ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್, ಹಿಂದಿನ ಡಿಎಂಕೆ ಸರ್ಕಾರದ ಹಣಕಾಸು ನಿರ್ವಹಣೆ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಜನರ ಮುಂದಿಡಲು ಸರ್ಕಾರ ನಿರ್ಧರಿಸಿದ್ದು, ಪಾರದರ್ಶಕ ಆಡಳಿತ ನೀಡುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ವಿಜಯ್, ಹಿಂದಿನ ಸರ್ಕಾರ ರಾಜ್ಯದ ಮೇಲೆ ಭಾರೀ ಸಾಲದ ಹೊರೆ ಬಿಟ್ಟಿದೆ ಎಂದು ಆರೋಪಿಸಿದರು. ಸರ್ಕಾರದ ಖಜಾನೆ ಸ್ಥಿತಿ, ಸಾಲದ ಪ್ರಮಾಣ ಹಾಗೂ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರಗಳನ್ನು ಒಳಗೊಂಡ ವರದಿಯನ್ನು ಜನರ ಮುಂದೆ ಇಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ತಮಿಳುನಾಡು : ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ
“ಜನರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಪ್ರತಿಯೊಂದು ಕ್ರಮವೂ ಪಾರದರ್ಶಕವಾಗಿರುತ್ತದೆ” ಎಂದು ವಿಜಯ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಡಳಿತದಲ್ಲಿ ರಹಸ್ಯತೆ ಇರದು, ಎಲ್ಲ ನಿರ್ಧಾರಗಳನ್ನು ಬಹಿರಂಗವಾಗಿ ಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.
ವಿಜಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ರಾಜ್ಯದ ಸಾಲ ಮಿತಿ ಹಣಕಾಸು ನಿಯಮಾವಳಿಗಳ ಒಳಗೆಯೇ ಇದೆ ಎಂದು ಹೇಳಿದ್ದಾರೆ. ಹೊಸ ಸರ್ಕಾರ ಘೋಷಿಸಿರುವ ಹಲವು ಯೋಜನೆಗಳನ್ನು ಸ್ವಾಗತಿಸಿದ ಅವರು, ಆಡಳಿತಕ್ಕೆ ನೆಪಗಳಿಗಿಂತ ರಾಜಕೀಯ ಇಚ್ಛಾಶಕ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ನೋಡಿ : ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ
