ತಮಿಳುನಾಡು ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಸ್ವೀಕಾರ

ಚೆನ್ನೈ: ಕೇರಳ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮಾರ್ಚ್‌ 12ರಂದು ಚೆನ್ನೈನ ಲೋಕಭವನದಲ್ಲಿ ತಮಿಳುನಾಡು ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸ್ವೀಕರಿಸಿದರು. ಈ ಮೂಲಕ ಅವರು ತಮಿಳುನಾಡಿನ 27ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು newindianexpress ವರದಿ ಮಾಡಿದೆ. ತಮಿಳುನಾಡು

ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಶ್ರುತ ಅವಿಂದ ಧರ್ಮಾಧಿಕಾರಿ ಅವರು ಅರ್ಲೇಕರ್ ಅವರಿಗೆ ಪದಗ್ರಹಣ ಶಪಥವನ್ನಿತ್ತರು. ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಚಿವ ಸಂಪುಟದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಹೊಸ ರಾಜ್ಯಪಾಲರು ಅಧಿಕಾರ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸ್ಟಾಲಿನ್ ಅವರು ಪುಷ್ಪಗುಚ್ಛ ಮತ್ತು ಶಾಲು ನೀಡಿ ಅಭಿನಂದಿಸಿದರು. ತಮಿಳುನಾಡು

ಮುಖ್ಯ ಕಾರ್ಯದರ್ಶಿ ಎನ್. ಮುರುಗಾನಂದಂ ಅವರು ರಾಜ್ಯಪಾಲರ ನೇಮಕಾತಿ ವಾರಂಟ್‌ನ್ನು ಓದಿ ಕೇಳಿಸಿದರು. ಬಳಿಕ ಮುಖ್ಯ ನ್ಯಾಯಮೂರ್ತಿಗಳು ಶಪಥವಾಚನವನ್ನು ಓದಿದಾಗ ಅರ್ಲೇಕರ್ ಅದನ್ನು ಪುನರಾವರ್ತಿಸಿದರು.

ಇದನ್ನೂ ಓದಿ: ತ್ರಿಪುರಾ ಎಡಿಸಿ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಲೆಫ್ಟ್ ಫ್ರಂಟ್

“ನಾನು ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ತಮಿಳುನಾಡಿನ ರಾಜ್ಯಪಾಲರಾಗಿ ನನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ನನ್ನ ಸಾಮರ್ಥ್ಯದ ಮಟ್ಟಿಗೆ ಸಂವಿಧಾನ ಮತ್ತು ಕಾನೂನನ್ನು ರಕ್ಷಿಸಿ, ರಾಜ್ಯದ ಜನರ ಸೇವೆ ಮತ್ತು ಕಲ್ಯಾಣಕ್ಕಾಗಿ ತೊಡಗಿಸಿಕೊಳ್ಳುತ್ತೇನೆ,” ಎಂದು ಅವರು ಶಪಥವಚನದಲ್ಲಿ ಹೇಳಿದರು.

ಪದಗ್ರಹಣ ಸಮಾರಂಭವು ‘ವಂದೇ ಮಾತರಂ’ ಹಾಗೂ ರಾಷ್ಟ್ರಗೀತೆಯ ಗಾಯನದೊಂದಿಗೆ ಮುಕ್ತಾಯವಾಯಿತು. ಬಳಿಕ ಮುಖ್ಯಮಂತ್ರಿ ಸ್ಟಾಲಿನ್ ಅವರು ಅರ್ಲೇಕರ್ ಮತ್ತು ಅವರ ಪತ್ನಿಗೆ ಶಾಲು ಮತ್ತು ಪುಷ್ಪಗುಚ್ಛ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್, ತುಘ್ಲಕ್ ಪತ್ರಿಕೆಯ ಸಂಪಾದಕ ಎಸ್. ಗುರುಮೂರ್ತಿ, ವಿಧಾನಸಭಾಧ್ಯಕ್ಷ ಎಂ. ಅಪ್ಪಾವು, ಸಚಿವರಾದ ಎಸ್. ರೇಗುಪತಿ, ಇ.ವಿ. ವೇಲು, ಕೆ.ಎನ್. ನೆಹರೂ, ಎಂ.ಆರ್.ಕೆ. ಪನ್ನೀರ್‌ಸೆಲ್ವಂ, ಟಿಆರ್ಬಿ ರಾಜಾ, ಕೇಂದ್ರ ಸಚಿವ ಎಲ್. ಮುರುಗನ್, ಚೆನ್ನೈ ಮೇಯರ್ ಆರ್. ಪ್ರಿಯಾ, ಸೇನಾ ಅಧಿಕಾರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ ಹಲವರು ಹಾಜರಿದ್ದರು.

ಅರ್ಲೇಕರ್ ಅವರು 2024ರ ಜನವರಿ 2ರಂದು ಕೇರಳದ 23ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. 1954ರ ಏಪ್ರಿಲ್ 23ರಂದು ಗೋವಾದ ಪಣಜಿಯಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೇ ಆರ್‌ಎಸ್‌ಎಸ್ ಸಂಪರ್ಕದ ಮೂಲಕ ಸಾರ್ವಜನಿಕ ಜೀವನದತ್ತ ಆಕರ್ಷಿತರಾದರು. 1989ರಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1975–77ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡಿದ ಕಾರಣಕ್ಕೆ ಅವರು ತಮ್ಮ ತಂದೆಯೊಂದಿಗೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. 2002ರಿಂದ 2007ರವರೆಗೆ ಗೋವಾ ವಿಧಾನಸಭೆಯ ಸದಸ್ಯರಾಗಿದ್ದರು. 2012ರಿಂದ 2017ರವರೆಗೆ ಗೋವಾ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಅದರ ಜೊತೆಗೆ ಗೋವಾ ರಾಜ್ಯದಲ್ಲಿ ಅರಣ್ಯ ಹಾಗೂ ಪರಿಸರ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2021ರ ಜುಲೈನಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡ ಅವರು, ಬಳಿಕ 2023ರ ಫೆಬ್ರವರಿಯಲ್ಲಿ ಬಿಹಾರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಗುರುವಾರ ಬೆಳಗಿನ ಜಾವ ಅರ್ಲೇಕರ್ ಚೆನ್ನೈಗೆ ಆಗಮಿಸಿದಾಗ, ನೈಸರ್ಗಿಕ ಸಂಪನ್ಮೂಲ ಸಚಿವ ಎಸ್. ರೇಗುಪತಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರ್ ಬಾಬು, ಆರೋಗ್ಯ ಸಚಿವ ಎಂ. ಸುಬ್ರಹ್ಮಣಿಯನ್, ಮುಖ್ಯ ಕಾರ್ಯದರ್ಶಿ ಎನ್. ಮುರುಗಾನಂದಂ ಸೇರಿದಂತೆ ಹಲವರು ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡರು.

ಈ ವೇಳೆ ಸಚಿವ ಶೇಖರ್ ಬಾಬು ಅವರು ದೇವರು ಮುರುಗನ ಕೃಪೆ ಮತ್ತು ರಕ್ಷಣೆಯನ್ನು ಕೋರುವ ಭಕ್ತಿಗೀತೆಯಾದ ‘ಶಣ್ಮುಗ ಕವಚಂ’ ಅನ್ನು ಅರ್ಲೇಕರ್ ಅವರಿಗೆ ಉಡುಗೊರೆಯಾಗಿ ನೀಡಿದರು.

ಇದನ್ನೂ ನೋಡಿ: Karnataka Legislative Assembly Live – Day 04 | ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *