ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗೆ 40 ರ ಸಂಭ್ರಮ

ಬೆಂಗಳೂರು : ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು 40 ನೇ ವರ್ಷ ಸಂಭ್ರಮದಲ್ಲಿದೆ.   ಬೆಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಕೋಲಾರ, ಮಂಡ್ಯ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ  ಕಾರ್ಯಕ್ರಮವನ್ನು ಆಚರಿಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಮಹಿಳಾ ದಿನಾಚೆಣೆ ಮತ್ತು ಜನವಾದಿ 40 ವರ್ಷಾಚರಣೆಯಲ್ಲಿ ಜನವಾದಿಯ ಸಂಸ್ಥಾಪನಾ ಸದಸ್ಯರಾದ ಹಿರಿಯ ಸಂಗಾತಿ ಡಾ.ಕೆ ಷರೀಫ ಇವರು ‘ಹಿಂದಣ ಹೆಜ್ಜೆಯ ಅರಿವಿನ ವಿಸ್ತರಣೆ’ ಯ ಭಾಗವಾಗಿ ಮಾತನಾಡುತ್ತ, ‘ದೇಶದಲ್ಲಿಯೇ ಒಂದು ಕೋಟಿಗೂ ಹೆಚ್ಚು ಸದಸ್ಯತ್ವ ಇರುವ ಜನವಾದಿ ಮಹಿಳಾ ಸಂಘಟನೆಗೆ ಈಗ ನಲವತ್ತರ ಸಂಭ್ರಮ. ಶಾಸನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಕಾನೂನು ರಚನೆಗಾಗಿ, ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ, ಜಾತಿ ಹೆಸರಿನ ದೌರ್ಜನ್ಯ ತಡೆಗಾಗಿ, ಕೋಮು ಸೌಹಾರ್ದತೆಗಾಗಿ ಜನವಾದಿ ನಿರಂತರ ಶ್ರಮಿಸುತ ಬಂದಿದೆ. ಈಗಿನ ಪ್ರಭುತ್ವವು ನ್ಯಾಯಕ್ಕಾಗಿ ಹೋರಾಟ ಮಾಡಿದರೆ ದೇಶದ್ರೋಹದ ಪಟ್ಟ ಕಟ್ಟುತಿದೆ. ಆದರೆ ಮಹಿಳೆಯರು ಪ್ರಜಾಪ್ರಭುತ್ವ ಉಳಿವಿಗಾಗಿ ನಿರ್ಭಯದ ಹಾದಿ ಸವೆಸಿದ್ದಾಳೆ. ನಲವತ್ತು ವರ್ಷಗಳ ಹಿಂದಿನಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಜನವಾದಿಯು ಹೋರಾಡುವ ಧೈರ್ಯ, ಘನತೆಯ ಬದುಕಿಗಾಗಿ ಜಾಗೃತ ಹೆಜ್ಜೆ ಹಾಕಲು ಕಲಿಸಿದೆ. ದೇಶದ ಸಮಸ್ತ ಮಹಿಳೆಯರ ಸಂಕಟಗಳ ಪರಿಹಾರಕ್ಕಾಗಿ ಸಂಘಟನೆ ಕೆಲಸ ಮಾಡುತಿದೆ. ಈ ದಿನಮಾನಗಳು ಬಹಳ ಆತಂಕ ತಲ್ಲಣದ ದಿನಗಳಾಗಿವೆ. ಆದ್ದರಿಂದಲೇ ಮಹಿಳೆ ಹೆಚ್ಚೆಚ್ಚು ಸಂಘಟಿತಳಾಗಬೇಕು’ ಎಂದು ಕರೆ ಕೊಟ್ಟರು.

ಕೋಲಾರದಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 40 ರ ವರ್ಷಾಚರಣೆ ಕಾರ್ಯಕ್ರಮ

84  ವರ್ಷ ವಯಸ್ಸಿನ ಹಿರಿಯ ಸಂಗಾತಿ ಮೆಹೆಮುದಾ ಬೇಗಂ ತಮ್ಮ ಕಾಲದ ಹಿಂದಿನ ಹೋರಾಟದ ನೆನಪುಗಳನ್ನು ಹಂಚಿಕೊಂಡರು. ಜನತೆಯ ಕಡೆಗೆ ಧೈರ್ಯದಿಂದ ಮುನ್ನುಗ್ಗಿ. ಧನದ ಕಡೆಗೆ ಬೇಡ. ದುಡಿಯುವ ಜನರ ನಿರ್ಭಯದ ಹೋರಾಟ ಮತ್ತು ಐಕ್ಯತೆಯಲ್ಲಿಯೇ ನ್ಯಾಯದ ಬೀಜಗಳಿವೆ ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ ಡಾ.ಶಾಂತಾ ಅಷ್ಟಗಿಯವರು ಮಾತನಾಡುತ್ತ, ‘ಮಹಿಳಾ ಸಮಾನತೆ ಎಂಬುದೇ ನೈಜ ಅಭಿವೃದ್ದಿಯ ಮಾನದಂಡವಾಗಿದೆ. ಸಬಲೀಕರಣ ಎಂಬುದೇ ಮಹಿಳಾ ವಿರೋಧಿ ಶಬ್ದವಾಗಿದೆ. ಪುರುಷನಿಗಿಂತಲೂ ಮೂರು ಪಟ್ಟು ಶ್ರಮ ಮಾಡುವ ದುಡಿಮೆಗೈಯುವ ಮಹಿಳೆ ಅಬಲೆ ಹೇಗಾಗುವಳು? ಗರ್ಭಾಷಯ, ಹಾಲೂಡಿಸುವಿಕೆ ನಿಸರ್ಗ ಕೊಟ್ಟ ಕೊಡುಗೆಯಾಗಿದೆ. ಅದು ಸ್ತ್ರೀಯ ಶಕ್ತಿ. ಅವಳನ್ನು ದುರ್ಬಲಳೆಂದು ಬಿಂಬಿಸುವ ಪುರುಷ ರಾಜಕಾರಣದ ಹಿಂದೆ ಆರ್ಥಿಕ ಕೇಂದ್ರಿಕರಣ ಸಂಚು ಅಡಗಿದೆ’ ಎಂದು ಹೇಳಿತ್ತಾ ‘ಜನವಾದಿಯು ಕಲಬುರಗಿಯಲ್ಲಿ ವಿವಿಧ ಪರಿಣಾಮಕಾರಿ ಅಭಿಯಾನ ಆಂದೋಲನ ಬೀದಿ ನಾಟಕ, ಬಸ್ಸುಗಳಲ್ಲಿ ಮಹಿಳಾ ಸದಥಾನದ ಮೀಸಲಾತಿಗಾಗಿ  ಮುಂತಾದ ವೈವಿಧ್ಯಮಯ ಚಟುವಟಿಕೆ ನಡೆಸಿದೆ. ನಾವೆಲ್ಲ ಜನವಾದಿಯಲ್ಲಿ ನಿರಂತರ ತೊಡಗಿಸಿಕೊಂಡಿರುವುದರಿಂದಲೇ ಬದುಕಿನ ಸಂಕಟಗಳನ್ನು ಎದುರಿಸಿ ತಲೆಯೆತ್ತಿ ಬದುಕಲು ಸಾಧ್ಯವಾಗಿದೆ. ನಮಗೆ ಜನವಾದಿಯಲ್ಲಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.

ಮಳವಳ್ಳಿಯಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 40 ರ ವರ್ಷಾಚರಣೆ

ಜನವಾದಿ ಮಹಿಳಾ ಸಂಘಟನೆಯ ರಾಜ್ಯದ ಉಪಾಧ್ಯಕ್ಷೆ ಮತ್ತು ಜನವಾದಿ 40 ವರ್ಷಾಚರಣೆ – ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ನೀಲಾ ಮಾತನಾಡುತ್ತಾ ರೈತರ ಆಂದೋಲನವು ಜನತೆಯ ಆಂದೋಲನವಾಗಿದೆ. ರೈತ ಮಹಿಳೆಯು ಕೃಷಿಯ 75% ದಿಂದ 84% ದಷ್ಟು ಕೆಲಸ ಮಾಡಿಯೂ ಅವಳನ್ನು ರೈತಮಹಿಳೆ ಎಂದು ಪರಿಗಣಿಸುತ್ತಿಲ್ಲ. ಜನವಾದಿ ಮಹಿಳಾ ಸಂಘಟನೆಯು ರೈತರ ಆಂದೋಲನದಲ್ಲಿ ಸಂಪೂರ್ಣ ತೊಡಗಿಕೊಂಡಿದೆ. ಇದು ಎರಡನೆ ಸ್ವತಂತ್ರ್ಯ ಚಳುವಳಿಯಾಗಿದೆ. ಕೇಂದ್ರ ಸರಕಾರವು ಸಂವಿಧಾನವನ್ನು ನಾಶ ಮಾಡಿ ಮನುಸ್ಮೃತಿ ಹೇರಲು ಹೊರಟಿದೆ. ಮತ್ತು ದೇಶದ ಸಂಪತ್ತನ್ನು ಕಾರ್ಪೋರೇಟ್ ಗಳ ಕೈವಶ ಮಾಡಲು ಹೊರಟಿದೆ. ಇದರ ನೇರ ದುಷ್ಪರಿಣಾಮಕ್ಕೆ ಮಹಿಳೆ ಬಲಿಯಾಗುವಳು. ಆದ್ದರಿಂದ ಮಹಿಳಾ ಲೋಕವು ಇಂದು ಸಂವಿಧಾನ ಸಂರಕ್ಷಣೆಗಾಗಿಯೂ ಆಂದೋಲನದಲ್ಲಿ ಧುಮುಕಬೇಕಿದೆ. ನಿರುದ್ಯೋಗ ಸೃಷ್ಟಿಸುತ್ತಿದೆ ಪ್ರಭುತ್ವ. ಉದ್ಯೋಗದ ಮೂಲಭೂತ ಹಕ್ಕಿಗಾಗಿ ಹೋರಾಡಬೇಕಿದೆ. ಉದ್ಯೋಗದ ಖಾತ್ರಿಯನ್ನು ನಗರಕ್ಕೂ ವಿಸ್ತರಿಸಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ 40 ರ ವರ್ಷಾಚರಣೆ

ಕಾರ್ಯಕ್ರಮದಲ್ಲಿ ರೈತರ ಆಂದೋಲನಕ್ಕೆ ಬೆಂಬಲಿಸಿ ಕಾವ್ಯದ ಅಭಿವ್ಯಕ್ತಿ ಪ್ರಕಟಿಸಿದ ‘ಹೊನ್ನಾರು ಒಕ್ಕಲು’ ಕವನ ಸಂಕಲನ (ಕೆ ಷರೀಫ ಮತ್ತು ಯಮುನಾ ಗಾಂವ್ಕರ್ ಸಂಪಾದನೆ) ಹಾಗೂ ನವೀನಕುಮಾರ ದೆಹಲಿಯಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿ ಬರೆದ ಅನುಭವ ಬರಹ ಪುಸ್ತಕ ‘ಕದನ ಕಣ’ ಬಿಡುಗಡೆ ಮಾಡಲಾಯಿತು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ ಮೀನಾಕ್ಷಿ ಬಾಳಿ ಇವರು ‘ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಶ್ರಮಿಕ ವರ್ಗದಲ್ಲಿ ನಿರಂತರ ದುಡಿಮೆಗೈದ ಮಹಿಳೆಯರು ಮಹಿಳಾ ಅಸ್ಮಿತೆಯ ಪ್ರಶ್ನೆಗಳಿಗಾಗಿ ಸರ್ವ ಸಮಾನತೆಗಾಗಿ ಜನವಾದಿ ಮಹಿಳಾ ಸಂಘಟನೆ ಕಟ್ಟಿದರು. ಸ್ವತಂತ್ರ ಪೂರ್ವದಲ್ಲಿಯೂ ನಂತರವೂ ಮಹಿಳೆಯರು ಸಂಘಟಿತರಾಗಿ ಶೋಷಣೆ ಮುಕ್ತ ನಾಡಿಗಾಗಿ ತೊಡಗಿಸಿಕೊಂಡಿದ್ದಾರೆ. ಸೌಹಾರ್ದತೆಗಾಗಿ ಭಾವೈಕ್ಯತೆಗಾಗಿ ಮಹಿಳಾ ಚಳುವಳಿ ಶ್ರಮಿಸಿದೆ. ಆಳುವ ವರ್ಗದ ದೌರ್ಜನ್ಯಕ್ಕೆ ಎದುರಾಗಿ ನಡೆದುಬಂದ ಭಾರತದ ಜನವಾದಿ ಮಹಿಳಾ ಚಳುವಳಿಗೆ ನಲವತ್ತರ ವಯಸ್ಸು. ನಡೆಯಬೇಕಾದ ದಾರಿ ಇದ್ದೇ ಇದೆ. ಐಕ್ಯತೆಯಿಂದ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಲು ಹೋರಾಡಲೇಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಿನಿ ಕಿರಣಗಿ, ಮಲ್ಲಮ್ಮ ಕೋಡ್ಲಾ ಮಹಾದೇವಿ ಸಜ್ಜನ್, ಮಹಾನಂದಾ ತುಕ್ಕಾಣಿ, ರುಕ್ಮಿಣಿ, ಭಾರತಿ ಕಾಂಬಳೆ ನಂದಾದೇವಿ ಮಂಗೊಂಡಿ ಚಂದಮ್ಮ ಗೋಳಾ, ಜಗದೇವಿ ನೂಲಕರ್ , ಗಂಗಮ್ಮ ಬಿರಾದಾರ , ರೇಣುಕ, ವನಿತ,ಮಹಾದೇವಿ ಸಜ್ಜನ್, ಪದ್ಮಿನಿ ಕಿರಣಗಿ, ಗೋದಾವರಿ ಹುಡಗಿ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *