ಬದಲಾದ ಸನ್ನಿವೇಶದಲ್ಲಿ ಸಾಹಿತ್ಯ ಲೋಕಕ್ಕೆ ಸಾಕಷ್ಟು ಸವಾಲುಗಳಿವೆ; ಎಚ್‌.ಎಲ್‌.ಪುಷ್ಪಾ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ಮತ್ತು ಕಮಲಾ ಹಂಪನಾ ಸಾಹಿತ್ಯ ವೇದಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಚ್.ಎಲ್‌.ಪುಷ್ಪಾ, ʻಇಂದಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಸಾಹಿತ್ಯ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಇಂಥಹ ಸನ್ನಿವೇಶದಲ್ಲಿ ಸಾಹಿತ್ಯ ಲೋಕವು ಹಲವು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದೆ. ಅವುಗಳನ್ನು ಮೀರಿ ಬರವಣಿಗೆಯಲ್ಲಿ ತೊಡಗಬೇಕಾದ ಸವಾಲು ನಮ್ಮ ಮುಂದಿದೆʼ ಎಂದರು.

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡಿದ್ದ ‘ನಾಡೋಜ ಡಾ. ಕಮಲಾ ಹಂಪನಾ ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌. ಪುಷ್ಪಾ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಪಿ. ಪದ್ಮಪ್ರಸಾದ್ ಹಾಗೂ ಹನುಮಾಕ್ಷಿ ಗೋಗಿ ಅವರಿಗೆ ಕಮಲಾ ಹಂಪನಾ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪ್ರಾಧ್ಯಾಪಕಿ ಬಿ.ಯು. ಸುಮಾ ಮಾತನಾಡಿ, ‘ಸಂಶೋಧನೆ ಎನ್ನುವುದರ ಬಗ್ಗೆ ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಕಷ್ಟದ ಕೆಲಸವಾಗಿದೆ. ಸಂಶೋಧನಾ ಕ್ಷೇತ್ರವೂ ಅಷ್ಟೊಂದು ದೊಡ್ಡ ವಿಸ್ತಾರವಾಗಿದೆ. ಕಮಲಾ ಹಂಪನಾ ಅವರ ಸಂಶೋಧನಾ ಕೃತಿಗಳು ವಸ್ತು ವೈವಿಧ್ಯತೆಯಿಂದ ಕೂಡಿದ್ದು, ಭಾಷಾ ವೈವಿಧ್ಯತೆಯನ್ನು ಅವರ ಬರಹಗಳಲ್ಲಿ ಕಾಣಬಹುದು’ ಎಂದರು.

ಸಾಹಿತಿ ಕಮಲಾ ಹಂಪನಾ ಮಾತನಾಡಿ, ‘ಕನ್ನಡಿಗರು ಕನ್ನಡ ಭಾಷೆಯ ಮೂಲಕವೇ ಹೇಗೆ ಜೀವಿಸಬೇಕು ಎಂಬುದನ್ನು ನಾನು ನನ್ನ ಗುರುಗಳಿಂದ ಕಲಿತುಕೊಂಡಿದ್ದೇನೆ. ಒಂದು ಕಾವ್ಯವನ್ನು ಹೇಗೆ ಓದಬೇಕು? ಹಳಗನ್ನಡ ಹಾಗೂ ನಡುಗನ್ನಡವನ್ನು ಅರ್ಥೈಸಿಕೊಳ್ಳುವುದು ಹಾಗೂ ಬೇರೆಯವರೊಂದಿಗೆ ಸಂವಹನ ನಡೆಸುವ ಬಗ್ಗೆ ತೀ.ನಂ. ಶ್ರೀಕಂಠಯ್ಯ, ತಾ.ಸು. ಶ್ಯಾಮರಾಯ ಮತ್ತು ಪರಮೇಶ್ವರ ಭಟ್ ಅವರಿಂದ ಕಲಿತುಕೊಂಡೆ’ ಎಂದು ಸ್ಮರಿಸಿಕೊಂಡರು.

ಪ್ರಶಸ್ತಿ ಪುರಸ್ಕೃತ ಎಸ್.ಪಿ. ಪದ್ಮಪ್ರಸಾದ್, ‘ಇತ್ತೀಚಿನ ದಿನಗಳಲ್ಲಿ ಸಂಶೋಧಕರು ಹಾಗೂ ವಿಮರ್ಶಕರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಒಂದು ಪ್ರದೇಶದ ಸಂಸ್ಕೃತಿ, ಸಾಹಿತ್ಯ ಬೆಳೆಯದು’ ಎಂದರು. 

ಹನುಮಾಕ್ಷಿ ಗೋಗಿ, ‘ರಾಜ್ಯದಾದ್ಯಂತ ಇರುವ ಎಲ್ಲ ಶಾಸನಗಳು ಹಾಗೂ ಜೈನ ಕವಿಗಳ ಬಗ್ಗೆ ಅಧ್ಯಯನ ನಡೆಸಬೇಕು. ಮಹಿಳೆಯರು ವ್ಯಾಕರಣಾತ್ಮಕ ಸಂಶೋಧನೆ ಕಡೆಗೂ ತಮ್ಮ ಗಮನ ಹರಿಸಬೇಕು’ ಎಂದು ಹೇಳಿದರು. 

Donate Janashakthi Media

Leave a Reply

Your email address will not be published. Required fields are marked *