ಅಗ್ನಿಪಥ್‌ ಯೋಜನೆ ಅವೈಜ್ಞಾನಿಕ ಉದ್ಯೋಗ ನೀತಿ: ಸಿದ್ದರಾಮಯ್ಯ

ಗಂಗಾವತಿ:  ಅಗ್ನಿಪಥ್ ಯೋಜನೆ ಮೂಲಕ ಯುವಕರಿಗೆ ಉದ್ಯೋಗ ನೀಡಿವಂತೆ ಮಾಡುವುದು. ಅದೂ ಕೇವಲ 4 ವರ್ಷಗಳಿಗೆ ಮಾತ್ರ ಉದ್ಯೋಗ ನೀಡಿ ನಂತರ ಅವರನ್ನು ಮನೆಗೆ ಕಳಿಸುವ ಅವೈಜ್ಞಾನಿಕ ನೀತಿಯಾಗಿದೆ. ಇದು ಸರಿಯಾದ ಕ್ರಮವಲ್ಲ. ಬಹುತೇಕ ಎಸ್ಸಿ ಎಸ್ಟಿ ಹಿಂದುಳಿದವರು ಹೆಚ್ಚಾಗಿ ಸೈನ್ಯವನ್ನು ಸೇರುತ್ತಾರೆ. ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಗಂಗಾವತಿ ಮಾರ್ಗವಾಗಿ ಮಸ್ಕಿಗೆ ತೆರಳುವ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅಗ್ನಿಪಥ್ ಸೇರಿದಂತೆ ಅನೇಕ ವಿಷಯಗಳಲ್ಲಿ ಎಸ್‌.ಸಿ./ ಎಸ್‌.ಟಿ., ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ ಕೇಂದ್ರ ಸರಕಾರದ ದಮನಕಾರಿ ನೀತಿಗಳಿಂದಾಗಿ ಜನತೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಕೈಬಿಟ್ಟು  ಯುವಕರಿಗೆ ಉದ್ಯೋಗ ಒದಗಿಸುವ ಯೋಜಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ಎಸ್‌.ಸಿ./ ಎಸ್‌.ಟಿ., ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಸೇರಿದಂತೆ ಇತರ ವಿಷಯಗಳಲ್ಲಿ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಸಮೀಪಿಸುವ ಹಿನ್ನೆಲೆಯಲ್ಲಿ ಇದೀಗ ತರಾತುರಿಯಲ್ಲಿ ಕೇಂದ್ರ ಸರ್ಕಾರವು ಅಗ್ನಿಪಥ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳ ಭರ್ತಿ ಮಾಡಲು ಸೂಚನೆ ನೀಡಿದೆ. ಎಸ್‌.ಸಿ./ ಎಸ್‌.ಟಿ., ಹಿಂದುಳಿದವರಿಗೆ ಹೆಚ್ಚಿನ ಹುದ್ದೆಗಳು ಸಿಗುವಂತೆ ಅವಕಾಶಗಳನ್ನು ಕಲ್ಪಿಸಬೇಕು ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳಿಸುವ ಮೂಲಕ ಕರ್ನಾಟಕದಲ್ಲಿಎ ಮತ್ತೆ ಆಡಳಿತಕ್ಕೆ ಬರಲಿದೆ. ಬಿಜೆಪಿಯವರು ಮಾಡುವ ಎಲ್ಲಾ ಗಿಮಿಕ್ ಗಳನ್ನು  ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷದ ಈ ಹಿಂದಿನ ಆಡಳಿತವನ್ನು ಜನತೆ ಇದೀಗ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ(ಇಡಿ) ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ಮುಖಂಡರನ್ನು ಗುರಿಯಾಗಿಸುತ್ತಿದೆ. ಅವರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ನೆಪದಲ್ಲಿ ತನಿಖೆ ನಡೆಸುತ್ತಿದೆ. ಇದರಿಂದ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವಿರೋಧ ಪಕ್ಷ ಎರಡೂ ಸಹ ದೇಶದ ಪ್ರಗತಿಗೆ ಚಿಂತನೆ ನಡೆಸಬೇಕು. ತನಿಖೆ ಹೆಸರಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರನ್ನು ಗುರಿ ಮಾಡಿ ಸತತ ತನಿಖೆಗೆ ಒಳಪಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು .

Donate Janashakthi Media

Leave a Reply

Your email address will not be published. Required fields are marked *