ಹುತಾತ್ಮ ಕೊರೊನಾ ಯೋಧರಗೆ ಸಿಗದ ಸರಕಾರದ ಪರಿಹಾರ

ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಾರಿಯಾರ್ಸ್ ಗಳಾಗಿ ದುಡಿದವರ ಸ್ಥಿತಿ ಈಗ ಶೋಚನೀಯವಾಗಿದೆ. ಕೊರೊನಾ ಎಲ್ಲರಿಗೂ ಹರಡುತ್ತಿದ್ದ ವೇಳೆ ಕರ್ತವ್ಯ ನಿರ್ವಹಿಸಿ ಪ್ರಾಣ ಕಳೆದುಕೊಂಡ ಕೊರೊನಾ ಯೋಧರ ಕುಟುಂಬ ಈಗ ಅನಾಥವಾಗಿದೆ.  ಅವರನ್ನೇ ನೆಚ್ಚಿಕೊಂಡಿದ್ದ ಕುಟುಂಬಸ್ಥರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಯೊಧರನ್ನು ಸರಕಾರ ನಿರ್ಲಕ್ಷಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.  ಸರಕಾರದ ಕ್ರಮ ವಿರೋಧಿಸಿ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಬಿಬಿಎಂಪಿ ನೌಕರರು ಪ್ರತಿಭಟನೆಯನ್ನು ನಡೆಸಿದರು.

ಕೊರೊನಾ ವಾರಿಯರ್ಸ್ ಗೆ  ಕೇಂದ್ರ ಸರ್ಕಾರ 50 ಲಕ್ಷ ರೂ  ಮೊತ್ತದ ‘ಪ್ರಧಾನ ಮಂತ್ರಿ ಗರೀಬ್  ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ’ ಯನ್ನು 2020 ರ ಮಾ.30ರಂದು ಪ್ರಕಟಿಸಿತ್ತು. ಎಲ್ಲ ಆರೋಗ್ಯ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳಲ್ಲಿ ದೈನಂದಿನ ವೇತನ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸು ವವರು, ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡವರು, ಹೊರಗುತ್ತಿಗೆ ಸಿಬ್ಬಂದಿ ಈ ವಿಮೆಗೆ ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿತ್ತು

ಕೇಂದ್ರ ಸರಕಾರ ಘೋಷಣೆ ಮಾಡಿದ್ದ ವಿಮೆ ಮೊತ್ತವನ್ನು ಕೇಂದ್ರ ಸರಕಾರವೇ ನೀಡಬಹುದು ಎಂದು  ಭಾವಿಸಲಾಗಿತ್ತು.  ಆದರೆ ಕೇಂದ್ರ ಸರಕಾರ ತಾನು ಹೊರಡಿಸಿದ್ದ  ಆದೇಶಕ್ಕೆ  ಪರಿಷ್ಕೃತ ಆದೇಶವನ್ನು  ಹೊರಡಿಸಿ  ‘ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ಮಾತ್ರ ಗರೀಬ್‌ ಕಲ್ಯಾಣ್‌ ವಿಮೆ ಸಿಗಲಿದೆ. ಇತರ ಸಿಬ್ಬಂದಿ ಸತ್ತರೆ, ಸಂತ್ರಸ್ತ ಕುಟುಂಬಗಳಿಗೆ ನೀಡುವ ವಿಮೆಯ ಮೊತ್ತವನ್ನು ರಾಜ್ಯವೇ ಭರಿಸಬೇಕು’ ಎಂದು ಹೇಳಿ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳುವಂತಹ ಕೆಲಸವನ್ನು ಮಾಡಿತು. ಕೊರೊನಾ ವಾರಿಯರ್ಸ್ ಗೆ ವೇತನ ಹೆಚ್ಚಿಸಬೇಕು ಹಾಗೂ ಪರಿಹಾರ ವಿಮೆ ನೀಡಬೇಕು ಎಂದು ಸಿಐಟಿಯು, ಎಐಟಿಯುಸಿ ಸಂಘಟನೆಗಳು  ಪ್ರತಿಭಟನೆ ನಡೆಸಿದವು.  ಆಗ ರಾಜ್ಯ ಸರ್ಕಾರ, ‘ಸಂತ್ರಸ್ತ ಕುಟುಂಬಗಳಿಗೆ ಆಯಾ ಇಲಾಖೆಗಳು ₹30 ಲಕ್ಷ ವಿಮೆ ನೀಡಬೇಕು’ ಎಂದು ಸುತ್ತೋಲೆ ಹೊರಡಿಸಿತ್ತು.

‘ರಾಜ್ಯದಾದ್ಯಂತ 250 ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗಳು ಮೃತಪಟ್ಟಿದ್ದಾರೆ, ಅದರಲ್ಲಿ  108 ಮಂದಿ ಆರೋಗ್ಯ ಕಾರ್ಯಕರ್ತರು ಇದ್ದರು. 60 ಮಂದಿಯ ಅರ್ಜಿಗಳನ್ನು ದಾಖಲೆ ಸಮೇತ ಕೇಂದ್ರಕ್ಕೆ ಕಳುಹಿಸಲಾಗಿದೆ.  20 ಸಂತ್ರಸ್ತ ಕುಟುಂಬ ಗಳಿಗೆ  ಮಾತ್ರ ವಿಮೆ ಮೊತ್ತ ತಲುಪಿದೆ.  ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 18 ಮಂದಿ ಪೌರಕಾರ್ಮಿಕರೂ ಸೇರಿ 32 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 13 ಪೌರ ಕಾರ್ಮಿಕರಿಗೂ ವಿಮೆ ಮೊತ್ತ ಪಾವತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿ ತೊಡಗಿದ್ದ 18 ಮಂದಿ  ಕೊರೊನಾ ವಾರಿಯರ್ಸ್ ಗಳು ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ, ಯಾವ ಕುಟುಂಬಕ್ಕೂ ವಿಮೆ ತಲುಪಿಲ್ಲ. ಪೊಲೀಸ್‌ ಇಲಾಖೆಯ 99 ಸಿಬ್ಬಂದಿ ಕೋವಿಡ್‌ಗೆ ಬಲಿಯಾಗಿದ್ದು ಆ ಕುಟುಂಬಗಳಿಗೂ ಇನ್ನು ಪರಿಹಾರ ಸಿಕ್ಕಲ್ಲ. ಅಂಗನವಾಡಿ ನೌಕರರು 27 ಜನ ಮೃತರಾಗಿದ್ದರೆ.  ಅವರ ಕುಟುಂಬಗಳಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಸರಕಾರ ನಮ್ಮನ್ನು ಕೋವೀಡ್ ನಿರ್ವಹಣೆಗಾಗಿ ಬಳಸಿಕೊಂಡು ಈಗ ಪರಿಹಾರ ನೀಡದೆ ನಮ್ಮ ಬದುಕಿನ ಜೊತೆ ಆಟವಾಡುತ್ತಿದೆ. ಮೃತ ಕೊರೊನಾ ವಾರಿಯರ್ ಕುಟುಂಬಕ್ಕೂ ಹಣ ನೀಡಿಲ್ಲ, ಅವರ ಕುಟುಬಂಸ್ಥರೂ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ  ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ಮುಖಂಡರಾದ ಪರಿಮಳರವರು ಆರೋಪವನ್ನು ಮಾಡಿದ್ದಾರೆ.

ಕೊರೊನಾ ನಿರ್ವಹಣೆಗಾಗಿ ಸರಕಾರ ತಂದಿದ್ದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ ಕೀರ್ತಿ ಕೊರೊನಾ ವಾರಿಯರ್ಸ್ ಗೆ ಸಲ್ಲಬೇಕು. ಸರಕಾರ ಕೊಟ್ಟ ಜವಬ್ದಾರಿಗಿಂತ ಹೆಚ್ಚಿನ ಕೆಲಸವನ್ನು ಕೊರೊನಾ ವಾರಿಯರ್ಸ್ ಗಳು ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಅವಮಾನ ಅನುಭವಿಸಿದ್ದಾರೆ. ಹಲ್ಲೆಗಳನ್ನು ಎದುರಿಸಿದ್ದಾರೆ. ಅನೇಕ ಬೆದರಿಕೆ ಕರೆಗಳು ಬರ್ತಾ ಇದ್ದವು, ಇದ್ಯಾವದಕ್ಕೂ ಜಗ್ಗದೆ ಒಂದು ರೋಗದ ವಿರುದ್ಧ ಹೋರಾಡಿ 250 ಜನ ಪ್ರಾಣವನ್ನು ಅರ್ಪಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸರಕಾರಗಳು ಕೈ ಚಲ್ಲಿ ಕುಳಿತಿದ್ದಾಗ, ಸರಕಾರದ ಅಲ್ಪ ಸ್ವಲ್ಪ ಮರ್ಯಾದೆ ಏನಾದರು ಉಳಿದಿದ್ದರೆ ಅದು ಕೊರೊನಾ ವಾರಿಯರ್ಸ್ ಗಳು ಶಿಸ್ತಿನಿಂದ ನಿರ್ವಹಿಸಿದ್ದು ಕಾರಣವಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

250 ಜನ ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಗಳು ನಿಧನರಾಗಿದ್ದು ಅವರನ್ನೆ ನಂಬಿದ್ದ ಕುಟುಂಬಗಳು ಈಗ ಅನಾಥವಾಗಿವೆ. ಅವರಿಗೆ ಸೋಂಕು ಬಂದಾಗಲೂ ಸರಕಾರ ಅವರಿಗೆ ಸರಿಯಾದ ಸೌಲಭ್ಯವನ್ನು ನೀಡದ ಪರಿಣಾಮ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಅವರು ಮೃತರಾದ ನಂತರವೂ ಅವರ ಕುಟುಂಬಕ್ಕೆ ಸರಕಾರ ಆಸರೆಯಾಗಿ ನಿಲ್ಲಲಿಲ್ಲ. ಮನಗೆ ಆಸರೆಯಾಗಿದ್ದ ಕೊರೊನಾ ವಾರಿಯರ್ಸ್ ಗಳು ಮೃತರಾದ ನಂತರ ಕುಟುಂಬಸ್ಥರ ಸ್ಥಿತಿ ಚಿಂತಾಜನಕವಾಗಿವೆ. ಆರ್ಥಿಕವಾಗಿ ಬೆಂಬಲವಾಗಿದ್ದ ವ್ಯಕ್ತಿಯನ್ನು ಕುಟುಂಬ ಕಳೆದುಕೊಂಡಾಗ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಮನೆಯ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆಯಲ್ಲಿರುವ ಹಿರಿಯರ ಆರೋಗ್ಯ ಸಮಸ್ಯೆ ಹೀಗೆ ಒಂದರ ಹಿಂದೆ ಆ ಕುಟುಂಬವನ್ನು ಕಾಡುತ್ತಿವೆ. ತುತ್ತು ಅನ್ನಕ್ಕಾಗಿ ಅನ್ಯರನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

ಸಾಂಕ್ರಾಮಿಕದ ವಿರುದ್ಧ ಹೋರಾಟವನ್ನು ನಡೆಸಲು ಸರಕಾರ ಕೊರೊನಾ ವಾರಿಯರ್ಸ್ ಗಳನ್ನು ಉತ್ಸಹಾದಿಂದ ಬಳಸಿಕೊಂಡಿತು, ಅವರು ಮೃತರಾದಾಗ ಅವರ ಕುಟುಂಬಕ್ಕೆ ಹಣವನ್ನು ಕೊಡಬೇಕಾಗಿದ್ದು ಸರಕಾರದ ಕರ್ತ್ವವ್ಯ. ಕೊರೊನಾ ಹೆಸರಲ್ಲಿ ಅನೇಕ ಶಾಸಕರು ಕೋಟಿ ಕೋಟೊ ಲೂಟಿ ಹೊಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೊರೊನಾವನ್ನು ಸರಿಯಾಗಿ ನಿರ್ವಹಿಸದ ಕೇಂದ್ರ ಮತ್ತು ರಾಜ್ಯ ಸರಕಾರ ಗಳು ಈಗ ಕೊರೊನಾ ವಿರುದ್ಧ ಹೋರಾಡಿದ ಯೋಧರ ಬದುಕನ್ನು ಅತಂತ್ರಗೊಳಿಸಿವೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೊರೊನಾ ವಾರಿಯರ್ಸ್ ಗಳಿಗೆ ಹಾಗೂ ಮೃತ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಮುಂದೆ ಬರಬೇಕಿದೆ.

Donate Janashakthi Media

Leave a Reply

Your email address will not be published. Required fields are marked *