115ನೇ ಭಗತ್‌ ಸಿಂಗ್‌ ಜನ್ಮದಿನಾಚರಣೆ

ಕ್ರಾಂತಿಕಾರಿ ಎಂದ ಕೂಡಲೇ ನಮ್ಮೆಲ್ಲರ ಮನದಲ್ಲಿ ಮೂಡುವ ಮೊದಲ ಹೆಸರು ʻಭಗತ್‌ ಸಿಂಗ್‌ʼ, ಬದಲಾವಣೆ ಬಯಸಿ ಹೆಜ್ಜೆಯಾಕುತ್ತಿರುವ ಎಷ್ಟೋ ಯುವಕ ಯುವತಿಯರಿಗೆ ರೋಲ್‌ ಮಾಡಲ್‌ ಆಗಿರುವ ಭಗತ್‌ ಸಿಂಗ್‌, ಸ್ವಾತಂತ್ರ್ಯಕ್ಕಾಗಿ ತನ್ನ ಹದಿಹರೆಯದ ವಯಸ್ಸಿನಲ್ಲೇ ಹೋರಾಡಿ ಪ್ರಾಣ ತೆತ್ತ ವೀರತ್ವ ಯಾವಾಗಲೂ ಸ್ಪೂರ್ತಿಧಾಯಕವಾಗಿದೆ.

ಇಂದು ಯುವ ಕ್ರಾಂತಿಕಾರಿ ಭಗತ್ ಸಿಂಗ್‌ ರವರ 115ನೇ ಜನ್ಮದಿನ. ಇಂದಿಗೆ ಪಾಕಿಸ್ತಾನಕ್ಕೆ ಸೇರಿರುವ ಪಂಜಾಬ್‌ನ  ಲಿಯಾಲ್‌ಪುರ್‌ ಜಿಲ್ಲೆಯ ಬಂಗಾ   ಗ್ರಾಮದಲ್ಲಿ  ಭಗತ್  27 ಸೆಪ್ಟೆಂಬರ್ 1907 ರಂದು ಜನಿಸಿದರು. ʻವಿದ್ಯಾವತಿʼ ಮತ್ತು ʻಕಿಶನ್ ಸಿಂಗ್ ಸಂಧುʼಗೆ ಜನಿಸಿದ ಏಳು ಮಕ್ಕಳಲ್ಲಿ ಎರಡನೆಯ ಮಗನಾಗಿ ಜನಿಸಿದರು. ಇವರ ತಂದೆ ಮತ್ತು ಚಿಕ್ಕಪ್ಪ ಮೊದಲಿನಿಂದಲೂ ಪ್ರಗತಿಪರ  ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ ಭಗತ್‌ಗೆ ಚಿಕ್ಕ ವಯಸ್ಸಿನಿಂದಲೇ ದೇಶದ ಸ್ಥಿತಿಗತಿಗಳ ಮೇಲೆ ಆಸಕ್ತಿ ಮೂಡಿತ್ತು.

ಗಾಂದಿಜೀ ಯವರು ಅಸಹಕಾರ ಚಳುವಳಿಯನ್ನು ಹಿಂಪಡೆದ ಕಾರಣ ಭಗತ್‌ ನ ಎಳೆಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿತ್ತು. ʼಜಲಿಯನ್‌ ವಾಲಾಬಾಗ್‌ʼನ ಹತ್ಯಾಕಾಂಡ ಅವನಲ್ಲಿ ಕಿಡಿವೊತ್ತಿಸಿತ್ತು.  ಬ್ರಿಟೀಷರ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕೆಂಬ ಅವನ ಆಲೋಚನೆಗಳು‌,  ಲಾಹೋರ್‌ನಲ್ಲಿನ ಲಾಲಾ ಲಜಪತ್‌ ರಾಯ್‌ ರವರ  ನ್ಯಾಷನಲ್ ಕಾಲೇಜಿಗೆ ಸೇರಿದ ನಂತರದಲ್ಲಿ ಕ್ರಾಂತಿಕಾರಿ ಮನೋಭಾವವಾಗಿ ಬದಲಾಯಿತು. ಶಿಕ್ಷಕರಾದ ವಿದ್ಯಾಲಂಕಾರ್‌ಜೀ ಮೊದಲಿನಿಂದಲೂ ಭಗತ್‌ನ ದೂರಾಲೋಚನೆಗಳ ಬಗ್ಗೆ ಅರಿತಿದ್ದು, ಚಂದ್ರಶೇಕರ್‌ ಆಜಾದ್‌ ರವರ ಕ್ರಾಂತಿಕಾರಿ ಸಂಘಟನೆಯ ಹೆಡೆಗೆ ಭಗತ್‌ನ ಹೆಜ್ಜೆಗಳನ್ನು ತಿರುಗಿಸಿದರು. ಸ್ವತಂತ್ರ್ಯದೆಡೆಗೆ ಸಾವಿರಾರು ಆಸೆ ಕನಸುಗಳ ಕಟ್ಟಿಕೊಂಡಿದ್ದ ಭಗತ್‌ಗೆ ಇಂಡಿಯನ್‌ ರಿಪಬ್ಲಿಕ್‌ ಅಸೋಸಿಯೇಷನ್ ಸಂಘಟನೆ ಒಂದು ವೇದಿಕೆಯಾಗಿತು. ಇಲ್ಲಿ  ಸಮಾನ ಆಲೋಚನೆಯುಳ್ಳ  ಭಗತ್, ಸುಖದೇವ್‌ ಮತು ರಾಜಗುರು ಜೊತೆಗೂಡಿದರು.

ಲಾಲ ಲಜಪತ್‌ ರಾಯ್‌ ಸಾವಿಗೆ ಪ್ರತೀಕಾರವಾಗಿ ಸ್ಕಾಟ್‌ನ ಹತ್ಯೆಗೆ ಸಂಚು ರೂಪಿಸಿ ಅದರಲ್ಲಿ ವಿಫಲರಾಗಿ ಭಗತ್‌, ಸುಖದೇವ್‌, ರಾಜಗುರು ವೇಷಮರಿಸಿಕೊಳ್ಳಬೇಕಾಯಿತು. ಅನೇಕ ಕ್ರಾಂತಿಕಾರ್ಯಗಳಲ್ಲಿ ಭಾಗಿಯಾಗಿದ್ದ ಭಗತ್‌ ತಮ್ಮ ಕ್ರಾಂತಿಕಾರ್ಯವನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಮುನ್ನಡೆಸುವ ಆಲೋಚನೆಯಲ್ಲಿದ್ದರು.  ಈ ನಿಟ್ಟಿನಲ್ಲಿ ಸೆಂಟ್ರಲ್  ಲೆಜಿಸ್ಲೇಟಿವ್ ಅಸೆಂಬ್ಲಿಯ ಮುಂದೆ ಯಾರಿಗೂ ಹಾನಿಯಾಗದಂತೆ ಬಾಂಬ್‌ ಸ್ಪೋಟಿಸಿ, ಕೋರ್ಟ್‌ ನಲ್ಲಿ ತಮ್ಮ ಆಲೋಚನೆಗಳನ್ನು ಜನರ ಮನಮುಟ್ಟುವಂತೆ ಅಂಚಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಇಷ್ಟು ಸ್ಪಷ್ಟ ನಿಲುವನ್ನು ಹೊಂದಿದ್ದ ಭಗತ್ನ ಆಲೋಚನೆಗಳಿಗೆ ಹೆದರಿದ ಬ್ರಿಟೀಷ್‌ ಸರ್ಕಾರ ಭಗತ್‌ ಗೆ ಮರಣದಂಡನೆ ಶಿಕ್ಷೆ ನೀಡಿತು. ಹುತಾತ್ಮರಾದ ಭಗತ್‌ ಸುಖದೇವ್‌ ರಾಜಗುರು ಅವರ ದೇಹಗಳನ್ನು ಸಹ ಜನರಿಗೆ ತಿಳಿಯದಂತೆ ಗೂಪ್ಯವಾಗಿ ಮಣ್ಣು ಮಾಡಲಾಯಿತು.

ʼನಾನು ಮಣ್ಣಾದರು ನನ್ನ ಆಲೋಚನಗಳು ಮಣ್ಣಾಗುವುದಿಲ್ಲʼ ಎಂಬ ಭಗತ್‌ನ ಮಾತಿನಂತೆ  ಅವರು ಹುತಾತ್ಮರಾಗಿ 115 ವರ್ಷಗಳು ಕಳೆದರು ಅವರ ಆಲೋಚನೆಗಳು ಎಂದಿಗೂ ಜೀವಂತವಾಗಿವೆ. ಜಾತ್ಯತೀತತೆ, ಕೋಮುಗಲಭೆ ಭಾಷ್ಯಾಜಗಳಗಳು, ಮೇಲರಿಮೆ ಕೀಳರಿಮೆಗಳೇ ಹೇಚ್ಚಾಗಿರುವ  ಈ ದಿನಗಳಲ್ಲಿ ಭಗತ್‌ನ ಸಮಾಜವಾದಿ ಚಿಂತನೆಗಳು, ಆದರ್ಶಗಳು, ಪ್ರೌಡತೆ, ಆಲೋಚನೆಗಳು ನಮ್ಮಲಿ ಸಹ ಮೂಡಬೇಕಿದೆ. ಅವರ ಹುಟ್ಟಿದ ದಿನದ ಸಂಭ್ರಮದಲ್ಲಿ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *