ಬೆಂಗಳೂರಿನ ಬಹುತೇಕ ಕಡೆ ಆವರಿಸಿದ ಕಗ್ಗತ್ತಲು : ಮುಂದಿನ 3 ಗಂಟೆಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆ

ಬೆಂಗಳೂರು:  ಬೆಂಗಳೂರಿನ ಬಹುತೇಕ ಕಡೆ ಬೆಳಗಿನ ಜಾವ ಕಗ್ಗತ್ತಲು ಆವರಿಸಿದ್ದು, ಬಸವನಗುಡಿ, ಹನುಮಂತನಗರ, ಇಟ್ಟಮಡು, ಗಿರಿನಗರ, ಶ್ರೀನಗರ, ಜಯನಗರ, ಬನಶಂಕರಿ, ದೇವೇಗೌಡ ಪೆಟ್ರೋಲ್ ಬಂಕ್, ಕತ್ತರಿಗುಪ್ಪೆ, ಸೇರಿದಂತೆ ಬೆಂಗಳೂರಿನ ಹಲವೆಡೆ ಸಂಜೆ 6 ಗಂಟೆಯ ರೀತಿ ಕತ್ತಲ ವಾತಾವರಣ ಗೋಚರವಾಗಿದೆ. ಭಾರಿ ಮಳೆಯಿಂದ ನಿರ್ಮಾಣ ಹಂತದ ಹೈವೇ ಕೆರೆಯಂತಾಗಿದ್ದು, ಬೆಂಗಳೂರು-ಮೈಸೂರು ಮಾರ್ಗದಲ್ಲಿ‌ ಟ್ರಾಫಿಕ್​ ಜಾಮ್ ಉಂಟಾಗಿದೆ. ಕಳೆದೊಂದು ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ. ಅಷ್ಟೇ ಅಲ್ಲದೇ ಕೆಂಗೇರಿ, ಬಿಡದಿ ಭಾಗದಲ್ಲಿ ತುಂತೂರು ಮಳೆ ಆರಂಭವಾಗಿದ್ದು, ವಾಹನ ಸವಾರರು ಟ್ರಾಫಿಕ್​ನಲ್ಲಿ ಸಿಲುಕಿ‌ ಪರದಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಮುಂದಿನ 3 ಗಂಟೆಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, 9 ಗಂಟೆಯವರೆಗೆ ಮಳೆ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆಗಳಿಗೂ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 40-50 ಕಿ.ಮೀ ವೇಗದಲ್ಲಿರುವ ಗಾಳಿ, ಮಿಂಚು ಸಹಿತ ಮಳೆ ಸಾಧ್ಯತೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗ್ಲೇ ಕೆಲವೆಡೆ ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಯ ವಾತಾವರಣ ಇರುವುದರಿಂದ ಮುಂದಿನ 3-4 ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ 5 ವರ್ಷಗಳಲ್ಲಿ ದಾಖಲೆ ಮಳೆ: ಬೆಂಗಳೂರಿನಲ್ಲಿ ಈ ಆಗಸ್ಟ್ ತಿಂಗಳಲ್ಲಿ 184.4 ಮಿಲಿ ಮೀಟರ್ ಮಳೆಯಾಗಿದ್ದು, ಐದು ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೊನ್ನೆ ಶುಕ್ರವಾರ, ಮುಂಜಾನೆ 3 ರಿಂದ 6 ರ ನಡುವಿನ ಮೂರು ಗಂಟೆಗಳಲ್ಲಿ ನಗರದಲ್ಲಿ 41.4 ಮಿಮೀ ಮಳೆ ದಾಖಲಾಗಿದೆ. ಮೊನ್ನೆ ಶನಿವಾರ ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಕೆಂಗೇರಿ ಮತ್ತು ಬಿಡದಿ ಬಳಿಯ ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್ ನಡುವಿನ ಕಣ್ಮನಿಕೆ ಕೆರೆಯು ಉಕ್ಕಿ ಹರಿದು ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಮೈಸೂರು ರಸ್ತೆ ಎಕ್ಸ್‌ಪ್ರೆಸ್‌ವೇ ಹೊಸ ಟೋಲ್‌ ಬೂತ್‌ ಕೂಡ ನೀರಿನಲ್ಲಿ ಮುಳುಗಿದೆ. ನಗರದ ಹಲವೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.

Donate Janashakthi Media

Leave a Reply

Your email address will not be published. Required fields are marked *