ವಯನಾಡ್: ಸ್ಥಳೀಯರು ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 9 ದಿನ ಕಳೆದರೂ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಪಕ್ಷದ ಕಚೇರಿ ಹೊರಗೆ ಪೋಸ್ಟರ್ಗಳನ್ನು ಹಾಕಿದ್ದು, ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ವಯನಾಡ್ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬಳಿ ಹಾಕಲಾಗಿರುವ ಪೋಸ್ಟರ್ ಗಳಲ್ಲಿ ಮುಖ್ಯಮಂತ್ರಿ ನೇಮಕ ಮತ್ತು ರಾಜ್ಯ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀವ್ರ ವಿಳಂಬ ಮಾಡುತ್ತಿರುವ ಬಗ್ಗೆ ಸ್ಥಳೀಯರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡೊನೆಷನ್ ಸುಲಿಗೆ, ಅನಧಿಕೃತ ಕಾಲೇಜ್ಗಳ ಮೇಲೆ ಕ್ರಮಕ್ಕೆ ಆಗ್ರಹ; ಎಸ್ಎಫ್ಐ ಮನವಿ
ಒಂದು ಪೋಸ್ಟರ್ನಲ್ಲಿ “ರಾಹುಲ್ ಮತ್ತು ಪ್ರಿಯಾಂಕಾ ಅವರೇ, ವಯನಾಡ್ ಅನ್ನು ಮರೆತುಬಿಡಿ. ನೀವು ಇಲ್ಲಿಂದ ಮತ್ತೆ ಗೆಲ್ಲುವುದಿಲ್ಲ” ಎಂದು ಬರೆಯಲಾಗಿದೆ.
ಇನ್ನೊಂದು ಪೋಸ್ಟರ್ನಲ್ಲಿ “ರಾಹುಲ್ ಗಾಂಧಿ ಅವರೇ, ಕೆಸಿ ನಿಮ್ಮ ಬ್ಯಾಗ್ ಹೊರುವವರಾಗಿರಬಹುದು, ಆದರೆ ಕೇರಳದ ಜನರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಬರೆಯಲಾಗಿದೆ.
ಮೂರನೇ ಪೋಸ್ಟರ್ನಲ್ಲಿ ಕಾಂಗ್ರೆಸ್ ನಾಯಕರನ್ನು ಟೀಕಿಸಲಾಗಿದೆ ಮತ್ತು “ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೇ ಇದು ಎಚ್ಚರಿಕೆಯಲ್ಲ. ಈ ಪ್ರಮಾದಕ್ಕಾಗಿ ಕೇರಳ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಬರೆಯಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಜಯಗಳಿಸಿ ಇಂದಿಗೆ 9 ದಿನಗಳು ಕಳೆದಿವೆ. ಆದರೆ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇದು ಕೇರಳದ ಜನ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಗೆಲುವು ಸಾಧಿಸಿದೆ.
ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು “ಐದು ವರ್ಷಗಳಲ್ಲಿ ರಾಜ್ಯಕ್ಕೆ ಐದು ಮುಖ್ಯಮಂತ್ರಿಗಳನ್ನು ನೀಡುವ” ಯೋಜನೆ ಹೊಂದಿದ್ದಾರೆಂದು ಆರೋಪಿಸಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 172 | ‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ | ಎನ್ ಕೆ. ವಸಂತರಾಜ್
