ಬೆಂಗಳೂರ : ಕೊಗಿಲು ಲೇಔಟ್ ಬಳಿಯಿರುವ ಫಕೀರ್ ಕಾಲೋನಿ ಹಾಗೂ ವಸೀಮ್ ಬಡಾವಣೆಯಲ್ಲಿ ವಾಸವಾಗಿದ್ದ 300 ಕುಟುಂಬಗಳ ಮನೆಗಳನ್ನು ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ದಿನಾಂಕ 20.12.2025ರ ಮುಂಜಾನೆ 4 ಗಂಟೆಯಲ್ಲಿ ಧ್ವಂಸಗೊಳಿಸಿದ್ದಾರೆ. ಇದು ಸಂವಿಧಾನದ ಅನುಚ್ಛೇದ 21ರಲ್ಲಿ ಹೊಂದಿರುವ ಜೀವನ, ಘನತೆ ಹಾಗೂ ಆಶ್ರಯದ ಹಕ್ಕುಗಳ ಹಾಗೂ ಮತ್ತಿತರೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಇದನ್ನು ಬೆಂಗಳೂರು ಜಿಲ್ಲಾ ಸಮಿತಿ ಖಂಡಿಸಿದೆ.
ಅಧಿಕಾರಿಗಳು ಹಾಗೂ ಪೊಲೀಸರು ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದ್ದು, ಈ ಕಾರ್ಯಾಚರಣೆಯು ಯಾವುದೇ ರೀತಿಯ ಮುನ್ಸೂಚನೆ ನೀಡದೆ, ಕಾನೂನು ಬದ್ಧ ಕ್ರಮ ಪಾಲಿಸದೇ, ಹಾಗೂ ಪುನರ್ವಸತಿ ಕಲ್ಪಿಸದೇ ನಡೆದಿದ್ದು, ನೂರಾರು ಕುಟುಂಬಗಳನ್ನು ಬೀದಿಪಾಲುಗೊಳಿಸಿ ಮತ್ತಷ್ಟು ಬಡತನ, ನಿರಾಶ್ರಯ ಮತ್ತು ಅಭದ್ರತೆಗೆ ತಳ್ಳಲಾಗಿದೆ. ಬೆಂಗಳೂರು ಬಿರುಸಾದ ಚಳಿಗಾಲ ಅನುಭವಿಸುತ್ತಿರುವ ಸಂದರ್ಭದಲ್ಲಿ ಈ ಕುಟುಂಬಗಳನ್ನು ಬೀದಿಪಾಲು ಮಾಡಿ ಅವರನ್ನು ಮತ್ತಷ್ಟು ಅಪಾಯಕ್ಕೆ ಹಾಗೂ ಯಾತನೆಗೆ ಸಿಲುಕಿಸಿದೆ. ನಿರಾಶ್ರಯಗೊಂಡಿರುವ ಮಕ್ಕಳ ಸುರಕ್ಷತೆ, ಅರೋಗ್ಯ ಮತ್ತು ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಪೂರ್ಣಚಂದ್ರ ತೇಜಸ್ವಿ ಥೀಮ್ ಆಯ್ಕೆ
ನೊಂದ ಕುಟುಂಬಗಳು ಸುಮಾರು ದಶಕಗಳಿಂದ ಇಲ್ಲಿ ವಾಸವಾಗಿದ್ದು ಅವರನ್ನು ಬಲವಂತವಾಗಿ ತೆರೆವುಗೊಳಿಸುವ ಮುನ್ನ ಪೊಲೀಸರು ಮಹಿಳೆಯರನ್ನು ಹಾಗೂ ಮಕ್ಕಳನ್ನು ಹೆದರಿಸಿ, ಬೆದರಿಸಿ, ಹಲ್ಲೆ ಮಾಡಿರುವ ವರದಿಗಳು ಕೇಳಿಬಂದಿವೆ. ಇವರು ಅಲೆಮಾರಿ ಸಮುದಾಯದವರಾಗಿದ್ದು ಬೆಂಗಳೂರು ನಗರಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇಂತಹ ದುಡಿಯುವ ವರ್ಗದವರ ಹಕ್ಕುಗಳೇ ಕಸೆದುಕೊಳ್ಳುವ ಪ್ರಯತ್ನವು ಇಲ್ಲಿ ನಡೆಯುತ್ತಿದೆ ಎಂದು ಅಳಲುತೊಡಿಕೊಂಡರು.
ಒಂದು ಕಡೆ ಸರ್ಕಾರಗಳು ಜನರಿಗೆ ಘನತೆಯುಕ್ತ ನಿವೇಶನ ಹಾಗೂ ಬದುಕಿನ ಹಕ್ಕು ಒದಗಿಸುವುದಿಲ್ಲ, ಮತ್ತೊಂದೆಡೆ ಸರ್ವೋಚ್ಚ ನ್ಯಾಯಾಲಯವು ಬುಲ್ಡೋಜರ್ ಕಾರ್ಯಾಚರಣೆಯು ನ್ಯಾಯನಿಯಮಗಳ ಉಲ್ಲಂಘನೆಯಾಗಿದೆ ಎಂದು ಪದೇಪದೇ ಹೇಳಿದೆ. ಹೀಗಿದ್ದರೂ ತೆರವುಗೊಳಿಸುವ ಕಾರ್ಯಾಚರಣೆಗಳು ನಡೆಯುತ್ತಲೇ ಇದ್ದು ಬಡಜನರ ಮತ್ತು ಅಂಚಿಗೆದೂಡಲ್ಪಟ್ಟ ಸಮುದಾಯದವರನ್ನು ಮತ್ತಷ್ಟು ಸಂಕಟಕ್ಕೆ ನೂಕುತ್ತದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಈ ಕಾರ್ಯಾಚರಣೆಯನ್ನು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವು ಖಂಡಿಸುತ್ತದೆ ಮತ್ತು ಎಲ್ಲಾ ನೊಂದ ಕುಟುಂಬಗಳಿಗೆ ತ್ವರಿತವಾಗಿ ಪುನರ್ವಸತಿ ಹಾಗೂ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸುತ್ತದೆ. ಈ ಕುಟುಂಬಗಳಿಗೆ ಸೂಕ್ತ ಮತ್ತು ಘನತೆಯುಕ್ತ ವಸತಿಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಇದರೊಂದಿಗೆ, ರಾಜ್ಯ ಸರ್ಕಾರವು ‘ಶೂನ್ಯ ತೆರವುಕಾರ್ಯಾಚರಣೆ’ ನೀತಿಯನ್ನು ಅಳವಡಿಸುತ್ತಾ ಎಲ್ಲಾ ತೆರವು ಮತ್ತು ಕಟ್ಟಡ ಧ್ವಂಸಗೊಳಿಸುವ ಕಾರ್ಯಾಚರಣೆಗಳ ಮೇಲೆ ಕಡಿವಾಣ ಹಾಕಬೇಕು. ರಾಜ್ಯದ ಎಲ್ಲಾ ಬಡಜನರಿಗೆ ಹಾಗೂ ಶ್ರಮಿಕರಿಗೆ ಘನತೆಯುಕ್ತ ವಸತಿಯನ್ನು ಕಲ್ಪಿಸಿಕೊಡಬೇಕು ಒತ್ತಾಯಿಸಿದರು.
ಇದನ್ನೂ ನೋಡಿ : ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media
