ಭಾರಿ ಮಳೆ: 6.64 ಲಕ್ಷ ಹೆಕ್ಟೇರ್‌ ಬೆಳೆಗಳು ನಾಶ, ಆಹಾರ ಧಾನ್ಯಗಳ ಉತ್ಪಾದನೆ ಇಳಿಕೆ ಸಾದ್ಯತೆ

ಬೆಂಗಳೂರು: ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅನಾವೃಷ್ಟಿಯಲ್ಲದಿದ್ದರೂ ಅಗತ್ಯ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಈಗಾಗಲೇ 6.64 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಕೃಷಿ ಬೆಳೆಗಳು ನಾಶವಾಗಿವೆ. ಇದರ ಪರಿಣಾಮ ಲಕ್ಷಾಂತರ ಟನ್‌ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾಗುವ ಆತಂಕ ರಾಜ್ಯದಲ್ಲಿ ಸೃಷ್ಟಿಯಾಗಿದೆ.

ಅದರಲ್ಲೂ ಉದ್ದು, ಹೆಸರು ಕಾಳು, ಭತ್ತ, ಸೂರ್ಯಕಾಂತಿ, ಹತ್ತಿ, ತೊಗರಿ ಮತ್ತಿತರ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಿದ್ದು, ಇನ್ನೂ ಮಳೆ ಬೀಳುತ್ತಿರುವುದರಿಂದ ಮತ್ತಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಲಿದೆ. ಅಲ್ಲದೆ, ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಬಿತ್ತನೆ ಮಾಡಲಾಗಿದ್ದರೂ, ಸಕಾಲಕ್ಕೆ ಮಳೆ ಬೀಳದೆ ಬೆಳೆಗಳಿಗೆ ತೊಂದರೆಯಾಗಿದೆ. ಹೀಗಾಗಿ, ರಾಜ್ಯದಲ್ಲಿ ಈ ಬಾರಿ ಮುಂಗಾರು ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಒಟ್ಟಾರೆ 85.21 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದ್ದು, 148.48 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ. ಅದೇ ರೀತಿ ಮುಂಗಾರಿನಲ್ಲಿ 55.87 ಲಕ್ಷ ಹೆಕ್ಟೇರ್‌ ಪ್ರದೇಶದ ಬಿತ್ತನೆಗೆ 109.23 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದು ಆರ್ಥಿಕ ಸಾಂಖ್ಯಿಕ ಇಲಾಖೆ ಅಂದಾಜು ಮಾಡಿದೆ.

ಇದನ್ನೂ ನೋಡಿ: ಚಿನ್ನಯ್ಯ ಹೊಸ ಹೇಳಿಕೆ: ತನಿಖೆ ಆರಂಭಿಸಲಿರುವ ಎಸ್‌ಐಟಿ

ಸಾಮಾನ್ಯವಾಗಿ ಮುಂಗಾರಿನಲ್ಲಿ ಸುಮಾರು 110-112 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಉತ್ಪಾದನೆಯ ಗುರಿ ಪೈಕಿ ಈ ಬಾರಿ 109 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯ ಗುರಿ ಹೊಂದಲಾಗಿದೆ. ಅಂತಿಮವಾಗಿ ಮತ್ತಷ್ಟು ಇಳಿಕೆಯೂ ಆಗಬಹುದು.

ಸಾಮಾನ್ಯವಾಗಿ ಈ ವೇಳೆಗೆ ವಾರ್ಷಿಕವಾಗಿ ವಾಡಿಕೆಯಂತೆ 821 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಬಾರಿ ವಾಡಿಕೆಗಿಂತ ಶೇ. 2ರಷ್ಟು ಹೆಚ್ಚುವರಿಯಾಗಿಯೇ ಮಳೆಯಾಗಿದೆ. ಬೆಂಗಳೂರು ದಕ್ಷಿಣ, ಚಾಮರಾಜನಗರ, ಚಿತ್ರದುರ್ಗ, ಮೈಸೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಅಗತ್ಯ ಮಳೆಯಾಗಲಿಲ್ಲ. ಅದರಲ್ಲೂ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಬಿತ್ತನೆ ಸಮಯ ಮತ್ತು ನಂತರದಲ್ಲಿ ಅಗತ್ಯ ಪ್ರಮಾಣದಷ್ಟು ಮಳೆಯಾಗಲಿಲ್ಲ. ಹೀಗಾಗಿ, ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಂಠಿತವಾಗುವ ಸಾಧ್ಯತೆಯಿದೆ. ಕೆಲವೆಡೆ ಹೊಲ-ಗದ್ದೆಗಳು ಹಸಿರುಮಯವಾಗಿದ್ದರೂ, ಅಧಿಕ ಇಳುವರಿ ಬಗ್ಗೆ ಅನುಮಾನವಿದೆ.

ಕಳೆದ ವರ್ಷಕ್ಕಿಂತ ಬಿತ್ತನೆ ಗುರಿ ಹೆಚ್ಚು

ಕಳೆದ ವರ್ಷ ಅಂದರೆ, 2024-25ರಲ್ಲಿ 83.97 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಒಟ್ಟಾರೆ 151.57 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿತ್ತು. ಆದರೆ, ಈ ಬಾರಿ ಬಿತ್ತನೆ ಪ್ರದೇಶ ಕಳೆದ ವರ್ಷಕ್ಕಿಂತ ಸುಮಾರು 2 ಲಕ್ಷ ಹೆಕ್ಟೇರ್‌ನಷ್ಟು ಹೆಚ್ಚಾಗಿದ್ದರೂ, ಒಟ್ಟಾರೆ ಇಳುವರಿ ಪ್ರಮಾಣದ ಗುರಿ ಕಡಿಮೆಯಿದೆ. ಅಂತಿಮವಾಗಿ ಇದು ಹೆಚ್ಚಾಗಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಯಾವ್ಯಾವ ಜಿಲ್ಲೆಗಳಲ್ಲಿ ಬೆಳೆ ನಷ್ಟ

ಉತ್ತರ ಕರ್ನಾಟಕ ಭಾಗದಲ್ಲಿ ಜೂನ್‌, ಜುಲೈ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿತ್ತು. ಆದರೆ, ಈಗ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಗದಗ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಬೀದರ್‌, ಹಾವೇರಿ, ಕಲಬುರಗಿ, ಕೊಪ್ಪಳ, ಬೆಳಗಾವಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆ ನಷ್ಟವಾಗಿರುವುದು ದಾಖಲಾಗಿದೆ.

ರಾಜ್ಯದಲ್ಲಿ ಈ ಬಾರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ 6.64 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕೃಷಿ ಬೆಳೆ ನಾಶವಾಗಿದೆ. ಅದರಲ್ಲೂ 2.47 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಹೆಸರುಕಾಳು, 1.78 ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ, 92,482 ಹೆಕ್ಟೇರ್‌ ಜೋಳ, 49,285 ಹೆಕ್ಟೇರ್‌ ಪ್ರದೇಶಕ್ಕೂ ಹೆಚ್ಚು ಹತ್ತಿ, 34,731 ಹೆಕ್ಟೇರ್‌ ಉದ್ದು ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ. ಪುತ್ರ ಹೇಳಿದ್ದಾರೆ.

ಯಾವ ಬೆಳೆ ಎಷ್ಟು ಹೆಕ್ಟೇರ್‌ ನಷ್ಟ?

  • ಭತ್ತ: 480.39
  • ಜೋಳ: 74.07
  • ರಾಗಿ: 8.36
  • ಮೆಕ್ಕೆಜೋಳ : 92,482.01
  • ಸಜ್ಜೆ : 4262.86
  • ಸಿರಿಧಾನ್ಯಗಳು: 0.20
  • ತೊಗರಿ: 1,78,173
  • ಉದ್ದು: 34,731
  • ಹೆಸರು: 2,47,712.66
  • ಶೇಂಗಾ: 2143.03
  • ಸೂರ್ಯಕಾಂತಿ: 2119.89
  • ಸೋಯಾಬೀನ್‌: 39,749.08
  • ಹತ್ತಿ: 49,285.88
  • ಕಬ್ಬು: 13,239.60
  • ತಂಬಾಕು: 3.20
  • ಒಟ್ಟು – 6,64,469.80

ಇದನ್ನೂ ನೋಡಿ: ಬುರುಡೆ ಹಾಡು| ರಾಶಿಯಿಂದ ಬುರುಡೆಯೊಂದ ತಂದನಾತ| ಹೂತಿರುವೆ ನೂರಾರು ಎಂದನಾತಾ |Janashakthi Media #viralsong

Donate Janashakthi Media

Leave a Reply

Your email address will not be published. Required fields are marked *