ಹೊಳೆನರಸೀಪುರ: ದಲಿತರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ದಬ್ಬಾಳಿಕೆಯಿಂದ ಒತ್ತುವರಿ ಮಾಡಿ, ದೌರ್ಜನ್ಯವೆಸಗುತ್ತಿರುವವರ ಮೇಲೆ ಕ್ರಮ ಜರುಗಿಸಿ, ನೊಂದ ದಲಿತ ಕುಟುಂಬಗಳಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಒತ್ತಾಯಯಿಸಿ ಫೆಬ್ರವರಿ 9ರಂದು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (ಡಿಎಚ್ಎಸ್) ವತಿಯಿಂದ ಹೊಳೆನರಸೀಪುರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲಸಲಾಯಿತು.
ಹಳ್ಳಿ ಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದ ಕಾಳಯ್ಯ ಬಿನ್ ಸಣ್ಣಯ್ಯ, ಚಿಕ್ಕಮ್ಮ ಬಿನ್ ಕಲ್ಯಾಣಯ್ಯ, ಕೃಷ್ಣಪ್ಪ ಬಿನ್ ಕರಿಯಯ್ಯ, ಉದ್ದೂರು ಗ್ರಾಮದ ಸಣ್ಣ ಮರಿಯಯ್ಯ, ರಾಮೇನಹಳ್ಳಿ ಗ್ರಾಮದ ವೆಂಕಟಯ್ಯ ಮತ್ತು ಜವರಯ್ಯ ಹಾಗು ಕೆರಗೋಡು ಗ್ರಾಮದ ಸಣ್ಣ ನಿಂಗಯ್ಯ ಈ ಎಲ್ಲರೂ ಪರಿಶಿಷ್ಟ ಜಾತಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರುಗಳಿಗೆ ಉಯ್ಯಗೌಡನಹಳ್ಳಿ ಸರ್ವೆ ನಂಬರ್ 23, 24, 31, 32 ಇಲ್ಲಿ ಸರ್ಕಾರದಿಂದ ಮಂಜೂರಾದ ಜಮೀನುಗಳಿದ್ದು ಅದರಲ್ಲಿ ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದು, ತಮ್ಮ ಜೀವನ ನಡೆಸುತ್ತಿದ್ದಾರೆ.
ಇವರುಗಳಿಗೆ ಸೇರಿದ ಸದರಿ ಜಮೀನುಗಳನ್ನು ಜೊಡಿಗುಬ್ಬಿ ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದವರುಗಳಾದ ಸುರೇಶ ಬಿನ್ ಕಿಟ್ಟೇಗೌಡ, ಪ್ರಕಾಶ ಬಿನ್ ನಂಜುಂಡೇಗೌಡ, ಶಿವಣ್ಣೇಗೌಡ ಬಿನ್ ಬಾಗೇಗೌಡ, ಹರೀಶ್ ಗೌಡ ಬಿನ್ ಸಣ್ಣಾರಿಗೌಡ, ಗಂಗಮ್ಮ ಕೋಂ ಸಣ್ಣಾರಿಗೌಡ, ರಾಮೇಗೌಡ ಮತ್ತು ಶಿವೇಗೌಡ ಎಂಬುವವರುಗಳು ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ದಬ್ಬಾಳಿಕೆಯಿಂದ ಒತ್ತುವರಿ ಮಾಡಿಕೊಂಡಿರುತ್ತಾರೆ.
ಇದನ್ನೂ ಓದಿ: ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಎಂಬುದಾಗಿ ಹೇಳಲಾಗದು: ಹೈಕೋರ್ಟ್
ದಲಿತರು ತಮ್ಮ ಜಮೀನು ಒತ್ತುವರಿಯಾಗಿದೆ, ಬಿಟ್ಟುಕೊಡಿ ಎಂದು ಕೇಳಲು ಹೋದ ಸಂದರ್ಭದಲ್ಲಿ ದಲಿತರ ಮೇಲೆಯೇ ದೌರ್ಜನ್ಯ ನಡೆಸಲು ಮುಂದಾಗಿರುತ್ತಾರೆ.
ಸುರೇಶ ಬಿನ್ ಕಿಟ್ಟೇಗೌಡ ಎಂಬುವವರು ದಲಿತರ ಜಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡುವುದ ಜೊತೆಗೆ ತನ್ನ ಕುಟುಂಬದವರೊಂದಿಗೆ ಸಣ್ಣನಿಂಗಯ್ಯ ಸೇರಿದ ಜಮೀನಿನಲ್ಲಿ ದನಕರುಗಳಿಗೆ ನಿರ್ಮಿಸಿದ್ದ ಗುಡಿಸಲಿಗೆ ಬೆಂಕಿ ಹಾಕಿ ಅವರ ಜಮೀನನನ್ನು ಒತ್ತುವರಿ ಮಾಡಿ ಜೆಸಿಬಿ ಇಂದ ಕಾಲುವೆ ತೆಗೆದು, ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಸಣ್ಣನಿಂಗಯ್ಯ ರವರ ಮಗ ಪರಮೇಶ್ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿರುತ್ತಾರೆ.
ಈ ಬಗ್ಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಎಷ್ಟು ಬಾರಿ ದೂರು ನೀಡಿದರೂ ದೌರ್ಜನ್ಯ ನಡೆಸಿದವರ ಮೇಲೆ ಎಫ್ಐಆರ್ ಮಾಡದೇ, ಕ್ರಮ ಕೈಗೊಳ್ಳದಿರುವುದು ಸರಿಯಾದುದಲ್ಲ. ಇದು ದೌರ್ಜನ್ಯ ವೆಸಗಿದ ಬಲಾಢ್ಯರ ಪರವಾದ ಪೊಲೀಸರ ದಲಿತ ವಿರೋಧಿ ಮನಸ್ಥಿಯನ್ನು ತೋರಿಸುತ್ತದೆ.
ಅಲ್ಲದೇ ಜೊಡಿಗುಬ್ಬಿ ಗ್ರಾಮದ ಜಿ.ಕೆ ಪರಮೇಶ್ ಎಂಬುವರು ನೊಂದ ದಲಿತರ ಪರವಾಗಿ ಇರುವುದನ್ನೂ ಸಹಿಸದ ಸುರೇಶ್ ಬಿನ್ ಕಿಟ್ಟೇಗೌಡ ತನ್ನ ಬಲಾಡ್ಯ ಜಾತಿ ಪ್ರಭಾವದಿಂದ ಜಿ. ಕೆ ಪರಮೇಶ್ ಎಂಬುವವರ ವಿರುದ್ಧ ಅಲ್ಲಿಯ ಜನರನ್ನು ಎತ್ತಿಕಟ್ಟುವುದು ಮತ್ತು ಶಾಸಕರಾದ ಎ. ಮಂಜು ರವರಿಗೆ ಇಲ್ಲ ಸಲ್ಲದ ಮಾಹಿತಿ ನೀಡಿ ಪಿತೂರಿ ನಡೆಸುವುದು ಹಾಗು ದಲಿತರ ವಿರುದ್ಧ ದಬ್ಬಾಳಿಕೆ ದೌರ್ಜನ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಸುರೇಶ್ ಮೇಲೆ ಸೂಕ್ತ ಕಾನುನು ಕ್ರಮ ಜರುಗಿಸಬೇಕೆಂದು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಆಗ್ರಹಿಸಲಾಯಿತು.
ಶತಮಾನಗಳಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಅಸ್ಪೃಶ್ಯತೆಯ ತುಳಿತಕ್ಕೆ ಒಳಗಾಗಿರುವ ದುರ್ಬಲ ದಲಿತ ಸಮುದಾಯದವರಾದ ಸರ್ಕಾರದಿಂದ ಅಲ್ಪ ಸ್ವಲ್ಪ ಭೂಮಿ ಮಂಜೂರಾಗಿದ್ದರೂ, ಅದರಲ್ಲಿ ಉಳುಮೆ ಮಾಡಿ ಬದುಕು ಸಾಗಿಸಲು ಬಿಡದೇ ಈ ರೀತಿಯಲ್ಲಿ ಅಕ್ರಮವಾಗಿ ದಬ್ಬಾಳಿಕೆಯಿಂದ ಅವರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವುದು ಅಕ್ಷಮ್ಯ.
ದಲಿತರಿಗೆ ಮಂಜೂರಾಗಿರುವ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರಿಂದ ಜಮೀನನ್ನು ತೆರವುಗೊಳಿಸಿ ಸದರಿ ದಲಿತರಿಗೆ ಬಿಡಿಸಿ ಕೊಡಲು ಕೂಡಲೇ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸದಂತೆ ರಕ್ಷಣೆ ಗೆ ಕ್ರಮ ವಹಿಸಬೇಕೆಂದು ತಾಲ್ಲೂಕು ಆಡಳಿಕ್ಕೆ ದಲಿತ ಹಕ್ಕುಗಳ ಸಮಿತಿ- ಕರ್ನಾಟಕ #DHS ಒತ್ತಾಯಿಸಿ ಮನವಿ ಮಾಡಲಾಯಿತು.
ಡಿಎಚ್ಎಸ್ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ., ಹೊಳೆನರಸೀಪುರ ತಾಲ್ಲೂಕು ಸಂಚಾಲಕರಾದ ರಾಜು ಸಿಗರನಹಳ್ಳಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಸಿಐಟಿಯು ಮುಖಂಡ ಕುಮಾರಸ್ವಾಮಿ, ಜಿ.ಕೆ ಪರಮೇಶ್, ಕೃಷ್ಣಪ್ಪ, ಮರಿಯಯ್ಯ, ಕಾಳಯ್ಯ, ಸಣ್ಣನಿಂಗಯ್ಯ, ತಾಯಮ್ಮ, ಚಿಕ್ಕಮ್ಮ, ಕರಿಯಯ್ಯ, ವೆಂಕಟಯ್ಯ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಗುತ್ತಿಗೆ ಜೀವನಕ್ಕೆ ಅಂತ್ಯ ಬೇಕು – ಫೆ 12ಕ್ಕೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ | ಎಸ್ ವರಲಕ್ಷ್ಮಿ
