಹಳ್ಳಿ, 29039 ಕೇಂದ್ರಗಳಲ್ಲಿ 721 ದೊಡ್ಡ ಜಾಥಾ & 1502 ಚಿಕ್ಕ ಚಿಕ್ಕ ಜಾಥಾಗಳ ಮೂಲಕಸಂಪೂರ್ಣ ಸಾಕ್ಷರತೆಯ ಆಂದೋಲನಕ್ಕೆ ನುಗ್ಗಿತು. 1993ರಲ್ಲಿ ಸಾಕ್ಷರಗೊಂಡ ಮಹಿಳಾ ಬಲವರ್ಧನೆಗೆ ಸಮತ ಜಾಥಾ ಕೈಗೊಂಡು ಸಂವಿದಾನದ ಕರ್ತವ್ಯಗಳ 51 ಎ(ಇ)ಯನ್ನು ಗಟ್ಟಿಗೊಳಿಸಲು ಮಹಿಳೆ ಮತ್ತು ಪ್ರಜಾಪ್ರಭುತ್ವದ ಆಯಾಮಗಳನ್ನು ಮಹಿಳೆಯೊಂದಿಗೆ ಸಂವಾದಿಸಹತ್ತಿತು.
1994 ರಿಂದ 97, ಎರಡನೆ ಹಂತದಲ್ಲಿ “ಜನತೆಗಾಗಿ ವಿಜ್ಞಾನ ಪ್ರಗತಿಗಾಗಿ ವಿಜ್ಞಾನ ಶಾಂತಿಗಾಗಿ ವಿಜ್ಞಾನ” ಧ್ಯೆಯ ಇಟ್ಟು ಸಾಕ್ಷರತೆಯಿಂದ ಅಭಿವೃದ್ಧಿಯೆಡಗೆ ಘೋಷಣೆ ಹೊತ್ತು ಮುನ್ನಡೆಯಿತು ಈ ವೇಳೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಲವರ್ಧನೆಗಾಗಿ ಬಾಲಮೇಳ, ಚಿಣ್ಣರ ಮೇಳಗಳನ್ನು, ಸೈಕಲ್ ಜಾಥಾ, ರಿಸರ್ಸ್ ಮ್ಯಾಪಿಂಗ್, ಪಂಚಾಯತ್ ರಾಜ್, ದೇಶ ತಿಳಿ-ದೇಶ ಬದಲಿಸು, ಖಗೋಳ-ಪರಿಸರ-ಆರೋಗ್ಯಗಳ ಜ್ಞಾನೋತ್ಸವ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಇಲಾಖೆಗಳ ಜೊತೆ ಆಯೋಜಿಸಲಾಯಿತು.
1998 ರಿಂದ 2004ರವರೆಗೆ ಮೂರನೆ ಹಂತದಲ್ಲಿ ಅಭಿವೃದ್ದಿಯಿಂದ ನಿರಂತರತೆಯೆಡಗೆ ಘೋಷಣೆಯೊಂದಿಗೆ “ನಿಸರ್ಗ, ಸಮಾಜ, ವಿಜ್ಞಾನ” ಮಾನವನ ಅಬ್ಯುದಯಕ್ಕಾಗಿ ಬಲಗೊಳ್ಳಬೇಕು ಧೈಯವನ್ನಿಟ್ಟು, ಜನಾರೋಗ್ಯ, ಮಹಿಳಾ ಸಬಲೀಕರಣ, ನಿರಂತರ ಶಿಕ್ಷಣ, ಜನವಾಚನ ಆಂದೋಲನಗಳನ್ನು ಯಶಸ್ವಿಯಾಗಿ ನಡೆಸಿದೆ. ಹಾಗೂ 2004ರಿಂದ 4ನೆ ಹಂತದಲ್ಲಿ ನಿರಂತರತೆಯಿಂದ ಸ್ವಾವಲಂಬನೆಯೆಡೆಗೆ ಗುರಿ “ಸಮಾಜ ಬದಲಾವಣೆಗಾಗಿ ವಿಜ್ಞಾನ” ಧ್ಯೆಯ ಇಟ್ಟುಕೊಂಡು ಕಾನೂನುಗಳನ್ನು ಬಲಪಡಿಸುವ ಕೆಲಸದಲ್ಲಿ ಜನರನ್ನು ಪಾಲ್ಗೊಳಿಸುವ ಮಹತ್ತರ ಕೆಲಸಕ್ಕೆ ಕೈಹಾಕಿತು.
ಹಕ್ಕುಗಳ ರಕ್ಷಣೆ & ಅಡ್ವೋಕೆಸಿ, ಸ್ವಸಹಾಯ ಸಂಘಗಳ ಬಲವರ್ಧನೆ, RTI, RTE, PCPNDT, ಯಂತಹ ಮಸೂದೆಗಳನ್ನು ಜನಪರ ಮತ್ತು ಜನಪ್ರಿಯ ಗೊಳಿಸವ ಕೆಲಸ, ಸಾಕ್ಷರ ಭಾರತ್, ಹವಾಮಾನ ಬದಲಾವಣೆ & ಪರಿಸರ ಸಂರಕ್ಷಣೆಯ ಅರಿವು ಮತ್ತು ನಿಯಮ ನಿರೂಪಣೆಯಲ್ಲಿ ಮಧ್ಯಪ್ರವೇಶಿಕೆಯ ಜವಾಬ್ದಾರಿ ಹೊತ್ತು ನಡೆದಿದೆ ಎಂದು ವಿವರಿಸಿದ ಅವರು ಈಗ ನವ ಉದಾರವಾದಿ ಕಾಲ., ಪುನಃ ಹಳೆಯ ನಂಬಿಕೆಗಳು ಮೇಲುಗೈ ಪಡೆಯುತ್ತಿರುವ ಕಾಲ. ಅದೇ ಸಂದರ್ಬದಲ್ಲಿ ಹೊಸ ಮಾದರಿಯ ನವ ಉದಾರವಾದಿ ಶಿಕ್ಷಣ ಕಲಿತವರನ್ನ ಕಟ್ಟುವ ಕೆಲಸದಿಂದ ಹೆಚ್ಚೆಚ್ಚು ವಿಮುಖರನ್ನಾಗಿಸುತ್ತಿರುವ ಕಾಲವೂ ಹೌದು. ಈ ಸಂದರ್ಬದಲ್ಲಿ ಭಾರತದ ಪ್ರಜಾಪ್ರಭುತ್ವ ರಕ್ಷಿಸಿ – ವಿಜ್ಞಾನ ಭಾರತ ಕಟ್ಟಲು ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ ಎಂದರು.
ನಂತರ ಬಿಜಿವಿಎಸ್ ಸಂವಿಧಾನ ಹಾಗೂ ನಾಯಕತ್ವದ ಕುರಿತು ತರಬೇತಿ ನೀಡಿದ ಬಿಜಿವಿಎಸ್ ಸದಸ್ಯ ಅಹಮದ್ ಹಗರೆ “ಭಾರತವನ್ನು ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಮುಕ್ತಗೊಳಿಸಿ ವೈಜ್ಞಾನಿಕ ಮತ್ತು ವೈಚಾರಿಕ ಭಾರತ ಕಟ್ಟುವುದು.” ಭಾರತ ಜ್ಞಾನ ವಿಜ್ಞಾನ ಸಮಿತಿಯ ಗುರಿ ಆಗಿದೆ ಆ ಗುರಿ ಸಾಧಿಸಲು ರಾಷ್ಟೀಯ ಭಾವೈಕ್ಯತೆ ಮತ್ತು ಸ್ವಾವಲಂಬನೆಗಾಗಿ ವಿಜ್ಞಾನ ಮತ್ತು ಸಾಕ್ಷರತೆ ಎಂಬ ಘೋಷಣೆ ಹೊತ್ತು ಜನರಲ್ಲಿ ಪ್ರಜಾಸತ್ತಾತ್ಮಕ ಹಾಗೂ ಜಾತ್ಯಾತೀತ ಮನೋಧರ್ಮವನ್ನು ವೈಚಾರಿಕ ತಳಹದಿ ಹಾಗೂ ವೈಜ್ಞಾನಿಕ ಮಾರ್ಗದಡಿ ಜನತೆಯಲ್ಲಿ ಜಾಗೃತಿಗೊಳಿಸುವ ಧೈಯದೊಂದಿಗೆ ಕಾರ್ಯಕ್ರಗಳನ್ನು ನಡೆಸುವ ಮೂಲಕ ಗುರುಸಾಧಿಸಲು ಸಂಘಟನೆ, ಸಮಿತಿ, ಸಭೆಗಳು, ನಾಯಕತ್ವ, ಕಾರ್ಯಕ್ರಮ, ಕ್ರಿಯಾಯೋಜನೆ ಕ್ರಮಬದ್ಧವಾಗಿ ನಡೆಸಿ ಜನರನ್ನು ಪಾಲ್ಗೊಳಿಸಲು ಸಂಘಟನೆಗೆ ಸಂವಿಧಾನದ ಅಗತ್ಯವಿದೆ ಮಾತ್ರವಲ್ಲ ನಮ್ಮನ್ನು ಕ್ರಿಯಾ ಶಿಸ್ತಿಗೆ ಒಳಪಡಿಸಲು, ನಮ್ಮ ಬದುಕಿಗೆ ಒಂದು ಸ್ಥಿರತೆ ಒದಗಿಸಿಕೊಳ್ಳಲು ನೀತಿ-ನಿಯಗಳ ಅಗತ್ಯ ಇದೆ ಎಂದ ಸಂವಿಧಾನದ ಆಶಯ, ಕರ್ತವ್ಯ ಹಾಗೂ ಜಾರಿಗಳಿಸಬೇಕಾಗು ತಂತ್ರಗಾರಿಕೆಯನ್ನು ರೂಪಿಸಕೊಳ್ಳುವ ನಾಯಕತ್ವ ರೂಪಿಸಿಕೊಳ್ಳುವ ವಿಧಾನವನ್ನು ಚಟುವಟಿಕೆ ಮೂಲಕ ವಿವರಿಸಿದರು.
ಎರಡನೆ ದಿನದ ತರಗತಿಯಲ್ಲಿ ವಿಜ್ಞಾನ ಸಂವಹನಕ್ಕೆ ಸಾಮಾಜಿಕ ಮಾಧಯಮಗಳ ಬಳಕೆ ಏಕೆ, ಹೇಗೆ ಎಂದು ಪ್ರಾತ್ಯಕ್ಷಿಕೆ ನೀಡಿದ ಕೆಪಿಆರೆಸ್ ಮುಖಂಡ ಎಚ್.ಆರ್.ನವೀನ್ಕುಮಾರ್, ಮಾಧ್ಯಮಗಳು ವಿಜ್ಞಾನ ಪ್ರಸಾರಕ್ಕಿಂತ ಅಜ್ಞಾನ ಪ್ರಸಾರವನ್ನೇ ಹೆಚ್ಚಾಗಿ ಬಿತ್ತರಿಸುವುದರಿಂದ ಭಾರತೀಯ ಜನತೆ ಇನ್ನೂ ಅಜ್ಞಾನದಲ್ಲಿ, ಮೂಢನಂಬಿಕೆಯಲ್ಲೇ ಕೊಳೆಯಲು ಕಾರಣವಾಗಿವೆ ಎಂದು ವಿವರಿಸಿ ಮೊಬೈಲ್ ಆಪ್ ಹಾಗೂ ಕಂಪ್ಯೂಟರ್ ಆಪ್ಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಮೂಲಕ ವಿಜ್ಞಾನ ಪ್ರಸಾರ ಮಾಡುವ ವಿಧಾನದ ತರಬೇತಿ ನೀಡಿದರು. ಆನಂತರ ಅಹಮದ್ ಹಗರೆ ವೈಜ್ಞಾನಿಕ ನಾಯಕತ್ವ ರೂಪಿಸಿಕೊಳ್ಳುವ ಚಟುವಟಿಕೆ ನಡೆಸಿದರು.
ಶಿಬಿರಾರ್ಥಿಗಳು ಗುಂಪುಗಳಲ್ಲಿ ಸಂವಾದ ಮಾಡಿ ಎರೆಡು ವರ್ಷಗಳವರೆಗೆ ಜನರಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಪ್ರಜ್ಞೆ, ಸಂತಸಕಲಿಕೆ ಹಾಗೂ ಮಹಿಳಾ ಬಲವರ್ಧನೆಯ ಚಟುವಟಿಕೆ ಹಮ್ಮಿಕೊಳ್ಳುವ ರೂಪುರೇಷೆಗಳ ಕ್ರಿಯಾ ಯೋಜನೆ ರೂಪಿಸಿ ಮಂಡಿಸಿದರು.
ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ಶಿಬಿರದ ಸಮಾರೋಪ ಭಾಷಣ ಮಾಡಿ ಜನರು ಬಿಜಿವಿಎಸ್ ಕಾರ್ಯಕರ್ತರನ್ನು ನಂಬಬೇಕು, ಅವರ ನಡೆ-ನುಡಿ ಹಾಗೂ ಕೆಲಸಗಳಲ್ಲಿ ವಿಶ್ವಾಸ ಇಡಬೇಕು ಎನ್ನುವ ಗುಣಲಕ್ಷಣಗಳನ್ನು ರೂಪಿಸಿಕೊಳ್ಳಬೇಕು ಅದಕ್ಕಾಗಿ ನಾವು ಯಾವಾಗಲೂ ಪ್ರಜಾಪ್ರಭತ್ವೀಯವಾಗಿರಬೇಕು, ಯಾವುದೇ ಪರಿಸ್ಥಿತಿಯಲ್ಲೂ ಯುದ್ಧವಿರೋಧಿ ಧೋರಣೆ ಮೂಡಿಸಿಕೊಳ್ಳಬೇಕು, ಜನರಲ್ಲಿ ವಿಶ್ವಾಸವಿರಿಸುವ ಧನಾತ್ಮಕತೆ ರೂಪಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಬಿಜಿವಿಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಪ್ರಮೀಳ ಹಾಗೂ ತಾಲ್ಲೂಕು ಕಾರ್ಯದರ್ಶಿ ಲೋಲಾಕ್ಷಿ ವಿಜ್ಞಾನ, ಪರಿಸರದ ಹಾಡುಗಳನ್ನು ಕ್ರಮಬದ್ಧವಾಗಿ ಕಲಿಸಿದರು.
ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media