ಲಕ್ಷದ್ವೀಪಕ್ಕೆ ಅನಗತ್ಯವಾದ ಸುಧಾರಣಾ ಅಲೆಗಳು

ಮೂಲ: ವಜಾಹತ್ ಹಬೀಬುಲ್ಲಾ (ದ ಹಿಂದೂ 31-05-2021)

ಅನುವಾದ: ನಾ ದಿವಾಕರ

ಕಳೆದ ಡಿಸೆಂಬರ್‌ನಲ್ಲಿ ಲಕ್ಷದ್ವೀಪದ ಹೆಚ್ಚುವರಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಫುಲ್ ಪಟೇಲ್, ಈಗ ಲಕ್ಷದ್ವೀಪದ ಆಡಳಿತ ಸುಧಾರಣೆಗಾಗಿ ಹಲವಾರು ಶಾಸನಗಳನ್ನು ಸಿದ್ಧಪಡಿಸಿದ್ದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಸುಧಾರಣೆಗಳನ್ನು ಜಾರಿಗೊಳಿಸಿದರೆ ಈ ದ್ವೀಪದ ಮೇಲೆ ತೀವ್ರ ತೆರನಾದ ಪ್ರಭಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ಲಕ್ಷದ್ವೀಪ ಜಾನುವಾರು ಸಂರಕ್ಷಣಾ ವಿಧಾಯಕ 2021; ಸಮಾಜಘಾತುಕ ಚಟುವಟಿಕೆಗಳ ನಿರ್ಬಂಧಕ ವಿಧಾಯಕ (ಪಿಎಎಸ್‍ಎ); ಲಕ್ಷದ್ವೀಪ ಪಂಚಾಯತ್ ವಿಧಾಯಕ 2021; ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ವಿಧಾಯಕ 2021 ಇವೇ ಮುಂತಾದ ಶಾಸನಗಳ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತಾಣ ಎನಿಸಿರುವ ನೆರೆ ದ್ವೀಪ ಮಾಲ್ಡೀವ್ಸ್ ಮಾದರಿಯಲ್ಲಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಈ ಸುಧಾರಣೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದೆ ಎಂದು ಪ್ರಫುಲ್ ಪಟೇಲ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ದನಿಗೂಡಿಸುವ ಯುವ ಐಎಎಸ್ ಅಧಿಕಾರಿ ಎಸ್ ಅಕ್ಸರ್ ಅಲಿ, 2017ರಲ್ಲೇ ಕೇಂದ್ರ ಸರ್ಕಾರವು ದ್ವೀಪ ಅಭಿವೃದ್ಧಿ ಪ್ರಾಧಿಕಾರವೊಂದನ್ನು (ಐಡಿಎ) ರಚಿಸಿದ್ದು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಈ ಪ್ರಾಧಿಕಾರವು ಲಕ್ಷದ್ವೀಪದಲ್ಲಿ ನಗರ ಮತ್ತು ಪಟ್ಟಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಿದೆ ಎಂದು ಹೇಳುತ್ತಾರೆ.

ದ್ವೀಪ ಅಭಿವೃದ್ಧಿ ಪ್ರಾಧಿಕಾರದ ಚೌಕಟ್ಟು

ಭಾರತದ ದ್ವೀಪ ಪ್ರದೇಶಗಳ ಅಭಿವೃದ್ಧಿಗಾಗಿ 1988ರಲ್ಲಿ ರಚಿಸಲಾದ ದ್ವೀಪ ಅಭಿವೃದ್ಧಿ ಪ್ರಾಧಿಕಾರ(ಐಡಿಎ)ಕ್ಕೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅಧ್ಯಕ್ಷರಾಗಿದ್ದರು. ದ್ವೀಪಗಳ ಸರ್ವತೋಮುಖ ಅಭಿವೃದ್ಧಿಗಾಗಿಯೇ ರಚಿಸಲಾಗಿದ್ದ ಈ ಪ್ರಾಧಿಕಾರ 1988ರಲ್ಲಿ ಕರವಟ್ಟಿಯಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಅಭಿವೃದ್ಧಿಯ ನೀಲನಕಾಶೆಯನ್ನೂ ಸಿದ್ಧಪಡಿಸಲಾಗಿತ್ತು. ಈ ಸಭೆಯಲ್ಲಿ, ಎರಡೂ ದ್ವೀಪ ಸಮೂಹಗಳ ಅಭಿವೃದ್ಧಿಗಾಗಿ, ಪರಿಸರ ರಕ್ಷಣೆಯ ದೃಷ್ಟಿಯಿಂದ ಒಂದು ಸಮರ್ಪಕವಾದ ತಂತ್ರಗಾರಿಕೆಯನ್ನು ಅನುಸರಿಸುವುದು ಸೂಕ್ತ ಎಂದು ತೀರ್ಮಾನಿಸಲಾಗಿತ್ತು. ಇಲ್ಲಿ ಜಲ ಸಂಪನ್ಮೂಲಗಳ ಸದ್ಬಳಕೆಯೊಂದಿಗೇ ಭೂ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವ ಮೂಲಕ ಸಮತೋಲನದ ನೀತಿಯನ್ನು ಅನುಸರಿಸಲು ಈ ಸಮಿತಿಯಲ್ಲಿ ತೀರ್ಮಾನಿಸಲಾಗಿತ್ತು. 1989ರಲ್ಲಿ ಪ್ರಕಟಿಸಲಾದ ಈ ಆರು ಅಂಶಗಳ ಶಿಫಾರಸುಗಳನ್ನೊಳಗೊಂಡ ವರದಿಯನ್ನು ಸಹ ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ 1987-90, ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ನನಗೆ ಅಲ್ಲಿ ಕಾರ್ಯ ನಿರ್ವಹಿಸುವ ಸದವಕಾಶವೂ ಒದಗಿತ್ತು.

ಇದನ್ನು ಓದಿ: ಲಕ್ಷದ್ವೀಪದಲ್ಲಿ ಗುಜರಾತ ಮಾದರಿ

ನನ್ನ ಆಡಳಿತಾವಧಿಯನ್ನು ಪೂರೈಸುವ ವೇಳೆಗೇ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆ ಚಾಲನೆಯಲ್ಲಿತ್ತು. 1993ರ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ ಜಾರಿಯಾಗುವ ಮುನ್ನವೇ ಇಲ್ಲಿ ಅಧಿಕಾರ ವಿಕೇಂದ್ರೀಕರಣ ಚಾಲ್ತಿಯಾಗಿತ್ತು. ಈ ವ್ಯವಸ್ಥೆಯ ಅನುಸಾರ ದ್ವೀಪ ಅಭಿವೃದ್ಧಿ ಕೌನ್ಸಿಲ್‌ನ  ಆಡಳಿತದಲ್ಲಿ ಸ್ಥಳೀಯ ಸರ್ಕಾರವು ಆಡಳಿತಾಧಿಕಾರಿಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಆದೇಶಿಸಬೇಕಿತ್ತು. ಬಂಗಾರಾಂನ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರ, ತನ್ನದೇ ಆದ ವಿಮಾನ  ನಿಲ್ದಾಣ ಮತ್ತು ಪ್ರವಾಸೋದ್ಯಮಗಳ ಮೂಲಕ ಲಕ್ಷದ್ವೀಪ ಉತ್ತಮ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಂಡಿದ್ದೇ ಅಲ್ಲದೆ, ಕೇರಳದಲ್ಲೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗಿತ್ತು.

ಅರಬ್ಬಿ ಸಮುದ್ರದ ನಡುವೆ ಇರುವ ಈ ಸ್ವರ್ಗ ಸಮಾನ ಲಕ್ಷದ್ವೀಪ ಎಂಬ ದ್ವೀಪಸಮೂಹ ಮೂರು ವಿಭಿನ್ನ ಪರಿಸರ ವ್ಯವಸ್ಥೆಗಳ ಮೂಲಕ ಭಾರತಕ್ಕೆ ಒಂದು ವ್ಯಾಪಕವಾದ ಆರ್ಥಿಕ ವಲಯವನ್ನೇ ಸೃಷ್ಟಿಸುತ್ತದೆ. ಭೂಮಿ, ಕಡಲು ಮತ್ತು ಹವಳದಿಬ್ಬ ಈ ಮೂರೂ ಪರಿಸರ ತಾಣಗಳು ಭಾರತದ ಆರ್ಥಿಕ ಪ್ರಗತಿಗೆ ಪೂರಕವಾಗಿ ಪರಿಣಮಿಸುತ್ತವೆ. ಇಲ್ಲಿ ಮೀನುಗಾರಿಕೆ ಪ್ರಮುಖ ಕಸುಬು ಆಗಿದ್ದು, ಮಿನಿಕಾಯ್ ಒಂದನ್ನು ಹೊರತುಪಡಿಸಿ ಉಳಿದೆಡೆ ಮಳಯಾಳಿ ಭಾಷಿಕರೇ ಹೆಚ್ಚಾಗಿದ್ದಾರೆ. ಮಿನಿಕಾಯ್‍ನಲ್ಲಿ ಮಹ್ಲ್ ಭಾಷೆಯನ್ನು ಮಾತನಾಡಲಾಗುತ್ತದೆ. ಇದು 17ನೆಯ ಶತಮಾನದ ಮಾಲ್ಡೀವ್ಸ್‌ನ ದಿವೇಹಿ ಭಾಷೆಯನ್ನು ಹೋಲುತ್ತದೆ.

ಎಲ್ಲ ದ್ವೀಪಗಳಲ್ಲೂ ಸಮಾಜವು ಮಾತೃಪ್ರಧಾನವಾಗಿಯೇ ಇದೆ. ಇಸ್ಲಾಂ ಪ್ರಧಾನ ಮತಧರ್ಮವಾಗಿದ್ದು, ಶಾಫಿ ವಿಚಾರಧಾರೆ ಪ್ರಮುಖವಾಗಿ ಕಂಡುಬರುತ್ತದೆ. ಈ ದ್ವೀಪ ಸಮೂಹಗಳಿಗೆ ಇಸ್ಲಾಂ ಆಗಮನ ಯಾವ ಕಾಲಘಟ್ಟದಲ್ಲಿ ಸಂಭವಿಸಿದೆ ಎಂದು ಹೇಳುವ ಪ್ರೊ ಲೋಟಿಕಾ ವರದರಾಜನ್ “ಮಾಲ್ಡೀವ್ಸ್‌ಗೆ ಸಂಬಂಧಪಟ್ಟಂತೆ ಇಸ್ಲಾಂ ಧರ್ಮವು ಯಮನ್ ಮತ್ತು ಹದ್ರಾಮೌತ್‍ನಿಂದ ಪರಿಚಯಿಸಲ್ಪಟ್ಟಿದೆ ಎನ್ನುವುದನ್ನು ಒಪ್ಪಬಹುದಾದರೂ, ಲಕ್ಷದ್ವೀಪದ ಬಗ್ಗೆ ಹೀಗೆ ನಿಖರವಾಗಿ ಹೇಳಲಾಗುವುದಿಲ್ಲ. ಇಲ್ಲಿ ಸಮುದಾಯದ ಜನರ ನಡುವಿನ ಉಡುಪು, ವಸ್ತ್ರ ವಿನ್ಯಾಸ, ಸಾಮಾಜಿಕ ಕಟ್ಟುಪಾಡುಗಳು ಇವೆಲ್ಲವನ್ನೂ ನೋಡಿದರೆ ತಂಗಲ್ ಸಮುದಾಯವು ಮಲಬಾರ್ ಪ್ರಾಂತ್ಯದ ಮಾಪ್ಪಿಳ್ಳರಿಗೆ ಹೆತ್ತಿರವಾಗಿ ಕಾಣುತ್ತಾರೆ. ಲಕ್ಷದ್ವೀಪದಲ್ಲಿ ಇಂದು ಕಾಣುವ ಇಸ್ಲಾಂ ಧರ್ಮದ ಮೂಲ ಇದೇ ಎಂದು ತೋರುತ್ತದೆ” ಎಂದು ಹೇಳುತ್ತಾರೆ. ಅತಿ ಹೆಚ್ಚು ಸಂಸ್ಕೃತದ ಛಾಯೆ ಇರುವ ವಟ್ಟೆಲುಟ್ಟು ಲಿಪಿಯು ಇಲ್ಲಿನ ನಾವಿಕರ ಮಾರ್ಗಸೂಚಿ ಗ್ರಂಥಗಳಲ್ಲಿ ಪ್ರಧಾನವಾಗಿ ಕಾಣುತ್ತವೆ.  ಮಸೀದಿಗಳಲ್ಲಿ ಇರುವ ಗೋಪುರಗಳು ಮತ್ತು ಶಾಸನಗಳಲ್ಲೂ ಇದೇ ಭಾಷೆ ಕಂಡುಬರುತ್ತದೆ. ಇಸ್ಲಾಂ ಪರಿಚಯವಾದ ನಂತರದಲ್ಲಿ ಅರೇಬಿಕ್ ಲಿಪಿಯಲ್ಲಿ ಬರೆದ ಮಳಯಾಳಿ ಸಾಹಿತ್ಯ ಇಲ್ಲಿ ವಿಪುಲವಾಗಿ ಬೆಳೆದುಬಂದಿದ್ದು, ದ್ವೀಪಗಳಲ್ಲೂ ಇದನ್ನೇ ಗುರುತಿಸಬಹುದು.

ಇದನ್ನು ಓದಿ: ಲಕ್ಷದ್ವೀಪದಲ್ಲಿ ಸರ್ವಾಧಿಕಾರಶಾಹೀ ಆಳ್ವಿಕೆ: ಹೆಚ್ಚುತ್ತಿರುವ ಪ್ರತಿರೋಧ ಆಡಳಿತಗಾರನನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಗ್ರಹ

1985ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲಕ್ಷದ್ವೀಪಕ್ಕೂ ಭೇಟಿ ನೀಡಿದ್ದರು. ಅವರ ತಂಡದ ಸದಸ್ಯರಲ್ಲಿ ನಾನೂ ಒಬ್ಬನಾಗಿದ್ದೆ. ಅಲ್ಲಿಯವರಗೂ ಭಾರತ ಸರ್ಕಾರದ ಕೇಂದ್ರ ಯೋಜನಾ ಆಯೋಗ ರೂಪಿಸುತ್ತಿದ್ದ ಅಭಿವೃದ್ಧಿಯ ಮಾರ್ಗದಲ್ಲೇ ನಡೆಯುತ್ತಿದ್ದ ಈ ದ್ವೀಪ ಸಮೂಹಗಳ ಸೂಕ್ಷ್ಮ ಪರಿಸರವಲಯದ ಪ್ರಗತಿಗಾಗಿ ಒಂದು ಸ್ಪಷ್ಟ ಅಭಿವೃದ್ಧಿ ಕಾರ್ಯಸೂಚಿಯನ್ನು ಸಿದ್ಧಪಡಿಸಲು ರಾಜೀವ್ ಗಾಂಧಿ ಯೋಚಿಸಿದ್ದರು. ಈ ಯೋಜನಾ ಆಯೋಗದ ಅಭಿವೃದ್ಧಿ ಯೋಜನೆಗಳಲ್ಲಿ ಇಲ್ಲಿನ ಸ್ಥಳೀಯ ನಿವಾಸಿಗಳ ಆಶೋತ್ತರಗಳು ಅಥವಾ ಹಿತಾಸಕ್ತಿಗಳು ಹೆಚ್ಚಿನ ಪ್ರಾಶಸ್ತ್ಯ ಗಳಿಸುತ್ತಿರಲಿಲ್ಲ ಎನ್ನುವುದನ್ನೂ ರಾಜೀವ್ ಗಾಂಧಿ ಗುರುತಿಸಿದ್ದರು.

ಲಕ್ಷದ್ವೀಪದ ಭೂ ಒಡೆತನವನ್ನು ಸಾಂವಿಧಾನಿಕವಾಗಿ ರಕ್ಷಿಸುತ್ತಲೇ, ಇಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಒದಗಿಸಲು ಐಡಿಎ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಇಲ್ಲಿನ ಸಂಪನ್ಮೂಲಗಳನ್ನು ಮಾರುಕಟ್ಟೆಯ ದೃಷ್ಟಿಯಿಂದ ಶೋಷಣೆಗೊಳಪಡಿಸಿದೆ ದ್ವೀಪದ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯತ್ತ ಗಮನ ಹರಿಸಲು ಯೋಜಿಸಲಾಗಿತ್ತು. ಮಾಲ್ಡೀವ್ಸ್ ಮಾದರಿಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿತ್ತು. ಇಲ್ಲಿನ ಉದ್ಯಮಗಳು ಜನ ಕೇಂದ್ರಿತವಾಗಿದ್ದು ದುರ್ಬಲವಾಗಿದ್ದ ಹವಳ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವತ್ತ ಹೆಚ್ಚು ಗಮನ ನೀಡಲಾಗಿತ್ತು.

ಲಕ್ಷದ್ವೀಪದಲ್ಲಿ ಇಂದು ಪ್ರತಿಯೊಂದು ಮನೆಯಲ್ಲೂ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ. ವಿದ್ಯುತ್ ದೀಪದ ಶೇಕಡಾ 10ರಷ್ಟನ್ನು ಸೌರ ವಿದ್ಯುತ್ ಮೂಲಕ ಪೂರೈಸಲಾಗುತ್ತದೆ. ಇದು ಪರಿಸರ ಸ್ನೇಹಿ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತಕ್ಕೆ ಮಾರ್ಗದರ್ಶಿಯಾಗಿಯೇ ಕಾಣುತ್ತದೆ. 1986ರಿಂದಲೇ ಇಲ್ಲಿನ ಎಲ್ಲ ದ್ವೀಪಗಳ ನಡುವೆಯೂ ಹೆಲಿಕಾಪ್ಟರ್ ಮೂಲಕ ಸಾರಿಗೆ ಸಂಪರ್ಕ ಏರ್ಪಡಿಸಲಾಗಿದೆ. 1990ರಲ್ಲಿ ಅಂತಾರಾಷ್ಟ್ರೀಯ ಮುಕ್ತ ಮಾರುಕಟ್ಟೆಯ ಮೂಲಕ ಅತಿ ವೇಗದ ಪ್ರಯಾಣಿಕರ ನಾವೆಗಳನ್ನು ಸಹ ಆರಂಭಿಸಲಾಗಿದೆ. ಈ ದ್ವೀಪಗಳು ಸಂಪೂರ್ಣ ಸಾಕ್ಷರತೆ ಸಾಧಿಸಿವೆ. ಮಿನಿಕಾಯ್‍ನಲ್ಲಿ ದೇಶದ ಪ್ರಪ್ರಥಮ ನವೋದಯ ವಿದ್ಯಾಲಯವೂ ಸ್ಥಾಪನೆಯಾಗಿತ್ತು. ಕದಮತ್‍ನಲ್ಲಿ ಒಂದು ಪದವಿ ಕಾಲೇಜು ಸಹ ಇದ್ದು ಇದನ್ನು ಸ್ಥಳೀಯ ಭಾಷಾ ಸಂಪ್ರದಾಯಗಳ ತಜ್ಞ, ವಿದ್ವಾಂಸ ಕೆ ಟಿ ರವೀಂದ್ರನ್ ವಿನ್ಯಾಸಗೊಳಿಸಿದ್ದರು. 1980ರ ನಂತರದಲ್ಲಿ ಸ್ಥಳೀಯ ಕಟ್ಟಡ ನಿರ್ಮಾಣ ವಿನ್ಯಾಸವನ್ನೇ ಅನುಸರಿಸಿ ಸರ್ಕಾರಗಳ ಎಲ್ಲ ಗೃಹ ಯೋಜನೆಗಳಿಗೂ ಇದನ್ನೇ ಅಳವಡಿಸಲಾಗಿತ್ತು. ಲಕ್ಷದ್ವೀಪದಲ್ಲಿ ಜಿಡಿಪಿಯ ಲೆಕ್ಕದಲ್ಲಿನ ದಾರಿದ್ರ್ಯ ರೇಖೆ ವಿಶ್ವಬ್ಯಾಂಕ್ ಮಿತಿಗಿಂತಲೂ ಹೆಚ್ಚಾಗಿಯೇ ಇದ್ದರೂ, ಇಲ್ಲಿ ಹೆಚ್ಚಿನ ದಾರಿದ್ರ್ಯ ಕಂಡುಬರುವುದಿಲ್ಲ. ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನೇ ಇಲ್ಲಿನ ಜನರು ಸೇವಿಸುತ್ತಾರೆ.

ಇದನ್ನು ಓದಿ: ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಲಕ್ಷದ್ವೀಪದ ಆಡಳಿತಾಧಿಕಾರಿಯ ಕಚೇರಿ ದೇಶದಲ್ಲೇ ಪ್ರಪ್ರಥಮ ಸಂಪೂರ್ಣ ಗಣಕೀಕೃತ ಕಚೇರಿಯಾಗಿ ರೂಪುಗೊಂಡಿತ್ತು. 1990ರ ವೇಳೆಗೆ ಲಕ್ಷದ್ವೀಪದ ಎಲ್ಲ ದ್ವೀಪಗಳಲ್ಲೂ ಗಣಕ ಯಂತ್ರಗಳು ಬಳಕೆಯಲ್ಲಿದ್ದವು. 8, 9 ಮತ್ತು 10ನೆಯ ಹಣಕಾಸು ಆಯೋಗ (1984-2005)ದ ಮೂಲಕ ಈ ದ್ವೀಪದ ಅಭಿವೃದ್ಧಿಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಹತ್ತನೆಯ ಆಯೋಗದ ಮಾತುಗಳಲ್ಲೇ ಹೇಳುವುದಾದರೆ, ಈ ಮೂರೂ ಆಯೋಗಗಳ ವರದಿಯ ಫಲಶ್ರುತಿಯಾಗಿಯೇ ಲಕ್ಷದ್ವೀಪ ಒಂದು ಯೋಜನಾಬದ್ಧವಾದ, ಉತ್ತಮ ನಿರ್ವಹಣೆಯ ವೆಚ್ಚದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಿತ್ತು. ಆದರೂ ಇನ್ನೂ ಸುಧಾರಣಾ ಕ್ರಮಗಳು ಅಗತ್ಯವಾಗಿ ಬೇಕಾಗಿವೆ. ಮೀನುಗಾರಿಕೆಯ ಕ್ಷೇತ್ರದಲ್ಲಿ ಶೀತಲ ಸಂಗ್ರಹಾಲಯಗಳು ಹೆಚ್ಚಾಗಿದ್ದರೂ ಸಹ ಆದಾಯದಲ್ಲಿ ತಾರತಮ್ಯಗಳು ಹೆಚ್ಚಾಗುತ್ತಿವೆ. ಅವೈಜ್ಞಾನಿಕ ಎಳೆಬಲೆಯ ಮೀನುಗಾರಿಕೆಯಿಂದ ಹವಳ ದ್ವೀಪಗಳು ನಾಶವಾಗುತ್ತವೆ. ಮಾಲ್ಡಿವ್ಸ್‌ ನಲ್ಲಿ ಈಗಾಗಲೇ ಇದನ್ನು ನಿಷೇಧಿಸಲಾಗಿದೆ.

ದ್ವೀಪಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಗಳು ಈಗಾಗಲೇ ಕ್ರಮಕೈಗೊಂಡಿವೆ. ಮೀನುಗಾರಿಕೆ ಪ್ರಕ್ರಿಯೆಯನ್ನು ಪರಿಸರ ಸ್ನೇಹಿಯನ್ನಾಗಿ ನಿರ್ವಹಿಸಲು ಸೂಕ್ತ ಕ್ರಮಗಳನ್ನು ಜರುಗಿಸಲಾಗಿದ್ದು, ನಿರ್ಮಲೀಕರಣ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಹೆಚ್ಚಿನ ಸೌಲಭ್ಯಗಳು ಹೆಚ್ಚಿನ ಆದ್ಯತೆ ಪಡೆಯುತ್ತಿವೆ. ಮತ್ತೊಂದೆಡೆ ಯುವ ಪೀಳಿಗೆ ಆಧುನಿಕ ಶಿಕ್ಷಣ ಪಡೆದ ನಂತರ ತಮ್ಮ ಸಾಂಪ್ರದಾಯಿಕ ಕಸುಬುಗಳಿಗೆ ಹೆಚ್ಚಿನ ಒಲವು ತೋರುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಇವುಗಳನ್ನು ಸಾಧಿಸಲು ಈಗಿನ ಆಡಳಿತ ಸಮಿತಿ ಶಿಫಾರಸು ಮಾಡಿರುವ ಯಾವುದೇ ಕ್ರಮಗಳೂ ಅಗತ್ಯ ಎನಿಸುವುದಿಲ್ಲ. ಬಂಗಾರಾಂ ಸೇರಿದಂತೆ ಹಲವಾರು ರೆಸಾರ್ಟ್‍ಗಳು ಕೋರ್ಟ್ ಮೊಕದ್ದಮೆಗಳ ಕಾರಣ ಮುಚ್ಚಿಹೋಗಿರುವುದರಿಂದ ಪ್ರವಾಸೋದ್ಯಮದ ಆದಾಯದ ಕಡಿಮೆಯಾಗುತ್ತಿದೆ.

ಈಗಿನ ಕೇಂದ್ರಾಡಳಿತ ಪ್ರದೇಶದ ಆಡಳಿತ ವ್ಯವಸ್ಥೆಯಲ್ಲಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡೇ ಇಲ್ಲಿನ ನೈಸರ್ಗಿಕ ಸಂಪನ್ಮೂಳಗಳ ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಸಮರ್ಪಕವಾಗಿ ಏರ್ಪಡಿಸಬಹುದು.  ಇಲ್ಲಿ ಹವಾಮಾನದ ವೈಪರೀತ್ಯಗಳನ್ನೂ ಗಮನದಲ್ಲಿಡಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಮಾಲ್ಡೀವ್ಸ್ ನಮಗೆ ಸೂಕ್ತವಾದ ಮಾದರಿ ಆಗುವುದಿಲ್ಲ.  ನೀತಿ ಆಯೋಗದ ನೀರಿನ ಬಂಗಲೆಗಳ ಪರಿಕಲ್ಪನೆ ಅತ್ಯಂತ ದುಬಾರಿಯಾಗಿದ್ದು ಇದು ಹವಳ ದ್ವೀಪಗಳಿಗೆ ವಿನಾಶಕಾರಿಯಾಗಿ ಪರಿಣಮಿಸುತ್ತದೆ. ಲಕ್ಷದ್ವೀಪದ ಹವಾಮಾನ ವೈಪರೀತ್ಯಗಳಿಂದಲೇ ಇದು ನಾಶವಾಗುವ ಸಾಧ್ಯತೆಗಳಿರುತ್ತವೆ.

ಇಂತಹ ಒಂದು ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದಲ್ಲಿ ಕಳೆದ 70 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳುವ ಮೂಲಕ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ಲಕ್ಷದ್ವೀಪದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಈ ಯೋಜನೆಗಳ ಪೈಕಿ ಗೋ ಹತ್ಯೆ ನಿಷೇಧ ಪ್ರಮುಖವಾಗಿದೆ. ಆದರೆ ಲಕ್ಷದ್ವೀಪದಲ್ಲಿ ಸರ್ಕಾರಿ ಒಡೆತನದ ಡೈರಿಗಳನ್ನು ಹೊರತುಪಡಿಸಿದರೆ ಗೋವುಗಳೇ ಇಲ್ಲ ಎನ್ನುವುದು ವಾಸ್ತವ. ಅಪರಾಧದ ಪ್ರಮಾಣ ಅತ್ಯಂತ ಕನಿಷ್ಟ ಮಟ್ಟದಲ್ಲಿರುವ ಈ ದ್ವೀಪಸಮೂಹದಲ್ಲಿ ನಿರ್ಬಂಧಕ ಬಂಧನದ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ಆದಿವಾಸಿಗಳ ಭೂ ಒಡೆತನದ ಸಾಂಪ್ರದಾಯಿಕ ವ್ಯವಸ್ಥೆಗೆ ಬದಲಾಗಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದ್ದು, ನ್ಯಾಯಾಂಗಕ್ಕೆ ಮೊರೆ ಹೋಗುವ ಅವಕಾಶವನ್ನೂ ಇಲ್ಲವಾಗಿಸುತ್ತಿದೆ. ಗರಿಷ್ಟ ಎಂದರೆ 11 ಕಿಲೋಮೀಟರ್‌ಗಿಂತಲೂ ದೂರ ಇರುವ ರಸ್ತೆಗಳೇ ಇಲ್ಲದ ದ್ವೀಪದಲ್ಲಿ ರಸ್ತೆ ಅಗಲೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಲಕ್ಷದ್ವೀಪದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ಇಲ್ಲಿನ ಖನಿಜ ಸಂಪತ್ತನ್ನು ಬಳಸಿಕೊಳ್ಳಲು ಯೋಚಿಸಲಾಗುತ್ತಿದೆ. ಇದರಿಂದ ಲಕ್ಷದ್ವೀಪ ಒಂದು ಸಿಮೆಂಟ್ ಉತ್ಪಾದನಾ ವಲಯವಾಗಿ ಪರಿವರ್ತನೆಯಾಗುವುದು ಖಚಿತ.

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ 5ರ ಅನ್ವಯ ಲಕ್ಷದ್ವೀಪದಲ್ಲಿ ಜನಸಂಖ್ಯಾ ಫಲವತ್ತತೆಯ ಪ್ರಮಾಣ 1.4ರಷ್ಸಿದ್ದು ಇದು ರಾಷ್ಟ್ರೀಯ ಸರಾಸರಿ 2.2ಕ್ಕಿಂತಲೂ ಕಡಿಮೆ ಇದೆ. ಆದರೂ ಪ್ರಫುಲ್ ಪಟೇಲ್ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಸಾರ್ವಜನಿಕರ ಕೋರಿಕೆಯ ಮೇರೆಗೆ ಇಲ್ಲಿ ಪಾನನಿಷೇಧ ನೀತಿ ಜಾರಿಯಲ್ಲಿದ್ದು  ಇದನ್ನೂ ಸಹ ಸಡಿಲಗೊಳಿಸಲು ನೀತಿ ರೂಪಿಸಲಾಗುತ್ತಿದೆ.  ಈಗಾಗಲೇ ಇಲ್ಲಿಗೆ ಬರುವ ಪ್ರವಾಸಿಗರ ಸೀಮಿತ ಕ್ವಾರಂಟೈನ್ ಅವಧಿಯನ್ನು ಮತ್ತಷ್ಟು ಸಡಿಲಗೊಳಿಸುವ ಮೂಲಕ ಈವರೆಗೂ ಕೋವಿಡ್‌ ಮುಕ್ತವಾಗಿರುವ ಲಕ್ಷದ್ವೀಪವನ್ನು ಕೋವಿಡ್‌ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಕಂಡಬರುವುದಿಲ್ಲ. ಹೆಚ್ಚೆಂದರೆ, ಲಕ್ಷದ್ವೀಪದಲ್ಲಿ ಮನುಷ್ಯರ ಜಾಗವನ್ನು ಸಿಮೆಂಟ್ ಕಾರ್ಖಾನೆಗಳು ಆಕ್ರಮಿಸಬಹುದು.

(ಲೇಖಕರು : ನಿವೃತ್ತ ಐಎಎಸ್ ಅಧಿಕಾರಿ, ಭಾರತದ ಪ್ರಥಮ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ನಿವೃತ್ತರಾಗಿದ್ದಾರೆ.)

Donate Janashakthi Media

Leave a Reply

Your email address will not be published. Required fields are marked *