ಬೆಂಗಳೂರು | ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ

ಬೆಂಗಳೂರು : ಕ್ಯಾನ್ಸರ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ನೂತನ ಬ್ಲಾಕ್ ನಿರ್ಮಾಣಕ್ಕೆ ಹಾಲಿ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಬೆಂಗಳೂರು | ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಮೇಲೆ ಹಲ್ಲೆ, ಅಪಹರಣ: MGSP ಖಂಡನೆ

ದಾಖಲಾತಿ ಹಾಗೂ ಚಿಕಿತ್ಸೆ ವಿಳಂಬವಾದಲ್ಲಿ ರೋಗ ಉಲ್ಬಣಗೊಳ್ಳುವ ಕಾರಣ, ಸಂಸ್ಥೆಗೆ ಭೇಟಿ ನೀಡುವ ಕ್ಯಾನ್ಸರ್ ಪೀಡಿತರನ್ನು ಕೂಡಲೇ ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಲು ಹೊಸದಾಗಿ 450 ಹಾಸಿಗೆ ಸೇರ್ಪಡೆ ಮಾಡಲಾಗುತ್ತಿದೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ.  ಇದರಿಂದಾಗಿ ಒಟ್ಟು ಹಾಸಿಗೆಗಳ ಸಂಖ್ಯೆ ಸಾವಿರದ ಗಡಿ ದಾಟಲಿದೆ.

ಸಂಸ್ಥೆಯ ದಾಖಲಾತಿ ಪ್ರಕಾರ, ಶೇಕಡ 50ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಆಗಿರುವ ಕಾರಣ, ಸಂಸ್ಥೆಯಲ್ಲಿ ಹಾಸಿಗೆಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನೊಂದೆಡೆ ತಡವಾಗಿ ರೋಗ ಪತ್ತೆಯಿಂದ ಚಿಕಿತ್ಸೆ ಅವಧಿಯೂ ಹೆಚ್ಚುತ್ತಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯು ಸಂಸ್ಥೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ.

ನಾಲ್ಕು ಮಹಡಿ: ಹೆಚ್ಚುವರಿ ಹಾಸಿಗೆಗಳ ಸೇರ್ಪಡೆಗೆ ನಾಲ್ಕು ಮಹಡಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸಂಸ್ಥೆಯ ಹಾಲಿ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಸಂಸ್ಥೆಯ ಆವರಣದಲ್ಲಿರುವ ಸಿಫಾನಿ ಮತ್ತು ಧನರಾಜ್ ಡಾಗಾ ಬ್ಲಾಕ್‌ ಎರಡು ಮಹಡಿಗಳನ್ನು ಹೊಂದಿವೆ. ಅದೇ ರೀತಿ, ಅನಿಕೇತನ ಬ್ಲಾಕ್ ಮೂರು ಮಹಡಿಗಳನ್ನು ಒಳಗೊಂಡಿದೆ. ಈ ಎರಡೂ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ವರದಿ ಆಧರಿಸಿ ಯಾವುದಾದರೂ ಒಂದು ಕಟ್ಟಡದ ಮೇಲೆ ನಾಲ್ಕು ಮಹಡಿಯ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಭರಿಸಲು ನಿರ್ಧರಿಸಲಾಗಿದೆ.

‘ತಪಾಸಣೆ ಹಾಗೂ ರೋಗದ ಬಗ್ಗೆ ಹೆಚ್ಚಿದ ಅರಿವಿನಿಂದಾಗಿಯೂ ಕ್ಯಾನ್ಸರ್ ಹೊಸ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಆದ್ದರಿಂದ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ರೋಗ ನಿರ್ಣಯಕ್ಕಾಗಿ ಬರುವವರನ್ನು ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಒಳರೋಗಿಗಳಾಗಿ ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಲು ಹೆಚ್ಚುವರಿ ಹಾಸಿಗೆಗಳು ಸಹಕಾರಿಯಾಗಲಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್ ತಿಳಿಸಿದರು.

ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು | ಚಂಡು ರಾಜ್ಯಪಾಲರ ಅಂಗಳಕ್ಕೆ! Janashakthi Media

Donate Janashakthi Media

Leave a Reply

Your email address will not be published. Required fields are marked *