27ರ ಮುಷ್ಕರದ ಸಂದೇಶವೂ ಮಾಧ್ಯಮಗಳ ಹೊಣೆಯೂ

ನಾ ದಿವಾಕರ

ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಥವಾ ಸ್ತಂಭ ಎನ್ನಲು ಹಲವು ಕಾರಣಗಳಿವೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವನ್ನೂ ಗಮನಿಸುತ್ತಾ, ಆಳುವ ವರ್ಗಗಳಿಗೆ ಕಣ್ಗಾವಲಿನಂತೆ, ಜನಸಾಮಾನ್ಯರಿಗೆ ಶ್ರೀರಕ್ಷೆಯಂತೆ ಇರಬೇಕಾದ ಮಾಧ್ಯಮಗಳು ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಸ್ವಾತಂತ್ರ್ಯ, ಮುಕ್ತ ಅವಕಾಶ ಮತ್ತು ಸವಲತ್ತುಗಳನ್ನು ಬಳಸಿಕೊಂಡು, ದೇಶದ ಜನಸಾಮಾನ್ಯರಿಗೆ ಎದುರಾಗುವ ಸಂಭಾವ್ಯ ಅಪಾಯಗಳ ಬಗ್ಗೆ, ಸಮಾಜದಲ್ಲಿ ಸಂಭವಿಸುವ ಘಾತುಕ ಸನ್ನಿವೇಶಗಳ ಬಗ್ಗೆ ಜಾಗ್ರತೆಯನ್ನು ಮೂಡಿಸುವಂತಾಗಬೇಕು. ಹಾಗೆಯೇ ಸಾಮಾನ್ಯ ಜನತೆಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟುಮಾಡುವಂತಹ ಪ್ರಭುತ್ವದ ದುಷ್ಟ ಆಲೋಚನೆಗಳನ್ನು ಜನತೆಯ ಮುಂದೆ ತೆರೆದಿಡುವ ಮೂಲಕ, ಪ್ರಜಾತಂತ್ರ ವ್ಯವಸ್ಥೆಯನ್ನು ಸಂರಕ್ಷಿಸುವುವುದು ಮಾಧ್ಯಮಗಳ ಆದ್ಯತೆಯಾಗಬೇಕು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಮುದ್ರಣ ಮಾಧ್ಯಮಗಳು ಈ ನೈತಿಕ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿರುವುದನ್ನು ಕಂಡಿದ್ದೇವೆ.

ಆದರೆ 45 ವರ್ಷಗಳ ನಂತರ ಹಿಂದಿರುಗಿ ನೋಡಿದಾಗ, ಅಂದು ನಾವು ಕಂಡಿದ್ದು ಕನಸೇ ಎಂಬ ಭಾವನೆ ಮೂಡಿದರೂ ಅಚ್ಚರಿಯೇನಿಲ್ಲ. ಹಿರಿಯ ಚಿಂತಕರೂ, ಲೇಖಕರೂ ಆದ ಸನತ್ ಕುಮಾರ್‌ಬೆಳಗಲಿ ತಮ್ಮ ಲೇಖನವೊಂದರಲ್ಲಿ “ ಬಾಲ್ಯದಲ್ಲಿ ಮತ್ತು ಯೌವ್ವನದಲ್ಲಿ  ಕಂಡ ಭಾರತ ನಾವು ಈಗ ಕಾಣುತ್ತಿರುವ ಭಾರತ ಅಲ್ಲ,,,,,ಅಂದಿನ ಭಾರತ ಮತ್ತು ಇಂದಿನ ಭಾರತಕ್ಕೆ ಎಷ್ಟೊಂದು ವ್ಯತ್ಯಾಸ,,,,” (ಭಯಾನಕವಾಗಿ ಬದಲಾಗುತ್ತಿರುವ ಭಾರತ 27-9-21 ವಾರ್ತಾಭಾರತಿ) ಎಂಬ ಆತಂಕ ವ್ಯಕ್ತಪಡಿಸುತ್ತಲೇ ಇಂದಿನ ಭಾರತದ ಭಯಾನಕ ಸ್ಥಿತ್ಯಂತರಗಳನ್ನು ತೆರೆದಿಡುತ್ತಾರೆ. ಈ ಆತಂಕ ಮತ್ತು ಅಭಿವ್ಯಕ್ತಿ ಬಹುಶಃ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೊಸ ಭಾರತದ ಕನಸುಗಳನ್ನು ಕಂಡಿದ್ದ ಪ್ರತಿಯೊಬ್ಬರಲ್ಲೂ ಮೂಡಿರಲು ಸಾಧ್ಯ. ಏಕೆಂದರೆ ಸ್ವತಂತ್ರ ಭಾರತದ ಸಾರ್ವಭೌಮ ಜನತೆಗೆ ಪ್ರತಿರೋಧದ ಒಂದು ಆಯಾಮವನ್ನು ನೀಡಿದ ಕಾಲಘಟ್ಟ 1965-75ರ ಒಂದು ದಶಕ.

ಈ ಕಾಲಘಟ್ಟದಲ್ಲಿ ಬಿತ್ತಲಾದ ಪ್ರಜಾ ಪ್ರಭುತ್ವದ ಬೇರುಗಳು ನಂತರದ ಒಂದು ದಶಕದಲ್ಲೇ ವಿಷಬೀಜಗಳಿಂದ ಬೆರೆತು ವಿನಾಶದಂಚಿಗೆ ಕೊಂಡೊಯ್ದಿದ್ದನ್ನೂ ಕಂಡಿದ್ದೇವೆ. ಅಂದು ಪ್ರಜಾತಂತ್ರದ ಬೆನ್ನೇರಿ ಅಧಿಕಾರಪೀಠಕ್ಕೆ ಬಂದವರು ಇಂದು ಯುದ್ಧ ರಥಿಗಳಂತೆ ಜನತೆಯ ವಿರುದ್ಧವೇ ಖಡ್ಗ ಝಳಪಿಸುತ್ತಿರುವುದನ್ನೂ ಕಾಣುತ್ತಿದ್ದೇವೆ. ಜನಸಾಮಾನ್ಯರ ಆಕ್ರಂದನದ ದನಿಯನ್ನೂ ಆಲಿಸದ, ಆಕ್ರೋಶಭರಿತ ಪ್ರತಿರೋಧದ ದನಿಯನ್ನೂ ಲೆಕ್ಕಿಸದ, ಕ್ರೂರ ನಿರ್ಲಿಪ್ತತೆಯನ್ನು ಇಂದಿನ ಪ್ರಭುತ್ವ ರೂಢಿಸಿಕೊಂಡಿದೆ. ವಿದೇಶದ ನೆಲದಲ್ಲಿ ನಿಂತು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಆತ್ಮರತಿಯಿಂದ ಬೀಗುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ತಾವು ವೀಕ್ಷಿಸಲು ಹೊರಟ ಸೆಂಟ್ರಲ್ ವಿಸ್ತಾ ಕಾಮಗಾರಿಗೆ ಸಮೀಪದಲ್ಲೇ ಹತ್ತು ತಿಂಗಳುಗಳಿಂದ ಮುಷ್ಕರನಿರತರಾಗಿರುವ ಲಕ್ಷಾಂತರ ರೈತರ ಒಕ್ಕೊರಲ ದನಿ ಕೇಳದಂತಾಗಿರುವುದು ವಿಪರ್ಯಾಸವಲ್ಲವೇ ? ಆದರೆ ಭಾರತದ ಪ್ರಜಾಪ್ರಭುತ್ವ ಈ ನಿರ್ಲಿಪ್ತತೆಯನ್ನು ರೂಢಿಸಿಕೊಂಡಂತಿದೆ. ತಮ್ಮ ಹಕ್ಕೊತ್ತಾಯಗಳೊಂದಿಗೆ, ತಾವು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರೋಪಾಯಗಳಿಗಾಗಿ ಆಳುವವರಿಂದ ಉತ್ತರ ಬಯಸುವ ಸಾಮಾನ್ಯ ಜನತೆಗೆ ಆಡಳಿತಾರೂಢ ಸರ್ಕಾರ ನಿರ್ಲಿಪ್ತತೆಯಿಂದ ನಿಷ್ಕ್ರಿಯವಾಗಿರುವುದು ಆಡಳಿತ ಕ್ರೌರ್ಯ ಎನ್ನದೆ ವಿಧಿಯಿಲ್ಲ.

27ರ ಸಾರ್ವತ್ರಿಕ ಮುಷ್ಕರದ ಸಾಫಲ್ಯ ವೈಫಲ್ಯಗಳನ್ನು ಪರಾಮರ್ಶಿಸುವ ಮುನ್ನ, ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಂಡಿರುವ ಒಂದು ಪ್ರಭುತ್ವದ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಿದೆ. ಈ ಸಂದರ್ಭದಲ್ಲಿ ಜನತೆಯ ದನಿಗೆ ದನಿಯಾಗಿ, ಅವರ ಆಕ್ರಂದನಗಳಿಗೆ ಕಿವಿಯಾಗಿ, ಈ ಪ್ರತಿರೋಧದ ದನಿಯನ್ನು ಆಳುವವರಿಗೆ ತಲುಪಿಸಬೇಕಾದ ಮಾಧ್ಯಮಗಳು, “ ಸಾರ್ವತ್ರಿಕ ಬಂದ್ ಮುಷ್ಕರ ಠುಸ್” ಆಗಿದೆ ಎಂದು ಸಂಭ್ರಮಿಸುತ್ತಿರುವುದು ಬದಲಾದ ಭಾರತದ ದುರಂತ ಎನಿಸುತ್ತದೆ. ಒಂದು ವೇಳೆ ‘ಠುಸ್’ ಆಗಿದ್ದರೂ ಮಾಧ್ಯಮಗಳಿಗೆ ವೈಫಲ್ಯದ ವಿಷಾದ ಮೂಡಬೇಕಿತ್ತಲ್ಲವೇ? ತಾವು ಪ್ರತಿನಿಧಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಾರ್ವಭೌಮ ಪ್ರಜೆಗಳನ್ನೇ ಹೊರತು, ಆಳುವ ವರ್ಗಗಳನ್ನು ಅಥವಾ ಆಡಳಿತಾರೂಢ ಪಕ್ಷಗಳನ್ನು ಅಲ್ಲ ಎನ್ನುವ ಕನಿಷ್ಠ ಪರಿವೆ, ಪರಿಜ್ಞಾನ ಮಾಧ್ಯಮಗಳಿಗೆ ಇರಬೇಕಿತ್ತು. ಈ ಸಂಭಾವ್ಯ ವೈಫಲ್ಯವನ್ನು ಅಳೆಯುವ ಮಾನದಂಡವಾದರೂ ಏನು? ವೈಫಲ್ಯದ ಸಾಧಕ ಬಾಧಕಗಳೇನು ಎಂಬ ಚಿಂತೆ ಮಾಧ್ಯಮಗಳನ್ನು ಕಾಡದೆ ಹೋದರೆ, ಇಂತಹ ಸಂವಹನ ಮಾಧ್ಯಮಗಳು, ವಾಹಿನಿಗಳು ಯಾವುದೇ ಸಾಂವಿಧಾನಿಕ ಸ್ಥಾನಮಾನಗಳಿಗೆ ಅರ್ಹವಲ್ಲ ಎಂದೇ ಹೇಳಬೇಕಾಗುತ್ತದೆ.

ಇಂದು, ಸೆಪ್ಟಂಬರ್ 28, ದೇಶದ ಕ್ರಾಂತಿಕಾರಿ ಯುವ ಚೇತನ ಭಗತ್ ಸಿಂಗ್ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇನ್ನು ನಾಲ್ಕು ದಿನಗಳ ನಂತರ ಪ್ರತಿರೋಧದ ಒಂದು ಆಯಾಮವನ್ನು ದೇಶಕ್ಕೆ ಪರಿಚಯಿಸಿದ ಮಹಾತ್ಮ ಗಾಂಧಿಯ ಜನ್ಮದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ವಸಾಹತು ಆಳ್ವಿಕೆಯ ದಬ್ಬಾಳಿಕೆ ಮತ್ತು ಸರ್ವಾಧಿಕಾರದ ವಿರುದ್ಧ ಜನಸಾಮಾನ್ಯರಿಗೆ ಪ್ರತಿರೋಧದ ಗಟ್ಟಿ ಧ್ವನಿಯನ್ನು ನೀಡಿದ ಇಬ್ಬರು ಸಂಗ್ರಾಮಿಗಳನ್ನು ನೆನೆಯುತ್ತಿದ್ದೇವೆ. ಇಂದು ಸಮಸ್ತ ಭಾರತದ ಜನತೆ ತಾವೇ ಚುನಾಯಿಸಿದ ಸರ್ಕಾರದ ವಿರುದ್ಧ ಇದೇ ಕಾರಣಗಳಿಗಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಗತ್ ಸಿಂಗ್ ತನ್ನ ಇನ್‌ಕ್ವಿಲಾಬ್ ಜಿಂದಾಬಾದ್ ಘೋಷಣೆಯೊಂದಿಗೆ ನೇಣುಗಂಬ ಏರಿದಾಗ ಕಂಡಿದ್ದ ಕನಸಿನ ಭಾರತ ಇದಲ್ಲ ಎನ್ನಲು ಹೆಚ್ಚಿನ ಸಾಕ್ಷಿಗಳೇನೂ ಬೇಕಿಲ್ಲ.

27ರ ಮುಷ್ಕರದ ಯಶಸ್ಸನ್ನು ಮುಚ್ಚಿದ  ಮಾರುಕಟ್ಟೆಗಳು, ರಸ್ತೆಗಳಲ್ಲಿ ನೆರೆದ ಜನರು ಮತ್ತು ನಡೆಯದೆ ಹೋದ ಅಹಿತಕರ ಘಟನೆಗಳ ಆಧಾರದಲ್ಲಿ ಅಳೆಯಲಾಗುವುದಿಲ್ಲ. ಅಥವಾ ಬಂಧನಕ್ಕೊಳಗಾದ ಸಂಘಟನೆಗಳ ನಾಯಕರ ಸಂಖ್ಯೆಯಿಂದಲೂ ಅಲ್ಲಗಳೆಯಲಾಗುವುದಿಲ್ಲ. ಆಳುವವರ್ಗಗಳ ಆಡಳಿತ ನೀತಿಗಳ ವಿರುದ್ಧ ವ್ಯಕ್ತವಾಗುವ ಜನಾಕ್ರೋಶದ ಹಿಂದೆ ತಾತ್ವಿಕ ಭಿನ್ನಾಭಿಪ್ರಾಯಗಳಿರುವಂತೆಯೇ, ಜನಸಮುದಾಯಗಳ ಸಾತ್ವಿಕ ಸಿಟ್ಟು ಮತ್ತು ಅಸಮಧಾನಗಳೂ ಇರುತ್ತವೆ. ಮುಷ್ಕರ, ಬಂದ್, ಹರತಾಳ ಇವೆಲ್ಲವೂ ಪ್ರತಿರೋಧದ ವಿಭಿನ್ನ ಸಾಂಕೇತಿಕ ಆಯಾಮಗಳಷ್ಟೇ. ಇವುಗಳ ಹಿಂದೆ ಜನಾಭಿಪ್ರಾಯ ಇರುತ್ತದೆ. ಈ ಮುಷ್ಕರಗಳು ಪ್ರತಿನಿಧಿಸುವ ಜನತೆ ಹಲವಾರು ಸಂದರ್ಭಗಳಲ್ಲಿ ಮೌನ ವೀಕ್ಷಕರಾಗಿರುತ್ತಾರೆ, ಕೆಲವೊಮ್ಮೆ ನಿರ್ಲಿಪ್ತರಾಗಿರುತ್ತಾರೆ. ಆದರೆ ಈ ಮೌನ ಅಥವಾ ನಿರ್ಲಿಪ್ತತೆ ಸಮಸ್ಯೆಯ ನಿರಾಕರಣೆ ಅಲ್ಲ ಎನ್ನುವುದನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕಲ್ಲವೇ ?

ಯಾವ ಕಾರಣಕ್ಕಾಗಿ ಭಗತ್ ಸಿಂಗ್ ನಮಗೆ ನೆನಪಾಗಬೇಕು ? ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ ಸೆಟೆದು ನಿಲ್ಲುವಾಗ ಗಾಂಧಿ ಏಕೆ ನಮಗೆ ಪ್ರೇರಣೆಯಾಗಬೇಕು ? ಸೈದ್ಧಾಂತಿಕವಾಗಿ ಎರಡು ವಿಭಿನ್ನ ಧೃವಗಳನ್ನು ಪ್ರತಿನಿಧಿಸುವ ಈ ಎರಡು ಚೇತನಗಳನ್ನು ಬಂಧಿಸುವ ಸಮಾನ ಎಳೆ ಎಂದರೆ ಪ್ರತಿರೋಧದ ಶಕ್ತಿ ಮತ್ತು ಆಶಯಗಳು. ಇಂದಿನ ಭಾರತಕ್ಕೆ ಭಗತ್ ಸಿಂಗ್ ಹೆಚ್ಚು ಪ್ರಸ್ತುತ ಎನಿಸುತ್ತಾನೆ. ಏಕೆಂದರೆ ಅವನ ದಾರ್ಶನಿಕ ನುಡಿಗಳು ಇಂದಿಗೂ ರಣರಣಿಸುತ್ತವೆ. ಬಿಳಿಯರು ಖಾಲಿ ಮಾಡುವ ಅಧಿಕಾರ ಪೀಠದ ಮೇಲೆ ಕಂದು ಬಣ್ಣದವರು ಕುಳಿತುಕೊಳ್ಳುವುದರಿಂದ ಏನೂ ಬದಲಾಗದು ಎಂದು ಹೇಳುವ ಭಗತ್ ಸಿಂಗ್ “ಭಾರತ ಸರ್ಕಾರದ ಮುಖ್ಯಸ್ಥರಾಗಿ ಲಾರ್ಡ್ ರೀಡಿಂಗ್ ಇರಲಿ, ಪುರುಷೋತ್ತಮ ಥಾಕೊರ್‌ದಾಸ್ ಇರಲಿ, ಭಾರತದ ಜನತೆಗೆ ಏನು ವ್ಯತ್ಯಾಸ ಕಾಣಲಿದೆ ? ಒಬ್ಬ ರೈತನಿಗೆ ಲಾರ್ಡ್ ಇರ್ವಿನ್ ಜಾಗದಲ್ಲಿ ತೇಜ್ ಬಹದ್ದೂರ್ ಸಪ್ರು ಬಂದು ಕುಳಿತರೆ ಏನು ಪ್ರಯೋಜನವಾಗಲಿದೆ ” ಎಂದು ಪ್ರಶ್ನಿಸುತ್ತಾನೆ.

 

2014ರ ಚುನಾವಣೆಗಳಲ್ಲಿ ಬದಲಾವಣೆಯನ್ನು ಬಯಸಿದ ಭಾರತದ ಪ್ರಜ್ಞಾವಂತ ಜನತೆಗೆ ಈ ಪ್ರಶ್ನೆ ಕಾಡಬೇಕಿದೆ. ಈ 27ರ ಸಾರ್ವತ್ರಿಕ ಮುಷ್ಕರ ಈ ಪ್ರಶ್ನೆಗೆ ಉತ್ತರವನ್ನೂ ನೀಡಿದೆ. ಬಂದ್ ಮಾಡುತ್ತಿರುವವರು ರೈತರೇ ಅಲ್ಲ ಎನ್ನುವವರು ಯೋಚಿಸುವವರು, ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯೂ ಕೃಷಿಯೊಡನೆ ಸಂಬಂಧ ಹೊಂದಿರುವುದನ್ನೂ ಗಮನಿಸಬೇಕಲ್ಲವೇ ? ಕಳೆದ ಮೂರು ದಶಕಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಮೂರು ಲಕ್ಷ ರೈತರತ್ತ ಒಮ್ಮೆ ಹೊರಳಿ ನೋಡಿದರೆ, ನಿಷ್ಕ್ರಿಯ-ನಿರ್ಲಿಪ್ತ ಮನಸುಗಳು ಲಜ್ಜೆಯಿಂದ ತಲೆತಗ್ಗಿಸಬೇಕಲ್ಲವೇ? ಈ ಆತ್ಮಹತ್ಯೆಗೆ ಕಾರಣವಾದ ಆಡಳಿತ ನೀತಿಗಳನ್ನು ಮತ್ತಷ್ಟು ವಿಸ್ತರಿಸುತ್ತಿರುವುದರ ವಿರುದ್ಧ ರೈತರು ಬಂದ್ ಆಚರಿಸುತ್ತಿದ್ದರೆ, ಅದಕ್ಕೆ ರೈತರು ಮಾತ್ರವೇ ಸ್ಪಂದಿಸಬೇಕೇ ? ನಾಗರಿಕರಾಗಿ ನಮ್ಮ ಹೊಣೆ ಇಲ್ಲವೇ ?

ಖಾಸಗಿ ಬಂಡವಳಿಗರು ಈ ದೇಶದ ಸಕಲ ಸಂಪತ್ತನ್ನೂ ಕಬಳಿಸಿ ತಮ್ಮ ವಸಾಹತುಪೂರ್ವ ಯುಗವನ್ನು ಮರುಸ್ಥಾಪಿಸಲು ಯತ್ನಿಸುತ್ತಿದ್ದಾರೆ ಅಲ್ಲವೇ ? 50 ವರ್ಷಗಳ ಇತಿಹಾಸ ಇರುವ ಬ್ಯಾಂಕಿಂಗ್ ಮತ್ತು ವಿಮೆ, ಏಳು ದಶಕಗಳ ಕಾಲ ಭಾರತದ ಆರ್ಥಿಕತೆಯನ್ನು ಸದೃಢವಾಗಿರಿಸಿದ ಸಾರ್ವಜನಿಕ ಉದ್ದಿಮೆಗಳು, ಕೈಗಾರಿಕೆಗಳು, ತಮ್ಮ ಬದುಕು ಕಟ್ಟಿಕೊಳ್ಳಲು ವಲಸೆ ಹೋಗುವ ಕೋಟ್ಯಂತರ ಶ್ರಮಜೀವಿಗಳಿಗೆ ಆಸರೆಯಾಗಿದ್ದ ರೈಲ್ವೆ ಸಾರಿಗೆ, ದೇಶದ ಭೌತಿಕ ಸ್ವಾಸ್ಥ್ಯವನ್ನು ಕಾಪಾಡುವ ಆರೋಗ್ಯ ಕ್ಷೇತ್ರದ ಸಂಸ್ಥೆಗಳು, ಸದೃಢ ಸಮ ಸಮಾಜದ ನಿರ್ಮಾಣಕ್ಕೆ ಅತ್ಯವಶ್ಯವಾದ ಶೈಕ್ಷಣಿಕ ವಲಯ ಇವೆಲ್ಲವೂ ಈ ಬಂಡವಳಿಗರ ಪಾಲಾಗುತ್ತಿದೆ. ಕಾರ್ಪೋರೇಟ್ ಹಿತಾಸಕ್ತಿಗಳ ಲಾಭಕೋರತನ ಭಾರತದ ಸಂಪತ್ತನ್ನು ಜಾಗತಿಕ ಬಂಡವಾಳವನ್ನು ಪೋಷಿಸುವ ಕರ್ಮಭೂಮಿಯನ್ನಾಗಿ ಮಾಡಿಬಿಡುತ್ತದೆ.

ಈ ಸಂಭಾವ್ಯ ಅಪಾಯದ ವಿರುದ್ಧ  ಮೊಳಗಿದ ಮುಷ್ಕರದ ಹಿಂದಿನ ದನಿಯನ್ನು ಗಮನಿಸಬೇಕಿದೆ. ಈ ಎಲ್ಲ ಬಿಕ್ಕಟ್ಟುಗಳಿಗೆ, ಸಂಕಷ್ಟಗಳಿಗೆ ಆಯಾ ವಲಯದ ಫಲಾನುಭವಿಗಳು ಮಾತ್ರವೇ ಸ್ಪಂದಿಸಬೇಕು ಎಂದು ಬಯಸುವ ಸಂಕುಚಿತ ಮನೋಭಾವವೇ, ಭಾರತದ ದುಡಿಯುವ ವರ್ಗಗಳ ವಿಘಟನೆಗೂ, ಅನೈಕ್ಯತೆಗೂ ಕಾರಣವಾಗಿದೆ ಎನ್ನುವುದನ್ನು ಗಮನಿಸಬೇಕು. ಜಾತಿ ಮತಗಳ ಭಾವನಾತ್ಮಕ ನೆಲೆಯಲ್ಲಿ ಜನಸಾಮಾನ್ಯರನ್ನು ನಿತ್ಯ ಬದುಕಿನ ಸಮಸ್ಯೆಗಳಿಂದ ವಿಮುಖಗೊಳಿಸಿರುವ ಆಳುವ ವರ್ಗಗಳ ವಿರುದ್ಧ ನಿನ್ನೆಯ ಮುಷ್ಕರ ಒಂದು ಪ್ರಬಲ ದನಿಯನ್ನು ಮೂಡಿಸಿದೆಯಲ್ಲವೇ? ಹೊಸ ಶಿಕ್ಷಣ ನೀತಿಯ ಪರಿಣಾಮ ಶಿಕ್ಷಣದಿಂದಲೇ ವಂಚನೆಗೊಳಗಾಗುವ ಜನಸಮುದಾಯಗಳು, ಕೃಷಿ ಕಾಯ್ದೆಗಳಿಂದ ಬೀದಿಪಾಲಾಗಲಿರುವ ಲಕ್ಷಾಂತರ ರೈತರು,  ಔದ್ಯಮಿಕ ಖಾಸಗೀಕರಣದಿಂದ ನೆಲೆ ಕಳೆದುಕೊಳ್ಳಲಿರುವ ಕೋಟ್ಯಂತರ ಕಾರ್ಮಿಕರು ಈ ಪ್ರಬಲ ದನಿಯ ಹಿಂದಿದ್ದಾರೆ. ರಸ್ತೆಗಳಲ್ಲಿ ಮೊಳಗದೆ ಇದ್ದ ಮಾತ್ರಕ್ಕೆ ಈ ದನಿಯ ಅಸ್ತಿತ್ವವನ್ನೇ ಅಲ್ಲಗಳೆಯಲಾಗದು ಅಲ್ಲವೇ ? ಸಾರ್ವತ್ರಿಕ ಮುಷ್ಕರ, ಬಂದ್ ‘ ಠುಸ್ ’ ಎಂದು ಸಂಭ್ರಮಿಸುವ ಸುದ್ದಿಮನೆಗಳ ಸಂಪಾದಕರಿಗೆ ಈ ಸೂಕ್ಷö್ಮ ಅರ್ಥವಾಗಬೇಕಲ್ಲವೇ ?

ತಮ್ಮ ಅಧಿಕಾರದಾಹಕ್ಕೆ ಬಲಿಯಾಗಿ, ಸಾಂವಿಧಾನಿಕ ಹೊಣೆಯನ್ನೂ ಮರೆತಿರುವ ರಾಜಕೀಯ ಪಕ್ಷಗಳಿಗೂ ಈ ಸೂಕ್ಷö್ಮ ಅರಿವಾಗಬೇಕಿದೆ. #ಆತ್ಮನಿರ್ಭರ ಭಾರತವನ್ನು ಮರುವಸಾಹತೀಕರಣಕ್ಕೆ ಒಳಪಡಿಸಲು ಸಜ್ಜಾಗಿರುವ ಬಂಡವಾಳಶಾಹಿ ಆಡಳಿತ ವ್ಯವಸ್ಥೆಗೆ ಈ ಸೂಕ್ಷö್ಮ ಅರ್ಥವಾಗುತ್ತದೆ. ಇದರಿಂದ ಉದ್ಭವಿಸುವ ಜನಾಕ್ರೋಶದ ಕಿಡಿಗಳನ್ನು ನಂದಿಸುವ ಸಲುವಾಗಿಯೇ ಕರಾಳ ಶಾಸನಗಳ ಭಂಡಾರವನ್ನೇ ಕಳೆದ ಏಳು ವರ್ಷಗಳಲ್ಲಿ ತೆರೆದಿಡಲಾಗಿದೆ. ಈ ಶಾಸನಗಳನ್ನು ಸಮರ್ಥಿಸಿಕೊಳ್ಳಬೇಕಾದ ಬೌದ್ಧಿಕ ವಲಯವನ್ನೂ ವ್ಯವಸ್ಥಿತವಾಗಿ ಸೃಷ್ಟಿಸಲಾಗಿದೆ. ದುರದೃಷ್ಟವಶಾತ್ ಭಾರತದ ಬಹುತೇಕ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳು ಈ ಬೌದ್ಧಿಕ ವಲಯದ ಉಸ್ತುವಾರಿ ವಹಿಸಿಕೊಂಡಿವೆ. ಹಾಗಾಗಿಯೇ ಮುಷ್ಕರ   ‘ ಠುಸ್ ’ ಆಗುವುದನ್ನು ಸಂಭ್ರಮಿಸುತ್ತವೆ. ಮುಷ್ಕರದ ಯಶಸ್ಸನ್ನು ಕಾಣಬೇಕಾದರೆ ನೊಂದ ಜನರ ನಿಟ್ಟುಸಿರನ್ನು ಅರಿತುಗೊಳ್ಳುವ ಹೃದಯವೈಶಾಲ್ಯ ಇರಬೇಕಲ್ಲವೇ ?

ಮುಷ್ಕರದಲ್ಲಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಒಂದು ಕುಟುಂಬ ಇರುತ್ತದೆ. ಅದು ಬೀದಿಗೆ ಬರುವುದಿಲ್ಲ. ಆದರೆ ಆಳುವ ವರ್ಗಗಳ ಜನವಿರೋಧಿ ನೀತಿಗಳಿಗೆ ಅವರೇ ಪ್ರಥಮ ಬಲಿ ಆಗಿರುತ್ತಾರೆ. ಇದಕ್ಕೆ ರೈತ ಮುಷ್ಕರವೂ ಹೊರತಲ್ಲ. ಈ ಸೂಕ್ಷö್ಮವನ್ನು ಅರಿತವರ ಕಣ್ಣಿಗೆ ಮುಷ್ಕರದ  ‘ಯಶಸ್ಸು ವೈಫಲ್ಯ ’ ಮುಖ್ಯವಾಗುವುದಿಲ್ಲ. ಈ ಮುಷ್ಕರದ ಮೂಲಕ ನೊಂದ ಜನತೆಯ ಆಕ್ರೋಶದ ನಿಟ್ಟುಸಿರು ಆಳುವ ವರ್ಗಗಳಿಗೆ ತಟ್ಟುವುದು ಮುಖ್ಯವಾಗುತ್ತದೆ. ಆದರೆ ಈ ತಟ್ಟಿರಬಹುದಾದ ನಿಟ್ಟುಸಿರನ್ನು ಗಮನಿಸುವ ಮಾನವೀಯ ಸೂಕ್ಷö್ಮವನ್ನೂ ಕಳೆದುಕೊಂಡಿರುವ ಒಂದು ಕ್ರೂರ ಆಡಳಿತ ವ್ಯವಸ್ಥೆಯಲ್ಲಿ #ಆತ್ಮನಿರ್ಭರ ಭಾರತ ಮುನ್ನಡೆಯುತ್ತಿದೆ. ಮಾಧ್ಯಮಗಳು ಈ ಭಾರತದೊಡನೆ ಅನುಸಂಧಾನ ನಡೆಸಬೇಕಿದೆ. ಆಗ ಮಾತ್ರ ಅದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎನಿಸಿಕೊಳ್ಳುತ್ತದೆ. ದುರಂತ ಎಂದರೆ ಭಾರತದ ಮಾಧ್ಯಮಗಳು ಈ ಕ್ರೂರ ಆಡಳಿತ ವ್ಯವಸ್ಥೆಯ ವಂದಿಮಾಗಧ ಬೌದ್ಧಿಕ ಕಾಲಾಳುಗಳಾಗಿವೆ.

27ರ ಮುಷ್ಕರ #ಆತ್ಮನಿರ್ಭರ ಭಾರತದ ಬಂಡವಾಳಶಾಹಿ ಆಳುವವರ್ಗಗಳಿಗೆ ಸ್ಪಷ್ಟ ಸಂದೇಶವನ್ನಂತೂ ನೀಡಿದೆ. ರೈತರು ತಮ್ಮ ಭೂಮಿ ಮತ್ತು ಶ್ರಮವನ್ನು ಬಿಕರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದೇಶದ ಬಡ ಜನತೆ ತಮ್ಮ ನೆಲ-ಜಲ ಸಂಪತ್ತನ್ನು ಸಂರಕ್ಷಿಸಲು ಪಣ ತೊಟ್ಟಿದ್ದಾರೆ. ದುಡಿಯುವ ವರ್ಗಗಳು ತಮ್ಮ ಶ್ರಮವನ್ನು ಜಾಗತಿಕ ಮಾರುಕಟ್ಟೆಯ ಜಗುಲಿಯಲ್ಲಿ ಹರಾಜು ಮಾಡುವುದಿಲ್ಲ ಎಂದು ನಿರೂಪಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನೆಲೆಗಳನ್ನು ಲಾಭಕೋರ ಕಾರ್ಪೋರೇಟ್‌ಗಳಿಗೆ ಒಪ್ಪಿಸಲಾರೆವು ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ತಮ್ಮದೇ ಆದ ಬದುಕು ಕಟ್ಟಿಕೊಳ್ಳುತ್ತಿರುವ ಕೆಳಮಧ್ಯಮ ವರ್ಗಗಳು, ಶ್ರಮಜೀವಿಗಳು ತಮ್ಮ ಬದುಕಿನ ನೆಲೆ ಕುಸಿಯಲು ಬಿಡಲಾರೆವು ಎಂದು ದೃಢ ಸಂಕಲ್ಪ ಮಾಡಿದ್ದಾರೆ. ಮಹಿಳೆಯರು ಇನ್ನು ತಮ್ಮ ಮೇಲಿನ ದೌರ್ಜನ್ಯಗಳನ್ನು ಸಹಿಸಲಾರೆವು ಎಂದು ಸಾರಿ ಹೇಳಿದ್ದಾರೆ. ‘ ಠುಸ್ ’ ಎಂದ ಈ ಸಾರ್ವತ್ರಿಕ ಮುಷ್ಕರದ ಹಿಂದಿರುವ ಈ ಸಂಕಲ್ಪಗಳನ್ನು ಅರ್ಥಮಾಡಿಕೊಳ್ಳುವ ಮನುಜಸೂಕ್ಷö್ಮ ಪ್ರಜ್ಞೆ ಇದ್ದರೆ ಬಹುಶಃ, ಈ ಕ್ರೂರ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತನೂ ಸಿಡಿದೇಳುತ್ತಾನೆ. ಮಾಧ್ಯಮಗಳಿಗೆ ತಮ್ಮ ನೈತಿಕ ಮತ್ತು ಸಾಂವಿಧಾನಿಕ ಹೊಣೆಯ  ಅರಿವು ಇದ್ದಿದ್ದರೆ ಈ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಲು ಮುಂದಾಗಬೇಕಿತ್ತು.

Donate Janashakthi Media

Leave a Reply

Your email address will not be published. Required fields are marked *