ಬೆಂಗಳೂರು : ಸರಕಾರ ಆದೇಶಿರುವ ಕಾನೂನು ಬದ್ದ ಕನಿಷ್ಟ ಕೂಲಿ ಜಾರಿಗೆ ಆಗ್ರಹಿಸಿ 2018 ರಿಂದ 2024 ರವರಗಿನ ಬಾಕಿ ಉಳಿಸಿರುವ ವೇತನ, ಬಿಡುಗಡೆಗೆ ಆಗ್ರಹಿಸಿ “ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್” (ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ದ.ಕ. ಹಾಗು ಉಡುಪಿ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಪರಿಣಾಮವಾಗಿ ಕಾರ್ಮಿಕ ಸಚಿವರಾದ ಮಾನ್ಯ ಸಂತೋಷ್ ಲಾಡ್ ರವರು ಬೆಂಗಳೂರು ವಿಕಾಸ ಸೌಧದಲ್ಲಿ ಇಂದು ಉನ್ನತಮಟ್ಟ ಸಭೆ ನಡೆಸಿದರು.
ಕಾರ್ಮಿಕರನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗವಹಿಸಿದ ಸಿಐಟಿಯು ನಾಯಕರು ಮಾಲಕರ ಸಂಘದ ಪ್ರತಿನಿಧಿಗಳು ಆಹ್ವಾನದ ಹೊರತಾಗಿಯು ಸಭೆಯಲ್ಲಿ ಭಾಗವಹಿಸಲಿಲ್ಲ. ಮಾಲಕರು ಸರಕಾರದ ಆದೇಶ ಜ್ಯಾರಿಗೊಳಿಸದೆ ಕಾರ್ಮಿಕರಿಗೆ ನಡೆಸಿರುವ ಬಾಕಿ ವೇತನ, ಕನಿಷ್ಟ ಕೂಲಿ ವಂಚನೆಯನ್ನು ವಿವರವಾಗಿ ಸಭೆಗೆ ಮಂಡಿಸಿದರು, ನ್ಯಾಯ ಒದಗಿಸುವಂತೆ ಸಚಿವರಲ್ಲಿ ವಿನಂತಿಸಿದರು.
ಕಾರ್ಮಿಕ ನಾಯಕರು ನೀಡಿದ ಅಂಕಿ ಅಂಶಗಳನ್ನು ಒಳಗೊಂಡ ವಿವರವಾದ ಮಾಹಿತಿಯನ್ನು ಪಡೆದ ಸಚಿವರು, ಅವುಗಳ ಆಧಾರದಲ್ಲಿ ಬೀಡಿ ಉದ್ಯಮದ ಸಮಗ್ರ ಮಾಹಿತಿಗಳನ್ನು ಕಲೆ ಹಾಕುವಂತೆ, ಅವುಗಳ ಆಧಾರದಲ್ಲಿ ಮಾಲಕರಿಗೆ ಪತ್ರ ರವಾನಿಸುವಂತೆ, ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆಗೆ ಸಮಯ ನಿಗದಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ನವಂಬರ್ 29 ರಂದು ಮಂಗಳೂರಿನಲ್ಲಿ ನಡೆಯುವ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನಾ ಸಭೆಗೆ ತೆರಳಿ ಕಾರ್ಮಿಕರೊಂದಿಗೆ ಮಾತಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಮುಖಂಡರ ನೇತೃತ್ವವನ್ನು ಸಿಐಟಿಯು ರಾಜ್ಯ ಅಧ್ಯಕ್ಷರಾದ ಕಾಮ್ರೇಡ್ ಮೀನಾಕ್ಷಿ ಸುಂದರಂ ವಹಿಸಿದ್ದರು. ಬೀಡಿ ಕಾರ್ಮಿಕರ ರಾಜ್ಯ ಫೆಡರೇಷನ್ ಅಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಜಿಲ್ಲಾ ಪ್ರಮುಖರಾದ ಸುಕುಮಾರ್ ತೊಕ್ಕೊಟ್ಟು, ಬಿ ಎಮ್ ಭಟ್, ಮುನೀರ್ ಕಾಟಿಪಳ್ಳ, ಕವಿರಾಜ್ ಕಾಂಚನ್ ಉಡುಪಿ, ಫಾರೂಕ್ ಮಡಂಜೋಡಿ, ಧನಂಜಯ ಪಟ್ರಮೆ ಬೀಡಿ ಕಾರ್ಮಿಕರನ್ನು ಪ್ರತಿನಿಧಿಸಿ ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ನೋಡಿ : ICDS ಯೋಜನೆ ಖಾಯಂ ಮಾಡಿ| ವೇತನ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ 1 ರಿಂದ ಅಂಗನವಾಡಿ ನೌಕರರ ಧರಣಿ Janashakthi Media
