ಸಿಕ್ಕುಗಳಲ್ಲಿ ಶಾಲಾ ಉಡುಪು

ಶಿಕ್ಷಣ ತಜ್ಞರ ಸ್ವಾಯತ್ತತೆಯನ್ನು ಕಸಿಯುವ ಸಾಧನವಾಗಿ -ರಾಜಕೀಯ ಅಸ್ತ್ರವಾಗಿ ಶಾಲಾಸಮವಸ್ತ್ರ

ಮೂಲ: The School dress in cross hairs
ಕೃಷ್ಣ ಕುಮಾರ್‌ ದ ಹಿಂದೂ 6-ಮೇ-2022
ಅನುವಾದ : ನಾ ದಿವಾಕರ

ಶಾಲಾ ಸಮವಸ್ತ್ರವೂ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗುತ್ತದೆ ಎಂದು ಇತಿಹಾಸದಲ್ಲಿ ಎಲ್ಲಿಯೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಆದರೂ ಇಂದಿನ ದಿನಗಳಲ್ಲಿಲ ಸಮವಸ್ತ್ರ ಇಲ್ಲದ ಶಾಲೆಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜನರು ಶಾಲೆಯ ಬಗ್ಗೆ ಯೋಚಿಸುವಾಗ, ತಮ್ಮದೇ ಶಾಲೆಯಾಗಿದ್ದರೂ ಸಹ, ತಮ್ಮ ಮಕ್ಕಳನ್ನು ಇತರ ಶಾಲಾ ಮಕ್ಕಳಿಂದ ಭಿನ್ನವಾಗಿ ನೋಡುವಾಗ ಸಮವಸ್ತ್ರದ ಮೂಲಕವೇ ನೋಡುತ್ತಾರೆ.  ವಿಶೇಷವಾಗಿ ಹಬ್ಬದ ದಿನಗಳಲ್ಲಿ ಉತ್ಸವಗಳು ನಗರದ ಎಲ್ಲ ಶಾಲೆಯ ಮಕ್ಕಳನ್ನೂ ಒಟ್ಟಿಗೆ ಸೇರಿಸುವಾಗ ಪೋಷಕರು ತಮ್ಮ ಮಕ್ಕಳು ವಿಶಿಷ್ಟವಾದ ಸಮವಸ್ತ್ರದ ಪೋಷಾಕಿನಲ್ಲಿ ಮೆರೆಯುವುದನ್ನು ನೋಡಲು ಇಷ್ಟಪಡುತ್ತಾರೆ. ಈ ರೀತಿಯ ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಣಬಹುದಾದ ಒಂದು ವ್ಯಾಮೋಹ ಮತ್ತು ಶಾಲಾ ಸಮವಸ್ತ್ರದ ಇತಿಹಾಸ ಇವೆರಡೂ ಸಹ ಶಾಲಾ ಸಮವಸ್ತ್ರವು ವಹಿಸುವ ಮುಖ್ಯ ಪಾತ್ರವನ್ನು ಸೂಚಿಸುತ್ತದೆ.  ಇದು ಯುವಪೀಳಿಗೆಯನ್ನು ಶಿಸ್ತಿಗೊಳಪಡಿಸುವ ಒಂದು ವಿಧಾನವಾಗಿ ಕಾಣುತ್ತದೆ. ಒಂದೇ ರೀತಿಯ ವಸ್ತ್ರ ಧರಿಸುವ ಶಾಲಾ ಮಕ್ಕಳು ಶಾಲಾ ಶಿಕ್ಷಣದ ಎರಡು ಆದ್ಯರೂಪದ ರೂಪಕಗಳ ಪ್ರತೀಕವಾಗಿ ಕಾಣುತ್ತಾರೆ. ವಿಭಿನ್ನ ಹೂಗಳನ್ನರಳಿಸುವ ಹೂದೋಟ ಒಂದಾದರೆ ಮತ್ತೊಂದು ಒಟ್ಟಿಗೆ ಚಲಿಸುತ್ತಿರುವ ಸೈನಿಕರ ಪಡೆ.

ಇತಿಹಾಸ ಮತ್ತು ಸಾಮಾಜಿಕ ಪರಿಣಾಮ

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಲಾಗಿರುವ ದೇಶಗಳು ಮತ್ತು ಕಡ್ಡಾಯ ಇಲ್ಲದ ದೇಶಗಳನ್ನು ಪ್ರತ್ಯೇಕಿಸಿ ನೋಡಿದಾಗ, ಇತಿಹಾಸ ತಂತಾನೇ ತೆರೆದುಕೊಳ್ಳುತ್ತದೆ. ವಿವಿಧ ರೀತಿಯ ವಸಾಹತು ಆಳ್ವಿಕೆಗೊಳಪಟ್ಟ ದೇಶಗಳಲ್ಲಿ ಉಗಮಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಜಾರಿಗೊಳಿಸಿರುವುದರ ಬಗ್ಗೆ ಒಲವು ತೋರುವುದನ್ನು ಗಮನಿಸಬಹುದು. ಅದರಲ್ಲಿ ಭಾರತವೂ ಒಂದು.  ನಮ್ಮ ಹಳೆಯ ನೆನಪುಗಳನ್ನು ಕೆದಕಿ, ಹಳೆಯ ಕಾಲದ ಫೋಟೋಗಳನ್ನು ಒಮ್ಮೆ ಅವಲೋಕಿಸಿದರೆ, ಶಾಲಾ ಸಮವಸ್ತ್ರದ ಆಲೋಚನೆಯು ನಗರೀಕರಣ, ಶ್ರೀಮಂತಿಕೆ ಮತ್ತು ಖಾಸಗೀಕರಣದ ಒಂದು ಭಾಗವಾಗಿಯೇ ಕಾಣುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಸಹ ಗ್ರಾಮೀಣ ಮತ್ತು ಸಣ್ಣ ಪುಟ್ಟ ಊರುಗಳಲ್ಲಿನ ಶಾಲೆಗಳಲ್ಲಿ ಪ್ರತಿನಿತ್ಯ ಸಮವಸ್ತ್ರವನ್ನು ವಿಧಿಸಿರುವುದನ್ನು ಕಾಣಲಾಗುವುದಿಲ್ಲ. ವಾರದ ಕೆಲವು ದಿನಗಳು ಅಥವಾ ವಿಶೇಷ ದಿನಗಳಂದು ಮಾತ್ರವೇ ಸಮವಸ್ತ್ರ ಧರಿಸಲಾಗುತ್ತಿತ್ತು.

ಕ್ರಮೇಣ ವಿವಿಧ ರೀತಿಯ ಖಾಸಗಿ ಶಾಲೆಗಳು ಆರಂಭವಾದಂತೆಲ್ಲಾ ನಿಗದಿತ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾರಂಭಿಸಿದವು. ವಿವಿಧ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವುದು ಸ್ಥಳೀಯ ಜವಳಿ ವರ್ತಕರಿಗೆ, ದರ್ಜಿಗಳಿಗೆ ಮತ್ತು ಶೂ ಮಾರಾಟ ಮಳಿಗೆಗಳಿಗೆ ಉತ್ತಮ ವ್ಯಾಪಾರದ ಅವಕಾಶಗಳನ್ನೂ ಕಲ್ಪಿಸಿತ್ತು. ಸ್ಪರ್ಧಾತ್ಮಕ ಬೆಲೆಗಳನ್ನು ವಿಧಿಸುವ ಬದಲಾಗಿ ಸಮವಸ್ತ್ರದ ವ್ಯಾಪಾರವು ಸ್ಥಳೀಯ ಏಕಸ್ವಾಮ್ಯಕ್ಕೆ ದಾರಿಮಾಡಿಕೊಟ್ಟಿತ್ತು. ಅನೇಕ ಸಂದರ್ಭಗಳಲ್ಲಿ ಶಾಲೆಗಳೂ ಇದರಲ್ಲಿ ಭಾಗಿಯಾಗಲು ಒಪ್ಪಿ, ನಿರ್ದಿಷ್ಟ ವರ್ತಕರ ಬಳಿಯೇ ವ್ಯವಹರಿಸುವಂತೆ ಪೋಷಕರ ಮೇಲೆ ಒತ್ತಡ ಹೇರತೊಡಗಿದವು.

ಆದೇಶ ಆಧಾರಿತ ವ್ಯವಸ್ಥೆ

ಈ ಸಂಕ್ಷಿಪ್ತವಾದ, ಸಾಮಾನ್ಯೀಕರಿಸಲ್ಪಟ್ಟ ಸಾಮಾಜಿಕ ಚರಿತ್ರೆ ಇಂದು ಕರ್ನಾಟಕದಲ್ಲಿರುವ ಪರಿಸ್ಥಿತಿಗೆ ಅಷ್ಟೇನೂ ಪ್ರಸ್ತುತ ಎನಿಸಲಾರದು. ನಿರ್ದೇಶನಾಲಯದ ಆದೇಶ ಮತ್ತು ನ್ಯಾಯಾಲಯದ ತೀರ್ಪು ಇವೆರಡರ ನಡುವೆ ಸಿಲುಕಿ ಕೆಲವೇ ವಾರಗಳ ಅವಧಿಯಲ್ಲಿ ಸಂಪೂರ್ಣ ಸಮವಸ್ತ್ರ ನೀತಿಯನ್ನೇ ಜಾರಿಗೊಳಿಸಲಾಗಿದೆ. ಈಗ ಸರ್ಕಾರದ ಈ ನಿಯಮವು ಶಾಲಾ ಕೊಠಡಿಯಷ್ಟೇ ಅಲ್ಲದೆ ಪರೀಕ್ಷಾ ಕೊಠಡಿಯನ್ನೂ ತನ್ನ ವ್ಯಾಪ್ತಿಗೊಳಪಡಿಸಿದೆ. ಕೇಂದ್ರೀಯ ವಿದ್ಯಾಲಯಗಳು ಯಾವುದೇ ರಾಜ್ಯ ಸರ್ಕಾರಗಳ ಆದೇಶಗಳಿಗೆ ಒಳಪಡುವುದಿಲ್ಲವಾದರೂ ಕರ್ನಾಟಕದಲ್ಲಿರುವ ಈ ಶಾಲೆಗಳೂ ಸಹ ಸರ್ಕಾರದ ನಿಯಮವನ್ನು ಪಾಲಿಸಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಶಾಲೆಗಳ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

ಹೀಗೆ, ಭಾರತದ ಅತಿ ಹೆಚ್ಚು ಸಾಕ್ಷರತೆ ಹೊಂದಿದ, ಸಂಪದ್ಭರಿತ ರಾಜ್ಯ, ಜ್ಞಾನ ಆರ್ಥಿಕತೆಯಲ್ಲಿನ ತನ್ನ ಪ್ರಗತಿಗೆ ವಿಶ್ವ ಖ್ಯಾತಿಯನ್ನು ಗಳಿಸಿರುವ ಒಂದು ರಾಜ್ಯ ಇಂದು ಶೈಕ್ಷಣಿಕ ಸಾಂಪ್ರದಾಯಿಕತೆ ಮತ್ತು ನಿಯಂತ್ರಣದ ಅಗ್ನಿಪರೀಕ್ಷೆಗೆ ಒಳಗಾಗಿದೆ. ಶಾಲಾ ಸಮವಸ್ತ್ರ ಒಂದು ಹೊಸ ರಾಜಕೀಯ ಅಸ್ತ್ರವಾಗಿ ರೂಪಾಂತರ ಹೊಂದಿದೆ. ತನ್ಮೂಲಕ ಪ್ರಾಂಶುಪಾಲರು  ಮತ್ತು ಶಿಕ್ಷಕರು ಈಗ ಹೊಂದಿರುವಂತಹ ಸೀಮಿತವಾದ  ಸ್ವಾಯತ್ತತೆಯನ್ನು ಮತ್ತಷ್ಟು ಕಡಿತಗೊಳಿಸಿದೆ.  ಶಾಲಾ ಸಮವಸ್ತ್ರದ ವಿಚಾರದಲ್ಲಿನ ರಾಜಕಾರಣವು ಎಷ್ಟರ ಮಟ್ಟಿಗೆ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಸಮಾಜ ವಿಜ್ಞಾನದ ಅಧ್ಯಯನಕ್ಕೆ ಸೂಕ್ತವಾದ ವಿಷಯವಾಗಿದೆ. ಶಾಲಾ ಸಮವಸ್ತ್ರ  ಅದರ ಇತಿಹಾಸ ಮತ್ತು ಅದರ ಬಗ್ಗೆ ಇರುವ ವ್ಯಾಮೋಹ ಇವುಗಳ ವ್ಯವಸ್ಥಿತ ಅಧ್ಯಯನ ಅತ್ಯವಶ್ಯವಾಗಿದೆ.

ಆಸಕ್ತಿದಾಯಕ ಸಂಗತಿ ಎಂದರೆ 1960ರ ಪ್ರಮುಖ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕಡೆಗಣಿಸಿ ಮುಂದುವರೆದ ಒಂದು ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ವಲಯದಲ್ಲಿ ಸಮವಸ್ತ್ರ ವಿವಾದದ ವಿಚಾರವಾಗಿದೆ. ಇಂದು ಪಿಯುಸಿ ಅಥವಾ ಜೂನಿಯರ್‌ ಕಾಲೇಜುಗಳು ಕೆಲವೇ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿವೆ.  ದೇಶದ ಇತರ ರಾಜ್ಯಗಳಲ್ಲಿ ಕೊಥಾರಿ ಆಯೋಗದ ಶಿಫಾರಸಿನ ಅನುಸಾರ 10+2 ಶಿಕ್ಷಣ ವ್ಯವಸ್ಥೆಯೇ ಜಾರಿಯಲ್ಲಿದೆ. ಇದರಿಂದ ಶೈಕ್ಷಣಿಕ ವಲಯದ ಆಡಳಿತ ನಿರ್ವಹಣೆಯ ಪುನರ್‌ ಸಂಘಟನೆಯೂ ಸಾಧ್ಯವಾಗಿದೆ.  ಈ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ನೀಡಿ ಸಂಸ್ಥೆಗಳ ನಿರ್ವಹಣಾ ನಿಯಮಗಳನ್ನು ರೂಪಿಸಲು ಅವಕಾಶ ನೀಡಿದ್ದಲ್ಲಿ ಈ ಪದ್ಧತಿಯ ಸಂಪೂರ್ಣ ಉಪಯುಕ್ತತತೆಯನ್ನು ಸಾಕಾರಗೊಳಿಸಬಹುದಿತ್ತು.

ಮತ್ತೊಂದೆಡೆ ಶಾಲೆಗಳ ದೈನಂದಿನ ಚಟುವಟಿಕೆಗಳಲ್ಲಿ ಸಮುದಾಯಕ್ಕೆ ಭಾಗವಹಿಸುವ ಅವಕಾಶವನ್ನು ನೀಡಲೂ ಸಾಧ್ಯವಾಗುತ್ತಿತ್ತು. ಕೊಥಾರಿ ಆಯೋಗದ ಸದಸ್ಯ ಕಾರ್ಯದರ್ಶಿ ಜೆ ಪಿ ನಾಯಕ್ ಅವರ ಸಲಹೆಯ ಮೇರೆಗೆ ರೂಪಿಸಲಾಗಿದ್ದ ಆಯೋಗದ ಮುನ್ನೋಟವನ್ನು ಪರಿಪೂರ್ಣವಾಗಿ ಸಾಕಾರಗೊಳಿಸಿದ್ದಲ್ಲಿ ಅಧಿಕಾರಶಾಹಿಯ ನಿಯಂತ್ರಣ ಕಡಿಮೆಯಾಗುತ್ತಿತ್ತು ಹಾಗೂ ಇದರಿಂದ ಶಾಲೆಗಳ ಸ್ವಾಯತ್ತತೆಯೂ ಹೆಚ್ಚಾಗುತ್ತಿತ್ತು. ಇದರಿಂದ ಶಾಲೆಗಳೇ ಬೌದ್ಧಿಕ ಸಂಪನ್ಮೂಲವಾಗುವಂತಹ ಒಂದು ಭಿನ್ನ ರೀತಿಯ ರಾಜಕಾರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದವು.  ಇಂತಹ ಒಂದು ಪರ್ಯಾಯ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಕರ್ನಾಟಕ ಸಾಮಾಜಿಕ ನೆಲೆಯಲ್ಲಿ ಒಂದು ಪ್ರಶಸ್ತ ಭೂಮಿಕೆಯಾಗಬಹುದಿತ್ತು. ಏಕೆಂದರೆ ವಿಕೇಂದ್ರೀಕರಣನ ಆಡಳಿತ ವ್ಯವಸ್ಥೆಯಲ್ಲಿ ಕರ್ನಾಟಕ ತನ್ನದೇ ಆದ ಪರಂಪರೆಯನ್ನೂ ಹೊಂದಿದೆ.

ಆದರೆ ಇತಿಹಾಸ ಬೇರೆ ರೀತಿಯ ತಿರುವು ಪಡೆದುಕೊಂಡಿತು. ಕರ್ನಾಟಕದಲ್ಲಿ ಒಬ್ಬ ಶಿಕ್ಷಕ ಅಥವಾ ಜೂನಿಯರ್‌ ಕಾಲೇಜಿನ  ಪ್ರಾಂಶುಪಾಲರು ಒಂದು ಸಮವಸ್ತ್ರದ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ತಡೆಹಿಡಿಯುವ ದೃಶ್ಯ ಒಂದು ನಿರ್ದಯಿ ಕ್ರಿಯೆಯ ಸಂಕೇತವಾಗಿ ಬಹಳ ವರ್ಷಗಳ ಕಾಲ ಕಾಡಲಿದೆ. ಬಹುಶಃ ವಿದ್ಯಾರ್ಥಿಯ ಅವಸ್ಥೆ ಬೋಧಕರ ಶಿಕ್ಷಣ ಕಾಲೇಜುಗಳಲ್ಲಿ ಚರ್ಚೆಗೊಳಪಡಬೇಕಾದ ವಿಚಾರವೂ ಆಗಬೇಕಿದೆ.  ಇಲ್ಲಿ ಉದ್ಭವಿಸಬಹುದಾದ ಪ್ರಶ್ನೆ ಎಂದರೆ : “ ಆ ಶಿಕ್ಷಕಿ ಅಥವಾ ಪ್ರಾಂಶುಪಾಲೆ ಆದೇಶವನ್ನು ಪಾಲಿಸುವ ದೃಷ್ಟಿಯಿಂದ ಸ್ವ ಪ್ರೇರಣೆಯಿಂದ ಆ ವಿದ್ಯಾರ್ಥಿಯ ಬಗ್ಗೆ ಅಷ್ಟು ನಿಷ್ಕಾರುಣ್ಯವಾಗಿ ವರ್ತಿಸಿದರೇ ?” ಈ ನಿಟ್ಟಿನಲ್ಲಿ ಒಂದು ಆಡಳಿತಾತ್ಮಕ ಪ್ರಶ್ನೆಯೂ ಉದ್ಭವಿಸುತ್ತದೆ. ʼ ನಿಗದಿತ ಸಮವಸ್ತ್ರ ಧಾರಣೆಯ ಬಗ್ಗೆ  ಶಿಕ್ಷಣ ನಿರ್ದೇಶನಾಲಯದ ಆದೇಶವು ಪರೀಕ್ಷಾ ಕೊಠಡಿಗೆ ಅನ್ವಯಿಸುವುದೇ ? ʼ. ತಾತ್ವಿಕವಾಗಿ ಅನ್ವಯಿಸುತ್ತದೆ. ಅದರೆ ಇದು ಶಾಲಾ ಸಮವಸ್ತ್ರದ ಪಾತ್ರವನ್ನು ಮತ್ತಷ್ಟು ವಿಸ್ತರಿಸಿ ಸಾಮೂಹಿಕ ಸಾಂಸ್ಥಿಕ ಅಸ್ಮಿತೆಯನ್ನು ಕಲ್ಪಿಸುವತ್ತ ಸಾಗುತ್ತದೆ. ಈ ಅಸ್ಮಿತೆಯ ವ್ಯಾಪ್ತಿಯಲ್ಲಿ ಪರೀಕ್ಷಾ ಕೊಠಡಿಯನ್ನೂ ಒಳಗೊಳ್ಳುವುದೇ ಆದರೆ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಅಥವಾ ಪ್ರವೇಶಾನುಮತಿ ಪತ್ರ ಏಕೆ ಬೇಕು ? ಅವರ ವೈಯಕ್ತಿಕ ಅಸ್ಮಿತೆಯನ್ನು ಗುರುತಿಸಲೆಂದೇ ? ಈ ವಿಚಾರದಲ್ಲಿ ಕಾನೂನು ವಲಯದಲ್ಲಿ ನಡೆಯುವ ವಾದಗಳು ಕಲಿಕಾರ್ಥಿಗಳ ಮತ್ತು ಪರೀಕ್ಷಾರ್ಥಿಗಳ ಬದುಕಿನ ಈ ಅಂಶದ ಬಗ್ಗೆಯೂ ಇರುತ್ತದೆ ಎಂದು ಅಪೇಕ್ಷಿಸೋಣ.

ಪ್ರಮುಖ ವ್ಯತ್ಯಾಸ

ಈ ಸಂದರ್ಭದಲ್ಲೂ ಸಹ ಒಂದು ಪ್ರಮುಖವಾದ ವ್ಯತ್ಯಾಸವನ್ನು ಗುರುತಿಸುವುದು ಉಚಿತ. ಸಮವಸ್ತ್ರಕ್ಕೂ ವಸ್ತ್ರ ಸಂಹಿತೆಗೂ ವ್ಯತ್ಯಾಸವಿದೆ. ವಸ್ತ್ರ ಸಂಹಿತೆಗಿಂತಲೂ ಸಮವಸ್ತ್ರಧಾರಣೆ ಹೆಚ್ಚು  ಆದೇಶಾತ್ಮಕವಾಗಿರುತ್ತದೆ. ವಸ್ತ್ರ ಸಂಹಿತೆಯನ್ನು ವಿಧಿಸುವಾಗ ಮಕ್ಕಳು ಮತ್ತು ಪೋಷಕರು ಅವರ ಅಂತಸ್ತು ಮತ್ತು ಶ್ರೀಮಂತಿಕೆಗೆ ಅನುಗುಣವಾಗಿ ಉಡುಪು ಧರಿಸಲು ಸಾಧ್ಯವಾಗದಿರಬಹುದು. ಆದರೆ ಸಮವಸ್ತ್ರ ವಿಧಿಸಿದಾಗ, ಕೇವಲ ಉಡುಪಿನ ಬಣ್ಣ ಮಾತ್ರವೇ ಅಲ್ಲದೆ ಅದರ ವಿನ್ಯಾಸ ಮತ್ತು ಮಾದರಿಯೂ ಸಹ ನಿರ್ದಿಷ್ಟ ಶೈಲಿಯಲ್ಲೇ ಇರಬೇಕಾಗುತ್ತದೆ.  ಹಿಂದಿನ ಕಾಲದಲ್ಲಿ ಕೇವಲ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿವುದು ಸಾಕೆನಿಸುತ್ತಿತ್ತು ಆದರೆ ಇಂದು ಸಮವಸ್ತ್ರ ಹೀಗೇ ಇರಬೇಕೆಂಬ ಷರತ್ತು ವಿಧಿಸುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ವಿಶಿಷ್ಟ ಸಾಮಾಜಿಕ ಲಕ್ಷಣಗಳು ಕಣ್ಣಿಗೆ ಕಾಣುವಂತಹ ಬಳಕೆಯ ಹವ್ಯಾಸವನ್ನು ಪ್ರಚೋದಿಸುತ್ತದೆ. ಭೋಜನ ಕೂಟಗಳು ಶಾಲೆಗಳಷ್ಟೇ ಪರಿಣಾಮಕಾರಿಯಾಗಿ  ಈ ಉದ್ದೇಶವನ್ನು ಈಡೇರಿಸುತ್ತವೆ. ಅಸಮಾನತೆಯು ಸರ್ವವ್ಯಾಪಿಯಾಗಿರುವ ಒಂದು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುವ ಒಂದು ಸೂಚನೆಯಾಗಿ ಸಮವಸ್ತ್ರ ಕಾಣುತ್ತದೆ.

ಆದರೆ ಶಿಕ್ಷಣ ಎನ್ನುವುದು ಸಮಾಜದ ಎಲ್ಲ ವರ್ಗಗಳ ಮತ್ತು ಎಲ್ಲ ಸ್ತರಗಳ ಜನರಿಗೆ ಸಮಾನ ಅವಕಾಶಗಳನ್ನು ಪ್ರೋತ್ಸಾಹಿಸುವ ಒಂದು ಕ್ಷೇತ್ರವಾಗಿರಬೇಕೆಂದು ಅಪೇಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣವು ನೀಡಬಹುದಾದ ಬಹುಮುಖ್ಯವಾದ ಕೊಡುಗೆ ಎಂದರೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿಯನ್ನು ಹೆಚ್ಚಿಸುವುದು , ತನ್ಮೂಲಕ ವಿಶೇಷವಾಗಿ ಶಿಕ್ಷಕರನ್ನು ಒಳಗೊಂಡಂತೆ ಎಲ್ಲ ಭಾಗಿದಾರರಿಗೂ ಭಾಗವಹಿಸಲು ಅವಕಾಶ ಮಾಡಿಕೊಡುವುದು. ವಿಭಿನ್ನ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳೊಡನೆ ಶಿಕ್ಷಕರು ನಿಕಟ ಸಂಪರ್ಕ ಹೊಂದಿರುತ್ತಾರೆ. ಆದುದರಿಂದ ಎಲ್ಲ ಮಕ್ಕಳಿಗೂ ಶಾಲಾ ಕೊಠಡಿಯು ಹೆಚ್ಚು ಹಿತಕರವಾಗಿರುವಂತೆ ಮಾಡುವುದರ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿರುತ್ತಾರೆ.

ಈ ಸಾಮೂಹಿಕ ಇರುವಿಕೆಯ ಸ್ಥಿತಿಯ ಹಿಂದಿರುವ ಸಮಸ್ಯೆಗಳನ್ನು ಶ್ರೀ ಅರಬಿಂದೋ ವಿಶ್ಲೇಷಿಸಿರುವಂತೆ ಬಹುಶಃ ಯಾವುದೇ ಆಧುನಿಕ ತತ್ವಶಾಸ್ತ್ರಜ್ಞರು ವಿಶ್ಲೇಷಿಸಿಲ್ಲ. ತಮ್ಮ” ದ ಐಡಿಯಲ್‌ ಆಫ್‌ ಹ್ಯೂಮನ್‌ ಯೂನಿಟಿ ” ಪ್ರಬಂಧದಲ್ಲಿ ಅವರು ಪ್ರಕೃತಿಯ ವೈವಿಧ್ಯತೆಯ ನೆಲೆಯಲ್ಲೇ ಹೇಗೆ ಏಕರೂಪತೆ ಎನ್ನುವುದು ನಮ್ಮನ್ನು ಉತ್ತೇಜಿಸಿದರೂ, ಪರಸ್ಪರ ಸಂಬಂಧಗಳ ಅಥವಾ ಏಕತೆಯ ಪ್ರಜ್ಞೆಯನ್ನು ಮೂಡಿಸುವುದಿಲ್ಲ ಎನ್ನುವುದನ್ನು ವಿವರಿಸುತ್ತಾರೆ. ಅವರು ತಮ್ಮ ವಿಶ್ಲೇಷಣೆಯನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಚಾರಗಳಿಗೂ ವಿಶ್ಲೇಷಿಸುತ್ತಾ ಅಂತರರಾಷ್ಟ್ರೀಯ ಸಂಬಂಧಗಳಿಗೂ ಅನ್ವಯಿಸುತ್ತಾರೆ. ನಮ್ಮ ವರ್ತಮಾನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಕ್ಷೋಭೆಯನ್ನು ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಒಂದು ವ್ಯವಸ್ಥೆಯಾಗಿ ನಿರ್ವಹಿಸಬಹುದಾದ ಪಾತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಸಮವಸ್ತ್ರ ಎಂಬ ಪದವೇ ಸೂಚಿಸುವಂತೆ,  ಸಮಾನ ಉಡುಪು ಎಲ್ಲ ತಾರತಮ್ಯ, ವ್ಯತ್ಯಯಗಳನ್ನೂ ದಾಟಲಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ.

ಕರ್ನಾಟಕದಲ್ಲಿ ಇದು ಸಾಧ್ಯವಾಗಿದ್ದ ಪಕ್ಷದಲ್ಲಿ, ಇದನ್ನು ಪರಿಪಾಲಿಸಲು ನಿರ್ದೇಶನಾಲಯವು ಆದೇಶ ಹೊರಡಿಸುವ ಅವಶ್ಯಕತೆ ಇರಲಿಲ್ಲ.  ವಸಾಹತು ಅವಧಿಯಲ್ಲಿ ರಚಿಸಲ್ಪಟ್ಟ ಈ ಸಂಸ್ಥೆಯು ತನ್ನ ಅಧಿಕಾರಶಾಹಿ ಧೋರಣೆಯನ್ನು ಅರ್ಥಮಾಡಿಕೊಳ್ಳಲು, ಜೆ ಪಿ ನಾಯಕ್‌ ಅವರು ನನಗೆ ಹೇಳಿದ ಒಂದು ಪ್ರಸಂಗ ನೆರವಾಗಬಹುದು.  ಶಾಲಾ ಕೊಠಡಿಯ ಬೋಧನೆಯನ್ನು ರೂಢಮಾದರಿಯನ್ನಾಗಿ ಮಾಡದಿರುವಂತೆ ಮತ್ತು ಹೆಚ್ಚು ಜೀವಂತಿಕೆಯಿಂದ ಕೂಡಿದ ಮಕ್ಕಳ ಕೇಂದ್ರಿತವಾಗಿ ಮಾಡುವಂತೆ, ಕೊಥಾರಿ ಆಯೋಗವು ಹಲವು ಸಲಹೆಗಳನ್ನು ನೀಡಿತ್ತು. ಕೊಥಾರಿ ಆಯೋಗದ ವರದಿಯು ಅಧಿಕೃತವಾಗಿ ಅನುಮೋದನೆ ಪಡೆದ ಕೂಡಲೇ ಮಹಾರಾಷ್ಟ್ರದ ಶಿಕ್ಷಣ ನಿರ್ದೇಶನಾಲಯವು ಒಂದು ಅರೆ ಸರ್ಕಾರಿ ಆದೇಶ ಹೊರಡಿಸಿ , ಮೇಲಧಿಕಾರಿಗಳ ಆದೇಶದ ಮೇರೆಗೆ ಎಲ್ಲ ಶಾಲೆಗಳಲ್ಲೂ ಬೋಧನೆಯು ಮಕ್ಕಳ ಕೇಂದ್ರಿತವಾಗಿರತಕ್ಕದ್ದು ಎಂದು ಆಜ್ಞೆ ಹೊರಡಿಸಿತ್ತು !

(ಪ್ರೊ ಕೃಷ್ಣಕುಮಾರ್‌, ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕರು ಮತ್ತು ಸ್ಮಾಲರ್‌ ಸಿಟಿಜನ್ಸ್‌ ಕೃತಿಯ ಲೇಖಕರು)

Donate Janashakthi Media

Leave a Reply

Your email address will not be published. Required fields are marked *