ಅರಣ್ಯ ಇಲಾಖೆ ಕಿರುಕುಳ ಖಂಡಿಸಿ-ಬಗರ್‌ ಹುಕುಂ ಸಾಗುವಳಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

ತುಮಕೂರು: ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಿಪಟೂರು ಉಪ ವಿಭಾಗಾಧಿಕಾರಿ ಕಛೇರಿ ಎದುರು ಬಗರ್ ಹುಕಂ ಸಾಗುವಳಿದಾರರ ಧರಣಿ ನಡೆಯಿತು.

ಅರಣ್ಯ ಇಲಾಖೆ ಕಿರುಕುಳ ನಿಲ್ಲಬೇಕು, ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ)ಯಾಗಿ 15000 ರೂ ನೀಡಬೇಕು, ಎಲ್ಲಾ ಬಗರ್ ಹುಕಂ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ಕೂಡಲೇ ಒದಗಿಸಬೇಕು, ದೌರ್ಜನ್ಯ-ದಬ್ಬಾಳಿಕೆ ಮೂಲಕ ವಶಪಡಿಸಿಕೊಂಡ ಬಗರ್ ಹುಕಂ ಭೂಮಿಯನ್ನು ವಾಪಸ್ಸು ಉಳುಮೆಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಕೇಂದ್ರ ಮತ್ತು ರಾಜ್ಯ ಎರಡೂ ಕಡೆಯೂ ಒಂದೇ ಸರ್ಕಾರ ಇದ್ದರೆ ಡಬಲ್ ಇಂಜಿನ್ ಅಭಿವೃದ್ಧಿ ಎಂದು ಹೇಳಿದ್ದ ಇವರ ಆಡಳಿತದಲ್ಲಿ ರೈತರು ಡಬಲ್ ಚಪ್ಪಡಿಕಲ್ಲು ಅನ್ನು ತಲೆ ಮೇಲೆ ಹಾಕಿಕೊಂಡಂತಾಗಿದೆ. ಬಗರ್ ಹುಕಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಈ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಸುಳ್ಳುಗಳೇ ಈ ಸರ್ಕಾರಗಳ ಹೆಗ್ಗುರುತಾಗಿದೆ. ಈ ರೀತಿ ಅಧಿಕಾರದಲ್ಲಿರುವ ಜನ ವಿರೋಧಿ ಸರ್ಕಾರಗಳನ್ನು ಸೋಲಿಸುವ ಮೂಲಕ ಜನರು ತಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನು ಓದಿ: ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

ಪ್ರತಿಭಟನೆ ಬೆಂಬಲಿಸಿ ಮಾತಾನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ, ಸುಮಾರು 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿರುವ ಭೂಮಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದರೂ ಹಕ್ಕುಪತ್ರ ನಿರಾಕರಣೆ ಅನ್ಯಾಯದ ಪರಮಾವಧಿ. ಕೂಡಲೇ ರೈತರ ಭೂಮಿ ಹಕ್ಕು ರಕ್ಷಣೆ ಆಗಬೇಕು ಹಾಗೂ ರೈತ ವಿರೋಧಿ ರಾಜ್ಯ ಕೃಷಿ ಕಾಯ್ದೆ ಹಾಗೂ ಬಲವಂತದ ಭೂ ಸ್ವಾಧೀನ ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿದರು.

ತುಮಕೂರು ಜಿಲ್ಲಾ ಅಧ್ಯಕ್ಷ ಚನ್ನಬಸವಣ್ಣ ಆರ್ ಎಸ್, ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ ಸಿ, ಮುಖಂಡರುಗಳಾದ  ಕೊಟ್ರಪ್ಪ, ಸುಧಾಕರ್, ದೊಡ್ಡನಂಜಯ್ಯ, ನರಸಿಂಹಮೂರ್ತಿ, ಶಿವಣ್ಣ, ಯಾದವಮೂರ್ತಿ, ಚಂದ್ರಪ್ಪ, ಲೋಕೇಶ್ ಮುಂತಾದವರು ಪ್ರತಿಭಟನಾ ಧರಣಿ ನೇತೃತ್ವ ವಹಿಸಿದ್ದರು.

ಇದನ್ನು ಓದಿ: ದಬ್ಬಾಳಿಕೆಯ ಭೂ ಸ್ವಾಧೀನ ಕ್ರಮ-ಕುಟುಂಬದವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಶ್ರೀ ನಿಮ್ಮ ಎಲ್ಲಾ ಅಹವಾಲುಗಳನ್ನು ಆಲಿಸಲಾಗುವುದು. ಇದೇ ತಿಂಗಳು 26ರಂದು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸೂಚನೆಯನ್ನು ನೀಡಲಾಗುವುದು. ನಂತರ ರೈತ ಮುಖಂಡರ ಜೊತೆ ಸಭೆ ಕರೆಯುತ್ತೇವೆ ಎಂದು ಭರವಸೆ ನೀಡಿದ ಆಧಾರದಲ್ಲಿ ಪ್ರತಿಭಟನೆ ವಾಪಸ್ಸು ಪಡೆದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *