ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯಿಂದ ಆರು ಪ್ರಶ್ನೆಗಳು

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಗೆ ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯಿಂದ ಆರು ಪ್ರಶ್ನೆಗಳನ್ನು ಕೇಳಲಾಗಿದೆ. ಆ ಆರು ಪ್ರಶ್ನೆಗಳಿಗೆ ಉತ್ತರಿಸಬೇಕು. ವಿವಾದಿತ ಪಠ್ಯ ಪುಸ್ತಕವನ್ನು ಕೈ ಬಿಟ್ಟು ಹಿಂದಿನ ಸಮಿತಿಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಚರ್ಚೆಯಲ್ಲಿರುವ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ಇನ್ನೂ ಬಗೆಹರಿದಿಲ್ಲ. 1 ರಿಂದ 1೦ನೇ ತರಗತಿಗಳ ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಮಾಡಲಾಗಿರುವ ಬಹುತೇಕ ಬದಲಾವಣೆಗಳು ಲೋಪದೋಷಗಳಿಂದ ಕೂಡಿರುವುದು ಮತ್ತು ಅಲ್ಲಿನ ತಪ್ಪುಗಳು ಸಾರ್ವಜನಿಕವಾಗಿ ಬಹಿರಂಗಗೊಂಡಿರುವುದು ತಮಗೆ ತಿಳಿದಿದೆ.

ಕಳೆದ ವಾರ ಮಾನ್ಯ ಶಿಕ್ಷಣ ಸಚಿವ ಶ್ರೀ ಬಿ.ಸಿ.ನಾಗೇಶ್ ರವರು ಪರಿಷ್ಕೃತ ಪಠ್ಯ ಪುಸ್ತಕಗಳಲ್ಲಿ ಕೆಲವು ತಪ್ಪುಗಳಾಗಿವೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಇತರೆ ತಪ್ಪುಗಳಾಗಿದ್ದರೂ ಸಹ ಆಕ್ಷೇಪಣೆ ಸಲ್ಲಿಸಿದರೆ ತಿದ್ದುಪಡಿ ಮಾಡುವುದಾಗಿಯೂ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಸಾರ್ವಜನಿಕವಾಗಿ ಹಲವಾರು ವಿಷಯಗಳು, ವಿವಾದಗಳಾಗಿಯೂ ಚರ್ಚೇಯಲ್ಲಿವೆ. ಸರಕಾರದ ಆದೇಶಗಳೆಂಬಂತೆ ಹಲವು ಪತ್ರಗಳೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಹೀಗಿರುವಾಗ ಸಹಜವಾಗಿ ಏಳಬಹುದಾದ ಕೆಲವು ವಿಷಯಗಳ ಕುರಿತು ನಮ್ಮ ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇವೆ. ಮತ್ತು ಸಮರ್ಪಕ ಪ್ರತ್ಯುತ್ತರ ನಿರೀಕ್ಷಿಸುತ್ತೇವೆ.

ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ  ಪ್ರಶ್ನೆಗಳು
1. ಹಿಂದಿನ ಶಿಕ್ಷಣ ಸಚಿವರಾದ ಮಾನ್ಯ ಸುರೇಶ್ ಕುಮಾರ್ ರವರು 6ನೇ ತರಗತಿಯ ‘ಹೊಸ ಧರ್ಮಗಳ ಉದಯ’ ಪಠ್ಯ ಕುರಿತಂತೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ವರದಿ ಕೊಡಿ ಎಂದು ಕೇಳಿದ್ದರು ಎಂದು ವರದಿಗಳಿವೆ. ಹಾಗೆ ಕೇಳುವಾಗ ಅಧಿಕೃತ ಆದೇಶವಿತ್ತೇ ಎನ್ನುವ ಪ್ರಶ್ನೆಯೂ ಎದ್ದಿದೆ. ಅದರ ಜೊತೆಯೇ ರೋಹಿತ್ ಚಕ್ರತೀರ್ಥ ಸಮಿತಿಯು ತನ್ನ ವ್ಯಾಪ್ತಿ ಮೀರಿ 1 ರಿಂದ 1೦ ನೇ ತರಗತಿಯ ಬರೆಗಿನ ಎಲ್ಲಾ ಪಠ್ಯಗಳನ್ನೂ ಪರಿಷ್ಕರಿಸಿ ವರದಿ ನೀಡಿದ್ದಾರೆ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಹಾಗೆ ಮಾಡಲು ಅವರಿಗೆ ಸರಕಾರದ ಅದ್ಯಾದೇಶವಿರಲಿಲ್ಲ. ಘಟನೋತ್ತರ ಆದೇಶ ನೀಡುವ ವಾಗ್ದಾನವಿತ್ತೆಂದೂ ಮಾಧ್ಯಮಗಳು ವರದಿ ಮಾಡುತ್ತಿವೆ. ಅಂಥಹ ಒಂದು ಅವಕಾಶ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಇದೆಯೇ? ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮುಖ್ಯ ಅಧಿಕಾರಿಗಳಾದ ತಾವು ಈ ಬಗ್ಗೆ ಯಾವ ಕ್ರಮ ಕೈಗೊಂಡಿರುತ್ತೀರಿ? ದಯಮಾಡಿ ಜನತೆಗೆ ತಿಳಿಸಬೇಕಾಗಿ ಕೋರುತ್ತೇವೆ.

2. ತಪ್ಪುಗಳನ್ನು, ಲೋಪದೋಷಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಸಚಿವರ ಹೇಳಿಕೆ ಬಂದ ಮೇಲೂ ಕ್ಷೇತ್ರ ಶಿಕ್ಷಣಾಧಿಕಾರಿ, ದಕ್ಷಿಣ ವಲಯ, ಮೈಸೂರು ಕಛೇರಿಯಿಂದ ಪರಿಷ್ಕೃತ ಪಠ್ಯ ಪುಸ್ತಕವನ್ನು ಬೋಧಿಸಬೇಕೆಂದು ಸುತ್ತೋಲೆ ಹರಿದಾಡುತ್ತಿದೆ. (ಸಂಖ್ಯೆ ಸಿ೪/ಉ.ಪ.ಪು 14(2022-23) ಇದರ ಪ್ರತಿಯನ್ನು ಲಗತ್ತಿಸಿದ್ದೇವೆ. ಇದು ದ್ವಂದ್ವ ನೀತಿಯಲ್ಲವೇ? ಇದರ ಸತ್ಯಾಸತ್ಯತೆಗಳನ್ನು ತಿಳಿಯುವ ಅಧಿಕಾರ ಸಾರ್ವಜನಿಕರಿಗಿದೆ ಎಂದು ಭಾವಿಸಿ ಸ್ಪಷ್ಟೀಕರಣ ಕೇಳುತ್ತಿದ್ದೇವೆ. ಈ ರೀತಿಯ ಆದೇಶಗಳು ಸಹಜವಾಗಿಯೇ ನಾಗರಿಕರಲ್ಲಿ ಮತ್ತು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಗೊಂದಲ, ಆತಂಕ ಮೂಡಿಸುತ್ತವೆ.

3. ನಿಯಮ ಬಾಹಿರವಾಗಿಯೇ ನಡೆದದ್ದಾದರೂ ಮರು ಪರಿಷ್ಕೃತ ಪಠ್ಯ ಪುಸ್ತಕಗಳಲ್ಲಿರುವ ಲೋಪದೋಷಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆಯ ಹೇಳಿಕೆ ಎಂಬಂತೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಆಕ್ಷೇಪಣೆ ಸಲ್ಲಿಸುವ ವಿಧಾನ, ಅಂತಿಮ ದಿನಾಂಕ ಮತ್ತು ಪಠ್ಯಗಳು ಅಧಿಕೃತ್ವಾಗಿ ಲಭ್ಯವಿಲ್ಲ. ಇದಕ್ಕೆ ಕಾರಣವೇನು ಮತ್ತು ಯಾವಾಗ ದೊರೆಯುತ್ತದೆ ತಿಳಿಸುವಿರಾ?

4. ದಿನಾಂಕ 12-06- 2022 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಈ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳೀಗೆ ಕೊಡಲಾಗುತ್ತದೆ ಎಂದು ವರದಿಯಾಗಿದೆ. ಒಂದೆಡೆ ಸೂಕ್ರ ತಿದ್ದುಪಡಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಹೇಳಿಕೆ ಕೊಡುತ್ತಾರೆ. ಮತ್ತೊಂದೆಡೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ. ಇದು ಗೊಂದಲಕ್ಕೆ ಕಾರಣವಾಗುತ್ತದೆ.

5. ಕರ್ನಾಟಕ ಸರಕಾರ ಜನ ವಿರೋಧದ ನಡುವೆಯೂ, ವಿಧಾನ ಸಭೆಯಲ್ಲಿ ಚರ್ಚೆಯನ್ನೂ ಮಾಡದೇ ಏಕಪಕ್ಷೀಯವಾಗಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ತರಾತುರಿಯಲ್ಲಿ ಜಾರಿ ಮಾಡಿದೆ. ಅದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳು ನಮ್ಮೆದುರಿಗಿದೆ. ಅದನ್ನೀಗ ಪ್ರಾಥಮಿಕ ಶಿಕ್ಷಣಕ್ಕೂ ಅನ್ವಯಿಸಲು ಯಾವ ಚರ್ಚೆಗಳೂ ಇಲ್ಲದೆಯೇ ಸಮಿತಿಯನ್ನು ನೇಮಕ ಮಾಡಿದೆ. ಅದರ ಶಿಫಾರಸುಗಳಿಗೆ ಅನುಗುಣವಾಗಿ ಮತ್ತೆ ನೀವು ಹೊಸ ಪಠ್ಯಗಳನ್ನು ರಚಿಸುವವರಿದ್ದೀರಿ. ಹಾಗಿದ್ದೂ ಕೇವಲ ಒಂದು ವರ್ಷಕ್ಕಾಗಿ ಮರು ಪರಿಷ್ಕರಣೇಯ ಅಗತ್ಯವೇನಿತ್ತು?ಇದಕ್ಕೆ ಖರ್ಚು ಮಾಡಿದ ಹಣದಿಂದ ಸಾರ್ವಜನಿಕ ಬೊಕ್ಕಸಕ್ಕೆ ಆದ ನಷ್ಟಕ್ಕೆ ಯಾರು ಹೊಣೆ?

6. ಈ ಎಲ್ಲ ವಿವಾದಗಳೂ ಕೊನೆಗೊಳ್ಳುವವರೆಗೂ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು ಎಂದು ಕೋರುತ್ತೇವೆ

ಕೆ.ಮರುಳಸಿದ್ದಪ್ಪ, ಹಿ.ಶಿ.ರಾಮಚಂದ್ರೇಗೌಡ, ಜಿ.ರಾಮಕೃಷ್ಣ , ಬೋಳುವಾರು ಮಹಮದ್ ಕುಂಞೆ,  ಎಸ್.ಜಿ.ಸಿದ್ದರಾಮಯ್ಯ,  ವಿಜಯಾ, ರಾಜೇಂದ್ರ ಚೆನ್ನಿ
ಪುರುಷೋತ್ತಮ ಬಿಳಿಮಲೆ,  ಬಂಜಗೆರೆ ಜಯಪ್ರಕಾಶ್‌, ವಿಮಲಾ.ಕೆ.ಎಸ್,  ಬಿ.ಶ್ರೀಪಾದ ಭಟ್, ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ,  ರಹಮತ್ ತರಿಕೆರೆ
ಕುಂ.ವೀರಭದ್ರಪ್ಪ, ಪ್ರತಿಭಾ ನಂದಕುಮಾರ್, ಪಾರ್ಥಸಾರಥಿ, ಎಚ್.ಎಸ್.ರಾಘವೇಂದ್ರ ರಾವ್, ಮುಕುಂದ್ ರಾಜ್, ಶಿವಸುಂದರ್,  ಬಿ.ಟಿ.ಲಲಿತಾ ನಾಯಕ್,
ದಿನೇಶ್ ಅಮಿನ್ ಮಟ್ಟು, ಟಿ.ಸುರೇಂದ್ರ ರಾವ್, ಚೇತನಾ ತೀರ್ಥಹಳ್ಳಿ, ಬಿ.ಸುರೇಶ, ಮಲ್ಲಿಕಾರ್ಜುನ ಕಲಮರಹಳ್ಳಿ, ಕಾಳೇಗೌಡ ನಾಗವಾರ, ಶಶಿಕಲಾ ವಸ್ತೃದ,
ಕಮ್ಮರಡಿ ಪ್ರಕಾಶ್, ವಿನಯಾ, ದೇವೇಂದ್ರ ಗೌಡ, ಅಚ್ಯುತ, ವಸಂತ್‌ರಾಜ್, ವಾಸುದೇವ ಉಚ್ಚಿಲ, ವೆಂಕಟೇಶ ಪ್ರಸಾದ್,  ಬಿ.ಐ.ಇಳಿಗೆರ್, ಇಂದಿರಾ ಕೃಷ್ಣಪ್ಪ
ಸುಷ್ಮಾ ,ಅಕ್ಷತಾ ಹುಂಚದಕಟ್ಟೆ, ಜನಾರ್ಧನ (ಜನ್ನಿ) ಮೈಸೂರು, ಚಿದಂಬರ ರಾವ್ ಜಂಬೆ, ಎನ್.ಗಾಯತ್ರಿ , ಕೆ.ಷರೀಫಾ, ಎಸ್.ವೈ.ಗುರುಶಾಂತ್, ಸುರೇಶ್ ಆನಗಳ್ಳಿ ,
ಕೆ.ನೀಲಾ,  ಪ್ರಭು ಖಾನಾಪುರೆ, ಮಲ್ಲಿಕಾರ್ಜುನ ಕಡಕೋಳ, ಯಮುನಾ ಗಾಂವ್ಕರ್,  ಸಿ.ಆರ್.ಶಾನಬಾಗ್,  ಗುಂಡಣ್ಣ ಸಿ.ಕೆ, ದಿಲೀಪ್  ಸೇರಿದಂತೆ ಅನೇಕರು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಪರವಾಗಿ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *