ಅರ್ನಬ್ ಗೊಸ್ವಾಮಿ ಬಂಧನ ಪತ್ರಿಕಾ ಸ್ವಾತಂತ್ರ್ಯದ ಮೇಲಿನ‌ ದಾಳಿಯೇ?

ಅರ್ನಾಬ್ ಗೋಸ್ವಾಮಿಯ ಬಂಧನವಾಗಿರುವುದು ಕ್ರಿಮಿನಲ್ ಪ್ರಕರಣವೊಂದರಲ್ಲಿ, ಅದೂ ಆತ್ಮಹತ್ಯೆಗೈದ ವ್ಯಕ್ತಿಯೋರ್ವನ ಡೆತ್‍ನೋಟ್‍ನಲ್ಲಿ ಆತನ ಹೆಸರಿದ್ದ ಕಾರಣಕ್ಕೆ. ರಿಪಬ್ಲಿಕ್ ಚಾನಲ್ ಆರಂಭವಾಗುತ್ತಿದ್ದಾಗ, ಅನ್ವಯ ನಾಯ್ಕ್ ಎನ್ನುವ ವ್ಯಕ್ತಿ, ಚಾನ‍ಲ್‍ನ ಸ್ಟುಡಿಯೋ ವಿನ್ಯಾಸ ಮಾಡಿಕೊಟ್ಟಿದ್ದ. ಆದರೆ ಇದರ ಬಾಬ್ತಿನ Rs 5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಆತನಿಗೆ ಕೊಡದೇ ಅರ್ನಾಬ್ ಸತಾಯಿಸುತ್ತಿದ್ದ. ಕೊನೆಗೆ ಅನ್ವಯ ನಾಯ್ಕ್ ಆತ್ಮಹತ್ಯೆಗೆ ಶರಣಾಗಿ, ಆರ್ನಾಬ್, ಫಿರೋಜ್ ಶಾ ಹಾಗೂ ನಿತೇಶ್ ಶಾರ್ದಾ, ಈ ಮೂವರು ತನ್ನ ಸಾವಿಗೆ ಕಾರಣವೆಂದು ತನ್ನ ಡೆತ್‍ನೋಟ್‍ನಲ್ಲಿ ಬರೆದಿದ್ದ. ಈ ಪ್ರಕರಣದಲ್ಲಿ ಎಫ್‍ಐ‍ಆರ್ ದಾಖಲಾಗಿ, ತನಿಖೆ ನಡೆದು, ರಾಯ್‍ಗಢ್ ಪೋಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು.

ಆದರೆ ಪೋಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಹಾಗಾಗಿ ಮಹಾರಾಷ್ಟ್ರ ಸರಕಾರ ಪ್ರಕರಣದ ಬಗ್ಗೆ ಮತ್ತೊಮ್ಮೆ ವಿಸ್ತ್ರತ ತನಿಖೆ ನಡೆಸಿ, ತಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮೃತ ಅನ್ವಯ್ ನಾಯಕ್ ಮಗಳು ಕಳೆದ ಮೇ ತಿಂಗಳಿನಲ್ಲಿ (ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಿಂತಾ ಮುನ್ನ) ಮಹಾರಾಷ್ಟ್ರ ಸರಕಾರವನ್ನು ಅಧಿಕೃತವಾಗಿ ಕೇಳಿಕೊಂಡಿದ್ದಳು. ಆ ಹೊತ್ತಿನಲ್ಲೇ ಗೃಹಮಂತ್ರಿ ಸಿಐ‍ಡಿ ಪ್ರಕರಣವನ್ನು ವಹಿಸುತ್ತೇನೆಂದೂ ಹೇಳಿದ್ದರು. ಇದೆಲ್ಲಾ ನಡೆದದ್ದು ಸುಶಾಂತ್ ಸಿಂಗ್ ಆತ್ಮಹತ್ಯೆ, ಕಂಗನಾ ಪ್ರಕರಣದ ಬಹಳ ಮೊದಲು. ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೋಲೀಸರು ಇದೀಗ ಆರ್ನಾಬ್‍ನನ್ನು ಬಂಧಿಸಿದ್ದಾರೆ. ಕೇವಲ ಅರ್ನಾಬ್‍ನನ್ನು ಮಾತ್ರವಲ್ಲ ಇನ್ನಿಬ್ಬರು ಆರೋಪಿಗಳಾದ ಫಿರೋಜ್ ಶಾ ಹಾಗೂ ನಿತೇಶ್ ಶಾರ್ದಾರನ್ನೂ ಬಂಧಿಸಿದ್ದಾರೆ.

ಇದರಲ್ಲಿ ಈಗ ಪತ್ರಿಕಾ ಸ್ವಾತಂತ್ರ್ಯದ ಹರಣ ಎಲ್ಲಿ ಬರುತ್ತೆ? ಕಳೆದಬಾರಿ ತನ್ನ ಪತ್ರಿಕೆಯಲ್ಲಿ ಈ ಹಿಂದೆ ಕೆಲಸ ಮಾಡುತಿದ್ದ ವರದಿಗಾರ ಸುನೀಲ್ ಹೆಗ್ಗರವಳಿ ಎಂಬವರ ಹತ್ಯೆಗೆ ಸುಫಾರಿ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ರವಿ ಬೆಳಗೆರೆಯನ್ನು ಕರ್ನಾಟಕ ಪೋಲೀಸರು ಬಂಧಿಸಿದ್ದಿಲ್ವಾ? ಆವಾಗ ಯಾರಾದ್ರೂ ಅದು ಪತ್ರಕರ್ತರ ಮೇಲಿನ ಹಲ್ಲೆ, ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದೆಲ್ಲಾ ಬೆಳಗೆರೆ ಪರ ನಿಂತಿದ್ದರೇ? ಟಿಆರ್ಪಿ ಕೇಸ್ ಬೇರೆಯದ್ದೇ. ಅದರಲ್ಲಿ ಏನಾಗುತ್ತದೆಯೆಂದು ಇನ್ನೂ ಗೊತ್ತಿಲ್ಲ. ಆದರೆ ಈಗಿರುವುದು ಕ್ರಿಮಿನಲ್ ಪ್ರಕರಣ. ವಂಚನೆ ಹಾಗೂ ಆತ್ಮಹತ್ಯೆಗೆ ಪ್ರೇರಣೆಯ ಆರೋಪ. ಆರೋಪವನ್ನು ಮಾಡಿದವರು ಆತ್ಮಹತ್ಯೆಗೈದ ವ್ಯಕ್ತಿಯ ಮಗಳು ಹಾಗೂ ಹೆಂಡತಿ. ಪ್ರಕರಣ ನಡೆದದ್ದು ಬಿಜೆಪಿ-ಶಿವಸೇನೆ ಸರಕಾರವಿದ್ದಾಗ. ಮೊದಲ ಎಫ್‍ಐ‍ಆರ್ ಆಗಿದ್ದೂ ಆವಾಗ್ಲೇ. ಆರು ತಿಂಗಳ ಹಿಂದೆ ಸಂತ್ರಸ್ತ ಕುಟುಂಬ ಪ್ರಕರಣವನ್ನು ಪುನ ತನಿಖೆ ಮಾಡಬೇಕೆಂದು ಕೇಳಿಕೊಂಡಿತ್ತು ಹಾಗೂ ಆಗಲೇ ಗೃಹಮಂತ್ರಿ ತನಿಖೆ ನಡೆಸುವುದಾಗಿಯೂ ಹೇಳಿದ್ದರು. ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಲ್ಲಿಂದ ಬಂತು?

ಅಂದಹಾಗೆ ಇವತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕಣ್ಣೀರು ಸುರಿಸುತ್ತಿರುವವರು ಕಳೆದ ತಿಂಗಳು ನಮ್ಮದೇ ರಾಜ್ಯದಲ್ಲಿ ಪವರ್ ಟಿವಿಯ ಪ್ರಸರಣವನ್ನು ಪೋಲೀಸರು ಸ್ಥಗಿತಗೊಳಿಸಿ, ಸಿಬ್ಬಂದಿಯನ್ನು ಠಾಣೆಗೆ ತನಿಖೆಗೆ ತೆಗೆದುಕೊಂಡ ಹೋದಾಗ ಎಲ್ಲಿದ್ದರು? ಕಳೆದ ಐದು ವರುಷಗಳಲ್ಲಿ ದೇಶದೆಲ್ಲೆಡೆ ಪ್ರಧಾನ ಮಂತ್ರಿಯ ವಿರುದ್ದ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಜಯ್ ಸಿಂಗ್ ಬಿಷ್ಟ್ ವಿರುದ್ಧ, ಹಾಗೂ ಇತರ ಬಿಜೆಪಿ ನಾಯಕರು, ಸರಕಾರಗಳನ್ನು ಟೀಕಿಸಿದ್ದಕ್ಕೆ ಇಪ್ಪತ್ತಕ್ಕಿಂತ ಹೆಚ್ಚು ಪತ್ರಕರ್ತರನ್ನು ಬಂಧಿಸಲಾಗಿದೆ. ಕೆಲವರ ವಿರುದ್ಧ ದೇಶದ್ರೋಹದಂತಹ ಗಂಭೀರ ಕೇಸನ್ನು ದಾಖಲಿಸಲಾಗಿದೆ. ಆಗೆಲ್ಲಾ ನೆನಪಾಗದ ಪತ್ರಿಕಾ ಸ್ವಾತಂತ್ರ್ಯ ಈಗ ಅದೇಗೆ ಧುತ್ತನೆ  ನೆನಪಾಗಿದೆ?

– ಗ್ಲಾಡ್ಸನ್ ಅಲ್ಮೇಡಾ

Donate Janashakthi Media

Leave a Reply

Your email address will not be published. Required fields are marked *